ಕೀರ್ತಿ ನಿಧಿ ಕೇಸರಿ ಸಿಂಘ
ರಣ ಭದ್ರಕಾಳಿಯೋ ?
ಚಂಡಿ ಚಾಮುಂಡಿಯೋ ?
ಇಲ್ಲ -
ಯಾವೂರ ಹೆಮ್ಮಾರಿಯೋ?
ಬರಸೆಳೆದು ಕಟ್ಟಿದ್ದ ಸೆರಗು-
ಕೆಂಪೇರಿ ಥಳಥಳಿಸಿದ ಕಣ್ಣುಗಳು -
ಮಸೆದ ಹಲ್ಲುಗಳೆಡೆ ಸಿಕ್ಕದ್ದ ಕೆಳ ತುಟಿ-
ಅದರಿಂದ ಒಸರುತ್ತಿದ್ದ ರಕ್ತದ ಕೋಡಿ -
ಬೆನ್ನಮೇಲೆ ಹರಡಿ ಅಲೆಯಾಡಿದ ಗುಂಗರು ಕೂದಲು -
ಅನ್ನದಾನ ಶೆಟ್ಟರ ಛತ್ರದಲ್ಲಿ ಬರುವವರಿಗೆಲ್ಲ ಆದರದಿಂದ ಅನ್ನ ಬೇಯಿಸಿ ಆಥಿತ್ಯ ನೀಡುತ್ತಿದ್ದ ಸುಲೋಚನಳೆ ಇವಳು?
ಒಲೆಯಿಂದೆಳೆದು ತಂದ ಉರಿಯುತ್ತಿದ್ದ ಕಟ್ಟಿಗೆಯಿಂದ ಎದುರಾಳಿಗಳನ್ನು ಬಡಿದು ಬಾರಿಸುತ್ತಿರುವವಳು ನಿಜಕ್ಕೂ ಆ ಸಾಧು ಸುಲೋಚನಳೇ?
ದೂರದ ಬಂಡೆ ಸಂದಿನಿಂದ ಇರುವೆಗಳಂತೆ ಹರಿದು ಬರುತ್ತಿದ್ದ ಸೈನಿಕರು ಈಗಾಗಲೇ ಛತ್ರವನ್ನು ತಲುಪಿದ್ದರು. ಕಲಹ ಕೋರರನ್ನು ಎದುರಿಸಿ ಸೆಣಸಲು ತೊಡಗಿದ್ದರು.
ಮುಂದಾಳಾಗಿ ಬಂದು ನಿಂತ ಸರದಾರ್ ಅಸ್ಲಾಮ್ ಜಾನ್ ಭದ್ರಕಾಳಿ ಅವಾತರ ತಾಳಿದ್ದ ಸುಲೋಚನಳನ್ನು ಕಂಡು ದಿಗ್ಭ್ರಾಂತನಾದ.
" ಅಮ್ಮಾ!ತಡಿ ತಡಿ! ಯಾಕೆ ಇವರನ್ನೆಲ್ಲ ಬಡಿಯುತ್ತಿರುವೆ?"
ಸರದಾರನ ಹಿಂದೆಯೇ ಬಂದು ಪ್ರಶ್ನಿಸಿದ ಕ್ಷೇತ್ರಪಾಲೈಯನ ಹಿತವಾದ ದನಿ ಸುಲೋಚನಳ ಆವೇಶವನ್ನು ಸ್ವಲ್ಪ ಮಟ್ಟಿಗೆ ತಣಿಸಿತು.ಆದರೂ ಇವರುಗಳೂ ಶತ್ರುಗಳಿರಬಹುದೇ ಎಂಬ ಸಂದೇಹ ಅವಳನ್ನು ಕಾಡಿದ ಕಾರಣ ಎತ್ತಿ ಹಿಡಿದ ಕಟ್ಟಿಗೆಯನ್ನು ಕೆಳಗೆ ಇಳಿಸದೆ ಸಂಶಯದ ನೋಟವನ್ನು ಕ್ಷೇತ್ರಪಾಲೈಯನ ಕಡೆ ಬೀರಿದಳು.
"ನಾವು ಸುಲ್ತಾನರ ಸೈನ್ಯಾಧಿಕಾರಿಗಳು. ಅಲ್ಲಿ ನೋಡು! ಇಲ್ಲಿಯ ಗೊಂದಲಕ್ಕೆ ಕಾರಣರಾದ ಪುಂಡ ಪೋಕಿರಿಗಳನ್ನೆಲ್ಲ ನಮ್ಮ ಸೈನಿಕರು ಬಡಿದು ಚಚ್ಚಿ ಕೈದು ಮಾಡುತ್ತಿರುವರು."
ಆಸ್ಲಾಮ್ ಜಾನ್ ತೋರಿದ ಕಡೆ ಕಣ್ಣು ಹಾಯಿಸಿದ ಸುಲೋಚನಳಿಗೆ ಸ್ವಲ್ಪ ಸಮಾಧಾನವಾಯಿತು.
"ಈ ದುಷ್ಟರೆಲ್ಲ ಸೇರಿಕೊಂಡು ಇಷ್ಟು ಹೊತ್ತು ಜ್ವರದಿಂದ ಸೊರಗಿದ್ದ ಚಿಕ್ಕ ಹುಡುಗನನ್ನು ಗೋಳಾಡಿಸಿದರು.ಈಗ ಈ ಕುಂಟು ಕತ್ತೆಯ ಆದೇಶದ ಮೇರೆಗೆ ಆತನ ಆಳುಗಳು ನನ್ನ ಛತ್ರಕ್ಕೆ ನುಗ್ಗಿ ಲೂಟಿ ಮಾಡಲು ಹತ್ತಿರುವರು.ಇವನೋ ಮರ್ಯಾದೆ ಇಲ್ಲದೆ, ಪಾಪ ಈ ಮುದುಕರ ಮೇಲೆ ಹಲ್ಲೆ ನಡೆಸುತ್ತಿರುವನು.ಈ ಅನ್ಯಾಯ ಹೇಗೆ ಸಹಿಸಲಿ?ಅದಕ್ಕೆ .."
ಹಲ್ಲೆಗೆ ಪಾತ್ರರಾಗಿ ಸುಸ್ತಾಗಿ ಕುಳಿತುಬಿಟ್ಟಿದ್ದ ಪಾಂಡು ರಂಗಾಚಾರ್ಯರು ಒಂದು ಕಡೆ -
ಕುಂಟು ಕಾಲನ್ನೆಳೆದುಕೊಂಡು ತಪ್ಪಿಸಿ ಕೊಂಡು ಓಡಲಾರದೆ ಉರಿಯುತ್ತಿದ್ದ ಸೌದೆ ಏಟು ತಿಂದು ನರಳುತ್ತಿದ್ದ ಸುಭಾನ್ ಮತ್ತೊಂದು ಕಡೆ -
ಏದುತ್ತಲೇ ಅವರ ಕಡೆ ಕೈ ತೋರಿ, ಅಲ್ಲಿಯ ಪರಿಸ್ಥಿತಿಯನ್ನು ವಿವರಿಸಿದ ಸುಲೋಚನಳನ್ನು ವಿಸ್ಮಯದಿಂದ ವೀಕ್ಷಿಸಿದರು ಸರ್ದಾರ್ ಅಸ್ಲಾಮ್ ಜಾನ್ ಮತ್ತು ಕ್ಷೇತ್ರಪಾಲೈಯ .
"ಈ ನಿನ್ನ ಕೆಚ್ಚಿಗೆ ಅದೇನು ಹೇಳಬೇಕೋ ತಿಳಿಯುತ್ತಿಲ್ಲಮ್ಮ. ನಿನಗೆ ನನ್ನ ಹೃತ್ಪೂರ್ವಕವಾದ ಸಲಾಮ್ !"
ಸರ್ದಾರ್ ಅಸ್ಲಾಮ್ ಜಾನ್ ಸುಲೋಚನಳಿಗೆ ವಂದಿಸಿದನು. ಆ ವೇಳೆಗೆ ನಾರಾಯಣ ಕೇಸರಿ ಮತ್ತು ಬಸವ ಕೇಸರಿಗಳ ನಡವೆ ಸಿಕ್ಕಿ, ಸೋಲು ಮೋರೆ ಹೊತ್ತು ನಿಂತಿದ್ದ ಸುಭಾನನ ಕಡೆ ತಿರುಗಿದನು.
"ನೀರಿನಲ್ಲಿ ಮುಳುಗಿ ಸತ್ತ ನಾಟಕ ಹೂಡಿ ಅಂದು ತಪ್ಪಿಸಿಕೊಂಡೆ.ತಲೆ ಮರೆಸಿಕೊಂಡು ನಿನ್ನ ಕುಯುಕ್ತಿಯನ್ನೂ ಸಂಚನ್ನೂ ಮುಂದುವರಿಸಿದೆ.ಈ ಬಾರಿ ನೀನು ತಪ್ಪಿಸಿಕೊಳ್ಳುವಂತಿಲ್ಲಕಣೋ, ರಾಜದ್ರೋಹಿ!"
ತನ್ನ ದಿವಾನ್ ಸುಭಾನ್ ಕನಸುಗಳೆಲ್ಲ ನುಚ್ಚು ನೂರಾಗಿ ಕುಸಿದು ಮಣ್ಣು ಪಾಲಾಗುತ್ತಿರುವುದು ಅರಿವಾಗುತ್ತಿದ್ದರೂ, ಸುಭಾನನ ಕುಹಕ ಬುದ್ಧಿ ಆತನನ್ನು ಇನ್ನೂ ಬಿಟ್ಟಿರಲಿಲ್ಲ.
"ರಾಜದ್ರೋಹಿ ನಾನು ಮಾತ್ರವೇ? ಇಲ್ಲಿರುವವರೆಲ್ಲ ದ್ರೋಹಿಗಳೇ! ಅದರಲ್ಲೂ ಈ ಪಾಂಡುರಂಗಾಚಾರ್ಯರು ಸುಲ್ತಾನರ ಉಪ್ಪು ತಿಂದು, ಉನ್ನತ ದರ್ಜೆಯ ಹರಕಾರ ಬಕ್ಷಿಯಾಗಿದ್ದು, ಮಾಡಿರುವ ದ್ರೋಹದ ಎದುರು ನನ್ನದ್ದೇನು ಮಹಾ? ಅವರ ವಶದಲ್ಲಿರುವ ಪತ್ರ ಪತ್ತೆ ಹಚ್ಚಿ! ಅದು ಅವರ ದ್ರೋಹದ ಕಥೆಗೆ ಸಾಕ್ಷಿ ಹೇಳುತ್ತದೆ."
ತಾತ್ಸಾರದಿಂದ ನುಡಿದ ಸುಭಾನನ್ನು ದೂಡಿಕೊಂಡು ನಡೆದ ನಾರಾಯಣ ಕೇಸರಿ.
"ಆಚಾರ್ಯರೇ! ಏನಿದೆಲ್ಲ? ಅದೇನು ಪತ್ರ? ಮಾತನಾಡಿ! ಆಚಾರ್ಯರೇ!ಆಚಾರ್ಯರೇ!"
ಪಾಂಡು ರಂಗಾಚಾರ್ಯರ ಕಣ್ಣುಗಳು ಶೂನ್ಯವನ್ನು ದಿಟ್ಟಿಸುತ್ತಿದ್ದವು.ತುಟಿಗಳು "ಪತ್ರ,ಪತ್ರ!"ಎಂದು ಹಲುಬುತ್ತಿದ್ದವು.
ಇತರ ರಣ ಕೇಸರಿಗಳು ತ್ವರಿತವಾಗಿ ತಮ್ಮ ಕರ್ತವ್ಯಗಳನ್ನು ಮುಂದುವರೆಸುತ್ತಿದ್ದರು. ರಾಜ ದ್ರೊಹಿಗಳನ್ನೆಲ್ಲ ಬಂಧಿಸಲಾಗಿತ್ತು. ಶಿವನಾಯಕನನ್ನು ಪಾಂಡು ರಂಗಾಚಾರ್ಯರ ಗಾಡಿಯಲ್ಲಿ ಮಲಗಿಸಿ, ಆತನಿಗೆ ಪ್ರಥಮ ಚಿಕಿತ್ಸೆಯನ್ನು ನೀಡಲಾಗಿತ್ತು. ದಿಗ್ಭ್ರಮೆಗೊಂಡಿದ್ದ ಆಚಾರ್ಯರನ್ನು ಅದೇ ಗಾಡಿಯಲ್ಲಿ ಕೂರಿಸಿತುತ್ತಿದ್ದ ಗುಂಡಪ್ಪ ಕೇಸರಿ.
"ಗುಂಡಪ್ಪ ಕೇಸರಿ ! ಬಂಧಿಗಳನ್ನೆಲ್ಲ ಸುಲ್ತಾನರ ಮುಂದೆ ಹಾಜರು ಮಾಡ ಬೇಕು.ಸುಲ್ತಾನರ ಸೈನ್ಯಕ್ಕೆ ಸೇರಿದ ನಮ್ಮ ರಣ ಕೇಸರಿಗಳು ಮಾತ್ರ ಈ ಜವಾಬ್ದಾರಿ ವಹಿಸಲಿ.ಇತರ ರಣ ಕೇಸರಿಗಳೆಲ್ಲ ಸದ್ದಿಲ್ಲದೇ ತಮ್ಮ ತಮ್ಮ ಹುದ್ದೆಗಳಿಗೆ ಹಿಂತಿರುಗಲಿ."
" ಆಯಿತು ಸರದಾರರೆ!"
ಗುಂಡಪ್ಪ ಕೇಸರಿ ಇತರ ರಣ ಕೇಸರಿಗಳನ್ನು ಕುರಿತು ತಕ್ಕ ಆಜ್ಞೆಗಳನ್ನು ಹೊರಡಿಸಿದ. ನಂತರ ಅನ್ನದಾನ ಶೆಟ್ಟರ ಛತ್ರದ ಆವರಣದಿಂದ ಹೊರಡಲು ಒಂದು ದೊಡ್ಡ ಮೆರವಣಿಗೆಯೇ ಸಿದ್ಧವಾಯಿತು .
"ಸಂಚುಗಾರರನ್ನು ಹಿಡಿಯಲು ನಿಮ್ಮ ಮಗಳೇ ಮುಖ್ಯ ಕಾರಣ ಸರದಾರರೇ. ಮರೆಯದೆ ಅವಳಿಗೆ ಧನ್ಯವಾದಗಳನ್ನು ತಿಳಿಸಿ." ಎಂದು ನುಡಿದ ಕ್ಷೇತ್ರ ಪಾಲೈಯನನ್ನು ಕುರಿತು ಕಿರು ನಗೆ ಬೀರಿದ ಸರದಾರ್ ಅಸ್ಲಾಮ್ ಜಾನ್.
ಅವಳಿಗಿಂತ ತಾರಾಮಣಿಯೇ ಈ ಗೌರವಕ್ಕೆ ಹೆಚ್ಚು ಅರ್ಹಳು ಎಂಬ ಭಾವನೆ ಮನಸ್ಸಲ್ಲಿ ಉಕ್ಕಿತು.
ತಾನು ಮನೆಯಿಂದ ಹೊರಟಾಗ ತಾರಾಮಣಿ ಇದ್ದ ಪಂಜರವನ್ನು ತನ್ನ ಕೈಗೆ ಕೊಟ್ಟು, ಅರಮನೆಯ ಆವರಣದಿಂದ ಅವಳನ್ನು ಮುಕ್ತಗೊಳಿಸುವಂತೆ ಕೇಳಿಕೊಂಡಿದ್ದಳು ಸಂಜೀದ.
ಆದರೆ ದಾರಿಯಲ್ಲಿ ಎದುರಾದ ಕ್ಷೇತ್ರ ಪಾಲೈಯನ ಕಳವಳ ಭರಿತ ಮೊಗ ಕಂಡು ನಿಲ್ಲ ಬೇಕಾಗಿ ಬಂದಿತು.
"ಸರದಾರರೆ! ಗೋವಿಂದ ಕೇಸರಿ ಸುದ್ದಿ ಹೊತ್ತು ನನ್ನ ಮನೆಗೇ ಬಂದುಬಿಟ್ಟಿದ್ದ. ಸುಭಾನ್ ಯಾವುದೋ ದುರುದ್ದೇಶದಿಂದ ಹೊರಟಿದ್ದಾನಂತೆ. ಅನ್ನದಾನ ಶೆಟ್ಟರ ಛತ್ರದ ಬಳಿ ಏನೋ ಅನಾಹುತ ನಡೆಯಲಿದೆ ಎಂದು ಮಾತ್ರ ತಿಳಿದು ಬಂದಿದೆ. ಖಂಡಿತವಾಗಿ ಅದು ಯಾವುದೋ ಮಹತ್ತಾದ ರಾಜ ದ್ರೋಹದ ಕೆಲಸವೇ ಆಗಿರಬೇಕು."
ಸರದಾರ್ ಅಸ್ಲಾಮ್ ಜಾನ್ ಕೂಡಲೇ ಎಲ್ಲವನ್ನೂ ಮರೆತು ಕ್ಷೇತ್ರ ಪಾಲೈಯನನ್ನೂ ಕರೆದುಕೊಂಡು ಹೊರಟೆ ಬಿಟ್ಟನು.
ದೂರದ ಗುಡ್ಡದ ಮೇಲೆ ನಿಂತು ದುರ್ಬಿಯ ಮೂಲಕ ಛತ್ರದ ಬಳಿ ಅವರಿಬ್ಬರೂ ಕಂಡ ದೃಶ್ಯ ಅವರುಗಳ ಗುಂಡಿಗೆ ಎಗರಿಸಿಬಿಟ್ಟಿತ್ತು.
ಅಯ್ಯೋ! ಕೇಸರಿ ಇಲ್ಲಿಗೆ ಏಕೆ ಬಂದ? ಹೇಗೆ ಬಂದ? ಅಷ್ಟು ಜನ ಸೈನಿಕರನ್ನು ಒಬ್ಬನೇ ಎದುರಿಸುತ್ತಿರುವನಲ್ಲ ?
"ಅಯ್ಯಯ್ಯೋ! ಇಂತಹ ಸಮಯದಲ್ಲಿ ಇವನನ್ನು ನೋಡ ಬೇಕೆಂದು ನಂಜಪ್ಪೈಯನವರು ಬಂದು ನಮ್ಮ ಮನೆಯಲ್ಲಿ ಕುಳಿತಿರುವರಲ್ಲ! ಇವನಿಗೆನಾದರೂ ಅನಾಹುತವಾಗಿಹೋದರೆ..! ಅಯ್ಯೋ ದೇವರೇ!"
ಕ್ಷೇತ್ರ ಪಾಲೈಯ ಚಡಪಡಿಸಿದ.
ಅದೇ ಸಮಯ ತಾರಾಮಣಿ ಪಂಜರದಲ್ಲಿ ಪಟ ಪಟ ರೆಕ್ಕೆ ಬಡಿದದ್ದನ್ನು ಗಮನಿಸಿದ ಸರದಾರ್ ಅಸ್ಲಾಮ್ ಜಾನ್.
ತಕ್ಷಣವೇ ಸೊಂಟದ ಪಟ್ಟಿಯಿಂದ ಒಂದು ಓಲೆ ಸುರುಳಿಯನ್ನು ಹೊರ ತೆಗೆದು, ಸಂಕ್ಷಿಪ್ತವಾಗಿ ಸುದ್ದಿಯನ್ನು ಗೀಚಿ, ತಾರಾಮಣಿಯ ಕಾಲಿಗೆ ಕಟ್ಟಿ ಅವಳನ್ನು ಬಿಡುಗಡೆ ಮಾಡಿದ. ತಾರಾಮಣಿ ಕೂಡಲೇ ಪಟಪಟ ಹಾರಿ ಹೋದಳು.ಅವಳಿಗೆ ಇದು ಮೊದಲ ಪರೀಕ್ಷೆ!' ಅಲ್ಲಾ,ಅವಳು ಅದರಲ್ಲಿ ಯಶಸ್ವಿಯಾಗಲಿ!' ಎಂದು ಬೇಡಿಕೊಂಡ ಸರ್ದಾರ್ ಅಸ್ಲಾಮ್ ಜಾನ್.
ಕೇಸರಿಯ ನೆರವಿಗೆ ಕೂಡಲೇ ಹೋಗೋಣವೆಂದು ತುದಿಗಾಲಲ್ಲಿ ನಿಂತ ಕ್ಷೇತ್ರಪಾಲೈಯನನ್ನು ಆಶ್ವಾಸಗೊಳಿಸಿದ ಸರ್ದಾರ್ ಅಸ್ಲಾಮ್ ಜಾನ್.
ಹನೀಫ್ ಅವರು ತಾನು ತಾರಾಮಣಿಯ ಮೂಲಕ ಕಳುಹಿಸಿದ ಸಂದೇಶ ಓದಿ ರಣ ಕೇಸರಿಗಳ ಒಂದು ಪಡೆಯನ್ನು ತುರ್ತಾಗಿ ಕಳುಹಿಸುತ್ತಾರೆ ಎಂಬ ಭರವಸೆ ಅವನಿಗಿತ್ತು. ಅವರುಗಳು ಬಂದೊಡನೆಯೇ ರಭಸದಿಂದ ನುಗ್ಗಿ ಒಂದೇ ಏಟಿಗೆ ಕಲಹಗಾರರನ್ನೆಲ್ಲ ಸೆರೆ ಹಿಡಿಯ ಬಹುದು.ಅಲ್ಲಿಯವರೆಗೂ ಕೇಸರಿ ಒಬ್ಬೊಂಟಿಗನಾಗಿ ಬಹಳ ಚಾಣಾಕ್ಷತೆ ವಹಿಸಿ ಹೋರಾಡುತ್ತಿದ್ದ ಹೃದಯಂಗಮವಾದ ದೃಶ್ಯವನ್ನು ವೀಕ್ಷಿಸುತ್ತಿರುವುದು. ತರುವಾಯ ಕೇಸರಿಗೆ ಅವಶ್ಯಕತೆ ಉಂಟಾಗುವ ಪಕ್ಷಕ್ಕೆ ತಾವಿಬ್ಬರೂ ಕೂಡಲೇ ಅಲ್ಲಿಗೆ ಧಾವಿಸ ಬಹುದು ಎಂಬ ಸರದಾರನ ನಿರ್ಧಾರವನ್ನು ಅರೆ ಮನಸ್ಸಿನಿಂದ ಒಪ್ಪಿಕೊಂಡ ಕ್ಷೇತ್ರಪಾಲೈಯ .
ಆದರೆ ಕೇಸರಿಯ ಪರಿಸ್ಥಿತಿ ಹದಗೆಡುತ್ತಿರುವಂತೆ ಭಾಸವಾದಾಗ ಸರದಾರ್ ಅಸ್ಲಾಮ್ ಜಾನ್ ಇನ್ನೂ ಕಾಲಹರಣ ಮಾಡಲಿಚ್ಚಿಸಲಿಲ್ಲ. ಕ್ಷೇತ್ರಪಾಲೈಯನ ಜೊತೆ ರಣರಂಗವನ್ನು ಕುರಿತು ಆತ ಹೋರಟ ಅದೇ ಸಮಯ ರಣ ಕೇಸರಿಗಳು ಧಾವಿಸಿ ಬಂದು ಜೋತೆಗೂಡಿಕೊಂಡರು. ನಡೆಯುತ್ತಿದ್ದ ಗಲಭೆ ಯನ್ನು ಅಂತ್ಯಗೊಳಿಸಿದ್ದರು.
ಆ ಸಮಯದಲ್ಲಿ ಏದುಸಿರು ಬಿಡುತ್ತ ಓಡೋಡಿ ಬಂದ ಗಂಗಾಧರ ಸುಲೋಚನಳ ಅವತಾರ ಕಂಡು ಗಲಿಬಿಲಿಗೊಂಡನು.
" ಸುಲೋಚನ!ಏನಾಯಿತು?ಇವರೆಲ್ಲ ಯಾರು?ನಿನಗೆ ಏನಾಗಿಲ್ಲ ತಾನೇ?"
"ಎಲ್ಲ ಮುಗಿಯಿತು!ಇಷ್ಟು ಹೊತ್ತು ನೀನೆಲ್ಲಿ ಹೋಗಿ ಸತ್ತೆ?" ರೇಗಿದಳು ಸುಲೋಚನ.
" ಅಯ್ಯೋ!ಪಾಪಕಣೆ ಆ ಹುಡುಗ !ಅವನನ್ನು ಅದು ಹೇಗೆಲ್ಲ ಹಿಂಸಿಸಿದರು ಆ ದುರಾತ್ಮರು!ಯಾರಾದರೂ ಸಹಾಯಕ್ಕೆ ಸಿಕ್ಕ ಬಾರದೇ ಎಂದು ಹಂಬಲಿಸುತ್ತ ಹೆದ್ದಾರಿ ಹಿಡಿದು ಓಡಿದ್ದೆ.ಚಿಕ್ಕೆರೆಯತ್ತ ಯಾರೋ ಮಹಾನುಭಾವ ತನ್ನ ಕುದುರೆಗೆ ನೀರು ಕುಡಿಸುತ್ತಿದ್ದ. ಒಂದೇ ಉಸಿರಲ್ಲಿ ಇಲ್ಲಿ ನಡೆಯುತ್ತಿದ್ದ ರಾದ್ಧಾಂತದ ಬಗ್ಗೆ ತಿಳಿಸಿ,ಚಿಕ್ಕ ಹುಡುಗನನ್ನು ಕಾಪಾಡಿ ಎಂದು ಕೇಳಿಕೊಂಡೆ. ಮರು ಕ್ಷಣ ಆ ವ್ಯಕ್ತಿ ಮಾತನಾಡದೆ ಕುದುರೆ ಹತ್ತಿ ಇತ್ತ ದೌಡಾಯಿಸಿದ. ಆತ ಬಂದನೆ? ಹುಡುಗ ಎಲ್ಲಿ?"
ಗಂಗಾಧರನ ವೃತ್ತಾಂತ ಕೇಳಿ ಸುಲೋಚನ ಗಾಬರಿಗೊಂಡಳು.
"ಓ! ಒಬ್ಬ ಕುದುರೆ ಸವಾರ ಕೋಲಾಹಲದ ನಡುವೆ ನುಗ್ಗಿ ಬಂದ. ಹುಡುಗನನ್ನು ಬಾಚಿ ಎತ್ತಿ ತನ್ನ ಕುದುರೆಯ ಮೇಲೆ ಕೂರಿಸಿಕೊಂಡು ಹೊರಟೆ ಹೋದ! ಅಯ್ಯೋ!ಯಾರಿಗೆ ಏನು ಹೇಳಿ ಕಳುಹಿಸಿದೆ? ಆ ವ್ಯಕ್ತಿ ಯಾರು ? ಆತನಿಂದ ಹುಡುಗನಿಗೆ ಅಪಾಯ ಸಂಭವಿಸಿದರೆ?" ಸುಲೋಚನ ಭಯದಿಂದ ಉದ್ಗರಿಸಿದಳು.
ಅಸ್ಲಾಮ್ ಜಾನ್ ಮತ್ತು ಕ್ಷೇತ್ರ ಪಾಲೈಯ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅವರುಗಳು ತಲಪುವ ಮುನ್ನವೇ ಕೇಸರಿ ಅಲ್ಲಿಂದ ಪಾರಾದ ಆ ದೃಶ್ಯವನ್ನು ಅವರಿಬ್ಬರೂ ಕೂಡ ಕಂಡೆ ಇದ್ದರಲ್ಲ.
ಕೇಸರಿಯನ್ನು ಆಪತ್ಕಾಲದಲ್ಲಿ ಜರೂರಾಗಿ ಬಂದು ರಕ್ಷಿಸುತ್ತಾನೆ!
ಧಿಡೀರೆಂದು ಪ್ರತ್ಯಕ್ಷನಾಗಿ ಅದೇ ರೀತಿ ಮಾಯವೂ ಆಗುತ್ತಾನೆ !
ಅವನು ಆಜಮ್ ಖಾನ್ ಅಲ್ಲದೆ ಇನ್ಯಾರಾಗಿ ಇರಲು ಸಾಧ್ಯ?
" ಹೆದರ ಬೇಡ ಅಮ್ಮ!ಹುಡುಗ ಸುರಕ್ಷಿತವಾಗಿದ್ದಾನೆ !"ಎಂದಷ್ಟೇ ಹೇಳಿದ ಕ್ಷೇತ್ರ ಪಾಲೈಯ.
----------------------------------------------------------------------------------------------------------------------------------
ತನಗಾಗಿ ಬಂದ ಆಪತ್ಬಾಂಧವ ಅಪ್ಪಾಜಾನ್ ಎಂದೇ ಭಾವಿಸಿದ್ದ ಕೇಸರಿ, ಬಂದವನ ಚಾಚಿದ್ದ ಕೈ ಹಿಡಿಯುವವರೆಗೆ. 'ಇಲ್ಲ!ಇವನು ಖಂಡಿತವಾಗಿ ಅಪ್ಪಾಜಾನ್ ಅಲ್ಲ!' ಎಂದು ಕೂಡಲೇ ಹೊಳೆಯಿತು. ಅಪ್ಪಾಜಾನ್ ಅಲ್ಲದೇ ಹೋದಲ್ಲಿ ಮಾಯಾಳ ಬೆನ್ನು ಹತ್ತಿ ಸವಾರಿ ಮಾಡುವ ಧೈರ್ಯ ಇನ್ಯಾರಿಗೆ ಇರಬಹುದು ಎಂಬ ಚಿಂತೆ ಕೇಸರಿಯ ಮೆದುಳನ್ನು ಕೊರೆಯ ತೊಡಗಿತು.ಮೈಕೈ ಸೆಳತದೊಡನೆ ತಲೆ ನೋವು ಶುರುವಾದಂತೆ ಭಾಸವಾಯಿತು.ಆಯಾಸದಿಂದ ತಲೆಯನ್ನು ದಿಂಬಿನಲ್ಲಿ ಹುದುಗಿಸಿಕೊಂಡಾಗ ತಾನು ಮಲಗಿರುವುದು ತನ್ನ ಹಾಸಿಕೆಯ ಮೇಲೆ ಎಂಬ ಜ್ಞಾನೋದಯವಾಯಿತು.
ಹಾಗಾದರೆ ತಾನು ಪಟ್ಟಣದಲ್ಲಿದ್ದೇನೆಯೇ ? ತನ್ನನ್ನು ಸುರಕ್ಷಿತವಾಗಿ ಮನೆ ತಲುಪಿಸಿದ ಆ ಪುಣ್ಯಾತ್ಮ ಯಾರು? ಈಗ ಅವನೆಲ್ಲಿ? ಮಾಯಾ ಮನೆಯಲ್ಲೇ ಇರುವಳೋ ಇಲ್ಲ ಆ ವ್ಯಕ್ತಿಯ ಜೊತೆಗೆ ಅವಳೂ ಮಾಯವಾದಳೋ ?
ಮೈಎಲ್ಲ ಧಗೆ-
ಕೈಕಾಲು ಸೆಳೆತ -
ಪಿಚಿ ಪಿಚಿ ಅಂಟಿದ ರಕ್ತಸಿಕ್ತವಾದ ಉಡುಪು -
ಇಷ್ಟು ಅವಸ್ಥೆಗಳ ನಡುವೆ ತಲೆಯನ್ನು ಕೊರೆದ ಪ್ರಶ್ನೆಗಳು-
ಕಿರಿಕಿರಿ ತಾಳಲಾರದೆ ಹಾಸಿಗೆ ಬಿಟ್ಟು ಏಳಲು ಎತ್ನಿಸಿದ ಕೇಸರಿ.
" ಅರೆರೆ! ಕೇಸರಿ! ಎಚ್ಚರವಾಯಿತೆ ? ಇಗೋ ಬಂದೆ ತಡಿ."
ನುಡಿದಂತೆಯೇ ನಿಮಿಷದಲ್ಲಿ ಗಂಜಿ ಬಟ್ಟಲು ಹಿಡಿದು ಮರಳಿ ಬಂದಳು ರಾಜ್ಯಲಕ್ಷ್ಮಿ ದೇವಿ.
"ಕೇಸರಿ! ಮೊದಲು ಈ ಗಂಜಿ ಕುಡಿ. ನಂತರ ವೈದ್ಯರು ಕೊಟ್ಟಿರುವ ಔಷದಿ. ಚೆನ್ನಾಗಿ ಸುಧಾರಿಸಿಕೊಂಡು, ಮೈ ಕೈ ಒರೆಸಿಕೊಂಡು ಶುಭ್ರ ವಸ್ತ್ರಗಳನ್ನು ಧರಿಸುವೆಯಂತೆ. ಇವತ್ತು ಸ್ನಾನ ಬೇಡವೆಂದು ಹೇಳಿದರು ವೈದ್ಯರು ."
ಎಂದಿನಂತೆ ಆದರದೊಡನೆ ಅವನ ಪಕ್ಕ ಕುಳಿತು ಗಂಜಿ ಬಟ್ಟಲನ್ನು ಅವನ ಬಾಯಿಗೆ ಹಿಡಿದಳು ರಾಜ್ಯಲಕ್ಷ್ಮಿದೇವಿ.
"ಬಟ್ಟೆ ಬದಲಾಯಿಸಲು ಬಂದವರಿಗೆಲ್ಲ ಕನವರಿಸುತ್ತಿದ್ದರೂ ಒದ್ದು ಬಡಿದು ಸತಾಯಿಸಿಬಿಟ್ಟೆ?!" ನಗುತ್ತಲೇ ನುಡಿದ ಅಕ್ಕಳನ್ನು ಧೀರ್ಘವಾಗಿ ಒಮ್ಮೆ ನೋಡಿದ ಕೇಸರಿ.
"ಅಕ್ಕ ನನ್ನನ್ನು ಇಲ್ಲಿಗೆ ಕರೆ ತಂದವರ್ಯಾರು? ಅವರು ಅಪ್ಪಾಜಾನ್ ಅಲ್ಲವೆಂದು ನನಗೆ ಖಚಿತವಾಗಿ ತಿಳಿದಿದೆ."
ಕೇಸರಿಯ ಈ ನೇರವಾದ ಪ್ರಶ್ನೆಗೆ ಉತ್ತರಿಸಲಾರದೆ ಕಣ್ಣುಗಳನ್ನು ತಗ್ಗಿಸಿದಳು ರಾಜ್ಯಲಕ್ಷ್ಮಿ ದೇವಿ.
" ಅಕ್ಕ! ಕೈ ಹಿಡಿದು ಮಾಯಾಳ ಮೇಲೆ ಎಗರಿ ಕುಳಿತ ಕೂಡಲೇ ಆ ವಿಷಯ ನನಗೆ ಸ್ಪಷ್ಟವಾಯಿತು. ಶಿವನಾಯಕನ ಎದೆಯಲ್ಲಿ ನಾಟಿದ್ದ ಬಾಕು ನನಗೆ ಬಹಳ ಪರಿಚಯವಾದದ್ದು ಎನ್ನಿಸಿತು. ಕೂಡಲೇ ನನಗೆ ಜ್ಞಾನ ತಪ್ಪಿತು."
" ಮೊದಲು ಈ ಗಂಜಿ ಕುಡಿ.ನಂತರ ಮಾತು "
" ಆ ಚೂರಿ, ಚಿತ್ರವಿಚಿತ್ರ ಕೆತ್ತನೆಗಳಿಂದ ಕೂಡಿದ್ದ ಆ ಬಾಕು , ನಿನ್ನದ್ದೇ ಅಲ್ಲವೇ? ಹಾಗಾದರೆ ನನ್ನನ್ನು ಆ ಗೊಂದಲದಿಂದ ಬಿಡಿಸಿಕೊಂಡು ಬಂದವಳು ನೀನೇ ತಾನೇ ?"
ಕೇಸರಿ ಅವಳ ತೋಳನ್ನು ಹಿಡಿದು ಅಲುಗಾಡಿಸಿದಾಗ ನೋವಿನಿಂದ "ಹಾ!" ಎಂದು ಉದ್ಗರಿಸಿದ ರಾಜ್ಯಲಕ್ಷ್ಮಿ ದೇವಿ,"ಈ ಗಾಯ ಮಾತ್ರ ಸ್ವಲ್ಪ ಆಳವಾಗಿದೆ!ಅಷ್ಟೇ!" ಎಂದು ಮದ್ದಿನ ಪಟ್ಟಿ ಹಚ್ಚಿದ್ದ ತನ್ನ ತೋಳನ್ನು ಕೊಡವಿಕೊಂಡಳು.
"ಅಕ್ಕಾ!"
"ಕೇಸರಿ ನೀನು ಗಂಜಿ ಕುಡಿದು ಔಷಧ ಸೇವನೆ ಮಾಡು. ನಂತರ ಎಲ್ಲ ವಿವರವಾಗಿ ತಿಳಿಸುವೆ."
ಪಾಂಡು ರಂಗಾಚಾರ್ಯರ ಗುಟ್ಟಾದ ನಡವಳಿಕೆ -
ಅವರಿಗೂ ತನಗೂ ನಡುವೆ ನಡೆದ ವಾಗ್ವಾದ -
ಕೊನೆಗೆ ತನ್ನ ಕೆನ್ನೆಗೆ ಬಾರಿಸಿ ಅವರು ಹೊರಟು ಹೋದ ಸಂಗತಿ-
ಎಲ್ಲವನ್ನೂ ಕಣ್ಣೀರು ಸುರಿಸುತ್ತ ವಿವರಿಸಿದಳು ರಾಜ್ಯಲಕ್ಷ್ಮಿ ಅಕ್ಕ.
ಅತೀತವಾದ ದುಃಖದಲ್ಲಿ ಅವಳು ತಲ್ಲೀನಳಾಗಿದ್ದ ಸಮಯ ಹಿತ್ತಲಲ್ಲಿ ಯಾರೋ ಓಡಾಡುವಂತೆ ತೋರಿ, ಅವಳು ತನ್ನ ಬಾಕು ಹಿಡಿದು ಹೊರಕ್ಕೆ ಧಾವಿಸಿದ್ದು, ಬಾಳೆ ಮರಗಳ ಮರೆಯಿಂದ ಹೊರ ಬಂದ ಒಂದು ಆಕಾರ ಕೈಯಲ್ಲಿ ಖಡ್ಗ ಎತ್ತಿ ಹಿಡಿದು ನಿಧಾನವಾಗಿ ಅವಳನ್ನು ಕುರಿತು ಮುನ್ನಡೆದು ಬಂದದ್ದು, ಎಲ್ಲವನ್ನೂ ರಾಜ್ಯಲಕ್ಷ್ಮಿ ದೇವಿ ವಿವರಿಸಿದಾಗ ಕೇಸರಿಯ ಎದೆ ಡವಡವ ಎಂದಿತು!
"ಯಾರಕ್ಕಾ ಅವನು?"
" ಅವನ ಹೆಸರು ಸುತಾಣು ಎಂದ.ನಿನ್ನ ಊರಿನವನೆ ಅಂತೆ? "
ಸುತಾಣು ! ಆಚಾರ್ಯರ ಮನೆಯ ಮೇಲೆ ಸದಾ ಕಣ್ಣಿಟ್ಟಿರಲು ಸಂಚುಗಾರರು ನೇಮಿಸಿದ್ದ ಗೂಢಚಾರಿ! ಅಂದರೆ, ಅಂದು ರಾತ್ರಿ ತನಗೆ ಕೈಕೊಟ್ಟು ತಪ್ಪಿಸಿಕೊಂಡು ಓಡಿದ್ದವ ಸುತಾಣು!
" ಅಯ್ಯೋ!ಆತ ನಿನಗೇನು ಮಾಡಿದ?"
"ಕೇಳಿಲ್ಲಿ! ಕೊಲ್ಲುವುದಕ್ಕೆ ಬಂದವನಂತೆ ಖಡ್ಗ ಹಿಡಿದು ಹತ್ತಿರ ಬಂದವನೇ, ಧಿಡೀರೆಂದು ನನ್ನ ಕಾಲಿಗೆ ಬಿದ್ದ."
"ನಿಮ್ಮ ಮನೆಯ ಮೇಲೆ, ಅಂದರೆ ಪಾಂಡುರಂಗಾಚಾರ್ಯರ ಮನೆಯ ಮೇಲೆ ಸದಾ ಒಂದು ಕಣ್ಣಿಟ್ಟಿರುವಂತೆ ನನಗೆ ಆಜ್ಞೆ. ಚಾಚೂ ತಪ್ಪದೆ ಇಲ್ಲಿಯ ವಿಷಯಗಳನ್ನೆಲ್ಲ ಅವರಿಗೆ ಒಪ್ಪಿಸ ಬೇಕೆಂದರು."
ರಾಜ್ಯಲಕ್ಷ್ಮಿಗೆ ಯಾರು ಏನು ಆಜ್ಞೆ ಮಾಡಿದ್ದರು, ಏಕೆ ಮಾಡಿದ್ದರು ಏನೂ ಅರ್ಥವಾಗಲಿಲ್ಲ. ಅದನ್ನು ಅರಿತುಕೊಂಡವನಂತೆ ಸುತಾಣು ನಿಧಾನವಾಗಿ ಎಲ್ಲ ಸಂಗತಿಗಳನ್ನೂ ವಿವರಿಸ ತೊಡಗಿದ.
ಕೇಳ ಕೇಳುತ್ತ ರಾಜ್ಯಲಕ್ಷ್ಮಿದೇವಿಗೆ ಹೃದಯಾಘಾತವೇ ಸಂಭವಿಸಿದಂತೆ ಭಾಸವಾಯಿತು.
"ಆಚಾರ್ಯರು ನಂಬಿರುವಂತೆ ಅವರೆಲ್ಲ ಅವರ ಹಿತೈಷಿಗಳಲ್ಲ. ಬರಿ ಸ್ವಾರ್ಥಿಗಳು. ನಿಮ್ಮ ಅಣ್ಣನವರು ಈ ದ್ರೋಹಿಗಳನ್ನು ಪತ್ತೆ ಹಚ್ಕಕ್ಕೆ ಹೊರಟಾಗ ಅವರನ್ನು ಬಂಧಿಸಿ, ಅವರಿಗೆ ಮಾದಕ ವಸ್ತುವಿನ ಚಟ ಹತ್ತಿಸಿ ಅವರನ್ನು ಮಂಕು ಮಾಡಿದರು. ಈ ವಿಷಯ ತಿಳಿಯದೆ ಆ ಪಾಪಿಗಳಿಗೆ ದಾಸರಾಗಿದ್ದಾರೆ ನಿಮ್ಮ ತಂದೆಯವರು."
"ಅಕ್ಕ, ನೀವು ಇದನ್ನೆಲ್ಲಾ ನಂಬುತ್ತಿಲ್ಲ ಅನ್ನಿಸುತ್ತದೆ. ನೋಡಿ ಈ ಓಲೆಯನ್ನ. ನಿಮ್ಮ ಮನೆಗೆ ಈ ಸಂದೇಶ ತಂದ ಪಾರಿವಾಳವನ್ನು ಹೊಡೆದು ಇದನ್ನು ಅಪಹರಿಸಿದೆ. ಹಿಡಿಯಲು ಬಂದ ಕೇಸರಿಯನ್ನು ನೂಕಿ ಓಡಿ ಹೋದೆ. ಓಲೆಯನ್ನು ವೆಂಕಟರಾವ್ ಅವರಿಗೆ ಸಮರ್ಪಿಸಿದೆ. ಆದರೆ ಅವರು ಅದನ್ನ ಮಹತ್ತಾದ ಕಾರ್ಯವಾಗಿ ಪರಿಗಣಿಸಲಿಲ್ಲ ಅನ್ನಿಸುತ್ತದೆ. ಬೇರೆ ದೊಡ್ಡ ಸಂಚಿನ ಬಲೆ ಹೆಣೆಯುವುದರಲ್ಲಿ ಮಗ್ನರಾಗಿದ್ದರೇನೊ.ನನಗೆ ಬೇಸರವಾಯಿತು.ಇಷ್ಟು ದಿವಸಗಳಿಂದ ತಲೆ ಮರೆಸಿಕೊಂಡು, ಕಷ್ಟಪಟ್ಟು ಇವರುಗಳ ಸೇವೆ ಮಾಡಿ ಇಂದಿನ ವರೆಗೂ ಏನೂ ಫಲ ಕಾಣಲಿಲ್ಲವಲ್ಲ ಎಂದು ಕ್ರೋದ ಉಂಟಾಯಿತು. ಅವರು ಅಲಕ್ಷ್ಸಮಾಡಿದ ಈ ಓಲೆಯನ್ನ ನಾನು ಅಪಹರಿಸಿಕೊಂಡೆ. "
ಸುತಾಣು ತೋರಿಸಿದ ಒಲೆಯನ್ನು ಅವಸರವಾಗಿ ಕಸಿದುಕೊಂಡು, ಅದರ ಮೇಲೆ ಕಣ್ಣಾಡಿಸಿದ ರಾಜ್ಯಲಕ್ಷ್ಮಿ ಗರ ಬಡಿದವಳಂತೆ ಆದಳು.
'ಔಷದವಲ್ಲ!ವಿಷ!ನಿಲ್ಲಿಸು!'ಆಜಂ ಖಾನ್ ಅವಸರವಸರವಾಗಿ ಗೀಚಿದ್ದ ಸಂದೇಶ! ಈ ಫಲಿತಾಂಶಕ್ಕಾಗಿ ಅಲ್ಲವೇ ತಾನು ಕಾದು ಕುಳಿತದ್ದು? ಅಯ್ಯೋ! ವಿಷಯ ತಿಳಿಯದೆ ಆ ವಿಷವನ್ನೇ ಔಷಧವೆಂದು ನಂಬಿ ಮತ್ತೇ ಮತ್ತೇ ಚಂದ್ರಣ್ಣನಿಗೆ ಅದನ್ನೇ ಕೊಡುತ್ತಿದ್ದೆನಲ್ಲ!
ರಾಜ್ಯಲಕ್ಷ್ಮಿಯ ಗಂಟಲಿಂದ ಜೋರಾಗಿ ಹೊರಟಿತು ಬಿಕ್ಕಳಿಕೆ.
"ನನ್ನನ್ನು ಈ ಗುಂಪಿಗೆ ಸೇರಿಸಿದ ಸುಭಾನ್, ಈಗ ಅದೇ ಗುಂಪಿಗೆ ದ್ರೋಹ ಬಗೆಯುವುದರಲ್ಲಿದ್ದಾನೆ. ಆತ ಒಬ್ಬ ಅಪರಿಚಿತನೊಡನೆ ಮಾತನಾಡುತ್ತಿದ್ದದ್ದನ್ನು ಅಕಸ್ಮಾತಾಗಿ ಕೇಳಿಸಿಕೊಳ್ಳುವ ಹಾಗಾಯಿತು. ನಿಮ್ಮ ತಂದೆಯವರನ್ನು ಅನ್ನದಾನ ಶೆಟ್ಟರ ಛತ್ರದಲ್ಲೇ ಅಡ್ಡ ಹಾಕಿ, ಅವರನ್ನು ಬಂಧಿಸಿಯೋ ಕೊಂದು ಹಾಕಿಯೋ ಅವರ ಕೈಯಿಂದ ಯಾವುದೋ ಪತ್ರ ಕಸಿದು ಕೊಳ್ಳಲು ಮತ್ತೊಂದು ತಂಡವನ್ನೇ ತಯಾರು ಮಾಡಿದ್ದಾನೆ ಸುಭಾನ್.''
ರಾಜ್ಯಲಕ್ಷ್ಮಿಯ ಬಾಯಲ್ಲಿ ಮಾತೆ ಹೊರಡಲಿಲ್ಲ.
ಅಯ್ಯೋ! ಎಂತಹ ಮೋಸ! ಸಂಚಿನೊಳಗೆ ಮತ್ತೊಂದು ಒಳ ಸಂಚು!
"ಸತ್ಯ ಅಕ್ಕ! ನಾನು ನುಡಿದದ್ದೆಲಾ ಸತ್ಯ! ತಂದೆ ತಾಯಿ ಗುರುಗಳು ಯಾರೂ ಇಲ್ಲದ ಅನಾಥ ನಾನು. ಹೇಗೋ ದುಡಿದು, ಹೇಗೋ ಗಳಿಸಿ ಮುತ್ತಿನಲ್ಲಿ ಮನೆ ಕಟ್ಟಿಸುವ ಕನಸು ಕಂಡೆ. ತುರ್ತಾಗಿ ಹಣ ಗಳಿಸುವ ಆಸೆ! ಸುಭಾನ್ ನಮ್ಮ ಊರಿಗೆ ಬಂದಾಗ ಆ ನೀಚನೊಡನೆ ಸಹವಾಸ ಮಾಡಿದೆ. ಅವನು ತೋರಿಸಿದ ಆಸೆಗೆ ಮರುಳಾಗಿ ಗುಟ್ಟಾಗಿ ಅವನೊಡನೆ ಪಟ್ಟಣಕ್ಕೆ ಬಂದೆ. ಅವನ ದಾಸನಾಗಿ ಸೇವೆ ಸಲ್ಲಿಸುತ್ತ ಅಜ್ಞಾತವಾಸವೂ ಮಾಡಿದೆ.ಆದರೆ ಇಂದು ನೀವು ನಿಮ್ಮ ತಂದೆಯವರಿಗೆ ಹೇಳಿದ ಮಾತುಗಳನ್ನು ಕೇಳಿಸಿಕೊಂಡಾಗ 'ಥೂ! ನನ್ನ ಜನ್ಮಕ್ಕೆ !' ಎಂದು ನಾಚಿಕೆಯಾಯಿತು."
ಸುತಾಣು ಧೀರ್ಘವಾಗಿ ವಿವರಿಸಿ, ಕುಸಿದು ಕುಳಿತು ತನ್ನ ತಪ್ಪೊಪ್ಪಿಕೊಂಡ.
'ಗೋಳೋ!' ಎಂದು ರೋದಿಸಿದ.
ಇಷ್ಟೊಂದು ಅಗಾಧಗಳಿಂದ ಸುಧಾರಿಸಿಕೊಂಡ ರಾಜ್ಯಲಕ್ಷ್ಮಿ ದೇವಿಯ ಮನಸ್ಸಲ್ಲಿ ಮೊದಲಾಗಿ ಎದ್ದ ನೆನಪು -
ಪಾಂಡುರಂಗಾಚಾರ್ಯರನ್ನು ತಡೆದು ನಿಲ್ಲಿಸ ಬೇಕು-
ರಾಜ್ಯಕ್ಕೆ ಗಂಡಾಂತರ ತರ ತಕ್ಕಂತಹ ಆ ಪತ್ರ -
ಅದನ್ನು ತಪ್ಪಿಸ್ಥರ ಕೈ ಸೇರದ ಹಾಗೆ ಮಾಡ ಬೇಕು-
ಸಾಧ್ಯವಾದರೆ ತಂದೆಯವರ ಪ್ರಾಣ ಕಾಪಾಡಿ, ಅವರ ಬುದ್ಧಿಯನ್ನು ಕವಿದಿರುವ ಮಂಕು ಬೂದಿಯನ್ನು ತೊಳೆದು ಸ್ವಚ್ಚಗೋಳಿಸ ಬೇಕು.
" ಸುತಾಣು ! ನಿನ್ನ ಪಶ್ಚಾತಾಪ ಸತ್ಯವಾದರೆ ಪ್ರಾಯಶ್ಚಿತಕ್ಕೆ ಇಗೋ ಒಂದು ಸಂದರ್ಭ. ಅನ್ನದಾನ ಶೆಟ್ಟರ ಛತ್ರಕ್ಕೆ ನನ್ನಜೊತೆ ನೀನೂ ಬರುವೆಯೇ?"
'' ಕ್ಷಮಿಸಿ ಅಕ್ಕ ! ಸಂಚು ಮಾಡುವುದು ತಲೆ ಮರೆಸಿ ಬಾಳುವುದು ಇದೆಲ್ಲ ಸಾಕುಸಾಕಾಗಿ ಹೋಗಿದೆ. ನಾನು ಈಗಲೇ ಪಟ್ಟಣ ಬಿಟ್ಟು ಬಹಳ ದೂರ ಹೋಗಲಿದ್ದೇನೆ. ನನ್ನ ಸಹೋದರ ಅತಾಣು ಜೊತೆ. ಅವನಷ್ಟೇ ಸ್ವತಂತ್ರನಾಗಿ ಅವನಷ್ಟೇ ಸಂತೋಷವಾಗಿ ಬದುಕಲು ಹೋಗುತ್ತಿದ್ದೇನೆ. ಈ ಸಂಚುಗಾರರು,ಅವರ ಗುಟ್ಟನ್ನು ಅರಿತ ನನ್ನನ್ನು ಇಲ್ಲಿ ಬದುಕಲು ಬಿಡುವುದಿಲ್ಲ."
"ಸುತಾಣು ಹೊರಟೇ ಹೋದ. ನಾನು ಚಿಂತಿಸಲಿಲ್ಲ. ಲಾಯದಲ್ಲಿ ಮಾಯಾ ಇದ್ದಳು. ಚಂದ್ರಣ್ಣನ ಉಡುಪುಗಳಿದ್ದವು. ನನ್ನಬಾಕು ಇತ್ತು. ನಾನು ಹೊರಡಲು ನಿರ್ಧರಿಸಿದೆ.ಅಷ್ಟು ಗಲಭೆಯಲ್ಲೂ ನಿನು ಹಾಸಿಗೆಯಲ್ಲಿ ಹೊದ್ದು ಮಲಗಿದ್ದೆ. ಎಚ್ಚರಿಸಲು ಇಚ್ಚಿಸದೆ ನಾನು ಒಬ್ಬಳೇ ಹೊರಟು ಬಿಟ್ಟೆ."
ಕೇಸರಿ ಸಂಕೋಚದಿಂದ ತಲೆ ತಗ್ಗಿಸಿದನು. ಆಚಾರ್ಯರನ್ನು ಹಿಂಬಾಲಿಸುವ ಮುನ್ನ ತನ್ನ ದಿಂಬುಗಳನ್ನು ಜೋಡಿಸಿ, ಕಂಬಳಿ ಹೊದ್ದಿಸಿ ತಾನು ಹೊರಟು ಹೋಗಿದ್ದ ನೆನಪಾಯಿತು.
" ಕೇಸರಿ!ನಿನ್ನ ತಂದೆ ವಿಶ್ವನಾಥ ಮತ್ತು ಆಜಮ್ ಖಾನ್ ಒಮ್ಮೆ ನನ್ನನ್ನು ಒಂದು ಇಕ್ಕಟ್ಟಿನಿಂದ ಕಾಪಾಡಿದ್ದರು ಎಂದು ಹೇಳಿದ್ದೆನಲ್ಲವೇ? ನಂತರ ಅವರಿಬ್ಬರೂ ಸೇರಿ ನನಗೆ ಆತ್ಮ ರಕ್ಷಣೆಗಾಗಿ ಕೆಲವು ಯುದ್ಧ ತಂತ್ರಗಳನ್ನೂ ಕೂಡ ಬೋಧಿಸಿದ್ದರು. ಆ ಧೈರ್ಯದಿಂದ ಹೊರಟೆ ಬಿಟ್ಟೆ. ಚಿಕ್ಕೆರೆಯಲ್ಲಿ ಮಾಯಾಳಿಗೆ ನೀರು ಕುಡಿಸುತ್ತಿದ್ದ ಸಮಯ ಒಬ್ಬ ವ್ಯಕ್ತಿ ಓಡಿ ಬಂದು ಒಬ್ಬ ಚಿಕ್ಕ ಹುಡುಗನನ್ನು ಕೆಲವು ಧಾಂಡಿಗರಿಂದ ಕಾಪಾಡಿ ಎಂದು ಬೇಡಿಕೊಂಡ. ಮನಸ್ಸು ಬದಲಿಸಿ ಸುತಾಣು ಅಲ್ಲಿಗೆ ಹೋಗಿ, ಸುಭಾನನ ಕೈಗೆ ಸಿಕ್ಕಿಕೊಂಡನೋ ಎಂದುಕೊಂಡೆ. ಆದರೆ ಅಲ್ಲಿ ನೋಡಿದರೆ ನೀನು! ನಿನ್ನನ್ನು ನೋಡಿದಾಕ್ಷಣ ನನಗೆ ಇತರ ಎಲ್ಲ ಕೆಲಸಗಳೂ ಮರೆತು ಹೋದವು. ಆ ಸಮಯದಲ್ಲಿ ನಿನ್ನ ಸುರಕ್ಷತೆ ಒಂದೇ ಅತಿ ಮುಖ್ಯವೆನ್ನಿಸಿತು."
ರಣ ಕೇಸರಿಗಳ ತಂಡದ ಬಗೆಯೂ ತಾನೊಬ್ಬ ರಣ ಕೇಸರಿ ಎಂಬುದನ್ನೂ ಬಹಿರಂಗ ಪಡಿಸದೇ ವಿಷಯಗಳನ್ನು ಅಕ್ಕಳಿಗೆ ಹೇಗೆ ತಿಳಿಸ ಬೇಕೋ ಎಂದು ಅಂಜುತ್ತಿದ್ದ ಕೇಸರಿ. ಈಗ ಸುತಾಣು ಮೂಲಕ ಎಲ್ಲವನ್ನೂ ಅವಳು ಅರಿತುಕೊಂಡದ್ದು ನೆಮ್ಮದಿ ಎನಿಸಿತು. ಆದರೂ ಈಗ ಅಕ್ಕಳನ್ನು ಎದುರಿಸಲು ಕೇಸರಿಗೆ ಸ್ವಲ್ಪ ಧರ್ಮ ಸಂಕಟವೇ ಆಯಿತು.
" ಅಕ್ಕ! ನೀನು ಆಚಾರ್ಯರೊಡನೆ ಆಡಿದ್ದ ಮಾತುಗಳನ್ನೆಲ್ಲ ಕೇಳಿಸಿಕೊಂಡೇ
ಮಲಗಿದ್ದೆ. ನಿನ್ನ ದುಃಖ, ನಿನ್ನ ರೋದನೆ ತಡೆಯಲಾರದೆ, ಅವರನ್ನು ಹೇಗೂ ತಡೆದುಬಿಡುವ ಉದ್ದೇಶದಿಂದ ಅವರ ಹಿಂದೆಯೇ ಹೊರಟು ಹೋದೆ! ಇಕ್ಕಟ್ಟಿಗೂ ಸಿಲುಕಿಕೊಂಡೆ!"ಎಂದು ಸಮರ್ಥಿಸಲೆತ್ನಿಸಿದ ಕೇಸರಿ.
"ಆದರೆ ಅಷ್ಟು ಕಷ್ಟ ಪಟ್ಟು ಗಳಿಸಿಕೊಂಡ ಪತ್ರಗಳಿದ್ದ ಚೀಲವನ್ನು ನೀನು ಕ್ಷಣದಲ್ಲಿ ಎತ್ತೊಗೆದುಬಿಟ್ಟೆಯಲ್ಲ !"ಆತಂಕದಿಂದ ನುಡಿದಳು ರಾಜ್ಯಲಕ್ಷ್ಮಿ ದೇವಿ.
ಕೇಸರಿ ನಿಧಾನವಾಗಿ ರಕ್ತ ಕಲೆಯಿಂದ ಕೂಡಿದ್ದ ತನ್ನ ಅಂಗಿಯನ್ನು ಸಡಿಲ ಮಾಡಿ, ಒಳಗಿನಿಂದ ತೆಗೆದ ವಸ್ತು ಕಂಡು ರಾಜ್ಯಲಕ್ಷ್ಮಿ ದೇವಿಯ ಕಣ್ಣುಗಳು ಆಶ್ಚರ್ಯದಿಂದ ಬಿರಿದವು.
ಪಟ್ಟಣದ ಶಾಂತಿಗೆ ಭಂಗ ಉಂಟುಮಾಡ ಬಲ್ಲ-
ಸಿಡಿ ಮದ್ದಿಗೆ ಸಾಟಿಯಾದ -
ಎಲ್ಲ ಕಲಹಕ್ಕೂ ಕಾರಣವಾದ -
ಆ ಪತ್ರಗಳಿದ್ದ ಕೊಳವೆಗಳು -
ಕೇಸರಿಯ ಕೈಗಳಲ್ಲಿ !
ಅದೇ ಸಮಯ ಅರಮನೆಯ ಸೇವಕರು ಒಂದು ಸಂದೇಶ ಹೊತ್ತು ಬಂದರು.
' ಅನ್ನದಾನ ಶೆಟ್ಟರ ಛತ್ರದಲ್ಲಿ ನಡೆದ ಕಲಹದ ಬಗ್ಗೆ ವಿಚಾರಣೆ. ಅದರಲ್ಲಿ ಭಾಗಿಯಾಗಿದ್ದ ಕೀರ್ತಿ ನಿಧಿ ಕೇಸರಿ ಸಿಂಘ ನಾಳೆ ಅದಾಲತ್ತಿನಲ್ಲಿ ಹಾಜರಾಗಬೇಕೆಂದು ರಾಜಾಜ್ಞೆ!'
ಕಡೆಗೂ ಸುಲ್ತಾನರನ್ನು ಮುಖಾಮುಖಿ ಭೇಟಿಯಾಗ ಬೇಕಾದ ಸಂದರ್ಭ ಸನ್ನಿಹಿತವಾಗಿದೆ!
ಕಾಣದ ಕೈಯೊಂದು ಕೇಸರಿಯ ಕರುಳನ್ನು ಕಿವುಚತೊಡಗಿತು!
------------------------------------------ಆಮೇಲೆ?-----------------------------