Wednesday, May 28, 2014

Mruganayakana Kathe / ಮೃಗನಾಯಕನ ಕಥೆ - The Beast Story - 1

ಮೃಗನಾಯಕನ ಕಥೆ 
ಬೋನಿನಲ್ಲಿದ್ದ ಹುಲಿ ಜೋರಾಗಿ ಗರ್ಜಿಸಿತು. "ಅಬ್ಬಬ್ಬ ! ಹುಲಿ ಎಷ್ಟ್ ಜೋರಾಗಿ ಗರ್ಜಿಸ್ತಿದೆ! ಬೇಗ ಹೋಗ್ನೋಡೋಣ ಬಾ   ತಾತ !" ಪುಟ್ಟಣ್ಣ ತಾತನ ಕೈ ಹಿಡಿದೆಳೆದು ಅವಸರ ಪಡಿಸಿದ . 
"ಅಯ್ಯೋ ! ಬೇಡಪ್ಪ ! ನಾನ್ ಬರಲ್ಲ ! ನನ್ಗೆ  ಭಯ !" ಪುಟ್ಟಿ ಅಜ್ಜಿಯ ಕೈಯನ್ನು  ಬಿಗಿಯಾಗಿ   ಹಿಡಿದುಕೊಂಡು ನಿಂತಲ್ಲೇ ಗಟ್ಟಿಯಾಗಿ ನಿಂತಳು . 
"ನೀನ್ಯಾಕೇ  ಕಾಸ್ಬಂಗ್ಲಿಗೆ ಬಂದೆ?" ಪುಟ್ಟಣ್ಣ ರೇಗಿದ . 
"ಮೊದ್ಲೇ ಅವ್ಳು ಹೆದ್ರಿದ್ದಾಳೆ ! ಸುಮ್ನಿರೋ ಪುಟ್ಟಣ್ಣ ." ಎಂದ ತಾತ , " ಪುಟ್ಟಿ ! ನೀನೂ ಅಜ್ಜಿ ಸುತ್ತಿ ಬಳಸ್ಕೊಂಡು ಜಾರಾ ಬಂಡೆ ಕಡೆ ಬಂದ್ಬಿಡಿ . ನಾನೂ ಪುಟ್ಟಣ್ಣ ಹುಲಿ ನೋಡ್ಕೊಂಡು ಅಲ್ಲಿಗ್ ಬರ್ತಿವಿ ." ಇಬ್ಬರು ಮಕ್ಕಳಿಗೂ ಸಮಾಧಾನ ಹೇಳಿದರು . 
"ಅದೇಕೆ ? ನಾವೂ ಹುಲಿ ನೋಡಕ್ಕೆ ಬಂದೇ  ಬರ್ತಿವಿ ! ನಮ್ಗೇನು  ಧೈರ್ಯ  ಇಲ್ವೇನು ?" ಎಂದಳು ಅಜ್ಜಿ . 
"ಅಜ್ಜಿ ! ಬೇಡ ಅಜ್ಜಿ !" ಪುಟ್ಟಿ ಅಳುಮೋರೆ  ಹಾಕಿಕೊಂಡಳು . 
"ಹುಲಿಗೆಲ್ಲ ಹೆದರ್ತಾರೇನೆ ? ನಿನ್ನಂತೆ  ಇದ್ದ ಒಬ್ಬ ಪುಟ್ ಹುಡ್ಗಿ  ಹುಲಿಗಿಂತ ಕ್ರೂರ್ವಾದ  ಒಂದು ಮೃಗಾನ  ಹೇಗೆ ಎದುರಿಸಿದ್ಳು ಗೊತ್ತೇ ?" ಎಂದು ಪುಟ್ಟಿಯ ಕುತೂಹಲ ಕೆಣಕಿದಳು   ಅಜ್ಜಿ . 
"ಕಥೆನಾ ? ಹೇಳು ಅಜ್ಜಿ !" ಪುಟ್ಟಿಗೆ ಉತ್ಸಾಹ ಉಕ್ಕಿತು . ಚಿಕ್ಕಂದಿನಲ್ಲಿ  ತನ್ನ ತಾತ ತನಗೆ  ಹೇಳಿದ್ದ ಕಥೆಯನ್ನು ಶುರು ಮಾಡಿದಳು  ಅಜ್ಜಿ .  ಹುಲಿಯ ಗರ್ಜನೆಯನ್ನು  ಮರೆತು ಕಥೆಯಲ್ಲಿ ಮಗ್ನಳಾದಳು  ಪುಟ್ಟಿ. ಪುಟ್ಟಣ್ಣ ಮತ್ತು ತಾತ ಕೂಡ !

 

ಒಂದಾನೊಂದು ಕಾಲದಲ್ಲಿ ನಮ್ಮ ಹಳ್ಳಿಯ ಸಮೀಪ ಒಂದು ಕಾಡು ಇತ್ತಂತೆ  . ಆ ಕಾಡಲ್ಲಿ ಅನೇಕ ಪ್ರಾಣಿಗಳಿದ್ದವು. ಪ್ರಾಣಿಗಳಿಗೆ ಒಬ್ಬ ರಾಜನೂ ಇದ್ದ . ಆತ ಸಿಂಹವೋ  , ಹುಲಿಯೋ   , ಕರಡಿಯೋ ಆಗಿರಲಿಲ್ಲ  . ಜಿಂಕೆಯೋ , ಕಾಡು ಕೋಣನೋ , ತೋಳವೋ ಕೂಡ  ಆಗಿರಲಿಲ್ಲ . 
ಆತನೇ ಮೃಗ ! ಮೃಗನಾಯಕ !


ಮೃಗನಾಯಕ ತನ್ನ ಮೂರು ಮರಿಗಳೊಂದಿಗೆ  ದೊಡ್ಡದೊಂದು ಗವಿಯಲ್ಲಿ ವಾಸವಾಗಿದ್ದ . ಚಿಕ್ಕ ಮರಿಗಳು  ಚೂಟಿಯಾಗಿದ್ದವು . ಪ್ರೀತಿಯೋಗ್ಯವಾದ ಮುದ್ದುಮರಿಗಳಾಗಿದ್ದವು . ಆದರೆ ಮರಿಗಳು ಬೆಳೆದಂತೆ ಅವುಗಳ ತುಂಟತನವೂ ಬೆಳೆಯಿತು . ಅವನ್ನು ನಿಭಾಯಿಸುವುದು ಬಹಳ  ಕಷ್ಟವಾಯಿತು . ಸಾಮಾನು ಸರಂಜಾಮುಗಳನ್ನು ಒಡೆದು ಹಾಕಿದವು . ಗವಿಯನ್ನು ಅಸ್ಥವ್ಯಸ್ಥಗೊಳಿಸಿದವು    . 
ತಾಯಿ ಮೃಗ ಬಲಹೀನಳಾಗಿದ್ದಳು . ಯಾವ ಕೆಲಸವೂ ಮಾಡಲಾರದೆ , ಗವಿಯ ಒಂದು ಮೂಲೆಯಲ್ಲಿ ಸದಾ ಮಲಗಿಯೇ ಇದ್ದಳು . 
ಆದ್ದರಿಂದ ತುಂಟು ಮರಿಗಳನ್ನು ನೋಡಿಕೊಳ್ಳಲು ಒಬ್ಬ ದಾದಿಯನ್ನು ಕರೆತರಲು ನಿರ್ಧರಿಸಿದ ಮೃಗನಾಯಕ . 


ಕೂಡಲೇ  ಜೋರಾಗಿ ಒಮ್ಮೆ ಗರ್ಜಿಸಿದ, ಜಾಗಟೆಯನ್ನು ಬಾರಿಸಿದ ಮತ್ತು ಎಲ್ಲ ಕಾಡು ಪ್ರಾಣಿಗಳನ್ನೂ ಒಗ್ಗೂಡಿಸಿದ  . 
"ನನ್ನ ಮರಿಗಳನ್ನು ನೋಡಿಕೊಳ್ಳಲು  ಒಬ್ಬ ದಾದಿಯ ಅವಶ್ಯಕತೆ ಇದೆ . ಅವಳು ಅಡುಗೆಯನ್ನು ಮಾಡಬೇಕು , ಗವಿಯನ್ನು ಸ್ವಚ್ಛವಾಗಿಡ ಬೇಕು,  ಹೊಲಿಯ ಬೇಕು, ಹಾಡ ಬೇಕು. ಮರಿಗಳಿಗೆ ನೀರು ಹಾಕ ಬೇಕು, ಊಟ ತಿನ್ನಿಸ  ಬೇಕು . ಅವರಿಗೆ ಒಳ್ಳೆಯ ನಡೆವಳಿಕೆಯನ್ನು  ಕಲಿಸ ಬೇಕು, ತುಂಟತನ ಮಾಡದಂತೆ ನೋಡಿಕೊಳ್ಳ ಬೇಕು,  ಅವರೊಂದಿಗೆ ಆಡಲೂ   ಬೇಕು . 
ಈ ನೌಕರಿಗೆ ನಿಮ್ಮಲ್ಲಿ ಯಾರಾದರೂ   ಸಿದ್ಧವಾಗಿದ್ದೀರಾ ?" 
"ನಾನು ಅಡುಗೆ ಮಾಡ ಬಲ್ಲೆ . ಆದರೆ ಸ್ವಚ್ಛ ಮಾಡುವುದು ಕಷ್ಟ ." ಎಂದಿತು ಹುಲಿಯಮ್ಮ. 
"ನಾನು ಹೊಲಿಯ  ಬಲ್ಲೆ . ಆದರೆ ಹಾಡು ಹೇಳುವುದಕ್ಕೆ ಬರುವುದಿಲ್ಲ . " ಎಂದಿತು ಸಿಂಹದ ರಾಣಿ . 
"ನಾನು ಮರಿಗಳೊಡನೆ ಆಟವಾಡ  ಬಲ್ಲೆ . ಆದರೆ ಕಲಿಸುವುದು  ಗೊತ್ತಿಲ್ಲ ." ಎಂದಿತು ಮಂಗಮ್ಮ . 
"ನನ್ನ ಎಲ್ಲ ಕೋರಿಕೆಗಳನ್ನೂ ನೆರವೇರಿಸುವವರು  ಯಾರೂ ಇಲ್ಲವೇ?" ಎಂದು ಹಕ್ಕಿನಿಂದ ಅಬ್ಬರಿಸಿದ  ಮೃಗನಾಯಕ.  


"ಅಂತಹ ಹೆಣ್ಣು  ಒಬ್ಬಳು ಇರುವಳು ಎಜಮಾನರೆ  !" ಎಂದಿತು ಮರದ ಮೇಲೆ ಕುಳಿತಿದ್ದ ವಿವೇಕವುಳ್ಳ  ಮುದಿ  ಗೂಬೆ ಪಕ್ಷಿ . "ಮೂರು ಲೋಕಗಳಲ್ಲೂ ಕಾಣ ಸಿಗದ ಪ್ರತಿಭೆ  ಮತ್ತು ಸೌಂದರ್ಯವನ್ನು ಹೊಂದಿರುವ ಅಪರೂಪದ ಹುಡುಗಿಯವಳು  . ಅವಳು ಅಡುಗೆ ಮಾಡ ಬಲ್ಲವಳು , ಸ್ವಚ್ಛ ಮಾಡಲು  ಬಲ್ಲವಳು. ಹೋಲಿಗೆಯೇ ಹಾಡೇ ? ಎಲ್ಲವನ್ನೂ ಬಲ್ಲವಳು. ಕಲಿಸಲು ಬಲ್ಲವಳು ಮತ್ತು ಆಡಲೂ ಬಲ್ಲವಳು . ಮಾತ್ರವಲ್ಲದೆ ಪುಸ್ತಕ ಓದಲೂ ಬಲ್ಲವಳು ! ಪ್ರಪಂಚದಲ್ಲೆಲ್ಲಾ ಅತ್ಯುತ್ತಮ ಹುಡುಗಿ ಎಂಬ ಖ್ಯಾತಿ ಗಳಿಸಿರುವವಳು . ಅವಳೇ ನಿನಗೆ ತಕ್ಕ ಅತ್ಯುತ್ತಮ ದಾದಿ .  ಅಗೋ ! ಸಮೀಪದ ಹಳ್ಳಿಯಲ್ಲೇ ವಾಸವಾಗಿರುವಳು !"
"ಏನು ? ನರ  ಮನುಷ್ಯಳೆ ?" ಚಕಿತಗೊಂಡು   ಗರ್ಜಿಸಿದ ಮೃಗನಾಯಕ.  ಓರ್ವ ನರಳನ್ನು ಹೇಗೆ ದಾದಿಯಾಗಿ ಕರೆತರಲು  ಸಾಧ್ಯ ?" 
"ನೀನು ಅವಳನ್ನು ಮದುವೆಯಾದರೆ  ಕರೆತರ ಬಹುದಲ್ಲವೆ ?" ಎಂದು ಸೂಚನೆ ನೀಡಿತು ನರಿ . 
"ಅವಳ ತಾಯಿ ತಂದೆಯರು ಅವಳಿಗಾಗಿ  ಓರ್ವ  ಬುದ್ಧಿವಂತನಾದ, ಶಕ್ತಿಶಾಲಿಯಾದ , ಐಶ್ವರ್ಯವಂತನಾದ ವರನನ್ನು ಹುಡುಕುತ್ತಿರುವುದಾಗಿ ಸುದ್ದಿ ತಂದಿದ್ದ  ಕಾಗೆರಾಯ . ಅವಳಿಗೆ ನಿನಗಿಂತ  ಅರ್ಹನಾದ ವರ  ಇನ್ಯಾರು   ಸಿಕ್ಕುತ್ತಾರೆ ಮಾರಾಯ ?"
"ಬಲೆ !" ಉತ್ಸಾಹದಿಂದ ಚಪ್ಪಾಳೆ ತಟ್ಟಿತು ಜಿಂಕೆ . " ನಿನ್ನನ್ನು ನರನಂತೆ ಸಿಂಗರಿಸಿ ನಾವು ತಯಾರು ಮಾಡುವೆವು!"


ಹುಣ್ಣಿಮೆಯಂದು ತಾನು ಹೆಣ್ಣು ಕೇಳಲು ಬರುವುದಾಗಿ ಒಂದು ಪತ್ರವನ್ನು ಬರೆದು , ಪಾರಿವಾಳದ ಅಂಚೆಯ ಮೂಲಕ ಹುಡುಗಿಯ ತಾಯಿ ತಂದೆಯರಿಗೆ ಕಳುಹಿಸಿಕೊಟ್ಟ ಮೃಗನಾಯಕ . 
ಅಂತೆಯೇ ಆ ಶುಭದಿನದಂದು ನವಿಲುಗಳು ಚಾಮರ ಬೀಸುತ್ತಿರಲು , ಕೋತಿಗಳು ಉತ್ಸಾಹದಿಂದ ತಾಳ ಮೇಳಗಳನ್ನು  ಬಾರಿಸುತ್ತಿರಲು , ಆನೆಯ ಮೇಲೆ ಸವಾರನಾಗಿ ಬಹಳ  ಅದ್ದೂರಯಿಂದ  ಹಳ್ಳಿಯನ್ನು ಪ್ರವೇಶಿಸಿದ  ಮೃಗನಾಯಕ.  
ಹುಡುಗಿಯ ತಾಯಿ ತಂದೆಯರು ಬೆರಗಾದರು . ತಮ್ಮ ಮನೆಗೆ ಒಬ್ಬ ಮಹಾರಾಜ ಆಗಮಿಸಿರುವನಲ್ಲ !
ಅವರುಗಳು ಆತನನ್ನು ಆದರದಿಂದ ಸ್ವಾಗತಿಸಿ , ಅತ್ಯುತ್ತಮ ಹಾಸಿನಮೇಲೆ ಕುಳ್ಳರಿಸಿ ಪಾನಕ ನೀಡಿ ಉಪಚರಿಸಿದರು. 


"ನಾನು ನಿಮ್ಮ ಮಗಳನ್ನು ಮದುವೆಯಾಗಲು ಅಪೇಕ್ಷಿಸುತ್ತೇನೆ . ನನ್ನ ರಾಜ್ಯ ಬಹಳ  ವಿಶಾಲವಾದದ್ದು  . ನನ್ನ ಅರಮನೆ ಬಹಳ ದೊಡ್ಡದು . ಹೇರಳವಾದ ನೌಕರರಿಂದಲೂ  ಕ್ಷೀಣವಾಗದಷ್ಟು  ಆಹಾರದಿಂದಲೂ ತುಂಬಿರುವುದು  . ನಿಮ್ಮ ಮಗಳು ನಿಶ್ಚಿಂತೆಯಿಂದ ಇರಬಹುದು . ಇಗೋ ! ಇವೆಲ್ಲ ನಿಮಗಾಗಿ ನಾನು ತಂದಿರುವ  ಉಡುಗೊರೆ .." ಎಂದು ನಯವಾಗಿ ನುಡಿದ  ಮೃಗನಾಯಕ .
ಹಣ್ಣುಗಳು , ಧಾನ್ಯಗಳು , ಗಂಧದ ದಿಮ್ಮಿಗಳು , ಮೂಟೆಯ  ತುಂಬ ನವರತ್ನಗಳು , ಎಲ್ಲವನ್ನೂ ಉಡುಗೊರೆಯಾಗಿ ಕೊಟ್ಟ ಮೃಗನಾಯಕ .
ತಾಯಿ ತಂದೆಯರಿಗೆ  ಪುಳಕವೇರ್ಪಟ್ಟಿತು .  ಆದರೆ ಮಗಳೋ ಪಿಸುಗುಟ್ಟಿದಳು : 
" ಉಡುಗೊರೆಗಳಿಗೇನೂ ಕಡಿಮೆ ಇಲ್ಲ . ಆದರೆ ಈ  ರಾಜ ಏಕೋ ವಿನೋದವಾಗಿ ಕಾಣಿಸುತ್ತಾನಲ್ಲ !ಕಪ್ಪು ಮೂಗು ! ಪ್ರಾಣಿಗಳ ಪಂಜಿನಂತೆ ಕೈಗಳು !"
" ಉಶ್ ! ಸುಮ್ಮನಿರೇ ಮಗಳೇ ! ಎಂತ ವಿನೋದವ ಕಂಡೆ ? ಮನುಷ್ಯರು ವಿಭಿನ್ನರಾಗಿರುತ್ತಾರೆ  !"
" ಸರಿ!ಸರಿ !"ಎಂದಳು ಮಗಳು . 
ಅಂದು ಸಂಜೆಯೇ ಮದುವೆಯ ಸಂಭ್ರಮ ! ಓರ್ವ ಮಹಾರಾಜ ತಮ್ಮ ಅಳಿಯನಾದನಲ್ಲಾ   ಎಂದು ಇಡೀ ಹಳ್ಳಿಯೇ ಹಿಗ್ಗಿತು . 
ಮದುವೆಯ ನಂತರ ಮಡದಿಯೊಡನೆ ಹೊರಟು ನಿಂತ ಮೃಗನಾಯಕ . 
" ನನ್ನ ರಾಜ್ಯ ಬಹಳ ದೂರ . ತಲುಪುವುದಕ್ಕೆ ಹೆಚ್ಚು ಸಮಯವಾಗುವುದು . ನೀನು ಸಹನೆಯಿಂದಿರ ಬೇಕು. " ಎಂದು ಎಚ್ಚರಿಸಿದ . 
"ಒಳ್ಳೆಯ ಮಡದಿಯಾಗಿ ನಮ್ರತೆಯಿಂದಿರು ಮಗಳೇ ." ಎಂದು ಮಗಳನ್ನು ಬೀಳ್ಕೊಟ್ಟರು ಹೆತ್ತವರು . 


ಮೃಗನಾಯಕ ಮತ್ತು ಹುಡುಗಿ ಆನೆ ಸವಾರಿಯಲ್ಲಿ ಹೊರಟರು . 
ಆನೆ ನಡೆಯಿತು ನಡೆಯಿತು ನಡೆಯುತ್ತಲೇ ಇತ್ತು . 
ಎರಡು ತಾಸುಗಳನಂತರ ಹುಡುಗಿಗೆ ಆಯಾಸವಾಯಿತು . "ಇನ್ನು ಎಷ್ಟು ದೂರ?" ಎಂದು ಕೇಳಿದಳು . 
''ಸುಮ್ಮನೆ ಬರುವೆಯೋ ? ಸ್ವರೂಪವ  ತೋರಲೋ ?'' ಎಂದು ಕೋಪದಿಂದ ಉರಿದುಬಿದ್ದ ಮೃಗನಾಯಕ . 
ಹುಡುಗಿ ಮೌನವಾದಳು . 
ಮತ್ತೊಂದು ತಾಸು ಕಳೆಯಿತು . ಸೂರ್ಯಾಸ್ತವೂ ಆಯಿತು . ಹುಡುಗಿಗೆ ಬೇಸರವಾಯಿತು . ಹಸಿವೂ ಉಂಟಾಯಿತು . 
"ಇನ್ನೆಷ್ಟು ದೂರ ?" ಎಂದು ಕೇಳಿದಳು  . 
"ಸುಮ್ಮನೆ ಬರುವೆಯೋ ಸ್ವರೂಪವ  ತೋರಲೋ ?" ಎಂದು ಕೋಪಗೊಂಡು ಸಿಡುಕಿದ ಮೃಗನಾಯಕ . 
 ಕಡೆಗೊಮ್ಮೆ ಅವರುಗಳು ಕಾಡನ್ನು ಪ್ರವೇಶಿಸಿದರು . ಬಹಳ ಕತ್ತಲಾಗಿತ್ತು. ಭಯವೇರ್ಪಟ್ಟಿತು . ಹುಡುಗಿಗೆ ಇನ್ನೂ ಸಹಿಸುವುದು ಅಸಾಧ್ಯವಾಯಿತು . 
ಬೆಟ್ಟ ಗುಡ್ಡಗಳನ್ನು  ಹತ್ತಿ ಇಳಿದು , ಹೊಳೆಗಳನ್ನು ದಾಟಿ   , ಪೊದೆಗಳಲ್ಲಿ ತೂರಿ ಸಾಗುತ್ತಲೇ  ಇದ್ದರು . 
" ಇನ್ನೂ ಎಷ್ಟು ದೂರ?" ಹುಡುಗಿ ಗೊಣಗಿದಳು . 
"ಸುಮ್ಮನೆ ಬರುವೆಯೋ ಸ್ವರೂಪವ  ತೋರಲೋ ?" ಎಥಾಪ್ರಕಾರ ರೇಗಿದ ಮೃಗನಾಯಕ . 
ಹುಡುಗಿ ತಾಳ್ಮೆಯಿಂದ ಮತ್ತೆ ಮೌನವಾದಳು . 


ಕಡೆಗೂ ಮುಂಜಾವಿನ ವೇಳೆಗೆ  ಗವಿಯನ್ನು ತಲುಪಿದರು . ಆನೆಯೂ ಬೀಳ್ಗೊಂಡಿತು  . 
" ಒಳಗೆ ನಡಿ . ಇದೇ ನನ್ನ ಮನೆ . " ಎಂದ ಮೃಗನಾಯಕ . 
ಹುಡುಗಿ ಚಕಿತ ಗೊಂಡಳು . " ನೀನೆಂತಹ ಮಹಾರಾಜ ! ಈ ಹೊಲಸು ಗವಿಯೊಳಗೆ ನಾನು ಕಾಲಿಡಲಾರೆ !"
ಕೋಪಗೊಂಡ ಮೃಗನಾಯಕ ಥಟ್ಟನೆ ಎಗರಿಬಿದ್ದ . " ಸುಮ್ಮನೆ ಬರುವೆಯೋ ? ಸ್ವರೂಪವ  ತೋರಲೋ?"
ಹುಡುಗಿಯೂ ಕೋಪದಿಂದ ರೇಗಿದಳು . " ತೋರು ಸ್ವರೂಪವ !"
ಮೃಗನಾಯಕ ತನ್ನ ಮಾರುವೇಷವನ್ನು ಕಳಚಿ ಹಾಕಿದ . ಅವನು  ಮನುಷ್ಯನೇ ಅಲ್ಲ , ಮೃಗ,  ಎಂಬುದನ್ನು  ಕಂಡುಕೊಂಡ  ಹುಡುಗಿ ಗರ ಬಡಿದವಳಂತೆ ಆದಳು. "ನಾವು  ಮೋಸ ಹೋದೆವು ! "ಎಂದು ಕೂಗಿಕೊಂಡಳು . 
"ಸಾಕು !"  ಎಂದು ಗುಡುಗಿದ ಮೃಗನಾಯಕ .  "ನಮಗಾಗಿ ಕೆಲಸ ಮಾಡಲೆಂದೇ  ನಿನ್ನನ್ನು ಕರೆತಂದಿರುವೆ . ಸದ್ದು   ಮಾಡಿದರೆ ನಿನ್ನನ್ನು ನುಂಗಿ ಹಾಕುವೆ ! ಜೋಕೆ ! ಈಗ ಹೊರಡು ! ಮನೆಯನ್ನು ಸ್ವಚ್ಛ ಮಾಡು, ಅಡುಗೆ ಮಾಡು .  ಹೊಲಿದು ಮುಗಿಸಿ ನನ್ನ ಮರಿಗಳಿಗೆ ಲಾಲಿ  ಹಾಡು  !"

Sunday, May 18, 2014

Kaayi Kadubina Kathe / ಕಾಯಿ ಕಡುಬಿನ ಕಥೆ - The Dumpling Story

 ಕಾಯಿ ಕಡುಬಿನ ಕಥೆ - ಬಾಗ ೪

" ಅಮ್ಮನ್ಗೆ ಗೊತ್ತಾಗ್ದೆ ಇರತ್ಯೇ ? ಹೇಗೇ ಅಂತ್ಯಾ ? ಕೇಳಿಲ್ಲಿ !" ಎನ್ನುತ್ತ ಕಥೆ ಮುಂದುವರಿಸಿದಳು ಅಜ್ಜಿ . 
ಜಾಣಮರಿ ಮತ್ತೆ ಒಳಗೆ ಹೋಗಿ ಡಬ್ಬಿ ಮುಚ್ಚಳ ತೆರೆದಳು. ಗಲಿಬಿಲಿಗೊಂಡಿದ್ದ ಇಲಿ 'ಬದುಕಿದೆ !' ಎಂದುಕೊಂಡು ಛಂಗನೆ ಹೊರಕ್ಕೆ ನೆಗೆದು , ದಡ ದಡ ಓಡಿ  ಅಕ್ಕಿ ಪೀಪಾಯಿಯ ಕೆಳಗೆ ಅಂತರ್ಧ್ಯಾನವಾಯಿತು ! 
ಖಾಲಿ ಡಬ್ಬಿ ಕೈಯಲ್ಲಿ ಹಿಡಿದು ಚೀರುತ್ತ ಓಡಿ ಬಂದಳು  ಜಾಣಮರಿ !
"ಅಮ್ಮಾ ಅಮ್ಮ ! ಕಾಯ್ ಕಡುಬು ಓಡಿ ಹೋಗುವುದೇನು ?"
"ಓಡಿ ಹೋಗುವುದೇ ? ಇದೇನು ಹುಚ್ಚಾಟ ? ಸಿಹಿ ತಿಂಡಿ ಎಲ್ಲಾದರು ಓಡಿ ಹೋಗುತ್ತದೆಯೇ ? ಎಲ್ಲವನ್ನೂ ನೀನೆ ತಿಂದು ಕಥೆ ಹೇಳುತ್ತಿರುವೆಯೇನು ?"


ಅದೇ ಸಮಯ,  ತುಂಟಮರಿಯ ಲಂಗದಲ್ಲಿ ಅಂಟಿದ್ದ ಸಿಹಿ ಹೂರಣವನ್ನು ಸವಿಯಲು ಅವಳ  ಮೇಲೆ ಹತ್ತಿದ್ದ ಕೆಂಪಿರುವೆಗಳು ಅವಳ ಕೈಯನ್ನು ಕಚ್ಚಲು ,  ಕಿಟಾರನೆ ಕಿರುಚಿದಳು ತುಂಟಮರಿ. 
ಅವಳ ಕಡೆ ತಿರುಗಿ ನೋಡಿದ  ಅಮ್ಮ,  ತುಂಟಮರಿಯ ಲಂಗ ಒದರಿ ಇರುವೆಗಳನ್ನು ಕೆಳಕ್ಕೆ  ಕೊಡವಿ ಹಾಕಿದಳು . ತುಂಟಮರಿಯ ಲಂಗದ ಮೇಲೂ , ಕೆನ್ನೆಯ ಮೇಲೂ  , ತಲೆಗೂದಲಲ್ಲೂ ಅಂಟಿದ್ದ ಸಿಹಿ ಹೂರಣವನ್ನೂ ಕಂಡಳು . 
"ನೀನೇನಾ ಆ ತುಂಟ ಕಳ್ಳಿ !"ಎಂದು ಗದರಿಸುತ್ತ  ಎರಡು ಎಟನ್ನೂ ಹಾಕಿದಳು . 


" ಹಂಗೆ ಆಗ ಬೇಕು ! ಹಲ್ಲು ಮುರಿ ಬೇಕು !ನಾ ನಗ  ಬೇಕು !"
ಪುಟ್ಟಣ್ಣ ಹಾಡುತ್ತ ಕುಣಿಯುತ್ತ ಬಂದ . 
" ನೀನ್ಯಾವಾಗ್ಲೋ ಬಂದೆ ? ಸೈಕಲ್ ಪಂಪ್ ಮಾಡ್ತಿದ್ದೆ !"
" ನಾನೆಲ್ಲೇ ಇರ್ಲಿ !  ಕಿವಿ ಮಾತ್ರ ನಿನ್ ಕಥೆಲೇ ಅಜ್ಜಿ !" ಎಂದ ಪುಟ್ಟಣ್ಣ . 
" ಸುಳ್ಳು ! ಸುಳ್ಳು ! ಕಾಯ್ ಕಡುಬಿನ ವಾಸ್ನೆ  ಹಿಡ್ಕೊಂಡ್ ಬಂದಿದ್ದಾನೆ ಅಜ್ಜಿ !" ಎಂದಳು ಪುಟ್ಟಿ . 
ಅಜ್ಜಿ ನಗುತ್ತ ಹಬೆಯಿಂದ ಆಗತಾನೆ ತೆಗೆದ ಕಾಯಿ ಕಡುಬುಗಳನ್ನು ತಟ್ಟೆಗೆ ಹಾಕಿ ಮಕ್ಕಳಿಬ್ಬರ ಮುಂದಿಟ್ಟಳು . 
" ಹೀಗೆ ಅವ್ರಮ್ಮಾನೂ ಕೊಟ್ಟಿದ್ರೆ ತುಂಟಮರಿ ಏಕೆ ಕದ್ದು ತಿನ್ತಿದ್ಳು ?" ಎನ್ನುತ್ತಾ ಸಿಹಿ ಕಡುಬನ್ನು ಸವಿಯ ತೊಡಗಿದಳು ಪುಟ್ಟಿ . 
" ಆಮೇಲೇನಾಯ್ತು ಅಜ್ಜಿ?"
" ಆಗೋದೇನು ? ಅಷ್ಟೇ ಕಥೆ ! "ಎಂದು ಕಥೆ ಮುಗಿಸಿದಳು ಅಜ್ಜಿ . 

ಗುಣವತಿಯಾದ ತಾಯಿಗಾಗಲಿ, ಜಾಣಮರಿಗಾಗಲಿ, ತುಂಟಮರಿಗಾಗಲಿ, ಉಳಿದಿದ್ದ ಒಂದೇ ಒಂದು ಕಡುಬು ಅದು ಹೇಗೆ ಕಣ್ಣು, ಕಿವಿ, ಮೂಗು, ಕಾಲು, ಬಾಲ ಬೆಳೆಸಿಕೊಂಡಿತು ಎಂಬ ವಿಷಯ ಅರ್ಥವಾಗಲೇ ಇಲ್ಲ . ಅದು  ಏಕೆ ಓಡಿ ಹೋಯಿತು ಎಂದೂ ಅರಿವಾಗಲಿಲ್ಲ. ನಿಮಗೆ ?


" ತಿನ್ದ್ಮೇಲೆ ಡಬ್ಬಿ ಸರಿಯಾಗಿ ಮುಚ್ಚಿಡಿ ಮಕ್ಕಳಾ  ! ನಮ್ ಕಡುಬುಗಳೂ ಎಲ್ಲಾದ್ರೂ ಓಡಿ  ಹೋದಾವು !" ಎಂದಳು ಅಜ್ಜಿ. 

Saturday, May 17, 2014

Kaayi Kadubina Kathe / ಕಾಯಿ ಕಡುಬಿನ ಕಥೆ - The Dumpling Story

ಕಾಯಿ ಕಡುಬಿನ ಕಥೆ - ಬಾಗ ೩
" ಕಡುಬಿಗೆ ಬದ್ಲು ಡಬ್ಬೀಲಿ  ಇಲೀನ್  ಕಂಡ ಜಾಣಮರಿಗೆ ಏನೇನೋ  ಅನುಮಾನ ! ಅಮ್ಮನ್ನ ಕೇಳಕ್ಕೆ  ಓಡ್ತು !"ಎಂದು ಮುಂದುವರಿಸಿದಳು ಅಜ್ಜಿ . 
" ಅಮ್ಮಾ ಅಮ್ಮ ! ಕಾಯ್ ಕಡುಬಿಗೆ ಬಾಲ ಉಂಟೇನು ?"
" ಬಾಲವೂ ಇಲ್ಲ ಏನಿಲ್ಲ ! ಕಡುಬಿನ  ತುದಿಯ ಜುಟ್ಟು ಬಾಲದ ಹಾಗೆ ಕಂಡಿರಬೇಕು  !ಹೋಗೆ ಹುಚ್ಚಮ್ಮ ! ಹೋಗಿ ಕಡುಬನ್ನು ತಾ !"


ಜಾಣ ಮರಿ ಮತ್ತೆ ಒಳಗೆ ಹೋದಳು. ಆದರೆ ಕೂಡಲೇ ಹಿಂದಿರುಗಿದಳು. 
" ಅಮ್ಮಾ ಅಮ್ಮ ! ಕಾಯ್ ಕಡುಬಿಗೆ ಕಾಲು ಉಂಟೇನು ?"
" ಕಡುಬಿಗೆ ಕಾಲೇ ? ಅಯ್ಯೋ ಹುಚ್ಚಮ್ಮ ! ಕಣಕ ಎಲ್ಲೋ ಹರಿದಿರಬೇಕು ! ಬೇಗ ಹೋಗಿ ಕಡುಬನ್ನು  ತಾ !"


ಜಾಣಮರಿ ಮತ್ತೆ ಒಳಗೆ ಹೋಗಿ ಕೂಡಲೇ ಹಿಂದಿರುಗಿದಳು . 
" ಅಮ್ಮಾ ಅಮ್ಮ ! ಕಾಯ್ ಕಡುಬಿಗೆ ಮೂಗು ಉಂಟೇನು ?"
" ಕಡುಬಿಗೆ ಮೂಗೇ ? ಹೋಗೆ ಹುಚ್ಚಮ್ಮ ! ಕಣಕ ಎಲ್ಲೋ ಇಷ್ಟು ಹೆಚ್ಚಾಗಿದ್ದಿರ ಬೇಕಷ್ಟೇ ! ಬೇಗ ಹೋಗಿ ಕಡುಬನ್ನು ತಾ !"

ಜಾಣಮರಿ ಮತ್ತೆ ಒಳಗೆ ಹೋದಳು. ಕೂಡಲೇ ಹಿಂದಿರುಗಿದಳು. 
" ಅಮ್ಮಾ ಅಮ್ಮ ! ಕಾಯ್ ಕಡುಬಿಗೆ ಕಣ್ಣು ಉಂಟೇನು?"
" ಕಣ್ಣೂ ? ಹೋಗೆ ಪೆದ್ದಮ್ಮ ! ಹೂರಣ ತುಂಬುವಾಗ ಎಲ್ಲೋ ತೂತಾಗಿರಬೇಕು ! ಕೂಡಲೇ ಹೋಗಿ ಕಡುಬನ್ನು ತಾ !"


ಜಾಣಮರಿ ಮತ್ತೆ ಒಳಗೆ ಹೋಗಿ ಕೂಡಲೇ ಹಿಂದಿರುಗಿದಳು . 
"ಅಮ್ಮಾ ಅಮ್ಮ ! ಕಾಯ್ ಕಡುಬಿಗೆ ಕಿವಿಗಳುಂಟೇನು ?"
"ಕಿವಿಗಳೇ? ಸರಿಹೋಯಿತು ! ಕಣಕವನ್ನ ಎಲ್ಲೋ  ಸ್ವಲ್ಪ ಹೆಚ್ಚು ಕಮ್ಮಿ   ಮಡಿಚಿರಬೇಕು ! ಬೇಗ ನಡಿ ! ಕಡುಬನ್ನು ತಾ !''


" ಪಾಪ ಜಾಣಮರಿ ! ಅವ್ಳಮ್ಮನ್ಗೆ  ನಿಜ ಸಂಗ್ತಿ  ಗೊತ್ತಾಗ್ಲೇ ಇಲ್ವಾ ?" ಎಂದು  ಅನುಕಂಪದಿಂದ ಕೇಳಿದಳು ಪುಟ್ಟಿ . 

Sunday, May 11, 2014

Kaayi Kadubina Kathe / ಕಾಯಿ ಕಡುಬಿನ ಕಥೆ - The Dumpling Story

ಕಾಯಿ ಕಡುಬಿನ ಕಥೆ - ಬಾಗ ೨

"ಏನಾಯ್ತು ಅಜ್ಜಿ ? " ಪುಟ್ಟಿ ಕುತೂಹಲದಿಂದ ಪ್ರಶ್ನಿಸಿದಳು .

"ಸಿಹಿ ಸಿಹಿ  ಕಡುಬು , ಘಮ ಘಮ ಕಡುಬು ಕಂಡ್ರೆ  ನೀನೆನ್ಮಾಡ್ತಿ ಹೇಳು ?"

" ಜೊಲ್ಲು ಸುರಿಸ್ತಿನಿ  ! ಆಮೇಲೆ ಅಮ್ಮನ್ನ ಕೇಳ್ಕೊಂಡು ತಿಂತೀನಿ  ! "

" ಹಾಂ ! ನೀನು ಏನೇ ಆದ್ರೂ ಜಾಣ ಮರಿ ಅಲ್ವೇ ? ಆದ್ರೆ ನಮ್ ತುಂಟಮರಿ ಮಾಡಿದ್ದೇನು ಗೊತ್ತೇ ?"ಎನ್ನುತ್ತ ಅಜ್ಜಿ ಕಥೆ ಮುಂದುವರಿಸಿದಳು. 

ಅಮ್ಮನ ಮಾತು ನೆನಪಿಗೆ ಬಂದಿತು. 'ಸರಿ ! ನೋಡಿದ ಮಾತ್ರಕ್ಕೆ ಏನು ತಪ್ಪಾದೀತು ?' ಎಂದುಕೊಂಡಳು. ಡಬ್ಬಿಯ ಮುಚ್ಚಳ ತೆರೆದು ಒಳಗಿದ್ದ ಮೃದುವಾದ ರಸಭರಿತ  ಕಡುಬುಗಳನ್ನು ನೋಡಿದಳು .

ಅಮ್ಮನ ಮಾತು ನೆನಪಾಯಿತು.' ಸರಿ!ಮುಟ್ಟಿದ ಮಾತ್ರಕ್ಕೆ ಏನು ತಪ್ಪಾದೀತು?' ಎಂದುಕೊಂಡಳು. ಬಿಸಿಯಾಗಿ, ಮೃದುವಾಗಿ , ಘಮ ಘಮಿಸಿದ ಒಂದು ಕಡುಬನ್ನು ಕೈಗೆತ್ತಿಕೊಂಡಳು ! 

ಅಮ್ಮನ ಮಾತು ಮತ್ತೆ ನೆನಪಾಯಿತು. 'ಚೂರೇ  ಚೂರು   ತಿಂದ ಮಾತ್ರಕ್ಕೆ ಏನು ತಪ್ಪಾದೀತು?' ಎಂದುಕೊಂಡವಳೇ ಒಂದು  ಚೂರು ಕಡುಬನ್ನು ರುಚಿ ನೋಡಿದಳು.  ಮರುಕ್ಷಣ ಇಡೀ ಕಡುಬು ಅವಳ ಬಾಯೊಳಕ್ಕೆ ಮಾಯವಾಯಿತು !

ಮತ್ತೆ ಅಮ್ಮನ  ಮಾತು ನೆನಪಾಯಿತು. 'ಬೇಕಾದಷ್ಟು ಕಡುಬುಗಳಿವೆ . ಎರಡೇ ಎರಡು ತಿಂದ ಮಾತ್ರಕ್ಕೆ ಏನು ತಪ್ಪಾದೀತು?' ಎಂದುಕೊಂಡವಳೇ  ಇನ್ನೂ ಎರಡು ಕಡುಬುಗಳನ್ನು ಲಗಾಯಿಸಿದಳು !


ಹೀಗಾಗಿ 'ಎರಡೇ  ಎರಡು, ಮತ್ತೆರಡು , ಇನ್ನೂ ಎರಡೇ ಎರಡು' ಎಂದು ಸವಿ ಕಡುಬುಗಳನ್ನು ತಿನ್ನುತ್ತಲೇ ಹೋದಳು . 



ಕಡೆಗೆ ಡಬ್ಬಿಯಲ್ಲಿ ಒಂದೇ ಒಂದು ಕಡುಬು ಮಾತ್ರ ಉಳಿದಿತ್ತು  . ತುಂಟಮರಿಗೆ ಅಮ್ಮನ  ಮಾತು ಮತ್ತೆ  ನೆನಪಾಯಿತು. ಬಹಳ ಹೆದರಿಕೆಯೂ ಆಯಿತು . ಥಟ್ಟನೆ ಡಬ್ಬಿ ಮುಚ್ಚಿಟ್ಟು  ಓಡಿಬಿಟ್ಟಳು  . 


ತುಂಟಮರಿ ಅವಸವಸರವಾಗಿ  ಮುಚ್ಚಿದ್ದ  ಕಾರಣ ಡಬ್ಬಿ ಅರ್ಧಂಬರ್ದ   ತೆರೆದೇ ಇತ್ತು. ಅದರಿಂದ ಹೊರಟ  ಕಡುಬಿನ ಸ್ವಾಧ ಒಂದು  ಇಲಿಯನ್ನು ಆಕರ್ಷಿಸಿತು. ಡಬ್ಬಿಯತ್ತ ಧಾವಿಸಿ ಬಂದ  ಇಲಿ, ಸಡಿಲವಾಗಿದ್ದ ಮುಚ್ಚಳವನ್ನು ತನ್ನ ಮೂಗಿನಿಂದ  ನೂಕಿ ತೆರೆಯಿತು !

'ಆಆಆಃಃ ! ಎಂತ ಸೊಗಸಾದ ದಪ್ಪ ಕಡುಬು !' ತನ್ನ ಮೂಗನ್ನು ಡಬ್ಬಿಯೊಳಗೆ ತೂರಿಸಿ ಕಡುಬನ್ನು ಸವಿಯ ತೊಡಗಿತು ಇಲಿ. 

ಇದಕ್ಕಿದ್ದಹಾಗೆ ಮುಚ್ಚಳ ಜಾರಿ ಡಬ್ಬಿ ತಾನಾಗಿಯೇ  ಮುಚ್ಚಿಕೊಂಡಿತು  .  ಇಲಿ ಡಬ್ಬಿಯೊಳಗೆ ಸಿಕ್ಕಿಬಿದ್ದಿತು !


ಅಂದು ಸಂಜೆ ಪೂಜೆಯ ವೇಳೆಗೆ  ಅಮ್ಮ ತನ್ನ ಮಕ್ಕಳನ್ನು ಕುರಿತು ಹೇಳಿದಳು :
" ಹುಡುಗಿಯರೇ ! ಯಾರಾದರೊಬ್ಬರು ಹೋಗಿ ದೇವರಿಗೆ ಅರ್ಪಿಸಲು ನಾಲ್ಕು ಕಡುಬುಗಳನ್ನು  ತನ್ನಿ !" 

ಜಾಣಮರಿ ಒಂದು ತಟ್ಟೆ ಹಿಡಿದು ಒಳಕ್ಕೆ ಹೋದಳು . ಮುಚ್ಚಳವನ್ನು ತೆರೆದವಳು ಕಡುಬಿಗೆ  ಬದಲಾಗಿ ಡಬ್ಬಿಯಲ್ಲಿ ಮಲಗಿದ್ದ ಇಲಿಯ ಆಕಾರವನ್ನು ಕಂಡು  ಆಶ್ಚರ್ಯದಿಂದ ಕಣ್ಣಗಲಿಸಿದಳು. ತಬ್ಬಿಬ್ಬಾಗಿ  ಕೂಡಲೇ ಡಬ್ಬಿ ಮುಚ್ಚಿ  ಹಿಂತಿರುಗಿ  ಓಡಿದಳು . 


"ಅಯ್ಯಯ್ಯೋ ! ಆಮೇಲೆ ?" ಎಂದಳು ಪುಟ್ಟಿ .