ಮಕ್ಕಳಿಗಾಗಿಯೂ , ಮಕ್ಕಳ ಕಥೆಗಳಲ್ಲಿ ಆಸಕ್ತಿ ಇರುವವರಿಗಾಗಿಯೂ ,
ಕಿರು ಕಥೆಗಳು, ದೊಡ್ಡ ಕಥೆಗಳು, ಸುಮ್ಮನೆ ಹರಟೆ ಮಾತು
ಇತ್ಯಾದಿಗಳ ಸಂಪುಟ.

Thursday, March 28, 2013

Keerthi Nidhi Kesari Singha - Afterword & Bibliography


                                                                                                            
                                                              ಕೀರ್ತಿ ನಿಧಿ ಕೇಸರಿ ಸಿಂಘ 
                                              ಹಿನ್ನುಡಿ 


                                                                                        
                                                                               ಮೊದಲನೇಯ ಹಸ್ತ ಪ್ರತಿ   


ವರ್ಷಗಳ ಕೆಳಗೆ ಒಂದು ಮುಂಜಾವಿನ ಕನಸು ಕಂಡು ಕಣ್ಣು ಬಿಟ್ಟಾಗ 'ಕೀರ್ತಿ ನಿಧಿ ಕೇಸರಿ ಸಿಂಘ' ಎಂಬ ಹೆಸರನ್ನು ಯಾರೋ ತಲೆಯಲ್ಲಿ ಬಿತ್ತಿದ್ದಂತೆ ಭಾಸವಾಯಿತು. ಅದು ಮೆದುಳಲ್ಲಿ ಅಂಕುರಿಸಿ ಸಸಿಯಾಗಿ ಗಿಡವಾಗಿ,ದಿನೇ ದಿನೇ ಬೆಳೆದು ಕಥೆಯ ರೂಪ ತಾಳಲಾರಂಭಿಸಿತು. ಈ ವಿಷಯವನ್ನು ಸೋದರಿಯೊಡನೆ ಹಂಚಿಕೊಂಡಾಗ ಅವರೂ ಹುಮ್ಮಸ್ಸಿನಿಂದ ಅದನ್ನು ಪೋಷಿಸಿ ಪಾಲಿಸ ತೊಡಗಿದರು.

ಭವಾನಿ ನದಿ ತೀರದ ಆಪಕೂಡಲ್ ಎಂಬ ಸುಂದರವಾದ ಗ್ರಾಮದಿಂದ ಹೊರಟು, ಸತ್ಯಮಂಗಳಂ, ಬನ್ನಾರಿ, ತೆಂಗುಮರ ಹಟ್ಟ, ಡನಾಯಕನ ಕೋಟೆ, ಡಾಲ್ಫಿನ್ಸ್ ನೋಸ್, ದಿಂಬಮ್, ನಂಜನಗೂಡು ಮತ್ತು ಮೈಸೂರಿನ ರಮ್ಯವಾದ  ದೃಶ್ಯಗಳ ಹಿನ್ನೆಲೆಯಲ್ಲಿ  ಕೇಸರಿಯನ್ನು ನಡೆಸಿಕೊಂಡು ಬಂದು ಪಟ್ಟಣ ಮುಟ್ಟಿಸಿದೆವು. ನಾವು  ಪದೇ ಪದೇ ಕಂಡು ವಿಸ್ಮಯಕ್ಕೊಳಗಾದ, ನಮ್ಮ ಹಿತ್ತಲಲ್ಲೇ ಇರುವ  ಶ್ರೀರಂಗಪಟ್ಟಣಕ್ಕಿಂತ ಕೇಸರಿಯ ಕಥೆಯನ್ನು ಚಿತ್ರಿಸಲು  ಯುಕ್ತವಾದ ಐತಿಹಾಸಿಕ ಕ್ಷೇತ್ರ ಬೇರೆಲ್ಲಿ ದೊರಕ ಬೇಕು?

ಇಷ್ಟು ಕಾಲವೂ ಹಸ್ತ ಪ್ರತಿಯಲ್ಲಿ ಹಳೆಯದಾಗಿ ಹಳದಿಯಾಗಿ ಮುದುಡಿ ಕುಳಿತಿದ್ದ  ಕೇಸರಿ, ಈ   ಅಂತರ್ಜಾಲದ ನವ ಯುಗಕ್ಕೆ ನಾವು ಹೊಂದಿಕೊಂಡೊಡನೆ  ನಮ್ಮಿಬ್ಬರ ಕೈ ಹಿಡಿದು ಚಂಗೆಂದು ಬ್ಳಾಗಿಗೆ ಹಾರಿ ತನ್ನ ಸಾಹಸಗಳನ್ನು ಪ್ರದರ್ಶಿಸ ತೊಡಗಿದನು.

ಈ ವರೆಗೂ ನಮ್ಮ  ಮನಸ್ಸಲ್ಲೂ, ಉಸಿರಲ್ಲೂ , ಕೀಬೋರ್ಡಿನಲ್ಲೂ, ಇ  - ಕುಂಚದಲ್ಲೂ  ಬೆರೆತಿದ್ದ ಕೀರ್ತಿ ನಿಧಿ ಕೇಸರಿ ಸಿಂಘ ನಮಗೆ ವಿದಾಯ ಹೇಳಿ ತನ್ನ ಕರ್ತವ್ಯ ಪಾಲನೆಗಾಗಿ ಇಂದು ಹೊರಟೇ ಬಿಟ್ಟ. 

ಕಥೆಯ ಪೋಷಣೆಗೆ ಬೇಕಾದ ಆಧಾರ ಗ್ರಂಥಗಳೆಲ್ಲ ನಮ್ಮ ಮನೆಯಲ್ಲೇ ದೊರಕಿದ್ದು ಮಹತ್ತಾದ ವರಪ್ರಸಾದ. 
ಕೀರ್ತಿ ನಿಧಿ ಕೇಸರಿ ಸಿಂಘನ ಪೋಷಣೆಗೆ ಆಧಾವಾಗಿದ್ದ  ಗ್ರಂಥಗಳ ಪಟ್ಟಿ ಹೀಗಿದೆ:

           
              ( Reference books and  notes taken)


 MYSORE , A Gazetteer Compiled For Government-by B. LEWIS RICE, C.I.E.,M.R.A.S.
 MYSORE GAZETTEER, Edited by C.HAYAVADANA RAO - 1930 Edition.

          

         

1. " Handbook of The City Of Mysore "
   Author : T.G. Lakshmana Rao Esq. L.C.E
   Wesleyan Mission Press, Mysore, 1915

      

2. " The Mysore Tribes and Castes "
    Authors: H.V. Nanjundayya ( M.A. M.L., CIE, Supt.of Ethnography ) and Rao Bahadur L.K.AnanthaKrishna Iyer (B.A. L.T, Curator of State        Museums )
Mysore University Press . 1930

         

3. Encyclopaedia Brittanica  Eleventh Edition , Vols. 7 , 11 , 19 , 24 and 26
Cambridge University Press , 1911

4. "Selctions From The Records of The Sringeri Mutt" Vols. I and II  (Kannada)
 1927

5. "Annals of The Mysore Royal Family"
The Government Branch Press, Mysore. 1922

       

6. " The Discovery of India" by Jawaharlal Nehru
The Signet Press, 1946

7. " Vaidya Sangraha" by Pandita Bheemarayaru
Mysore Government Press, Bangalore 1885

        

8." The View of Hindoostan" Vol.2 Eastern Hindoostan " -Henry Hughs, London ,1798

   

9. "Historical Sketches of the South India" Vols 2 and 3
Col. Mark Wilks
Longman,Hurst & Orme, London 1817

      

10. " A view of the Origin and Conduct of War with Tippoo Sultaun" by Lt.Col. Alexander Beatson.
Bulmer & Co,, London, 1800

11. "Southern  India " by F.E.Penny, Lady Lawley
A & C Black, London 1914

   

12. " The Sword of Tipu Sultan" Bhagwan S. Gidwani
Rupa & co, 1976

13. " Tippuvina Kanasugalu" play by Girish Karnad

14. 'Real Tipu- Story of Tipu Sultan"  ( Paperback) by H.D. Sharma

15.  "Haider Ali and Tipu Sultan" and the struggle with the Mussalman Powers in the South "
by Lewin Bentham Bowring ( Clarendon Press, 1899)

16. "Gardening In The Tropics" by G.Marshall Woodrow.
Simpkin & Kent,  London 1910

17. " Cattle of Southern India " - Lt.Col. W.D. Gunn
  Government Press, Madras , 1909

    


18. PURNIAH 
by N.K.Narasimha Murthy, M.Sc.Retd.Principal, Government College, Kolar
1976

 

19. Sultan
 Vol. 3, Annual Journal 1985-86
Tipu Sultan Research Institute & Museum
Gumbaz, Srirangapatna


20. SERINGAPATAM- PAST AND PRESENT
A MONOGRAPH
By Col.G.B.MALLESON, C.S.I.
Author of THE HISTORY OF THE FRENCH IN INDIA,ETC.
1909


Online resources:

1. WIKIPEDIA
2. Kushtiwrestling.blogspot.in
3. www.bjj.com.au  ( vajramushti)
4. The Art of Gamaka - Introduction and Demo by Narahari Sharma Kerekoppa ( Two Parts)  - Youtube.
4-( a ): Karnataka Mahabharata : ebook.

 

5. KumaraVyasa Bharata ( 1940 edition), Archive.org.
6.www.tigerandthistle.net

             

ಶಾಲೆಗೇ ಹೊರಟ ಕೇಸರಿಯ ಬೊಂಬೆ 

            ಕೀರ್ತಿ ನಿಧಿ ಕೇಸರಿ ಸಿಂಘನಿಗೆ ಜಯವಾಗಲಿ!        

Monday, March 11, 2013

Keerthi Nidhi Kesari Singha - 31

                                 ಕೀರ್ತಿ ನಿಧಿ ಕೇಸರಿ ಸಿಂಘ


ಶಿಖರದ ಗುಡಿಗೋಪುರವೇ  ಕಿರೀಟವಾಗಿ -
ಪಾದ ತೊಳೆವ ಲೋಕಪಾವನಿಯೇ ಗಂಗೆಯಾಗಿ -
ಕಾಗೆ ಬಂಗಾರ ಮಿನುಗುವ ಬಂಡೆಗಳೇ  ವಜ್ರದಂಗಿಯಾಗಿ -
ಧರ್ಭೆ ಹುಲ್ಲು ಮತ್ತು ನೆಲ್ಲಿ ಹುಣಸೆ ಮರಗಳೇ ವನಮಾಲೆಯಾಗಿ-
ಕರಿಗಿರಿವಾಸನೇ ಘಟ್ಟವಾಗಿ -
ಘಟ್ಟವೇ ಕರಿಗಿರಿವಾಸನಾದಂತೆ  ರಾರಾಜಿಸುತ್ತಿದ್ದ ಕರಿಘಟ್ಟ!


 ಅಭ್ರಕ ಅದಿರುಗಳ ಪದರೆಗಳು ನಾಮ ಇಟ್ಟಿದ್ದ ಬಂಡೆಯ ಮೇಲೇ ನಿಂತು ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸುತ್ತಿದ್ದ ಕೇಸರಿ.ಬೆಟ್ಟದ ಬುಡದಲ್ಲಿದ್ದ ಆಲೆಮನೆಗಳಿಂದ ಇಂಪಾದ ಪರಿಮಳ ಹೊತ್ತು ಬಂದ  ತಂಗಾಳಿಯು, ಆತನ ಕೇಶರಾಶಿಯನ್ನು ವಾತ್ಸಲ್ಯದೊಡನೆ ಕೆದರಿ ಹೊಯಿತು.
ಎಂತಹ ಪ್ರಶಾಂತವಾದ ವಾತಾವರಣ !

ಕಾವೇರಿ ನದಿಯನ್ನು ಸೇರುವ ಅವಸರದಲ್ಲಿ ಜುಳುಜುಳು ಹರಿಯುತ್ತಿದ್ದ  ಲೋಕಪಾವನಿ ನದಿ,ಎಲ್ಲೆಲ್ಲೂ ಹಸಿರು ಗದ್ದೆಗಳು,ಹಣ್ಣಿನ ತೋಟಗಳು!
ಕೋಟೆ ಕೊತ್ತಲಗಳು -
ಸುಂದರ ಅರಮನೆಗಳು -
ಭವ್ಯ ದೇಗುಲಗಳು -
ಎತ್ತರವಾದ ಮಸ್ಜಿದುಗಳೊಡನೆ -
ದೂರದಲ್ಲಿ ಕಾಣಿಸಿದ ಶ್ರೀರಂಗ ಪಟ್ಟಣದ ರಮ್ಯ ನೋಟ ಉಸಿರುಕಟ್ಟಿಸುವಂತಿತ್ತು! ಈ ಸುಂದರವಾದ ಪಟ್ಟಣವನ್ನು ನಿರ್ಮೂಲಗೊಳಿಸತಕ್ಕಂತಹ  ಆಹ್ವಾನ ಪತ್ರಿಕೆಯನ್ನು ಫಿರಂಗಿ ದೊರೆಗೆ  ನೀಡಲೆಂದು  ಹೊರಟಿದ್ದರಲ್ಲ ಪಾಂಡುರಂಗಾಚಾರ್ಯರು?


ನಡೆದ ಘಟನೆಗಳೆಲ್ಲ ಮತ್ತೊಮ್ಮೆ ಮನಃಪಟಲದಲ್ಲಿ  ಹಾದು  ಹೋದಾಗ ಕೇಸರಿಗೆ  ಮೈಯೆಲ್ಲಾ ಝುಮ್ಮೆಂದಿತು!ಎಲ್ಲ ಬರಿ  ಕನಸೋ ಎಂದೂ ಅನ್ನಿಸಿತು. ಆದರೆ, ಆರದ ಭುಜದ ಗಾಯದಲ್ಲಿ ಇದ್ದ  ನೋವೂ, ಸೊಂಟದ ಪಟ್ಟಿಯಲ್ಲಿ ಬಿಗಿದಿದ್ದ ಭಾರವಾದ  ಹೊಸ ಖಡ್ಗವೂ 'ಎಲ್ಲ ನಿಜವೆ!' ಎಂದು ಸಾಬೀತು ಪಡಿಸುತ್ತಿದ್ದವು.

 ವಿಚಾರಣೆಗೆ ಹೊರಟಾಗ ರಾಜ್ಯಲಕ್ಷ್ಮಿ ಅಕ್ಕ ಬಾಗಿಲ ವರೆಗೆ ಬಂದು ಬೀಳ್ಕೊಟ್ಟಿದ್ದಳು. ಅವಳ ಮುಖವನ್ನು ನೇರವಾಗಿ ನೋಡಲಾರದೆ  ತಲೆ ತಗ್ಗಿಸಿ ನಿಂತವನ ಗಲ್ಲ ಹಿಡಿದೆತ್ತಿ "ಧೈರ್ಯವಾಗಿ ಹೋಗಿ ಬಾ ಕೇಸರಿ." ಎಂದಿದ್ದಳು.

" ಅಕ್ಕ. ಆಚಾರ್ಯರು.... " ಕೇಸರಿ ಮುಂದೆ ಮಾತನಾಡಲಾರದೆ ತಡವರಿಸಿದ್ದ.

" ಕೇಸರಿ! ನಿನಗೆ ಯಾವ ದಾಕ್ಷಣ್ಯವೂ ಬೆಡ. ಇದ್ದ ಸಂಗತಿಯನ್ನ ಇದ್ದ ಹಾಗೆ ಹೇಳು.ಅರ್ಥ ಕಾಮಗಳಿಗಾಗಿ  ಧರ್ಮವನ್ನು ಮಾರಿಕೊಂಡವರು  ಯಾವ ಮೋಕ್ಷಕ್ಕೆ ಹೋಗಬೇಕಿದೆಯೋ ಏನೋ ! ಉಪ್ಪು ತಿಂದವರು ನೀರು ಕುಡಿಯಲೇ ಬೇಕಲ್ಲವೇ?" ತುಂಬಿ ಬಂದ ಕಣ್ಣುಗಳನ್ನು ಸೆರಗಿನಿಂದ  ಒರೆಸಿಕೊಂಡು ಅವಳು ಧೈರ್ಯ ಹೇಳಿದಾಗ, ಕೇಸರಿಗೂ ಕಣ್ಣು ತುಂಬಿ ಬಂದಿತ್ತು .

ಸಾಕ್ಷಿ ಹೇಳಲು ಗಂಗಾಧರನೊಡನೆ ಆಗಮಿಸಿದ್ದ ಸುಲೋಚನ ಕೇಸರಿಯನ್ನು ಕಂಡೊಡನೆ ಭಾವುಕಳಾದಳು.

" ಹೇಗಿದ್ದೀಯ ತಮ್ಮ? ಆ ದುಷ್ಟರು ನಿನ್ನನ್ನ ಅದೆಷ್ಟು ಸತಾಯಿಸಿಬಿಟ್ಟರಪ್ಪ!" ಕಳಕಳಿಯಿಂದ ಅವಳು ವಿಚಾರಿಸಿದಾಗ ಕೇಸರಿಯ ಹೃದಯ ಧನ್ಯತೆಯಿಂದ ತುಂಬಿ ಉಕ್ಕಿ ಹರಿಯಿತು.

ತನ್ನ ತಾಯಿ ತ್ರಿಪುರಸುಂದರಿ ಸ್ಥೂಲವಾಗಿ ತನ್ನ ಕಣ್ಣಿಗೆ ಕಾಣಿಸದಿರಬಹುದು. ಆದರೆ ರುಕ್ಮಿಣಿ ಅಮ್ಮ, ರಾಜ್ಯಲಕ್ಷ್ಮಿ ಅಕ್ಕ,  ಸುಲೋಚನ, ಮತ್ತು ನಂಜನಗೂಡಿನಲ್ಲಿದ್ದ ಗುಂಡಪ್ಪನ ತಾಯಿ ಗಿರಿಜಾಂಬೆಯ  ಉಸಿರಲ್ಲಿಯೂ ಕೂಡ ಸೂಕ್ಷ್ಮವಾಗಿ ಬೆರೆತು ನಿಂತು ತನ್ನನ್ನು ಸದಾ ಕಾಯುತ್ತಲೇ ಇದ್ದಾಳೋ ಅನ್ನಿಸಿತು ಕೇಸರಿಗೆ.ಸಂಚುಗಾರರನ್ನು ಬಂಧಿಸಲು ಕಾರಣವಾಗಿದ್ದ ಸಂಜೀದ ಮತ್ತು ತಾರಾಮಣಿಗೂ ಸಹ ಅವಳೇ ಪರೋಕ್ಷವಾದ  ಪ್ರೇರಣಾ ಶಕ್ತಿಯಾಗಿದ್ದಳೋ ಏನೋ?





ರುಕ್ಮಣಿ ಅಮ್ಮ ಅಪ್ಪಾಜಿಯವರ ಕೈಯಲ್ಲಿ ತನಗಾಗಿ ಕೊಟ್ಟು ಕಳುಹಿಸಿದ್ದ   ತಿಂಡಿಗಳನ್ನು ಸವಿದಾಗಲೂ  ಇಂತಹದ್ದೇ ಭಾವನೆ ಕೇಸರಿಯ ಮನಸ್ಸನ್ನು ಆಕ್ರಮಿಸಿತ್ತು .

ಅದಾಲತ್ತಿನಿಂದ ಹಿಂದಿರುಗಿದ ಕೇಸರಿಯನ್ನು ಕಂಡಾಗ ನಂಜಪ್ಪೈಯನವರು ಅದೆಷ್ಟು ಭಾವೋದ್ವೇಕಕ್ಕೆ ಒಳಗಾಗಿದ್ದರು!

'ಪುಕ್ಕ ಬೆಳೆಯದ, ತೊದಲು ಮಾತಿನ, ಮುದ್ದು ಗಿಣಿ ಒಂದನ್ನು ತಾನು ಕ್ಷೇತ್ರ ಪಾಲೈಯನ ಕೈಗೆ ಒಪ್ಪಿಸಿದ್ದೆ! ಇಂದು ಅದು ಬಲಿಷ್ಟನಾಗಿ ಪರಾಕ್ರಮಿಯೂ ಆಗಿ,ಒಂದು ಘನಗಂಭೀರವಾದ ಪಕ್ಷಿ ರಾಜನಾಗಿ ಪರಿವರ್ತಿಸಿದೆ!ಇದೆಂತಹ ಮೋಡಿ ?'

ಮಾತಾಡಲಾರದೆ, ಸಂತೋಷ ದುಃಖ ಎಲ್ಲ ಒಮ್ಮೆಗೆ ಉಮ್ಮಳಿಸಿ ಬರಲು, ಧಾವಿಸಿ ಬಂದು ವಿಶ್ವನಾಥನ ಪಡಿಯಚ್ಚಾಗಿ ಕಂಡ ಕೇಸರಿಯನ್ನು ಬಾಚಿ ಬಿಗಿದಪ್ಪಿಕೊಂಡಿದ್ದರು ನಂಜಪ್ಪೈಯನವರು.

 ಬಹಳ ಹೊತ್ತಿನ ವರೆಗೆ " ವಿಶ್ವ! ವಿಶ್ವನಾಥಾ!"ಎಂದಷ್ಟೇ ಹಲುಬುತ್ತಿದ್ದರು ನಂಜಪ್ಪೈಯ ನವರು.

ನಾಟಕವಾಡಿ ತನ್ನನ್ನು  ಪಟ್ಟಣಕ್ಕೆ ಕಳುಹಿಸಿ, ಈ ವರೆಗೆ ತನ್ನನ್ನು ಕಾಣಲು ಬಾರದೆಹೊಗಿದ್ದ ಅಪ್ಪಾಜಿಯವರ  ಮೇಲೆ ಕೇಸರಿಗೆ  ತುಸು ಕೋಪವೇ ಇದ್ದಿತು.ಆದರೆ ಅವರ ಅಪ್ಪುಗೆಯಲ್ಲಿ ಆ ಕೋಪ ದುಃಖ ಎಲ್ಲ ಕರಗಿಹೋಯಿತು.

" ಅಪ್ಪಾಜಿ !" ಕೇಸರಿಯ ಕಂಠವೂ ಗದ್ಗದಿತವಾಗಿತ್ತು.

ಆ ಪ್ರೀತಿಯ ಸಂಗಮವನ್ನು ಬೆರಗು ಕಣ್ಣುಗಳಿಂದ  ವೀಕ್ಷಿಸುತ್ತಾ ದೂರದಲ್ಲೇ ನಿಂತುಬಿಟ್ಟಿದ್ದ ಪೊನ್ನ  . ತಾನೂ ಸಹ ಕೇಸರಿಯಂತೆ ವೀರನಾಗಬೇಕೆಂಬ  ಆಸೆ ಆತನ  ಮನಸ್ಸಲ್ಲಿ ಅಂಕುರಿಸಿತು .  

" ಅಂದು ನನ್ನ ಸ್ನೇಹಿತನಿಗೆ  ನಾನು  ಕೊಟ್ಟ ಮಾತನ್ನ  ಇಂದು ನೀನು ಉಳಿಸಿಕೊಟ್ಟೆ  ಮಗು!" ನಂಜಪ್ಪೈಯನವರ ಎದೆಯಿಂದ  ನೆಮ್ಮದಿಯ ನಿಟ್ಟುಸಿರು  ಹೊರ ಹೊಮ್ಮಿತ್ತು .


"ಪಟ್ಟಣಕ್ಕೆ ಬಂದೂ ನಿನ್ನನ್ನು ಭೇಟಿಯಾಗಲಾರದೆ  ಅದೆಷ್ಟು ಪರಿತಪಿಸಿದೆ ನೋ ! ಕ್ಷೇತ್ರ ಪಾಲೈಯನ ಮನೆ, ಸರದಾರ್ ಅಸ್ಲಾಮ್ ಜಾನನ ಮನೆ, ಪಾಂಡು ರಂಗಾಚಾರ್ಯರ ಮನೆ, ಶ್ರೀರಂಗನಾಥನ ಗುಡಿ ಎಂದು ಅಲೆದಾಡಿ ಸುಸ್ತಾಗಿಹೋದೆ ಕಂದ! ರಾತ್ರಿ ಬಹಳ ತಡವಾಗಿ ಬಂದು, ನಡೆದ ವಿಷಯಗಳನ್ನೆಲ್ಲ  ಕ್ಷೇತ್ರಪಾಲೈಯ ವಿವರಿಸಿದಾಗ ನನಗೆ  ಭಯದಲ್ಲಿ ಕರುಳು ಕಿತ್ತು ಬರುವ ಹಾಗಾಯಿತು! ಕೂಡಲೇ  ನಾನು ನಿನ್ನನ್ನ ಕಾಣಲು ಬಂದಾಗ  ನಿನಗೆ ಜ್ಞಾನವೇ ಇರಲಿಲ್ಲ."

ನಂಜಪ್ಪೈಯನವರ ಮಾತು ಕೇಳಿ ಧುತ್ತೆಂದು ತಲೆ ಎತ್ತಿ ಕ್ಷೇತ್ರ ಪಾಲೈಯನನ್ನು ನೋಡಿದ್ದ  ಕೇಸರಿ.ಆತ ಕಣ್ಸನ್ನೆಯಲ್ಲೇ  'ಭಯಪಡ  ಬೇಡ' ಎಂದಿದ್ದ. ತಮ್ಮ  ಯಾವ ಗುಟ್ಟೂ  ಹೊರಬರದ ಹಾಗೆ ಎಲ್ಲ ರಣ ಕೇಸರಿಗಳೂ ತತ್ತಮ್ಮ  ಬಾಯಿಗೆ   ಬೀಗ ಮುದ್ರೆ ಹಾಕಿಕೊಂಡಿದ್ದರಲ್ಲ!

 "ಸಾಕು ಕೇಸರಿ! ಪಟ್ಟಣದ ವಾಸ ಸಾಕು!ನಿನ್ನ ಅಮ್ಮ ನಿನ್ನ ಕಾಣಲು ರಾತ್ರಿ ಹಗಲು ಹಂಬಲಿಸುತ್ತಿದ್ದಾಳೆ. ನನ್ನ ಜೊತೆ ಹಳ್ಳಿಗೆ ನೀನೂ ಬಂದು ಬಿಡು. ನಿನ್ನ ತಂದೆ ವಿಶ್ವನಾಥನ ಜಾಗೀರು ನೊಡಿಕೊಂಡು, ನಮ್ಮ ಕಣ್ಣೆದುರೇ ನೀನು  ಸುಖವಾಗಿರು." ಒಂದೇ ಸಮನೆ ತನ್ನ ಮನಸ್ಸನ್ನೆಲ್ಲ ತೋಡಿಕೊಂಡಿದ್ದರು ನಂಜಪ್ಪೈಯನವರು.

ರಾಜ್ಯಲಕ್ಷ್ಮಿ ಅಕ್ಕ ತನ್ನ ಸ್ವಂತ ದುಃಖಗಳನ್ನು  ಮರೆತು ಕೇಸರಿಗೆ ತಕ್ಕ ಸಮಯದಲ್ಲಿ ಉಪಕಾರ ಮಾಡಿದ್ದ ಸುಲೋಚನ ಮತ್ತು ಗಂಗಾಧರನನ್ನು  ಮನೆಗೆ ಆಹ್ವಾನಿಸಿದ್ದಳು.ಅಷ್ಟು ಮನೋ ವೇದನೆಯಲ್ಲೂ ಚಂದ್ರಣ್ಣನನ್ನು ಮಾತ್ರ ತಡ ಮಾಡದೇ ತಕ್ಕ ವೈದ್ಯರ ಬಳಿ ಒಪ್ಪಿಸಿ ಬಂದದ್ದು ಸ್ವಲ್ಪ ನೆಮ್ಮದಿಯಾಗಿದ್ದಿತು.

ಕ್ಷೇತ್ರ ಪಾಲೈಯ, ನಂಜಪ್ಪೈಯನವರು, ಪೊನ್ನ, ಗಂಗಾಧರ, ಸುಲೋಚನ ಎಲ್ಲರೂ ಕೂಡಿ ಮನೆಗೆ ಹಬ್ಬದ ಕಳೆ ತಂದಿದ್ದರು . ಕೇಸರಿಯ ಗೆಳೆಯರಾಗಿ ಗುಂಡಪ್ಪ, ಗೋವಿಂದರಾಜು ಕೂಡ ಆಗಮಿಸಿದ್ದರು. ಔತಣದ ಸಂಭ್ರಮದಲ್ಲಿ  ಎಲ್ಲರೂ ನಿರತರಾಗಿರಲು, ಕೇಸರಿಯನ್ನು  ಅಪ್ಪಾಜಾನನ ನೆನಪು ಕಾಡುತ್ತಲೇ ಇದ್ದಿತು.


ದಿನ ಕಳೆದಂತೆ ಅಪ್ಪಾಜಾನನಿಗಾಗಿ ಕೇಸರಿಯ ಮನಸ್ಸು ಬಹಳ ಹಂಬಲಿಸುತ್ತಿತ್ತು. ಅವರನ್ನು ಕಾಣ ಬೇಕು. ತನ್ನ ಅನುಭವಗಳನ್ನು  ಅವರೊಡನೆ ಹಂಚಿಕೊಳ್ಳಬೇಕು ಎಂದು ತವಕಿಸಿತು ಮನಸ್ಸು. ಅವನ ಮನವರಿತವರಂತೆ   ಕರಿ ಘಟ್ಟದ ತಪ್ಪಲಲ್ಲಿ ಲೋಕಪಾವನಿಯ ದಂಡೆಯ ಮೇಲೆ  ತನ್ನನ್ನು ಭೇಟಿಯಾಗುವಂತೆ ಕಡೆಗೊಮ್ಮೆ ಸಂದೇಶ ಕಳುಹಿಸಿದ್ದರು ಅಪ್ಪಾಜಾನ್.

ನೆನಪಿನ ಲಹರಿಯಲ್ಲಿ ತೇಲುತ್ತಿದ್ದ ಕೇಸರಿಯನ್ನು, ಮಾಯಾಳ  ಹೇಷಾರವ ಎಚ್ಚರಗೊಳಿಸಿತು. ಎರಡನೆ ಬಾರಿಯಾಗಿ ಘಟ್ಟವನ್ನು ಇಳಿಯ ತೊಡಗಿದ ಕೇಸರಿಗೆ,ಅಪ್ಪಜಾನ್ ತನ್ನ ಕುದುರೆಯನ್ನು ಮಾಯಾಳ ಸಮೀಪವೇ ಕಟ್ಟುತ್ತಿದ್ದ ದೃಶ್ಯ ಗೋಚರವಾಯಿತು .ರೆಕ್ಕೆ ಬಿಚ್ಚಿ ಕುಣಿಯ ತೊಡಗಿತು ಹರ್ಷಗೊಂಡ ಮನಸ್ಸು. ಧಾಪುಗಾಲು ಹಾಕಿ ಎರಡೆರಡು ಮೆಟ್ಟಲುಗಳನ್ನು 'ಧಡ ಧಡ' ಹಾರಿ ಇಳಿದ ಕೇಸರಿ, ತನಗಾಗಿ ಬಿರಿದಿದ್ದ  ಅಪ್ಪಾಜಾನನ  ಬಲಿಷ್ಠ ಬಾಹುಗಳ ಮಧ್ಯೆ  ಶರಣಾಗಿ, ಅವರನ್ನು ಬಲವಾಗಿ ಅಪ್ಪಿಕೊಂಡನು.

ಭಾವೊದ್ವೇಗ  ಶಮನವಾಗುತ್ತಿದ್ದ ಹಾಗೇ, ಇಬ್ಬರೂ ಮರದ ನೆರಳಲ್ಲಿ  ಕುಳಿತು ಮಾತು ಕಥೆಗಳಲ್ಲಿ ಮಗ್ನರಾದರು. ಕೇಸರಿ ಸಂಚುಗಾರರೊಡನೆ ತಾನು ಏಕಾಏಕಿ ಕಾದಾಡಿದ ಬಗ್ಗೆ, ಅಪ್ಪಾಜಾನನಿಂದ ಕಲಿತ ತಂತ್ರಗಳನ್ನು ಪ್ರಯೋಗಿಸಿ ಆ ದಾಂಡಿಗರನ್ನು ಆಟವಾಡಿಸಿ ಮಣ್ಣು ಮುಕ್ಕಿಸಿದ  ಬಗ್ಗೆ, ಸುಭಾನನ ಕಾಲುಗಳ ಮಧ್ಯೆ ತೂರಿ ಆತನನ್ನು ದಿಗ್ಬ್ರಾಂತಿ ಗೊಳಿಸಿದ ಬಗ್ಗೆ ಎಲ್ಲ ವಿವರಿಸಿದನು. ವೀರಾವೇಶ, ಸ್ವಲ್ಪ ಹಾಸ್ಯ, ಸ್ವಲ್ಪ ಶೋಕ ಎಲ್ಲದರ  ಭಾವ ಮಿಶ್ರಿತವಾದ ಕೇಸರಿಯ ವರ್ಣನೆಯನ್ನು ಕುತೂಹಲದಿಂದ ಆಲಿಸಿದ ಆಜಮ್  ಖಾನ್. 


ನಂತರ ಅದಾಲತ್ತಿನಲ್ಲಿ ನಡೆದ ವಿಚಾರಣೆಯ ಬಗ್ಗೆಯೂ ವಿವರಿಸಿದ ಕೇಸರಿ. 

ಮಂತ್ರಿ ಮಂಡಲವು, ಸೇನಾಧಿಪತಿಗಳು, ಇತರ ಅಧಿಕಾರಿಗಳು -
ಆರೋಪಿಗಳು, ಬಂಧಿಗಳು, ಸಾಕ್ಷಿಗಳು, ಸಭಿಕರು -
 ಎಲ್ಲರೂ ಗಿಜಿ ಗಜಿ ಕೂಡಿದ್ದ ಆಸ್ಥಾನದಲ್ಲಿ  -
ತನ್ನ ಕಣ್ಣ ದೃಷ್ಟಿಯಿಂದಲೇ ಎದುರಾಳಿಯ  ಗುಂಡಿಗೆ ಹಾರಿಸಬಲ್ಲ ಮಾವೀರ -
ಫಿರಂಗಿಯವರಿಂದ 'ಕುಗ್ಗಿಸಲಾರದ ದೈತ್ಯನೆಂದು' ಪಟ್ಟ ಕಟ್ಟಿಸಿಕೊಂಡಿದ್ದ ಶತ್ರು ಭಯಂಕರ-
ಮೈಸೂರ ಹುಲಿ ಎಂದೇ ಖ್ಯಾತಿ ಪಡೆದಿದ್ದ ಹುಲಿ ಎದೆಯ ಗಂಡುಗಲಿ  ಟಿಪ್ಪು ಸುಲ್ತಾನ್ ಪಾದಶಹರವರು  ವಿಚಾರಣೆಯನ್ನು ಪ್ರಾರಂಭಿಸಿದ್ದರು.

ಕೇಸರಿಯ  ಮೈ ಗಡ  ಗಡ ನಡುಗ ತೊಡಗಿತ್ತು. ಯಾವ ಪ್ರಶ್ನೆ ಹೇಗೆ ಬಂದು ಬೀಳುತ್ತದೋ? ಅದಕ್ಕೆ ಏನು ಉತ್ತರವನ್ನ ಹೇಗೆ ಹೇಳಬೇಕೋ? ದಿಕ್ಕು ತೋಚದೆ ನಿಂತಿದ್ದ  ಕೇಸರಿ.  ಆತನಿಗೆ  ತನ್ನ ಕಣ್ಣನ್ನು ಕಟ್ಟಿ ಕತ್ತಲಲ್ಲಿ ಬಿಟ್ಟ ಅನುಭವವಾಯಿತು!

ಮೊದಲ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ಹಾಗೇ  ಕೇಸರಿಯ ಭಯವೆಲ್ಲ ಮನದಾಳದಲ್ಲಿ ಅಡಗಿ ಕುಳಿತುಬಿಟ್ಟಂತಿತ್ತು.
ನಡೆದ ಘಟನೆಗಳನ್ನೆಲ್ಲಾ,  ತಾನು ರಾಜ್ಯಲಕ್ಷ್ಮಿ ಅಕ್ಕಳಿಗೆ ವಿವರಿಸಿದ ಹಾಗೆಯೇ ಒಪ್ಪಿಸಿ, ತನ್ನ ವಶವಿದ್ದ ಪತ್ರಗಳ ಕೊಳಬೆಗಳನ್ನೂ ಸಭೆಯ ಮುಂದಿಟ್ಟಿದ್ದ ಕೇಸರಿ.

ಸಾಕ್ಷಿ ಹೇಳಲು ಗಂಗಾಧರನಿಗೆ ಭಯದಲ್ಲಿ ನಾಲಿಗೆ ಹೊರಳದೆ ಹೋದಾಗ , ಸುಲೋಚನ ಮುಂದೆ ಬಂದು ನಡೆದುದ್ದನ್ನೆಲ್ಲ ವಿವರಿಸಿದ್ದಳು.ಕೇಸರಿ ಚೀಲವನ್ನು ಎತ್ತೊಗೆದಾಗ ಅದನ್ನು ಕಸಿದುಕೊಳ್ಳಲು ಎಲ್ಲರೂ ಕಚ್ಚಾಡಿದ್ದು, ಶಿವನಾಯಕ ಜ್ಞಾನ ತಪ್ಪಿ ಇದ್ದ ಕಾರಣ ಸುಭಾನ್ ತಾನೇ ಮುಂದಾಗಿ ಚೀಲ ತೆರೆದು ನೋಡಿದ್ದು, ಅದು ಪತ್ರ ರಹಿತವಾದ ಬರಿದಾದ ಚೀಲ ಎಂದರಿತಾಕ್ಷಣ  ಆವೇಶ ಗೊಂಡಿದ್ದು ಎಲ್ಲವನ್ನೂ ವಿವರಿಸಿದ್ದಳು.


'' ಏ ಮುದುಕ ! ನೀನೂ ಆ ಚೋಟುದ್ದ ಪಿಳ್ಳೆ ಸೇರಿಕೊಂಡು ಕಣ್ಣಾಮುಚ್ಚಿ  ಆಡಿಸುತ್ತಿರುವಿರಾ? ಎಲ್ಲಿ ಪತ್ರ?" ಎಂದು ಸುಭಾನ್ ಬೊಗಳಿದಾಗ, ನಿಜಕ್ಕೂ ಪಾಂಡುರಂಗಾಚಾರ್ಯರು ಅವಾಕ್ಕಾದರು.

" ಅಯ್ಯೋ! ಪತ್ರ ಇಲ್ಲವೇ? ಏನು ಹೇಳುತ್ತಿರುವೆ ಸುಭಾನ್?" ಚೀಲದಲ್ಲಿ ಪತ್ರವಿಲ್ಲ ಎಂಬ ವಿಷಯ ಅವರಿಗೆ ಆಘಾತವನ್ನುಂಟುಮಾಡಿತ್ತು.

ಆಚಾರ್ಯರನ್ನು ನಖ ಶಿರಾಂತ ಹುಡುಕಿಸಿಯೂ ಪತ್ರ ಸಿಕ್ಕದೆ ಹೋದಾಗ ಸುಭಾನನ ಕೋಪಕ್ಕೆ ಪಾರವೇ ಇಲ್ಲದ  ಹಾಗಾಯಿತು.ಛತ್ರದೊಳಗೆ ನುಗ್ಗಿ ಮೂಲೆ ಮೂಲೆಯೂ ಹುಡುಕಿ ಲೂಟಿ ಮಾಡಿದರು ಸುಭಾನನ ಆಳುಗಳು .
 ಪಾಂಡು ರಂಗಾಚಾರ್ಯರ ಮೇಲೆ  ಅನುಮಾನಗೊಂಡು  ಅವರ  ಮೇಲೆ ಹಲ್ಲೆ ನಡೆಸಿದ್ದ  ಸುಭಾನ್.

ಈ ವಿಷಯಗಳನ್ನು ಸುಲೋಚನ ವಿವರಿಸಿದಾಗ ಕೇಸರಿಗೆ ಪಾಂಡುರಂಗಾಚಾರ್ಯರ ಮೇಲೆ ಅನುಕಂಪ ಉಂಟಾಯಿತು. ರಾಜ್ಯಲಕ್ಷ್ಮಿ ಅಕ್ಕಳ  ತಂದೆಯಾಗಿದ್ದು,ಈ ವಯಸ್ಸಿನಲ್ಲಿ  ಇವರು ಈ ರೀತಿ ಕಷ್ಟಗಳನ್ನು ಅನುಭವಿಸಬಾರದಿತ್ತು ಎನ್ನಿಸಿತು.ಕೂಡಲೇ, ಅವರೂ ಹಾಗೆ ದುಡುಕ ಬಾರದಿತ್ತು ಎಂದೂ ಅನ್ನಿಸಿತು.

ವಿಚಾರಣೆ ಮುಗಿಯಿತು.
ದೇಶ ದ್ರೋಹಿಗಳಿಗೆ ಅವರವರಿಗೆ ತಕ್ಕ ಸಿಕ್ಷೆಗಳನ್ನು ವಿಧಿಸಲಾಯಿತು.
ಈ ಸಂಚಿನ ಹಿನ್ನೆಲೆಯಲ್ಲಿ ಇರಬಹುದಾದ ಇತರ ದ್ರೋಹಿಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಬೇಹುಗಾರರನ್ನು ನೇಮಿಸಲಾಯಿತು.

ಕಡೆಗೆ -

" ಕೀರ್ತಿ ನಿಧಿ ಕೇಸರಿ ಸಿಂಘ!"ಹುಲಿ ಘರ್ಜಿಸಿತು!
  ಪಾದಾತಿಕೇಶ ಕಂಪಿಸುತಿದ್ದವನನ್ನು ಬದಿಗೆಳೆದುಕೊಂಡಿತು!
ಸೇವಕ ಹೊತ್ತು ಬಂದ ಹೊಸ ಖಡ್ಗವನ್ನು ತೆಗೆದು ತನ್ನ ಕೈಯ್ಯಾರೆ  ಕೇಸರಿಯ ಸೊಂಟ ಪಟ್ಟಿಗೆ ಸಿಕ್ಕಿಸಿತು !
ನಂತರ ಅವನ ಭುಜಗಳ ಮೇಲೆ ತನ್ನ ಎರಡೂ ಕೈಗಳನ್ನು ಊರಿ, ಆತನ ಕಣ್ಣಲ್ಲಿ ತನ್ನ ತೀಕ್ಷ್ಣವಾದ  ದೃಷ್ಟಿಯನ್ನು ಹಾಯಿಸಿತು !

" ನಿನ್ನ ಪರಾಕ್ರಮಕ್ಕೆ, ರಾಜ ಭಕ್ತಿಗೆ ಸಹಬಾಷ್ !"


 ಕೇಸರಿಯ ಹೊಟ್ಟೆಯಲ್ಲಿ ಝಲೀರ್ ಎಂದು ಸಿಡಿಲೆರಗಿತ್ತು  !
ಹೃದಯದ ತುಡಿತ ಅತಿ ವೇಗಗೊಂಡು  ಇಮ್ಮಡಿಯಾಗಿತ್ತು !
ಕೈಕಾಲು ಸೋತು, ನಾಲಿಗೆ ಒಣಗಿ ತಾನು ಅನುಭವಿಸಿದ ಅವಸ್ಥೆ !

  ಎಲ್ಲವನ್ನೂ ವಿವರಿಸಿದ ಕೇಸರಿ . 


" ಸುಲ್ತಾನರು ತೂರಾಡುತ್ತಿದ್ದ ನಿನ್ನನ್ನು ಬರಸೆಳೆದು  ತನ್ನ ಕೈಯಾರೆ ನಿನ್ನ ಸೊಂಟಕ್ಕೆ ಸಿಕ್ಕಿಸಿದ ಆ  ಖಡ್ಗವನ್ನ ತೋರಿಸು ನೋಡೋಣ .''

 ಆ ದೃಶ್ಯವನ್ನು ತಾನೇ ನೇರವಾಗಿ ಕಂಡವರಂತೆ ಮಾತನಾಡಿದ ಅಪ್ಪಾಜಾನನನ್ನು ಆಶ್ಚರ್ಯದಿಂದ ನೋಡಿದನು ಕೇಸರಿ. ಯಾವುದೋ  ಒಂದು ಅನುಮಾನದ ಛಾಯೆ ಆತನ ಮನದಲ್ಲಿ ನೆರಳಾಡಿತು. 


ಆಜಮ್ ಖಾನ್ ಉತ್ತರಕ್ಕೆ ಕಾಯದೆ ಕೇಸರಿಯ ಸೊಂಟದಲ್ಲಿ ಬಿಗಿದಿದ್ದ ಖಡ್ಗವನ್ನು ಸ್ವಾಧೀನವಾಗಿ ಹೊರ ಸೆಳೆದ. ಹುಲಿಯ  ತಲೆಯಂತೆ  ಕೆತ್ತಲ್ಪಟ್ಟಿದ್ದ ಹಿಡಿಯಿಂದ ಕೂಡಿದ್ದ ಆ ಖಡ್ಗವನ್ನು ಪರೀಕ್ಷಿಸಿದ.

" ಕೇಸರಿ ಬಾ! ಹೊಸ ಖಡ್ಗ ಹಿಡಿದು ನೀನು ಹೇಗೆ ಸೆಣಸುವೆ ನೋಡೋಣ!" ಎನ್ನುತ್ತ ತನ್ನ ಖಡ್ಗ ಹೊರಗೆ ಸೆಳೆದ ಆಜಮ್  ಖಾನ್. 

 ಬೀಸುತ್ತಿದ್ದ ತಂಗಾಳಿಯ 'ಸುಯ್  ಸುಯ್'  ಮತ್ತು ಹಕ್ಕಿಗಳ 'ಕಿಲಕಿಲ' ದೊಡನೆ ಸೆಣಸಾಟದ 'ಟಂಗ್ ಟಂಗ್'  ಶಬ್ದವೂ ಸೇರಿಕೊಂಡಿತು. 

ಅರ್ಧ ತಾಸಿನನಂತರ ಕೇಸರಿ ಮತ್ತು ಆಜಮ್ ಖಾನ್ ಲೋಕಪಾವನಿಯಲ್ಲಿ ಮಿಂದು ಬೆವರಿನ ಕಾಲುವೆಯನ್ನು ತೊಳೆದು ದಣಿವಾರಿದರು. 

" ಕೇಸರಿ, ಸೆಣಸಾಟದಲ್ಲಿ ನೀನು ಬಹಳ ಮುಂದುವರಿದಿದ್ದೀಯೇ. ದಿನ ನಿತ್ಯ ಅಭ್ಯಾಸ ಮಾಡುತಿರುವೆ ಏನು?"

ಅಪ್ಪಾಜಾನನ ಪ್ರಶ್ನೆಗೆ ಕೇಸರಿ ಉತ್ತರಿಸಲಿಲ್ಲ. ತಾನೊಬ್ಬ ರಣಕೇಸರಿ ಎಂದು ಅಪ್ಪಾಜಾನನಿಗೆ ತಿಳಿಸಿಬಿಡ ಬೇಕೆಂದೆದ್ದ ತಡೆಯಲಾರದ  ಆವೇಗವನ್ನು ಕಷ್ಟಪಟ್ಟು ನುಂಗಿಕೊಂಡ  ಕೇಸರಿ. 

" ಅದಿರಲಿ. ವಿಚಾರಣೆಯಲ್ಲಿ ಆಜಮ್ ಖಾನ್, ಅಂದರೆ ನಾನು ನಿನ್ನನ್ನು ಶಿವನಾಯಕನ ಮಾರಕ ಹೊಡೆತದಿಂದ ಕಾಪಾಡಿದೆನೆಂದು ಹೇಳಿಕೆ  ಕೊಟ್ಟೆ. ಆದರೆ ಅದು ನಾನಲ್ಲವೆಂದು ನೀನೂ ಅರಿತಿರುವೇ.  ಈಗ ಹೇಳು, ಹೊಸತಾಗಿ ಮೊಳೆತಿರುವ ಆ  ಆಜಮ್  ಖಾನ್ ಯಾರು?"


ತನ್ನ  ತಂದೆ ಆರೋಪಿ ಸ್ಥಾನದಲ್ಲಿರಲು  ತಾನು ಸಾಕ್ಷಿ ಹೇಳಲು ಹೋಗುವುದು ರಾಜ್ಯಲಕ್ಷ್ಮಿ ಅಕ್ಕಳಿಗೆ ಧರ್ಮಸಂಕಟವಾಗಿದ್ದಿತ್ತು. ಹೇಗೂ ಸರದಾರ್ ಅಸ್ಲಾಮ್  ಜಾನ್ ಮತ್ತು ಕ್ಷೇತ್ರಪಾಲೈಯ ಅಂದುಕೊಂಡಂತೆ ಕೇಸರಿಯನ್ನು ಕಾಪಾಡಿದ್ದು ಆಜಮ್ ಖಾನನಾಗಿಯೇ ಇರಲಿ ಎಂದು ಅಕ್ಕ ಕೇಳಿಕೊಂಡಿದ್ದಳು. ಆಜಮ್ ಖಾನ್ ಎಂಬ ಮರ್ಮ ವೀರನನ್ನು ಸಂಪರ್ಕಿಸುವುದಾಗಲಿ, ಆತನನ್ನು  ಅದಾಲತ್ತಿಗೆ ಕರೆಸುವುದಾಗಲಿ ನಡೆಯದ ಕೆಲಸವೆಂಬುದು ಇಡೀ ಪಟ್ಟಣವೇ ಅರಿತಿದ್ದ ಸಂಗತಿ. ಹಾಗಾಗಿ ಕೇಸರಿಯೂ ಅದಕ್ಕೆ ಒಪ್ಪಿಕೊಂಡಿದ್ದ. 

ತನ್ನ ಬಾಯಿನಿಂದ ಒಂದೇ ಒಂದು ಮಾತಿನ ಮುತ್ತು ಜಾರಿಬಿಟ್ಟರೂ, ಅದನ್ನೇ ಹಿಡಿದೆಳೆದು, ದಾರದುಂಡೆ  ಬಿಚ್ಚಿದಂತೆ ತನ್ನ ಎಲ್ಲ ರಹಸ್ಯಗಳನ್ನೂ ಅಪ್ಪಾಜಾನ್  ಹೊರ ತೆಗೆದುಬಿಡ ಬಹುದಾದ ಸಾಧ್ಯತೆ ಇದ್ದಿತು . ಆದ್ದರಿಂದ ಕೇಸರಿ ಅಪ್ಪಾಜಾನನ ಈ ಪ್ರಶ್ನೆಗೂ ಮೌನವನ್ನೇ ಸಾಧಿಸಿದ.  
  
" ಅವರವರ ಗುಟ್ಟು ಅವರವರಿಗೆ! ಅಲ್ಲವೇ ಕೇಸರಿ?" ಎಂದು ನಕ್ಕರು ಅಪ್ಪಾಜಾನ್. "ರಾಜ ಕಾರ್ಯಕ್ಕೆ ತೊಡಗಿರುವವರಿಗೆ  ಹೋರಾಡುವ ಶಕ್ತಿ ಇದ್ದರೆ ಮಾತ್ರ ಸಾಲದು. ಅವರಿಗೆ  ರಹಸ್ಯಗಳನ್ನು ಕಾಪಾಡುವ ಶಕ್ತಿಯೂ  ಅತ್ಯಾವಶ್ಯಕವಾದ ಗುಣ. ಅದನ್ನೂ ನೀನು ಅಭ್ಯಸಿಸಿರುವ ಹಾಗಿದೆ!" ಎನ್ನುತ್ತಾ ಓರೆಗಣ್ಣಿನಿಂದ ಕೇಸರಿಯನ್ನು ಗಮನಿಸಿದರು. 

ಕೇಸರಿ ಈಗಲೂ ಮೌನವನ್ನೇ ಆಚರಿಸಿದ. 

"ಆಪಕೂಡಲ್  ನಿಂದ ನಿನ್ನ ಅಪ್ಪಾಜಿ ಬಂದಿರುವ ಹಾಗಿದೆ?" ಕೇಸರಿಯನ್ನು ಸಹಜ ಸ್ಥಿತಿಗೆ ತರಲು ಮಾತು ತಿರುಗಿಸಿದ ಆಜಮ್ ಖಾನ್. 

"ಹೌದು ಅಪ್ಪಾಜಾನ್. ಇನ್ನು ಮುಂದೆ  ಪಟ್ಟಣದಲ್ಲಿರುವುದು ಅಪಾಯವಂತೆ. ನನ್ನನ್ನೂ ಊರಿಗೆ ಕರೆದು ಹೋಗಲು ಒಂದೇ ಕಾಲಲ್ಲಿ ನಿಂತಿರುವರು, ಅಪ್ಪಾಜಿ." ಹತಾಶನಾಗಿ ನುಡಿದ ಕೇಸರಿ. 

"ನಿಜ ಕೇಸರಿ. ಪಟ್ಟಣ ಈವಾಗ ಅಪಾಯದ ದವಡೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಮುಂದೆ ಏನೋ ಹೇಗೋ? ಏನೂ ಹೇಳಲು ಸಾಧ್ಯವಿಲ್ಲ. ನಿನ್ನ ನಿರ್ಧಾರ ಏನು? " ವೇದನೆಯ  ನಿಟ್ಟುಸಿರೆಳೆದು ಪ್ರಶ್ನಿಸಿದರು ಅಪ್ಪಾಜಾನ್. 

" ನೂರು ವರುಷ ಕುರಿಯಂತೆ ಬಾಳುವುದಕ್ಕಿಂತ ಒಂದೇ ವರುಷ ಹುಲಿಯಂತೆ ಬಾಳುವುದು ಅನರ್ಘ್ಯ! ಟಿಪ್ಪು ಸುಲ್ತಾನ್ ಪಾದಶಹರ ಈ ಸಿದ್ಧಾಂತವೆ ನನ್ನನ್ನದ್ದೂ ಆಗಿದೆ ಅಪ್ಪಾಜಾನ್. ಬದುಕಿರುವ ತನಕ ನನ್ನ ಸರ್ವಸ್ವವೂ  ಈ ಸುಂದರವಾದ ಪಟ್ಟಣಕ್ಕೇ ಮೀಸಲು! ನನ್ನ ತಂದೆಯವರ ಕನಸೂ ಅದೇ ಆಗಿತ್ತಲ್ಲವೇ?"

ಕೇಸರಿಯ ಭುಜಗಳ ಮೇಲೆ ತನ್ನ ಎರಡೂ ಕೈಗಳನ್ನು ಊರಿ, ಆತನ ಕಣ್ಣಲ್ಲಿ ತನ್ನ ತೀಕ್ಷ್ಣವಾದ  ದೃಷ್ಟಿಯನ್ನು ಹಾಯಿಸಿ ಏನೋ ಹುಡುಕುವವನಂತೆ ನೋಡಿದ ಆಜಮ್ ಖಾನ್.




ಕೇಸರಿಯ ಹೊಟ್ಟೆಯಲ್ಲಿ ಝಲೀರ್ ಎಂದು ಸಿಡಿಲೆರಗಿತು !
ಹೃದಯದ ತುಡಿತ ಅತಿ ವೇಗಗೊಂಡು  ಇಮ್ಮಡಿಯಾಯಿತು!
ಕೈಕಾಲು ಸೋತು, ನಾಲಿಗೆಯೂ ಒಣಗಿತು !
ಇದೇ ರೀತಿ ಸುಲ್ತಾನರು ತನ್ನನ್ನು ದಿಟ್ಟಿಸಿದಾಗ ಏರ್ಪಟ್ಟ ಅದೇ ಅನುಭವ!

" ನಿನ್ನ ಪರಾಕ್ರಮಕ್ಕೆ, ನಿನ್ನ ದೇಶ ಪ್ರೇಮಕ್ಕೆ ಸಹಬಾಷ್!"

'ಅಪ್ಪಾಜಾನ್!ನೀವು ನಿಜಕ್ಕೂ ಯಾರು? ಯಾರು?' ಏನೇನೊ  ಅನುಮಾನಗಳಿಂದ ತುಂಬಿ ತೊಳಲಾಡಿದ ಮನಸ್ಸನ್ನು ಕಷ್ಟದಿಂದ ಸ್ಥಿಮಿತಕ್ಕೆ ತರಲೆತ್ನಿಸಿದ  ಕೇಸರಿ. 

'ಅವರು ಯಾರೇ ಆಗಿರಲಿ, ತನಗೆ ಮಾತ್ರ ಅವರು ಎಂದೆಂದಿಗೂ  ತನ್ನ       ಪ್ರೀತಿಯ ಅಪ್ಪಾಜಾನನಾಗಿಯೇ ಉಳಿದಿದ್ದರೆ ಅಷ್ಟೇ  ಸಾಕು !' ಎಂದಿತು ಕಡೆಗೆ  ತಿಳಿಗಟ್ಟಿದ  ಅವನ ಮನಸ್ಸು. 


" ಕೇಸರಿ, ನಮಾಜಿಗೆ ಹೊತ್ತಾಯಿತು. ಇನ್ನೂ ನಾನು ಹೊರಟೆ. ನನ್ನ ವಿಶ್ವನಾಥನಿಗೆ ತಕ್ಕ ವೀರ ಮಗ ನೀನು. ನಿನ್ನಂತಹ ಮಕ್ಕಳಿರುವವರೆಗೆ ನಮಗೆ ಯಾವ ಭಯವೂ ಇಲ್ಲ! ಪಟ್ಟಣಕ್ಕೆ ಯಾವ ಅಪಾಯ ಸಂಭವಿಸಿದರೂ ಧೈರ್ಯದಿಂದ  ಎದುರಿಸ ಬಹುದು." ಕೇಸರಿಯನ್ನು ಮತ್ತೊಮ್ಮೆ ಅಪ್ಪಿಕೊಂಡು ಅಪ್ಪಾಜಾನ್ ಹೀಗೆ ನುಡಿದಾಗ ಅವರ ಕಂಗಳೂ ತುಂಬಿ ಬಂದವೋ?

ಸಂಜೆಗೆಂಪು ಕೂಡಿ  ಇಡೀ ಆಕಾಶವೇ  ಕೆಂಬಣ್ಣದ ರಾಡಿಯಾಗಿದ್ದಿತು. ಅಪ್ಪಾಜಾನನನ್ನು ಹೊತ್ತ ಅವರ  ಕುದುರೆ ಆ ಕೆಂಪು  ದಿಗಂತವನ್ನು ಕುರಿತು ಅತಿ ವೇಗವಾಗಿ ದೌಡಾಯಿಸ ತೊಡಗಿತು. ಸ್ವಲ್ಪ ಹೊತ್ತಿನಲ್ಲೇ  ಪಟ್ಟಣದ ಸೂರ್ಯ ಪಶ್ಚಿಮದಲ್ಲಿ ಮುಳುಗ ತೊಡಗಿದ .

ಅಪ್ಪಾಜಾನ್ ಕಣ್ಮರೆಯಾಗುವ ವರೆಗೆ ದಿಟ್ಟಿಸುತ್ತ ನಿಂತ ಕೇಸರಿಯನ್ನು ಪಟ ಪಟ ಹಾರಿ ಬಂದು ಅವನ ತೋಳ ಮೇಲೆ ಕುಳಿತ ತಾರಾಮಣಿ ಎಚ್ಚರಿಸಿದಳು. ಅವಳು ತಂದ ಸಂದೇಶವನ್ನು ಓದಿದ ಕೇಸರಿ ಅವಳನ್ನು ಮುದ್ದಿಸಿ ತನ್ನ ಚೀಲದಿಂದ ತೆಗೆದ ಧಾನ್ಯಗಳನ್ನು ನೀಡಿದ. 

ನಂತರ -

ಮಾಯಾಳ ಬೆನ್ನೇರಿ, ಕರ್ತವ್ಯದ ಕರೆಗೆ ಓಗೊಟ್ಟು, ತನ್ನ ಮೆಚ್ಚಿನ  ಪಟ್ಟಣವನ್ನು ಕುರಿತು ಅತಿ ವೇಗವಾಗಿ ಕ್ರಮಿಸ ತೊಡಗಿದ ಕೀರ್ತಿ ನಿಧಿ ಕೇಸರಿ ಸಿಂಘ. 


----------------------------ಮುಗಿಯಿತು ----------------------------------------

Wednesday, January 30, 2013

Keerthi Nidhi Kesari Singha - 30

                                              ಕೀರ್ತಿ ನಿಧಿ ಕೇಸರಿ ಸಿಂಘ 


ರಣ ಭದ್ರಕಾಳಿಯೋ  ?
ಚಂಡಿ ಚಾಮುಂಡಿಯೋ ?
ಇಲ್ಲ -
ಯಾವೂರ ಹೆಮ್ಮಾರಿಯೋ?


ಬರಸೆಳೆದು ಕಟ್ಟಿದ್ದ  ಸೆರಗು-

ಕೆಂಪೇರಿ ಥಳಥಳಿಸಿದ ಕಣ್ಣುಗಳು -
ಮಸೆದ ಹಲ್ಲುಗಳೆಡೆ ಸಿಕ್ಕದ್ದ ಕೆಳ ತುಟಿ-
ಅದರಿಂದ ಒಸರುತ್ತಿದ್ದ ರಕ್ತದ ಕೋಡಿ  -
ಬೆನ್ನಮೇಲೆ ಹರಡಿ ಅಲೆಯಾಡಿದ ಗುಂಗರು ಕೂದಲು -




ಅನ್ನದಾನ ಶೆಟ್ಟರ ಛತ್ರದಲ್ಲಿ ಬರುವವರಿಗೆಲ್ಲ ಆದರದಿಂದ ಅನ್ನ  ಬೇಯಿಸಿ ಆಥಿತ್ಯ ನೀಡುತ್ತಿದ್ದ ಸುಲೋಚನಳೆ ಇವಳು?

ಒಲೆಯಿಂದೆಳೆದು ತಂದ ಉರಿಯುತ್ತಿದ್ದ ಕಟ್ಟಿಗೆಯಿಂದ ಎದುರಾಳಿಗಳನ್ನು ಬಡಿದು ಬಾರಿಸುತ್ತಿರುವವಳು ನಿಜಕ್ಕೂ ಆ ಸಾಧು ಸುಲೋಚನಳೇ?

ದೂರದ ಬಂಡೆ ಸಂದಿನಿಂದ ಇರುವೆಗಳಂತೆ ಹರಿದು ಬರುತ್ತಿದ್ದ ಸೈನಿಕರು ಈಗಾಗಲೇ ಛತ್ರವನ್ನು ತಲುಪಿದ್ದರು. ಕಲಹ ಕೋರರನ್ನು ಎದುರಿಸಿ ಸೆಣಸಲು ತೊಡಗಿದ್ದರು.


ಮುಂದಾಳಾಗಿ ಬಂದು ನಿಂತ ಸರದಾರ್ ಅಸ್ಲಾಮ್ ಜಾನ್ ಭದ್ರಕಾಳಿ ಅವಾತರ ತಾಳಿದ್ದ ಸುಲೋಚನಳನ್ನು  ಕಂಡು  ದಿಗ್ಭ್ರಾಂತನಾದ.

" ಅಮ್ಮಾ!ತಡಿ ತಡಿ! ಯಾಕೆ ಇವರನ್ನೆಲ್ಲ ಬಡಿಯುತ್ತಿರುವೆ?"

ಸರದಾರನ ಹಿಂದೆಯೇ ಬಂದು ಪ್ರಶ್ನಿಸಿದ  ಕ್ಷೇತ್ರಪಾಲೈಯನ ಹಿತವಾದ ದನಿ ಸುಲೋಚನಳ ಆವೇಶವನ್ನು ಸ್ವಲ್ಪ ಮಟ್ಟಿಗೆ ತಣಿಸಿತು.ಆದರೂ ಇವರುಗಳೂ  ಶತ್ರುಗಳಿರಬಹುದೇ  ಎಂಬ ಸಂದೇಹ ಅವಳನ್ನು ಕಾಡಿದ ಕಾರಣ ಎತ್ತಿ ಹಿಡಿದ ಕಟ್ಟಿಗೆಯನ್ನು ಕೆಳಗೆ ಇಳಿಸದೆ ಸಂಶಯದ ನೋಟವನ್ನು ಕ್ಷೇತ್ರಪಾಲೈಯನ ಕಡೆ ಬೀರಿದಳು.

"ನಾವು ಸುಲ್ತಾನರ ಸೈನ್ಯಾಧಿಕಾರಿಗಳು. ಅಲ್ಲಿ ನೋಡು! ಇಲ್ಲಿಯ ಗೊಂದಲಕ್ಕೆ ಕಾರಣರಾದ ಪುಂಡ ಪೋಕಿರಿಗಳನ್ನೆಲ್ಲ ನಮ್ಮ ಸೈನಿಕರು ಬಡಿದು ಚಚ್ಚಿ ಕೈದು ಮಾಡುತ್ತಿರುವರು."


ಆಸ್ಲಾಮ್ ಜಾನ್ ತೋರಿದ ಕಡೆ ಕಣ್ಣು ಹಾಯಿಸಿದ ಸುಲೋಚನಳಿಗೆ ಸ್ವಲ್ಪ ಸಮಾಧಾನವಾಯಿತು.


"ಈ ದುಷ್ಟರೆಲ್ಲ  ಸೇರಿಕೊಂಡು  ಇಷ್ಟು ಹೊತ್ತು ಜ್ವರದಿಂದ ಸೊರಗಿದ್ದ ಚಿಕ್ಕ ಹುಡುಗನನ್ನು ಗೋಳಾಡಿಸಿದರು.ಈಗ ಈ ಕುಂಟು ಕತ್ತೆಯ ಆದೇಶದ ಮೇರೆಗೆ ಆತನ ಆಳುಗಳು ನನ್ನ ಛತ್ರಕ್ಕೆ ನುಗ್ಗಿ ಲೂಟಿ ಮಾಡಲು ಹತ್ತಿರುವರು.ಇವನೋ ಮರ್ಯಾದೆ ಇಲ್ಲದೆ, ಪಾಪ ಈ ಮುದುಕರ ಮೇಲೆ ಹಲ್ಲೆ ನಡೆಸುತ್ತಿರುವನು.ಈ ಅನ್ಯಾಯ ಹೇಗೆ ಸಹಿಸಲಿ?ಅದಕ್ಕೆ .."

ಹಲ್ಲೆಗೆ ಪಾತ್ರರಾಗಿ ಸುಸ್ತಾಗಿ ಕುಳಿತುಬಿಟ್ಟಿದ್ದ  ಪಾಂಡು ರಂಗಾಚಾರ್ಯರು ಒಂದು ಕಡೆ -

ಕುಂಟು ಕಾಲನ್ನೆಳೆದುಕೊಂಡು ತಪ್ಪಿಸಿ ಕೊಂಡು  ಓಡಲಾರದೆ ಉರಿಯುತ್ತಿದ್ದ ಸೌದೆ ಏಟು ತಿಂದು ನರಳುತ್ತಿದ್ದ  ಸುಭಾನ್ ಮತ್ತೊಂದು ಕಡೆ -

ಏದುತ್ತಲೇ ಅವರ ಕಡೆ ಕೈ ತೋರಿ, ಅಲ್ಲಿಯ ಪರಿಸ್ಥಿತಿಯನ್ನು ವಿವರಿಸಿದ ಸುಲೋಚನಳನ್ನು ವಿಸ್ಮಯದಿಂದ ವೀಕ್ಷಿಸಿದರು ಸರ್ದಾರ್ ಅಸ್ಲಾಮ್ ಜಾನ್ ಮತ್ತು  ಕ್ಷೇತ್ರಪಾಲೈಯ .


"ಈ ನಿನ್ನ  ಕೆಚ್ಚಿಗೆ ಅದೇನು  ಹೇಳಬೇಕೋ ತಿಳಿಯುತ್ತಿಲ್ಲಮ್ಮ. ನಿನಗೆ ನನ್ನ ಹೃತ್ಪೂರ್ವಕವಾದ ಸಲಾಮ್ !"


ಸರ್ದಾರ್ ಅಸ್ಲಾಮ್ ಜಾನ್ ಸುಲೋಚನಳಿಗೆ ವಂದಿಸಿದನು. ಆ ವೇಳೆಗೆ  ನಾರಾಯಣ ಕೇಸರಿ ಮತ್ತು ಬಸವ ಕೇಸರಿಗಳ ನಡವೆ ಸಿಕ್ಕಿ, ಸೋಲು ಮೋರೆ ಹೊತ್ತು ನಿಂತಿದ್ದ  ಸುಭಾನನ ಕಡೆ ತಿರುಗಿದನು.

"ನೀರಿನಲ್ಲಿ ಮುಳುಗಿ ಸತ್ತ ನಾಟಕ ಹೂಡಿ ಅಂದು ತಪ್ಪಿಸಿಕೊಂಡೆ.ತಲೆ ಮರೆಸಿಕೊಂಡು ನಿನ್ನ ಕುಯುಕ್ತಿಯನ್ನೂ ಸಂಚನ್ನೂ ಮುಂದುವರಿಸಿದೆ.ಈ ಬಾರಿ ನೀನು ತಪ್ಪಿಸಿಕೊಳ್ಳುವಂತಿಲ್ಲಕಣೋ, ರಾಜದ್ರೋಹಿ!"

ತನ್ನ ದಿವಾನ್ ಸುಭಾನ್ ಕನಸುಗಳೆಲ್ಲ ನುಚ್ಚು ನೂರಾಗಿ ಕುಸಿದು ಮಣ್ಣು ಪಾಲಾಗುತ್ತಿರುವುದು ಅರಿವಾಗುತ್ತಿದ್ದರೂ, ಸುಭಾನನ ಕುಹಕ ಬುದ್ಧಿ ಆತನನ್ನು ಇನ್ನೂ ಬಿಟ್ಟಿರಲಿಲ್ಲ.




"ರಾಜದ್ರೋಹಿ ನಾನು ಮಾತ್ರವೇ? ಇಲ್ಲಿರುವವರೆಲ್ಲ ದ್ರೋಹಿಗಳೇ! ಅದರಲ್ಲೂ ಈ ಪಾಂಡುರಂಗಾಚಾರ್ಯರು ಸುಲ್ತಾನರ ಉಪ್ಪು ತಿಂದು, ಉನ್ನತ ದರ್ಜೆಯ  ಹರಕಾರ ಬಕ್ಷಿಯಾಗಿದ್ದು, ಮಾಡಿರುವ ದ್ರೋಹದ ಎದುರು ನನ್ನದ್ದೇನು ಮಹಾ? ಅವರ ವಶದಲ್ಲಿರುವ ಪತ್ರ  ಪತ್ತೆ ಹಚ್ಚಿ! ಅದು  ಅವರ ದ್ರೋಹದ ಕಥೆಗೆ ಸಾಕ್ಷಿ ಹೇಳುತ್ತದೆ."


ತಾತ್ಸಾರದಿಂದ ನುಡಿದ ಸುಭಾನನ್ನು ದೂಡಿಕೊಂಡು ನಡೆದ ನಾರಾಯಣ ಕೇಸರಿ.

"ಆಚಾರ್ಯರೇ! ಏನಿದೆಲ್ಲ? ಅದೇನು ಪತ್ರ? ಮಾತನಾಡಿ! ಆಚಾರ್ಯರೇ!ಆಚಾರ್ಯರೇ!"


ಪಾಂಡು ರಂಗಾಚಾರ್ಯರ ಕಣ್ಣುಗಳು ಶೂನ್ಯವನ್ನು ದಿಟ್ಟಿಸುತ್ತಿದ್ದವು.ತುಟಿಗಳು "ಪತ್ರ,ಪತ್ರ!"ಎಂದು ಹಲುಬುತ್ತಿದ್ದವು.



ತರ ರಣ ಕೇಸರಿಗಳು ತ್ವರಿತವಾಗಿ ತಮ್ಮ ಕರ್ತವ್ಯಗಳನ್ನು ಮುಂದುವರೆಸುತ್ತಿದ್ದರು. ರಾಜ ದ್ರೊಹಿಗಳನ್ನೆಲ್ಲ ಬಂಧಿಸಲಾಗಿತ್ತು. ಶಿವನಾಯಕನನ್ನು ಪಾಂಡು ರಂಗಾಚಾರ್ಯರ ಗಾಡಿಯಲ್ಲಿ ಮಲಗಿಸಿ, ಆತನಿಗೆ  ಪ್ರಥಮ ಚಿಕಿತ್ಸೆಯನ್ನು  ನೀಡಲಾಗಿತ್ತು. ದಿಗ್ಭ್ರಮೆಗೊಂಡಿದ್ದ  ಆಚಾರ್ಯರನ್ನು ಅದೇ  ಗಾಡಿಯಲ್ಲಿ  ಕೂರಿಸಿತುತ್ತಿದ್ದ  ಗುಂಡಪ್ಪ ಕೇಸರಿ.

"ಗುಂಡಪ್ಪ ಕೇಸರಿ ! ಬಂಧಿಗಳನ್ನೆಲ್ಲ ಸುಲ್ತಾನರ ಮುಂದೆ ಹಾಜರು ಮಾಡ ಬೇಕು.ಸುಲ್ತಾನರ ಸೈನ್ಯಕ್ಕೆ ಸೇರಿದ ನಮ್ಮ ರಣ ಕೇಸರಿಗಳು ಮಾತ್ರ  ಈ ಜವಾಬ್ದಾರಿ ವಹಿಸಲಿ.ಇತರ ರಣ ಕೇಸರಿಗಳೆಲ್ಲ ಸದ್ದಿಲ್ಲದೇ ತಮ್ಮ ತಮ್ಮ  ಹುದ್ದೆಗಳಿಗೆ ಹಿಂತಿರುಗಲಿ."


" ಆಯಿತು ಸರದಾರರೆ!"



ಗುಂಡಪ್ಪ ಕೇಸರಿ ಇತರ ರಣ ಕೇಸರಿಗಳನ್ನು ಕುರಿತು  ತಕ್ಕ ಆಜ್ಞೆಗಳನ್ನು ಹೊರಡಿಸಿದ. ನಂತರ ಅನ್ನದಾನ  ಶೆಟ್ಟರ ಛತ್ರದ ಆವರಣದಿಂದ ಹೊರಡಲು ಒಂದು ದೊಡ್ಡ ಮೆರವಣಿಗೆಯೇ ಸಿದ್ಧವಾಯಿತು .

"ಸಂಚುಗಾರರನ್ನು ಹಿಡಿಯಲು ನಿಮ್ಮ ಮಗಳೇ  ಮುಖ್ಯ ಕಾರಣ ಸರದಾರರೇ. ಮರೆಯದೆ ಅವಳಿಗೆ ಧನ್ಯವಾದಗಳನ್ನು ತಿಳಿಸಿ." ಎಂದು ನುಡಿದ  ಕ್ಷೇತ್ರ ಪಾಲೈಯನನ್ನು ಕುರಿತು ಕಿರು ನಗೆ ಬೀರಿದ ಸರದಾರ್ ಅಸ್ಲಾಮ್ ಜಾನ್.

ಅವಳಿಗಿಂತ ತಾರಾಮಣಿಯೇ  ಈ ಗೌರವಕ್ಕೆ ಹೆಚ್ಚು  ಅರ್ಹಳು ಎಂಬ  ಭಾವನೆ ಮನಸ್ಸಲ್ಲಿ ಉಕ್ಕಿತು.
 
 ತಾನು ಮನೆಯಿಂದ ಹೊರಟಾಗ ತಾರಾಮಣಿ ಇದ್ದ ಪಂಜರವನ್ನು  ತನ್ನ ಕೈಗೆ ಕೊಟ್ಟು, ಅರಮನೆಯ ಆವರಣದಿಂದ ಅವಳನ್ನು ಮುಕ್ತಗೊಳಿಸುವಂತೆ ಕೇಳಿಕೊಂಡಿದ್ದಳು ಸಂಜೀದ.



ಆದರೆ ದಾರಿಯಲ್ಲಿ ಎದುರಾದ ಕ್ಷೇತ್ರ ಪಾಲೈಯನ ಕಳವಳ ಭರಿತ ಮೊಗ  ಕಂಡು ನಿಲ್ಲ ಬೇಕಾಗಿ ಬಂದಿತು.


"ಸರದಾರರೆ! ಗೋವಿಂದ ಕೇಸರಿ ಸುದ್ದಿ ಹೊತ್ತು ನನ್ನ ಮನೆಗೇ ಬಂದುಬಿಟ್ಟಿದ್ದ. ಸುಭಾನ್ ಯಾವುದೋ  ದುರುದ್ದೇಶದಿಂದ ಹೊರಟಿದ್ದಾನಂತೆ. ಅನ್ನದಾನ ಶೆಟ್ಟರ ಛತ್ರದ ಬಳಿ ಏನೋ ಅನಾಹುತ ನಡೆಯಲಿದೆ ಎಂದು ಮಾತ್ರ ತಿಳಿದು ಬಂದಿದೆ. ಖಂಡಿತವಾಗಿ ಅದು ಯಾವುದೋ ಮಹತ್ತಾದ ರಾಜ ದ್ರೋಹದ ಕೆಲಸವೇ ಆಗಿರಬೇಕು."


ಸರದಾರ್ ಅಸ್ಲಾಮ್  ಜಾನ್ ಕೂಡಲೇ  ಎಲ್ಲವನ್ನೂ ಮರೆತು ಕ್ಷೇತ್ರ ಪಾಲೈಯನನ್ನೂ ಕರೆದುಕೊಂಡು ಹೊರಟೆ ಬಿಟ್ಟನು.

ದೂರದ ಗುಡ್ಡದ ಮೇಲೆ ನಿಂತು  ದುರ್ಬಿಯ ಮೂಲಕ ಛತ್ರದ ಬಳಿ ಅವರಿಬ್ಬರೂ ಕಂಡ ದೃಶ್ಯ ಅವರುಗಳ  ಗುಂಡಿಗೆ ಎಗರಿಸಿಬಿಟ್ಟಿತ್ತು.


ಅಯ್ಯೋ! ಕೇಸರಿ ಇಲ್ಲಿಗೆ ಏಕೆ ಬಂದ? ಹೇಗೆ ಬಂದ?  ಅಷ್ಟು ಜನ ಸೈನಿಕರನ್ನು ಒಬ್ಬನೇ  ಎದುರಿಸುತ್ತಿರುವನಲ್ಲ ?


"ಅಯ್ಯಯ್ಯೋ! ಇಂತಹ ಸಮಯದಲ್ಲಿ ಇವನನ್ನು ನೋಡ ಬೇಕೆಂದು ನಂಜಪ್ಪೈಯನವರು ಬಂದು ನಮ್ಮ ಮನೆಯಲ್ಲಿ ಕುಳಿತಿರುವರಲ್ಲ! ಇವನಿಗೆನಾದರೂ ಅನಾಹುತವಾಗಿಹೋದರೆ..! ಅಯ್ಯೋ ದೇವರೇ!"


ಕ್ಷೇತ್ರ ಪಾಲೈಯ  ಚಡಪಡಿಸಿದ.


ಅದೇ ಸಮಯ ತಾರಾಮಣಿ ಪಂಜರದಲ್ಲಿ ಪಟ ಪಟ ರೆಕ್ಕೆ ಬಡಿದದ್ದನ್ನು ಗಮನಿಸಿದ  ಸರದಾರ್ ಅಸ್ಲಾಮ್  ಜಾನ್.


ತಕ್ಷಣವೇ ಸೊಂಟದ ಪಟ್ಟಿಯಿಂದ ಒಂದು ಓಲೆ ಸುರುಳಿಯನ್ನು ಹೊರ ತೆಗೆದು, ಸಂಕ್ಷಿಪ್ತವಾಗಿ ಸುದ್ದಿಯನ್ನು ಗೀಚಿ, ತಾರಾಮಣಿಯ ಕಾಲಿಗೆ ಕಟ್ಟಿ ಅವಳನ್ನು ಬಿಡುಗಡೆ ಮಾಡಿದ. ತಾರಾಮಣಿ ಕೂಡಲೇ ಪಟಪಟ ಹಾರಿ ಹೋದಳು.ಅವಳಿಗೆ ಇದು ಮೊದಲ ಪರೀಕ್ಷೆ!' ಅಲ್ಲಾ,ಅವಳು ಅದರಲ್ಲಿ ಯಶಸ್ವಿಯಾಗಲಿ!' ಎಂದು ಬೇಡಿಕೊಂಡ ಸರ್ದಾರ್ ಅಸ್ಲಾಮ್ ಜಾನ್.



 ಕೇಸರಿಯ ನೆರವಿಗೆ ಕೂಡಲೇ ಹೋಗೋಣವೆಂದು ತುದಿಗಾಲಲ್ಲಿ ನಿಂತ  ಕ್ಷೇತ್ರಪಾಲೈಯನನ್ನು ಆಶ್ವಾಸಗೊಳಿಸಿದ ಸರ್ದಾರ್ ಅಸ್ಲಾಮ್ ಜಾನ್.


 ಹನೀಫ್ ಅವರು ತಾನು ತಾರಾಮಣಿಯ ಮೂಲಕ ಕಳುಹಿಸಿದ  ಸಂದೇಶ ಓದಿ ರಣ ಕೇಸರಿಗಳ  ಒಂದು ಪಡೆಯನ್ನು ತುರ್ತಾಗಿ ಕಳುಹಿಸುತ್ತಾರೆ ಎಂಬ ಭರವಸೆ ಅವನಿಗಿತ್ತು. ಅವರುಗಳು ಬಂದೊಡನೆಯೇ  ರಭಸದಿಂದ ನುಗ್ಗಿ ಒಂದೇ ಏಟಿಗೆ ಕಲಹಗಾರರನ್ನೆಲ್ಲ ಸೆರೆ ಹಿಡಿಯ ಬಹುದು.ಅಲ್ಲಿಯವರೆಗೂ ಕೇಸರಿ ಒಬ್ಬೊಂಟಿಗನಾಗಿ ಬಹಳ ಚಾಣಾಕ್ಷತೆ ವಹಿಸಿ ಹೋರಾಡುತ್ತಿದ್ದ ಹೃದಯಂಗಮವಾದ ದೃಶ್ಯವನ್ನು ವೀಕ್ಷಿಸುತ್ತಿರುವುದು. ತರುವಾಯ ಕೇಸರಿಗೆ ಅವಶ್ಯಕತೆ ಉಂಟಾಗುವ ಪಕ್ಷಕ್ಕೆ  ತಾವಿಬ್ಬರೂ ಕೂಡಲೇ  ಅಲ್ಲಿಗೆ ಧಾವಿಸ ಬಹುದು ಎಂಬ ಸರದಾರನ ನಿರ್ಧಾರವನ್ನು ಅರೆ ಮನಸ್ಸಿನಿಂದ ಒಪ್ಪಿಕೊಂಡ  ಕ್ಷೇತ್ರಪಾಲೈಯ .

ಆದರೆ ಕೇಸರಿಯ ಪರಿಸ್ಥಿತಿ ಹದಗೆಡುತ್ತಿರುವಂತೆ ಭಾಸವಾದಾಗ ಸರದಾರ್  ಅಸ್ಲಾಮ್ ಜಾನ್ ಇನ್ನೂ ಕಾಲಹರಣ ಮಾಡಲಿಚ್ಚಿಸಲಿಲ್ಲ.  ಕ್ಷೇತ್ರಪಾಲೈಯನ ಜೊತೆ ರಣರಂಗವನ್ನು ಕುರಿತು ಆತ ಹೋರಟ ಅದೇ ಸಮಯ ರಣ ಕೇಸರಿಗಳು ಧಾವಿಸಿ ಬಂದು ಜೋತೆಗೂಡಿಕೊಂಡರು. ನಡೆಯುತ್ತಿದ್ದ  ಗಲಭೆ ಯನ್ನು ಅಂತ್ಯಗೊಳಿಸಿದ್ದರು.

 ಆ ಸಮಯದಲ್ಲಿ ಏದುಸಿರು ಬಿಡುತ್ತ ಓಡೋಡಿ ಬಂದ ಗಂಗಾಧರ ಸುಲೋಚನಳ ಅವತಾರ ಕಂಡು ಗಲಿಬಿಲಿಗೊಂಡನು.

" ಸುಲೋಚನ!ಏನಾಯಿತು?ಇವರೆಲ್ಲ ಯಾರು?ನಿನಗೆ ಏನಾಗಿಲ್ಲ ತಾನೇ?"


"ಎಲ್ಲ ಮುಗಿಯಿತು!ಇಷ್ಟು ಹೊತ್ತು ನೀನೆಲ್ಲಿ ಹೋಗಿ ಸತ್ತೆ?" ರೇಗಿದಳು ಸುಲೋಚನ.



" ಅಯ್ಯೋ!ಪಾಪಕಣೆ  ಆ ಹುಡುಗ !ಅವನನ್ನು ಅದು ಹೇಗೆಲ್ಲ ಹಿಂಸಿಸಿದರು ಆ ದುರಾತ್ಮರು!ಯಾರಾದರೂ ಸಹಾಯಕ್ಕೆ ಸಿಕ್ಕ ಬಾರದೇ  ಎಂದು  ಹಂಬಲಿಸುತ್ತ ಹೆದ್ದಾರಿ ಹಿಡಿದು ಓಡಿದ್ದೆ.ಚಿಕ್ಕೆರೆಯತ್ತ ಯಾರೋ ಮಹಾನುಭಾವ ತನ್ನ ಕುದುರೆಗೆ ನೀರು ಕುಡಿಸುತ್ತಿದ್ದ. ಒಂದೇ ಉಸಿರಲ್ಲಿ ಇಲ್ಲಿ ನಡೆಯುತ್ತಿದ್ದ ರಾದ್ಧಾಂತದ ಬಗ್ಗೆ ತಿಳಿಸಿ,ಚಿಕ್ಕ ಹುಡುಗನನ್ನು ಕಾಪಾಡಿ ಎಂದು ಕೇಳಿಕೊಂಡೆ. ಮರು ಕ್ಷಣ ಆ ವ್ಯಕ್ತಿ ಮಾತನಾಡದೆ ಕುದುರೆ ಹತ್ತಿ ಇತ್ತ ದೌಡಾಯಿಸಿದ. ಆತ  ಬಂದನೆ? ಹುಡುಗ ಎಲ್ಲಿ?"

ಗಂಗಾಧರನ ವೃತ್ತಾಂತ ಕೇಳಿ ಸುಲೋಚನ ಗಾಬರಿಗೊಂಡಳು.




"ಓ! ಒಬ್ಬ ಕುದುರೆ ಸವಾರ ಕೋಲಾಹಲದ ನಡುವೆ ನುಗ್ಗಿ ಬಂದ. ಹುಡುಗನನ್ನು ಬಾಚಿ ಎತ್ತಿ ತನ್ನ ಕುದುರೆಯ ಮೇಲೆ ಕೂರಿಸಿಕೊಂಡು ಹೊರಟೆ ಹೋದ! ಅಯ್ಯೋ!ಯಾರಿಗೆ ಏನು ಹೇಳಿ ಕಳುಹಿಸಿದೆ? ಆ ವ್ಯಕ್ತಿ ಯಾರು ? ಆತನಿಂದ ಹುಡುಗನಿಗೆ ಅಪಾಯ ಸಂಭವಿಸಿದರೆ?" ಸುಲೋಚನ ಭಯದಿಂದ ಉದ್ಗರಿಸಿದಳು.

ಅಸ್ಲಾಮ್ ಜಾನ್ ಮತ್ತು ಕ್ಷೇತ್ರ ಪಾಲೈಯ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅವರುಗಳು ತಲಪುವ ಮುನ್ನವೇ ಕೇಸರಿ ಅಲ್ಲಿಂದ  ಪಾರಾದ ಆ ದೃಶ್ಯವನ್ನು ಅವರಿಬ್ಬರೂ ಕೂಡ ಕಂಡೆ ಇದ್ದರಲ್ಲ.


ಕೇಸರಿಯನ್ನು  ಆಪತ್ಕಾಲದಲ್ಲಿ ಜರೂರಾಗಿ ಬಂದು  ರಕ್ಷಿಸುತ್ತಾನೆ!

ಧಿಡೀರೆಂದು ಪ್ರತ್ಯಕ್ಷನಾಗಿ ಅದೇ ರೀತಿ ಮಾಯವೂ ಆಗುತ್ತಾನೆ  !
ಅವನು ಆಜಮ್ ಖಾನ್ ಅಲ್ಲದೆ ಇನ್ಯಾರಾಗಿ ಇರಲು ಸಾಧ್ಯ?

" ಹೆದರ ಬೇಡ ಅಮ್ಮ!ಹುಡುಗ ಸುರಕ್ಷಿತವಾಗಿದ್ದಾನೆ !"ಎಂದಷ್ಟೇ ಹೇಳಿದ ಕ್ಷೇತ್ರ ಪಾಲೈಯ.


----------------------------------------------------------------------------------------------------------------------------------

ನಗಾಗಿ ಬಂದ  ಆಪತ್ಬಾಂಧವ  ಅಪ್ಪಾಜಾನ್ ಎಂದೇ ಭಾವಿಸಿದ್ದ ಕೇಸರಿ, ಬಂದವನ ಚಾಚಿದ್ದ ಕೈ ಹಿಡಿಯುವವರೆಗೆ. 'ಇಲ್ಲ!ಇವನು ಖಂಡಿತವಾಗಿ ಅಪ್ಪಾಜಾನ್ ಅಲ್ಲ!' ಎಂದು ಕೂಡಲೇ ಹೊಳೆಯಿತು. ಅಪ್ಪಾಜಾನ್ ಅಲ್ಲದೇ ಹೋದಲ್ಲಿ  ಮಾಯಾಳ ಬೆನ್ನು ಹತ್ತಿ ಸವಾರಿ ಮಾಡುವ ಧೈರ್ಯ ಇನ್ಯಾರಿಗೆ  ಇರಬಹುದು ಎಂಬ ಚಿಂತೆ ಕೇಸರಿಯ ಮೆದುಳನ್ನು ಕೊರೆಯ ತೊಡಗಿತು.ಮೈಕೈ ಸೆಳತದೊಡನೆ  ತಲೆ ನೋವು ಶುರುವಾದಂತೆ ಭಾಸವಾಯಿತು.ಆಯಾಸದಿಂದ  ತಲೆಯನ್ನು ದಿಂಬಿನಲ್ಲಿ ಹುದುಗಿಸಿಕೊಂಡಾಗ ತಾನು ಮಲಗಿರುವುದು ತನ್ನ ಹಾಸಿಕೆಯ ಮೇಲೆ ಎಂಬ ಜ್ಞಾನೋದಯವಾಯಿತು.


ಹಾಗಾದರೆ ತಾನು ಪಟ್ಟಣದಲ್ಲಿದ್ದೇನೆಯೇ ? ತನ್ನನ್ನು ಸುರಕ್ಷಿತವಾಗಿ ಮನೆ ತಲುಪಿಸಿದ ಆ ಪುಣ್ಯಾತ್ಮ ಯಾರು? ಈಗ ಅವನೆಲ್ಲಿ? ಮಾಯಾ ಮನೆಯಲ್ಲೇ ಇರುವಳೋ ಇಲ್ಲ ಆ ವ್ಯಕ್ತಿಯ ಜೊತೆಗೆ  ಅವಳೂ ಮಾಯವಾದಳೋ ?

ಮೈಎಲ್ಲ ಧಗೆ-

ಕೈಕಾಲು ಸೆಳೆತ -
ಪಿಚಿ ಪಿಚಿ ಅಂಟಿದ ರಕ್ತಸಿಕ್ತವಾದ ಉಡುಪು -
ಇಷ್ಟು ಅವಸ್ಥೆಗಳ ನಡುವೆ ತಲೆಯನ್ನು ಕೊರೆದ ಪ್ರಶ್ನೆಗಳು-

ಕಿರಿಕಿರಿ ತಾಳಲಾರದೆ ಹಾಸಿಗೆ ಬಿಟ್ಟು ಏಳಲು  ಎತ್ನಿಸಿದ ಕೇಸರಿ.




" ಅರೆರೆ! ಕೇಸರಿ! ಎಚ್ಚರವಾಯಿತೆ ? ಇಗೋ ಬಂದೆ ತಡಿ."

ನುಡಿದಂತೆಯೇ ನಿಮಿಷದಲ್ಲಿ ಗಂಜಿ ಬಟ್ಟಲು ಹಿಡಿದು ಮರಳಿ ಬಂದಳು ರಾಜ್ಯಲಕ್ಷ್ಮಿ ದೇವಿ.


"ಕೇಸರಿ! ಮೊದಲು ಈ ಗಂಜಿ ಕುಡಿ. ನಂತರ ವೈದ್ಯರು  ಕೊಟ್ಟಿರುವ ಔಷದಿ. ಚೆನ್ನಾಗಿ ಸುಧಾರಿಸಿಕೊಂಡು, ಮೈ ಕೈ ಒರೆಸಿಕೊಂಡು ಶುಭ್ರ  ವಸ್ತ್ರಗಳನ್ನು ಧರಿಸುವೆಯಂತೆ. ಇವತ್ತು ಸ್ನಾನ ಬೇಡವೆಂದು ಹೇಳಿದರು ವೈದ್ಯರು ."

ಎಂದಿನಂತೆ ಆದರದೊಡನೆ ಅವನ ಪಕ್ಕ ಕುಳಿತು ಗಂಜಿ ಬಟ್ಟಲನ್ನು ಅವನ ಬಾಯಿಗೆ ಹಿಡಿದಳು ರಾಜ್ಯಲಕ್ಷ್ಮಿದೇವಿ.

"ಬಟ್ಟೆ ಬದಲಾಯಿಸಲು ಬಂದವರಿಗೆಲ್ಲ ಕನವರಿಸುತ್ತಿದ್ದರೂ ಒದ್ದು ಬಡಿದು ಸತಾಯಿಸಿಬಿಟ್ಟೆ?!" ನಗುತ್ತಲೇ ನುಡಿದ ಅಕ್ಕಳನ್ನು  ಧೀರ್ಘವಾಗಿ  ಒಮ್ಮೆ ನೋಡಿದ ಕೇಸರಿ.

"ಅಕ್ಕ ನನ್ನನ್ನು ಇಲ್ಲಿಗೆ ಕರೆ ತಂದವರ್ಯಾರು? ಅವರು ಅಪ್ಪಾಜಾನ್ ಅಲ್ಲವೆಂದು ನನಗೆ ಖಚಿತವಾಗಿ ತಿಳಿದಿದೆ."


ಕೇಸರಿಯ ಈ ನೇರವಾದ ಪ್ರಶ್ನೆಗೆ ಉತ್ತರಿಸಲಾರದೆ ಕಣ್ಣುಗಳನ್ನು ತಗ್ಗಿಸಿದಳು ರಾಜ್ಯಲಕ್ಷ್ಮಿ ದೇವಿ.

" ಅಕ್ಕ! ಕೈ ಹಿಡಿದು ಮಾಯಾಳ  ಮೇಲೆ ಎಗರಿ ಕುಳಿತ ಕೂಡಲೇ ಆ ವಿಷಯ ನನಗೆ ಸ್ಪಷ್ಟವಾಯಿತು. ಶಿವನಾಯಕನ  ಎದೆಯಲ್ಲಿ ನಾಟಿದ್ದ ಬಾಕು ನನಗೆ ಬಹಳ ಪರಿಚಯವಾದದ್ದು ಎನ್ನಿಸಿತು. ಕೂಡಲೇ  ನನಗೆ  ಜ್ಞಾನ ತಪ್ಪಿತು."


" ಮೊದಲು ಈ ಗಂಜಿ ಕುಡಿ.ನಂತರ ಮಾತು "

" ಆ ಚೂರಿ, ಚಿತ್ರವಿಚಿತ್ರ ಕೆತ್ತನೆಗಳಿಂದ ಕೂಡಿದ್ದ ಆ ಬಾಕು , ನಿನ್ನದ್ದೇ ಅಲ್ಲವೇ? ಹಾಗಾದರೆ ನನ್ನನ್ನು ಆ ಗೊಂದಲದಿಂದ ಬಿಡಿಸಿಕೊಂಡು ಬಂದವಳು  ನೀನೇ  ತಾನೇ ?"




ಕೇಸರಿ ಅವಳ ತೋಳನ್ನು ಹಿಡಿದು ಅಲುಗಾಡಿಸಿದಾಗ  ನೋವಿನಿಂದ "ಹಾ!" ಎಂದು ಉದ್ಗರಿಸಿದ ರಾಜ್ಯಲಕ್ಷ್ಮಿ ದೇವಿ,"ಈ ಗಾಯ ಮಾತ್ರ ಸ್ವಲ್ಪ ಆಳವಾಗಿದೆ!ಅಷ್ಟೇ!" ಎಂದು ಮದ್ದಿನ ಪಟ್ಟಿ ಹಚ್ಚಿದ್ದ ತನ್ನ ತೋಳನ್ನು  ಕೊಡವಿಕೊಂಡಳು.

"ಅಕ್ಕಾ!"


"ಕೇಸರಿ ನೀನು ಗಂಜಿ ಕುಡಿದು ಔಷಧ ಸೇವನೆ ಮಾಡು. ನಂತರ ಎಲ್ಲ ವಿವರವಾಗಿ ತಿಳಿಸುವೆ."


ಪಾಂಡು ರಂಗಾಚಾರ್ಯರ ಗುಟ್ಟಾದ ನಡವಳಿಕೆ -

ಅವರಿಗೂ ತನಗೂ ನಡುವೆ ನಡೆದ ವಾಗ್ವಾದ -
ಕೊನೆಗೆ  ತನ್ನ  ಕೆನ್ನೆಗೆ ಬಾರಿಸಿ ಅವರು ಹೊರಟು  ಹೋದ ಸಂಗತಿ-
ಎಲ್ಲವನ್ನೂ  ಕಣ್ಣೀರು  ಸುರಿಸುತ್ತ ವಿವರಿಸಿದಳು ರಾಜ್ಯಲಕ್ಷ್ಮಿ ಅಕ್ಕ.   

ಅತೀತವಾದ  ದುಃಖದಲ್ಲಿ  ಅವಳು  ತಲ್ಲೀನಳಾಗಿದ್ದ ಸಮಯ ಹಿತ್ತಲಲ್ಲಿ ಯಾರೋ ಓಡಾಡುವಂತೆ ತೋರಿ, ಅವಳು ತನ್ನ ಬಾಕು ಹಿಡಿದು ಹೊರಕ್ಕೆ ಧಾವಿಸಿದ್ದು, ಬಾಳೆ ಮರಗಳ ಮರೆಯಿಂದ ಹೊರ ಬಂದ ಒಂದು ಆಕಾರ ಕೈಯಲ್ಲಿ ಖಡ್ಗ  ಎತ್ತಿ ಹಿಡಿದು  ನಿಧಾನವಾಗಿ ಅವಳನ್ನು ಕುರಿತು ಮುನ್ನಡೆದು ಬಂದದ್ದು, ಎಲ್ಲವನ್ನೂ  ರಾಜ್ಯಲಕ್ಷ್ಮಿ ದೇವಿ ವಿವರಿಸಿದಾಗ ಕೇಸರಿಯ ಎದೆ  ಡವಡವ ಎಂದಿತು!


"ಯಾರಕ್ಕಾ ಅವನು?"

" ಅವನ ಹೆಸರು ಸುತಾಣು ಎಂದ.ನಿನ್ನ ಊರಿನವನೆ ಅಂತೆ? "


ಸುತಾಣು ! ಆಚಾರ್ಯರ ಮನೆಯ ಮೇಲೆ ಸದಾ ಕಣ್ಣಿಟ್ಟಿರಲು  ಸಂಚುಗಾರರು ನೇಮಿಸಿದ್ದ ಗೂಢಚಾರಿ! ಅಂದರೆ, ಅಂದು ರಾತ್ರಿ ತನಗೆ ಕೈಕೊಟ್ಟು  ತಪ್ಪಿಸಿಕೊಂಡು ಓಡಿದ್ದವ ಸುತಾಣು!

" ಅಯ್ಯೋ!ಆತ ನಿನಗೇನು ಮಾಡಿದ?"

"ಕೇಳಿಲ್ಲಿ! ಕೊಲ್ಲುವುದಕ್ಕೆ   ಬಂದವನಂತೆ ಖಡ್ಗ ಹಿಡಿದು ಹತ್ತಿರ ಬಂದವನೇ, ಧಿಡೀರೆಂದು ನನ್ನ ಕಾಲಿಗೆ ಬಿದ್ದ."

"ನಿಮ್ಮ ಮನೆಯ ಮೇಲೆ, ಅಂದರೆ ಪಾಂಡುರಂಗಾಚಾರ್ಯರ ಮನೆಯ ಮೇಲೆ ಸದಾ ಒಂದು ಕಣ್ಣಿಟ್ಟಿರುವಂತೆ ನನಗೆ ಆಜ್ಞೆ. ಚಾಚೂ ತಪ್ಪದೆ ಇಲ್ಲಿಯ ವಿಷಯಗಳನ್ನೆಲ್ಲ ಅವರಿಗೆ ಒಪ್ಪಿಸ ಬೇಕೆಂದರು."

ರಾಜ್ಯಲಕ್ಷ್ಮಿಗೆ ಯಾರು ಏನು ಆಜ್ಞೆ ಮಾಡಿದ್ದರು, ಏಕೆ ಮಾಡಿದ್ದರು ಏನೂ ಅರ್ಥವಾಗಲಿಲ್ಲ. ಅದನ್ನು ಅರಿತುಕೊಂಡವನಂತೆ ಸುತಾಣು ನಿಧಾನವಾಗಿ ಎಲ್ಲ ಸಂಗತಿಗಳನ್ನೂ ವಿವರಿಸ ತೊಡಗಿದ.

ಕೇಳ ಕೇಳುತ್ತ  ರಾಜ್ಯಲಕ್ಷ್ಮಿದೇವಿಗೆ  ಹೃದಯಾಘಾತವೇ ಸಂಭವಿಸಿದಂತೆ ಭಾಸವಾಯಿತು.


"ಆಚಾರ್ಯರು ನಂಬಿರುವಂತೆ ಅವರೆಲ್ಲ ಅವರ ಹಿತೈಷಿಗಳಲ್ಲ. ಬರಿ ಸ್ವಾರ್ಥಿಗಳು. ನಿಮ್ಮ ಅಣ್ಣನವರು ಈ ದ್ರೋಹಿಗಳನ್ನು ಪತ್ತೆ ಹಚ್ಕಕ್ಕೆ ಹೊರಟಾಗ ಅವರನ್ನು ಬಂಧಿಸಿ, ಅವರಿಗೆ ಮಾದಕ ವಸ್ತುವಿನ ಚಟ ಹತ್ತಿಸಿ ಅವರನ್ನು ಮಂಕು ಮಾಡಿದರು. ಈ ವಿಷಯ ತಿಳಿಯದೆ  ಆ ಪಾಪಿಗಳಿಗೆ  ದಾಸರಾಗಿದ್ದಾರೆ ನಿಮ್ಮ ತಂದೆಯವರು."

"ಅಕ್ಕ, ನೀವು ಇದನ್ನೆಲ್ಲಾ ನಂಬುತ್ತಿಲ್ಲ ಅನ್ನಿಸುತ್ತದೆ. ನೋಡಿ ಈ ಓಲೆಯನ್ನ. ನಿಮ್ಮ ಮನೆಗೆ ಈ ಸಂದೇಶ ತಂದ ಪಾರಿವಾಳವನ್ನು ಹೊಡೆದು ಇದನ್ನು ಅಪಹರಿಸಿದೆ. ಹಿಡಿಯಲು ಬಂದ  ಕೇಸರಿಯನ್ನು ನೂಕಿ ಓಡಿ ಹೋದೆ.  ಓಲೆಯನ್ನು  ವೆಂಕಟರಾವ್ ಅವರಿಗೆ ಸಮರ್ಪಿಸಿದೆ. ಆದರೆ ಅವರು ಅದನ್ನ ಮಹತ್ತಾದ ಕಾರ್ಯವಾಗಿ ಪರಿಗಣಿಸಲಿಲ್ಲ ಅನ್ನಿಸುತ್ತದೆ. ಬೇರೆ ದೊಡ್ಡ ಸಂಚಿನ ಬಲೆ ಹೆಣೆಯುವುದರಲ್ಲಿ ಮಗ್ನರಾಗಿದ್ದರೇನೊ.ನನಗೆ ಬೇಸರವಾಯಿತು.ಇಷ್ಟು ದಿವಸಗಳಿಂದ ತಲೆ ಮರೆಸಿಕೊಂಡು, ಕಷ್ಟಪಟ್ಟು ಇವರುಗಳ ಸೇವೆ ಮಾಡಿ ಇಂದಿನ ವರೆಗೂ  ಏನೂ  ಫಲ ಕಾಣಲಿಲ್ಲವಲ್ಲ ಎಂದು ಕ್ರೋದ ಉಂಟಾಯಿತು. ಅವರು ಅಲಕ್ಷ್ಸಮಾಡಿದ  ಈ ಓಲೆಯನ್ನ ನಾನು ಅಪಹರಿಸಿಕೊಂಡೆ. "


ಸುತಾಣು ತೋರಿಸಿದ ಒಲೆಯನ್ನು ಅವಸರವಾಗಿ ಕಸಿದುಕೊಂಡು, ಅದರ ಮೇಲೆ ಕಣ್ಣಾಡಿಸಿದ ರಾಜ್ಯಲಕ್ಷ್ಮಿ ಗರ ಬಡಿದವಳಂತೆ ಆದಳು.






'ಔಷದವಲ್ಲ!ವಿಷ!ನಿಲ್ಲಿಸು!'ಆಜಂ ಖಾನ್ ಅವಸರವಸರವಾಗಿ ಗೀಚಿದ್ದ ಸಂದೇಶ! ಈ ಫಲಿತಾಂಶಕ್ಕಾಗಿ ಅಲ್ಲವೇ ತಾನು ಕಾದು ಕುಳಿತದ್ದು? ಅಯ್ಯೋ! ವಿಷಯ ತಿಳಿಯದೆ ಆ ವಿಷವನ್ನೇ ಔಷಧವೆಂದು ನಂಬಿ ಮತ್ತೇ ಮತ್ತೇ ಚಂದ್ರಣ್ಣನಿಗೆ ಅದನ್ನೇ ಕೊಡುತ್ತಿದ್ದೆನಲ್ಲ!


ರಾಜ್ಯಲಕ್ಷ್ಮಿಯ ಗಂಟಲಿಂದ ಜೋರಾಗಿ ಹೊರಟಿತು ಬಿಕ್ಕಳಿಕೆ.


"ನನ್ನನ್ನು ಈ ಗುಂಪಿಗೆ ಸೇರಿಸಿದ ಸುಭಾನ್, ಈಗ  ಅದೇ ಗುಂಪಿಗೆ ದ್ರೋಹ ಬಗೆಯುವುದರಲ್ಲಿದ್ದಾನೆ. ಆತ ಒಬ್ಬ ಅಪರಿಚಿತನೊಡನೆ ಮಾತನಾಡುತ್ತಿದ್ದದ್ದನ್ನು ಅಕಸ್ಮಾತಾಗಿ ಕೇಳಿಸಿಕೊಳ್ಳುವ ಹಾಗಾಯಿತು. ನಿಮ್ಮ ತಂದೆಯವರನ್ನು ಅನ್ನದಾನ ಶೆಟ್ಟರ ಛತ್ರದಲ್ಲೇ ಅಡ್ಡ ಹಾಕಿ, ಅವರನ್ನು ಬಂಧಿಸಿಯೋ ಕೊಂದು ಹಾಕಿಯೋ  ಅವರ ಕೈಯಿಂದ ಯಾವುದೋ ಪತ್ರ ಕಸಿದು ಕೊಳ್ಳಲು  ಮತ್ತೊಂದು ತಂಡವನ್ನೇ ತಯಾರು ಮಾಡಿದ್ದಾನೆ ಸುಭಾನ್.'' 

ರಾಜ್ಯಲಕ್ಷ್ಮಿಯ ಬಾಯಲ್ಲಿ  ಮಾತೆ ಹೊರಡಲಿಲ್ಲ.

ಅಯ್ಯೋ! ಎಂತಹ ಮೋಸ! ಸಂಚಿನೊಳಗೆ ಮತ್ತೊಂದು ಒಳ ಸಂಚು!


"ಸತ್ಯ ಅಕ್ಕ! ನಾನು ನುಡಿದದ್ದೆಲಾ ಸತ್ಯ! ತಂದೆ ತಾಯಿ ಗುರುಗಳು ಯಾರೂ ಇಲ್ಲದ ಅನಾಥ ನಾನು. ಹೇಗೋ ದುಡಿದು, ಹೇಗೋ ಗಳಿಸಿ ಮುತ್ತಿನಲ್ಲಿ  ಮನೆ ಕಟ್ಟಿಸುವ ಕನಸು ಕಂಡೆ. ತುರ್ತಾಗಿ ಹಣ ಗಳಿಸುವ ಆಸೆ! ಸುಭಾನ್ ನಮ್ಮ ಊರಿಗೆ ಬಂದಾಗ ಆ ನೀಚನೊಡನೆ ಸಹವಾಸ ಮಾಡಿದೆ. ಅವನು ತೋರಿಸಿದ ಆಸೆಗೆ ಮರುಳಾಗಿ ಗುಟ್ಟಾಗಿ ಅವನೊಡನೆ ಪಟ್ಟಣಕ್ಕೆ  ಬಂದೆ. ಅವನ ದಾಸನಾಗಿ ಸೇವೆ ಸಲ್ಲಿಸುತ್ತ  ಅಜ್ಞಾತವಾಸವೂ ಮಾಡಿದೆ.ಆದರೆ ಇಂದು ನೀವು ನಿಮ್ಮ ತಂದೆಯವರಿಗೆ ಹೇಳಿದ ಮಾತುಗಳನ್ನು  ಕೇಳಿಸಿಕೊಂಡಾಗ 'ಥೂ! ನನ್ನ ಜನ್ಮಕ್ಕೆ !' ಎಂದು ನಾಚಿಕೆಯಾಯಿತು."




ಸುತಾಣು ಧೀರ್ಘವಾಗಿ ವಿವರಿಸಿ, ಕುಸಿದು ಕುಳಿತು  ತನ್ನ ತಪ್ಪೊಪ್ಪಿಕೊಂಡ.

'ಗೋಳೋ!' ಎಂದು ರೋದಿಸಿದ.
ಇಷ್ಟೊಂದು ಅಗಾಧಗಳಿಂದ ಸುಧಾರಿಸಿಕೊಂಡ ರಾಜ್ಯಲಕ್ಷ್ಮಿ ದೇವಿಯ ಮನಸ್ಸಲ್ಲಿ ಮೊದಲಾಗಿ ಎದ್ದ ನೆನಪು  -

ಪಾಂಡುರಂಗಾಚಾರ್ಯರನ್ನು ತಡೆದು ನಿಲ್ಲಿಸ ಬೇಕು-

ರಾಜ್ಯಕ್ಕೆ ಗಂಡಾಂತರ ತರ ತಕ್ಕಂತಹ  ಆ ಪತ್ರ -
ಅದನ್ನು  ತಪ್ಪಿಸ್ಥರ   ಕೈ ಸೇರದ ಹಾಗೆ ಮಾಡ ಬೇಕು-
ಸಾಧ್ಯವಾದರೆ ತಂದೆಯವರ ಪ್ರಾಣ ಕಾಪಾಡಿ, ಅವರ ಬುದ್ಧಿಯನ್ನು ಕವಿದಿರುವ  ಮಂಕು ಬೂದಿಯನ್ನು ತೊಳೆದು ಸ್ವಚ್ಚಗೋಳಿಸ  ಬೇಕು.

" ಸುತಾಣು ! ನಿನ್ನ  ಪಶ್ಚಾತಾಪ ಸತ್ಯವಾದರೆ ಪ್ರಾಯಶ್ಚಿತಕ್ಕೆ  ಇಗೋ ಒಂದು ಸಂದರ್ಭ. ಅನ್ನದಾನ ಶೆಟ್ಟರ ಛತ್ರಕ್ಕೆ ನನ್ನಜೊತೆ ನೀನೂ  ಬರುವೆಯೇ?"

'' ಕ್ಷಮಿಸಿ ಅಕ್ಕ ! ಸಂಚು ಮಾಡುವುದು ತಲೆ ಮರೆಸಿ ಬಾಳುವುದು ಇದೆಲ್ಲ ಸಾಕುಸಾಕಾಗಿ ಹೋಗಿದೆ. ನಾನು ಈಗಲೇ ಪಟ್ಟಣ ಬಿಟ್ಟು ಬಹಳ ದೂರ ಹೋಗಲಿದ್ದೇನೆ. ನನ್ನ ಸಹೋದರ ಅತಾಣು ಜೊತೆ. ಅವನಷ್ಟೇ ಸ್ವತಂತ್ರನಾಗಿ  ಅವನಷ್ಟೇ ಸಂತೋಷವಾಗಿ ಬದುಕಲು ಹೋಗುತ್ತಿದ್ದೇನೆ. ಈ  ಸಂಚುಗಾರರು,ಅವರ ಗುಟ್ಟನ್ನು ಅರಿತ ನನ್ನನ್ನು ಇಲ್ಲಿ  ಬದುಕಲು ಬಿಡುವುದಿಲ್ಲ."


"ಸುತಾಣು ಹೊರಟೇ  ಹೋದ. ನಾನು ಚಿಂತಿಸಲಿಲ್ಲ. ಲಾಯದಲ್ಲಿ ಮಾಯಾ ಇದ್ದಳು. ಚಂದ್ರಣ್ಣನ ಉಡುಪುಗಳಿದ್ದವು. ನನ್ನಬಾಕು  ಇತ್ತು. ನಾನು ಹೊರಡಲು ನಿರ್ಧರಿಸಿದೆ.ಅಷ್ಟು ಗಲಭೆಯಲ್ಲೂ ನಿನು  ಹಾಸಿಗೆಯಲ್ಲಿ ಹೊದ್ದು ಮಲಗಿದ್ದೆ. ಎಚ್ಚರಿಸಲು ಇಚ್ಚಿಸದೆ ನಾನು ಒಬ್ಬಳೇ ಹೊರಟು ಬಿಟ್ಟೆ."


ಕೇಸರಿ ಸಂಕೋಚದಿಂದ ತಲೆ ತಗ್ಗಿಸಿದನು. ಆಚಾರ್ಯರನ್ನು ಹಿಂಬಾಲಿಸುವ ಮುನ್ನ ತನ್ನ ದಿಂಬುಗಳನ್ನು ಜೋಡಿಸಿ, ಕಂಬಳಿ ಹೊದ್ದಿಸಿ ತಾನು ಹೊರಟು ಹೋಗಿದ್ದ ನೆನಪಾಯಿತು.



" ಕೇಸರಿ!ನಿನ್ನ ತಂದೆ ವಿಶ್ವನಾಥ ಮತ್ತು ಆಜಮ್  ಖಾನ್ ಒಮ್ಮೆ ನನ್ನನ್ನು ಒಂದು ಇಕ್ಕಟ್ಟಿನಿಂದ  ಕಾಪಾಡಿದ್ದರು ಎಂದು ಹೇಳಿದ್ದೆನಲ್ಲವೇ? ನಂತರ  ಅವರಿಬ್ಬರೂ ಸೇರಿ ನನಗೆ ಆತ್ಮ ರಕ್ಷಣೆಗಾಗಿ ಕೆಲವು ಯುದ್ಧ ತಂತ್ರಗಳನ್ನೂ  ಕೂಡ ಬೋಧಿಸಿದ್ದರು. ಆ ಧೈರ್ಯದಿಂದ ಹೊರಟೆ ಬಿಟ್ಟೆ. ಚಿಕ್ಕೆರೆಯಲ್ಲಿ ಮಾಯಾಳಿಗೆ ನೀರು ಕುಡಿಸುತ್ತಿದ್ದ ಸಮಯ ಒಬ್ಬ ವ್ಯಕ್ತಿ ಓಡಿ ಬಂದು ಒಬ್ಬ ಚಿಕ್ಕ ಹುಡುಗನನ್ನು ಕೆಲವು ಧಾಂಡಿಗರಿಂದ  ಕಾಪಾಡಿ ಎಂದು ಬೇಡಿಕೊಂಡ. ಮನಸ್ಸು ಬದಲಿಸಿ ಸುತಾಣು ಅಲ್ಲಿಗೆ ಹೋಗಿ, ಸುಭಾನನ ಕೈಗೆ ಸಿಕ್ಕಿಕೊಂಡನೋ ಎಂದುಕೊಂಡೆ. ಆದರೆ ಅಲ್ಲಿ ನೋಡಿದರೆ ನೀನು! ನಿನ್ನನ್ನು ನೋಡಿದಾಕ್ಷಣ ನನಗೆ ಇತರ ಎಲ್ಲ ಕೆಲಸಗಳೂ ಮರೆತು ಹೋದವು. ಆ ಸಮಯದಲ್ಲಿ  ನಿನ್ನ ಸುರಕ್ಷತೆ ಒಂದೇ ಅತಿ ಮುಖ್ಯವೆನ್ನಿಸಿತು."


ರಣ ಕೇಸರಿಗಳ ತಂಡದ ಬಗೆಯೂ ತಾನೊಬ್ಬ ರಣ ಕೇಸರಿ ಎಂಬುದನ್ನೂ   ಬಹಿರಂಗ ಪಡಿಸದೇ ವಿಷಯಗಳನ್ನು ಅಕ್ಕಳಿಗೆ ಹೇಗೆ ತಿಳಿಸ ಬೇಕೋ ಎಂದು ಅಂಜುತ್ತಿದ್ದ ಕೇಸರಿ. ಈಗ  ಸುತಾಣು ಮೂಲಕ ಎಲ್ಲವನ್ನೂ ಅವಳು ಅರಿತುಕೊಂಡದ್ದು  ನೆಮ್ಮದಿ ಎನಿಸಿತು. ಆದರೂ ಈಗ ಅಕ್ಕಳನ್ನು ಎದುರಿಸಲು ಕೇಸರಿಗೆ ಸ್ವಲ್ಪ ಧರ್ಮ ಸಂಕಟವೇ ಆಯಿತು.

" ಅಕ್ಕ! ನೀನು ಆಚಾರ್ಯರೊಡನೆ ಆಡಿದ್ದ ಮಾತುಗಳನ್ನೆಲ್ಲ ಕೇಳಿಸಿಕೊಂಡೇ 
ಮಲಗಿದ್ದೆ. ನಿನ್ನ ದುಃಖ, ನಿನ್ನ ರೋದನೆ ತಡೆಯಲಾರದೆ, ಅವರನ್ನು ಹೇಗೂ ತಡೆದುಬಿಡುವ ಉದ್ದೇಶದಿಂದ ಅವರ ಹಿಂದೆಯೇ ಹೊರಟು  ಹೋದೆ! ಇಕ್ಕಟ್ಟಿಗೂ  ಸಿಲುಕಿಕೊಂಡೆ!"ಎಂದು ಸಮರ್ಥಿಸಲೆತ್ನಿಸಿದ ಕೇಸರಿ.

"ಆದರೆ ಅಷ್ಟು ಕಷ್ಟ ಪಟ್ಟು ಗಳಿಸಿಕೊಂಡ ಪತ್ರಗಳಿದ್ದ ಚೀಲವನ್ನು ನೀನು ಕ್ಷಣದಲ್ಲಿ  ಎತ್ತೊಗೆದುಬಿಟ್ಟೆಯಲ್ಲ !"ಆತಂಕದಿಂದ ನುಡಿದಳು ರಾಜ್ಯಲಕ್ಷ್ಮಿ ದೇವಿ.


ಕೇಸರಿ ನಿಧಾನವಾಗಿ ರಕ್ತ ಕಲೆಯಿಂದ ಕೂಡಿದ್ದ  ತನ್ನ ಅಂಗಿಯನ್ನು ಸಡಿಲ ಮಾಡಿ, ಒಳಗಿನಿಂದ ತೆಗೆದ ವಸ್ತು ಕಂಡು ರಾಜ್ಯಲಕ್ಷ್ಮಿ ದೇವಿಯ ಕಣ್ಣುಗಳು ಆಶ್ಚರ್ಯದಿಂದ ಬಿರಿದವು.


ಪಟ್ಟಣದ  ಶಾಂತಿಗೆ ಭಂಗ ಉಂಟುಮಾಡ ಬಲ್ಲ-
ಸಿಡಿ ಮದ್ದಿಗೆ ಸಾಟಿಯಾದ -
ಎಲ್ಲ ಕಲಹಕ್ಕೂ ಕಾರಣವಾದ -
ಆ ಪತ್ರಗಳಿದ್ದ ಕೊಳವೆಗಳು -
ಕೇಸರಿಯ ಕೈಗಳಲ್ಲಿ !



ಅದೇ ಸಮಯ  ಅರಮನೆಯ ಸೇವಕರು ಒಂದು ಸಂದೇಶ ಹೊತ್ತು ಬಂದರು.  

' ಅನ್ನದಾನ ಶೆಟ್ಟರ ಛತ್ರದಲ್ಲಿ ನಡೆದ ಕಲಹದ ಬಗ್ಗೆ  ವಿಚಾರಣೆ. ಅದರಲ್ಲಿ  ಭಾಗಿಯಾಗಿದ್ದ ಕೀರ್ತಿ ನಿಧಿ ಕೇಸರಿ ಸಿಂಘ ನಾಳೆ ಅದಾಲತ್ತಿನಲ್ಲಿ ಹಾಜರಾಗಬೇಕೆಂದು ರಾಜಾಜ್ಞೆ!'

ಕಡೆಗೂ ಸುಲ್ತಾನರನ್ನು ಮುಖಾಮುಖಿ ಭೇಟಿಯಾಗ ಬೇಕಾದ ಸಂದರ್ಭ ಸನ್ನಿಹಿತವಾಗಿದೆ!

ಕಾಣದ ಕೈಯೊಂದು ಕೇಸರಿಯ ಕರುಳನ್ನು ಕಿವುಚತೊಡಗಿತು!

------------------------------------------ಆಮೇಲೆ?-----------------------------