Thursday, July 17, 2014

Jugga Juggi ! / ಜುಗ್ಗ ಜುಗ್ಗಿ !

 ಜುಗ್ಗ ಜುಗ್ಗಿ !


ಪಾಪು ಎರಡು ಕೈಗಳಲ್ಲೂ ಒಂದೊಂದು ಬಿಸ್ಕೆಟ್ಟು ಹಿಡಿದು ಕೊಂಡು ಚೀಪುತ್ತಿತ್ತು  . 
"ಪಾಪೂ ತಾತ್ನ್ಗೊಂದು ಬಿಸ್ಕೆಟ್  ಕೊಡೊ !" ಎನ್ನುತ್ತಾ ಕೈ ಚಾಚಿದರು ತಾತ . 
'ಊ ಹುಂ!'   ಎಂದು ತಲೆ ಅಲ್ಲಾಡಿಸಿ ನಕ್ಕಿತು ಪಾಪು . 
" ನನಗೇ ?" ಎಂದು ಕೈ ಚಾಚಿದ ಪುಟ್ಟಣ್ಣ . 
ಪಾಪು  ಬಿಸ್ಕೆಟ್ಟನ್ನು ತನ್ನ ಹಿಂದೆ ಬಚ್ಚಿಟ್ಟುಕೊಂಡಿತು  . 
" ಮುದ್ದು ಪಾಪು ನನ್ಗೆ ಕೊಟ್ಟೇ ಕೊಡತ್ತೆ ನೋಡು !" ಎಂದು ತಾನೂ ಕೈ ಚಾಚಿ "ನನ್ಗೆ  ?" ಎಂದಳು ಪುಟ್ಟಿ . 
ಪಾಪು ಬಿಸ್ಕೆಟ್ಟನ್ನು  ಬಿಗಿಯಾಗಿ  ಹಿಡಿದುಕೊಂಡು  ವೇಗವಾಗಿ ತೆವಳುತ್ತ ಹೋಗಿ ಅಜ್ಜಿಯ ಮಡಿಲಲ್ಲಿ ಬದ್ರವಾಗಿ ಕುಳಿತುಕೊಂಡಿತು .ಅಜ್ಜಿ ಕೇಳದೆಯೇ ಚೂರೇ  ಚೂರು    ಮುರಿದು ಅವಳ ಬಾಯಿಗೆ ಹಾಕಿತು . 
"ಆಹಹಃ ! ಎಷ್ಟ್ ದೊಡ್ಚೂರು ಕೊಟ್ಬಿಟ್ಟೆ ! ಜುಗ್ಗ ಕಣೋ ನೀನು !" ಎಂದರು ತಾತ ನಗುತ್ತ .
"ಪ್ರಪಂಚ್ದಲ್ಲಿರೋ ಎಲ್ಲ ಜುಗ್ಗರನ್ನೂ ನುಂಗಿ ನೀರು ಕುಡಿಯೋಂತ  ಜುಗ್ಗರ ಕಥೆಯೆಲ್ಲಾ ಕೇಳಿದ್ದೀವಿ  !  ಅಂತಾದ್ರಲ್ಲಿ ಪಾಪೂನ ಯಾರದ್ರೂ ಜುಗ್ಗ ಅನ್ತಾರೆಯೇ? ನನ್ಗೆ ಅದೆಷ್ಟ್ ಚೆನ್ನಾಗಿ ಬಿಸ್ಕೆಟ್ ತಿನ್ನಿಸ್ದ  ನೋಡಿ !" ಎಂದು ಪಾಪೂನ ಮುದ್ದಿಸುತ್ತ  ನುಡಿದಳು ಅಜ್ಜಿ .
"ಹೌದೌದು ! ಆ ಜುಗ್ಗೋತ್ತುಂಗನ ಹೆಂಡತಿಯೋ  ಅವನ್ಗಿಂತ  ಒಂದು ಪಟ್ಟು ಹೆಚ್ಚಾಗಿ ಜುಗ್ಗತನ ತೋರ್ತಿದ್ಳು ಅಲ್ವೇ ?" ಎಂದು ನೆನೆಪಿಸಿಕೊಂಡು ಮಾತನಾಡಿದರು ತಾತ.
"ಅಂದ್ರೆ ಅವ್ಳು ಜುಗ್ಗಿಯೇ ?" ಪುಟ್ಟಿ ಉತ್ಸಾಹದಿಂದ ಕೇಳಿದಳು .
"ಹೂಂ ! ಜುಗ್ಗನಿಗೆ ತಕ್ಕ ಜುಗ್ಗಿ !" ಎಂದರು ತಾತ.
"ಜುಗ್ಗ ಜುಗ್ಗಿ ! ಹೈಯ ! ತುಂಬಾ ಚೆನ್ನಾಗಿದೆ ಟೈಟಲ್ಲು . ಅವ್ರ ಕಥೆನೂ ನಿಮ್ ತಾತ ಹೇಳಿರ್ಬೇಕಲ್ಲಾ ? ಹೇಳಜ್ಜಿ  ಆ ಕಥೇನ !" ಎಂದು  ಕಾಡ ತೊಡಗಿದಳು ಪುಟ್ಟಿ .
"ಸರೀ ! ಸರೀ ! ಹೇಳ್ತಿನಿ ಕೇಳು !" ಎಂದು ಶುರು ಮಾಡಿದಳು ಅಜ್ಜಿ .


ಒಂದಾನೊಂದು ಕಾಲದಲ್ಲಿ ಒಬ್ಬ ಜುಗ್ಗನಿದ್ದನಂತೆ  . ದಿನವಿಡೀ ಇನ್ನೇನು ಜುಗ್ಗತನ ಮಾಡಬಹುದೆಂಬ ಚಿಂತೆಯಲ್ಲೇ ಕಳೆಯುತ್ತಿದ್ದನಂತೆ  .
 ಹತ್ತು ಪಟ್ಟು ಹಿಂದಕ್ಕೆ  ಪಡೆಯಬಹುದೆಂಬ ಭರವಸೆ   ಇಲ್ಲದೆ , ಅವನು ಯಾರೊಬ್ಬರಿಗೂ ಒಂದೇ ಒಂದು ಕಾಳನ್ನೂ ಕೂಡ ಕೊಡುತ್ತಿರಲಿಲ್ಲ  .
ಅವನಿಗಿಂತ ಭಾರೀ ಜುಗ್ಗತನ ತೋರುತ್ತಿದ್ದಳು ಅವನ ಹೆಂಡತಿ.
ಹಬ್ಬ ಹರಿದಿನಗಳನ್ನು  ಪಾಯಸ ಮಾಡಿ ಕೊಂಡಾಡುವುದು    ಸಾಮಾನ್ಯ ಜನರ ವಾಡಿಕೆ . ಜುಗ್ಗ ಜುಗ್ಗಿ ಕೂಡ ಹಬ್ಬ ಮಾಡಿ ಪಾಯಸ ಕುಡಿದರು , ಪಾಯಸ ಮಾಡದೆಯೇ ! ಇಷ್ಟೇ ಇಷ್ಟು ಧಾನ್ಯಗಳನ್ನೂ ಇಷ್ಟೇ ಇಷ್ಟು ಬೆಲ್ಲವನ್ನೂ ಬಟ್ಟೆಯಲ್ಲಿ ಮೂಟೆಯಾಗಿ ಕಟ್ಟಿ ನೀರಿನಲ್ಲಿ ಅದ್ದಿ , ಆ ನೀರನ್ನೇ ಪಾಯಸವೆಂದುಕೊಂಡು  ಕುಡಿಯುತ್ತಿದ್ದ ಜುಗ್ಗ  . ಅವನ ಹೆಂಡತಿಯೋ ಆ  ಮೂಟೆಯನ್ನು   ಬಟ್ಟಲ ನೀರಿನ ಮೇಲೆ ಎತ್ತಿ ಹಿಡಿದು, ಧಾನ್ಯ-ಬೆಲ್ಲದ ಮೂಟೆ ಪ್ರತಿಬಿಂಬಿಸಿದ ಬಟ್ಟಲ  ನೀರನ್ನು ಪಾಯಾವೆಂದು ಕುಡಿಯುತ್ತಿದ್ದಳು !
ಧಾನ್ಯವೂ ಬೆಲ್ಲವೂ ಕರ್ಚು ಮಾಡದೆಯೇ  ಪಾಯಸ ಕುಡಿದ ಖುಷಿ ಜುಗ್ಗ ಮತ್ತು ಜುಗ್ಗಿಗೆ  !


ಒಮ್ಮೆ ಜುಗ್ಗ ಜಗಲಿಯ ಮೇಲೆ ಆಲಸ್ಯದಿಂದ ಕಣ್ಣು ಮುಚ್ಚಿ ಮಲಗಿಕೊಂಡಿದ್ದನು. ಏನೇನೋ ಶಬ್ದಗಳನ್ನು ಮಾಡುತ್ತಿದ್ದನು :
'ಹೈ ,ಹೈ , ತ್ಳುಕ್ ತ್ಳುಕ್ , ಡ್ರೀಯ ! '
"ಏನು ಮಾದಿತ್ತಿರುವೆ ?'' ಎಂದು ಆಶ್ಚರ್ಯದಿಂದ ಕೇಳಿದಳು ಜುಗ್ಗಿ .
" ನನ್ನ ಕಾಲ್ಪನಿಕ  ಆಕಳನ್ನು  ನಾನು ಬಜಾರಿಗೆ ಕರೆದೊಯ್ಯುತ್ತಿರುವೆ !ಆಹಾ ! ಎಷ್ಟು ಸೊಗಸಾದ ಆಕಳು ! ಪುಷ್ಟಿಯಾದ ದೇಹ ! ಮಿರಿ ಮಿರಿ ಹೊಳೆವ ಕಂದು  ಬಣ್ಣ! ದೊಡ್ಡ ಕಣ್ಣುಗಳು ! ಕಿವಿಗಳು !ಒಮ್ಮೆಗೆ ಹತ್ತು ಕೊಡ ಹಾಲನ್ನು ಕೊಡ ಬಲ್ಲಳು !ಹಾಲನ್ನು ಮಾರಿ ನಾನು ದೊಡ್ಡ ಶ್ರೀಮಂತನಾಗುವೆ !"
" ಒಹ್ ! ಎಂತಹ ಅದ್ಬುತವಾದ ಆಕಳು !" ಜುಗ್ಗಿ ತನ್ನ ಕಲ್ಪನೆಯನ್ನೂ  ಸೇರಿಸಿದಳು. " ಆಕಳನ್ನು ನನ್ನ ಸೋದರನ ಮನೆಗೆ ಮೇವಿಗೆ ಕರೆದೊಯ್ಯುವೆ. ಸಂಜೆ ಹಾಲನ್ನು  ಕರೆಯುವೆ ! ನಾಲ್ಕು ಕೊಡ ಕರೆದ ಹಾಲನ್ನು ನನ್ನ ಸೋದರನಿಗೆ ಕಳುಹಿಸುವೆ !"
" ನನ್ನ ಆಕಳಿನ ಹಾಲನ್ನು ನಿನ್ನ ಸೋದರನಿಗೆ ಕೊಡಲು ನಿನಗೆಷ್ಟು ಧೈರ್ಯ !'' ಎಂದು ಕೂಗಾಡಿ ಜುಗ್ಗಿಯನ್ನು ಬಡೆದನು ಜುಗ್ಗ.
ಜುಗ್ಗಿ ಗಟ್ಟಿಯಾಗಿ ಬೊಬ್ಬೆಯಿಟ್ಟ   ಕಾರಣ ನೆರೆಹೊರೆಯವರೆಲ್ಲ ಅಲ್ಲಿ ಕೂಡಿಬಿಟ್ಟರು.
" ಯಾಕಪ್ಪ ಅವಳನ್ನ ಹೊಡೆಯುತ್ತಿರುವೆ ?"ಎಂದು ಅವನನ್ನು ಪ್ರಶ್ನಿಸಿದರು .
" ನನ್ನ ಆಕಳಿನ ಹಾಲನ್ನು ತನ್ನ ಸೋದರನಿಗೆ ಬಿಟ್ಟೀ ಕಳಿಸೋದೆ ಮತ್ತೆ  ?"
" ಆದರೆ ನಿನ್ನ ಆಕಳನ್ನು ಮೇವಿಗೆ ಬಿಟ್ಟಿದ್ದು ನನ್ನ ಸೋದರನ ಮನೆಯಲ್ಲಿತಾನೇ!"ಜುಗ್ಗಿ ಕೂಗಿದಳು .
" ಅದ್ಸರಿ ! ನಿನ್ನ ಆಕಳೆಲ್ಲಿ  ಈಗ ?" ಎಂದು ಪ್ರಶ್ನಿಸಿದರು ಬಂದವರು .
" ನನ್ನ ಕಲ್ಪನೆಯಲ್ಲಿದೆ  !'' ಎಂದು ಜಂಬದಿಂದ ನುಡಿದ ಜುಗ್ಗ .
" ಸರಿ ಸರಿ ! ಕಲ್ಪನೆಯ ಹಾಲಿಗೂ ಕಲ್ಪನೆಯ ಹುಲ್ಲಿಗೂ ಲೆಕ್ಕ ಸರಿ ಹೋಯಿತು ! ಈಗ ಗಲಬೆ ಮಾಡದೆ ಸುಮ್ಮನಿರಿ !"ಎಂದು ಎಲ್ಲರೂ ಬೈದು ಹೋದರು .
ಜುಗ್ಗ ಮತ್ತು ಜುಗ್ಗಿ ಹಾಲೆಂದು ಭಾವಿಸಿ ತಂಬಿಗೆ ನೀರನ್ನು ಕುಡುದು ತೃಪ್ತಿಯಿಂದ ಮಲಗಿದರು!


  ಜುಗ್ಗ ಪಕ್ಕದ ಊರಲ್ಲಿದ್ದ ತನ್ನ ನೆಂಟರ  ಮನೆಗೆ ಆಗಾಗ ಹೋಗಿ ಊಟ ಮಾಡಿ ಬರುವುದು ವಾಡಿಕೆ . ಮನೆಯ ಯಜಮಾನ  ಬಹಳ ಒಳ್ಳೆಯ ಸ್ವಭಾವದವ. ಜುಗ್ಗನಿಗೆ ಊಟ ಹಾಕುವುದಲ್ಲದೆ ಕೈ ತುಂಬಾ ಹಣ್ಣು ಹಂಪಲು  ಕೊಟ್ಟು ಕಳುಹಿಸುತ್ತಿದ್ದ .
ಒಮ್ಮೆ ಜುಗ್ಗ ಅವರ ಮನೆಗೆ ತೆರಳಿದ್ದಾಗ , ಅಂಗಳದಲ್ಲಿದ್ದ  ತುಳಸಿ ಕಟ್ಟೆಯ  ಸುತ್ತ ಹರಡಲ್ಪಟ್ಟಿದ್ದ  ಹೊಸ ಬೇಳೆಕಾಳುಗಳನ್ನು  ಕಂಡನು . ಅವನ ಬಾಯಲ್ಲಿ ನೀರೂರಿತು ! ' ಆಹಾ ! ಇದರಿಂದ ರುಚಿ ರುಚಿಯಾದ  ವಡೆ ತಯಾರಿಸಬಹುದಲ್ಲ !" ಎಂದುಕೊಂಡನು .
ಬೇಳೆಕಾಳನ್ನು ಕೇಳಿ ಪಡೆಯಲು ಅಡ್ಡ ಬಂದಿತು  ಅವನ ಒಣ ಜಂಬ !  ಕರೀದಿ ಮಾಡಲು ಅಡ್ಡಿಯಾಯಿತು  ಅವನ ಜುಗ್ಗತನ !
ಆದ್ದರಿಂದ ಅವನು ಒಂದು ತಂತ್ರವನ್ನು ಹೂಡಿದನು .
ಹೊರಡುವ ಮುನ್ನ ಗಾಡಿಯ ಚಕ್ರದ ಕೀಲನ್ನು ತನ್ನ ಒಡಲಿಗೆ ಲೇಪನ ಮಾಡಿಕೊಂಡು ಅಂಗಳವನ್ನು ಕುರಿತು ನಡೆದನು .
"  ಅಯ್ಯೋ !ಇಂದು ದ್ವಾದಶಿಯಲ್ಲವೇ ? ನನಗೆ  ಪ್ರತಿ ದ್ವಾದಶಿಯಂದೂ ಉರುಳು ಸೇವೆ ಮಾಡುವ ಪದ್ಧತಿ !" ಎಂದು ಪ್ರಕಟಣೆ ಮಾಡಿ , ದಡೀರೆಂದು ಕೆಳಗೆ ಬಿದ್ದು ತುಳಸೀ ಕಟ್ಟೆಯ ಸುತ್ತ 'ಗೋವಿಂದ ಗೋವಿಂದ ' ಎಂದು ಜಪಿಸುತ್ತ  ಉರುಳ ತೊಡಗಿದನು. ಮನೆ  ಯಜಮಾನ ಮತ್ತು  ಅವನ  ಪತ್ನಿ ವಿಸ್ಮಯದಿಂದ ನೋಡಿ ಭಕ್ತಿಯಿಂದ ಕೆನ್ನೆಗೆ 'ರಪ ರಪ' ಬಡಿದುಕೊಂಡರು . 
ಜುಗ್ಗ  ಉರುಳಿದಂತೆ ಹರಡಿದ್ದ ಬೇಳೆ ಕಾಳುಗಳು  ಯಥೇಷ್ಟವಾಗಿ ಅವನ ಮೈಗಂಟಿಕೊಂಡಿತು  . ನಂತರ ಅವಸವಸರವಾಗಿ ದುಪ್ಪಟ್ಟಿ ಹೊದ್ದುಕೊಂಡು ಬಿರಬಿರನೆ ಮನೆಗೆ ಹಿಂದಿರುಗಿದನು .
ಮನೆಯಲ್ಲಿ ಜುಗ್ಗನ ದುಪ್ಪಟ್ಟಿಯಿಂದ ಉದುರಿದ ಬೇಳೆಕಾಳುಗಳನ್ನು ಕಂಡ ಜುಗ್ಗಿಗೆ ಆನಂದವೋ ಆನಂದ !

 

" ನನ್ನ ಬುದ್ಧಿವಂತಿಗೆಗೆ ಏನಂತೀ ? ಬೇಳೆಕಾಳುಗಳನ್ನ  ತೊಳೆದು, ನೆನೆಸಿ ರುಬ್ಬು ಹೋಗು . ರುಚಿಯಾದ ವಡೆಗಳನ್ನ ತಯಾರಿಸಿ ಸವಿಯೋಣ .
ಜುಗ್ಗಿ ಬೇಳೆಯನ್ನು ರುಬ್ಬಿ ಆರು ವಡೆಗಳನ್ನು ತಯಾರಿಸಿದಳು .
" ನಾನು ಹೋಗಿ ಕೀಲು ಅಂಟಿದ ಮೈ  ತೊಳೆದುಕೊಂಡು ಬರುವೆ . ನಂತರ ನೀನು ಮೂರು ನಾನು ಮೂರು ವಡೆಗಳನ್ನ ತಿನ್ನೋಣ ." ಎಂದು ನುಡಿದು ಬಾವಿಯತ್ತ ನಡೆದ ಜುಗ್ಗ  .
ಜುಗ್ಗಿಗೆ ವಡೆ ತಿನ್ನಬೇಕೆಂಬ ತಡೆಯಲಾರದ ಆಸೆ! ತನ್ನ ಪಾಲಿನ ಮೂರು ವಡೆಗಳನ್ನು ಒಂದೇ ಏಟಿಗೆ ಗಪಗಪನೆ ಮುಕ್ಕಿಬಿಟ್ಟಳು ! ನಂತರ  ಆತುರಾತುರವಾಗಿ ಇನ್ನೆರಡು ವಡೆಗಳನ್ನೂ ಕಬಳಿಸಿದಳು . ಸ್ನಾನ ಮುಗಿಸಿ ಬಂದ  ಜುಗ್ಗ  ಉಳಿದಿದ್ದ ಒಂದೇ ಒಂದು ವಡೆಯನ್ನು ಕಂಡು ಬಲು ಕೋಪಗೊಂಡನು .
" ಅದು ಹೇಗೆ ಒಂದೇ ಏಟಿಗೆ ಐದು ವಡೆಗಳನ್ನ ತಿಂದು ಹಾಕಿದೆ ?" ಎಂದು ಹಾರಾಡಿದನು .
" ಇಗೋ ! ಹೀಗೇ !" ಎನ್ನುತ್ತಾ ಉಳಿದಿದ್ದ ಕೊನೆಯ ವಡೆಯನ್ನು ಬಾಯಿಗೆ ತುರುಕಿಕೊಂಡು ಮೆಲ್ಲುತ್ತಲೇ ನುಡಿದಳು ಜುಗ್ಗಿ !
ಜುಗ್ಗ ಪಾಪ , ತನ್ನ ಬರಿದಾದ ಬಾಯನ್ನೇ ಮೆಲ್ಲುತ್ತ ಅವಳನ್ನೇ ನೋಡುತ ನಿಂದನು!


ಒಮ್ಮೆ ಜುಗ್ಗನ ಸಂಬಂಧಿಕನೊಬ್ಬ ಮನೆಗೆ ಬಂದು , ತಾನು ಕ್ಷೇತ್ರಾಟನ  ಹೊರಟಿರುವುದಾಗಿಯೂ ಒಂದೇ ಒಂದು ದಿವಸ  ಅವರ ಮನೆಯಲ್ಲಿ ವಿಶ್ರಾಂತಿ ಪಡೆದು, ನಂತರ  ಹೊರಟು ಹೋಗುವೆನೆಂದು   ಕೇಳಿಕೊಂಡನು . ಜುಗ್ಗನಿಗೆ ಅತಿಥಿ ಸತ್ಕಾರ ಮಾಡುವ ಮನಸ್ಸಿರಲಿಲ್ಲ . 
ಅತಿಥಿ  ಕೈ ಕಾಲು ತೊಳೆಯಲೆಂದು  ಬಾವಿ ಕಟ್ಟೆಯ  ಕಡೆ ನಡೆದೊಡನೆ , ಜುಗ್ಗ ಜುಗ್ಗಿ ಇಬ್ಬರೂ ಒಂದು ನಾಟಕವನ್ನಾಡಿ ಆತನನ್ನು ಮನೆಯಿಂದ  ಹೊರಗಟ್ಟಲು ಒಂದು  ಉಪಾಯವನ್ನ ಮಾಡಿದರು . 
ಅದರ ಪ್ರಕಾರ ಜುಗ್ಗ ಜುಗ್ಗಿಯನ್ನು ಜೋರಾಗಿ ಬಡಿಯುವಂತೆ ನಟಿಸ ಬೇಕು ! ಜುಗ್ಗಿ ಗಟ್ಟಿಯಾಗಿ ಕೂಗಿ ಅಳ ಬೇಕು ! 
ಅತಿಥಿ ಚೆನ್ನಾಗಿ ಸ್ನಾನ ಮಾಡಿ ಶುಭ್ರವಾಗಿ  ಒಳಗೆ ಬಂದದ್ದೆ ತಡ ! ಜುಗ್ಗ ಜುಗ್ಗಿಯರ ನಾಟಕ ಶುರುವಾಯಿತು !
ಜುಗ್ಗ ಬಲವಾಗಿ ಹೊಡೆಯುವ ನಾಟಕ ಶುರು ಮಾಡಲು ಜುಗ್ಗಿ ನೋವಿನಿಂದ ಗೊಳೋ ಎಂದು  ಅಳುವ ನಾಟಕ ಮಾಡಿದಳು.  
ಇದನ್ನು ಕಂಡ ಅತಿಥಿ  ಹೆದರಿ ಕೂಡಲೇ ಕಣ್ಮರೆಯಾದನು . 
ಊಟದ ವೇಳೆ ಜುಗ್ಗ ಜುಗ್ಗಿ ಇಬ್ಬರೂ ನಗುನಗುತ್ತ ಒಬ್ಬರನ್ನೊಬ್ಬರು ಅಭಿನಂದಿಸುತ್ತ ಊಟಕ್ಕೆ ತೊಡಗಿದರು . 
"  ನೋಡು !  ನಾನು ಅದೆಷ್ಟು ಚಾತುರ್ಯದಿಂದ ಹೊಡೆದೆ ನಿನಗೆ ನೋವಾಗದಂತೆ  !" ಎಂದು ಕೊಚ್ಚಿಕೊಂಡ ಜುಗ್ಗ . 
" ನಾನು ಅದೆಷ್ಟು ಅದ್ಭುತವಾಗಿ ರೋದಿಸಿದೆ ನೋಡು , ಎಡೆಬಿಡದಂತೆ  !" ಎನ್ನುತ್ತ ಕಿಸಿಕಿಸಿ ನಕ್ಕಳು  ಜುಗ್ಗಿ . 
"ನಾನು ಅದೆಷ್ಟು ಜಾಣತನದಿಂದ  ಬಚ್ಚಿಟ್ಟುಕೊಂಡಿದ್ದೆ ನೋಡಿ ಹೊರಟು ಹೋಗದಂತೆ  !" ಎನ್ನುತ್ತ ಅಟ್ಟದಿಂದ ಜಿಗಿದ  ಮೊಂಡನಾದ  ಅತಿಥಿ !
ಜುಗ್ಗ ಜುಗ್ಗಿಯರ ಮಾತನ್ನು ಕದ್ದು  ಕೇಳಿಸಿಕೊಂಡಿದ್ದ  ಅತಿಥಿ, ಅವರುಗಳ ಹೊಲಸು ತಂತ್ರವನ್ನು ಮಟ್ಟ ಹಾಕುವುದಕ್ಕಾಗಿ  ಅಲ್ಲೇ ಉಳಿದುಕೊಂಡಿದ್ದ ! 
ಜುಗ್ಗ ಮತ್ತು ಜುಗ್ಗಿಗೆ ಇನ್ನೇನೂ ಮಾತನಾಡಲು ಆಗಲಿಲ್ಲ ! ತಮ್ಮ ಊಟವನ್ನು ಅತಿಥಿಯೊಂದಿಗೆ ಹಂಚಿಕೊಳ್ಳದೆ ಬೇರೆ ವಿಧಿಯೇ  ಇರಲಿಲ್ಲ !

" ಹೈಯೋ ! ಹೈಯೋ ! ಒಳ್ಳೆ ಜುಗ್ಗ ! ಒಳ್ಳೆ ಜುಗ್ಗಿ! ಒಳ್ಳೆ ಅತಿಥಿ !" ಎಂದು ಹೊಟ್ಟೆ ಹಿಡಿದುಕೊಂಡು ನಕ್ಕರು ಪುಟ್ಟಿ ಮತ್ತು ಪುಟ್ಟಣ್ಣ . ಪಾಪು ತನಗೂ ಏನೋ  ಅರ್ಥವಾದಂತೆ ಕಿಲ ಕಿಲ ನಕ್ಕಿತು . 

Friday, July 4, 2014

Kilaadi Huduga Hunasehuli / ಕಿಲಾಡಿ ಹುಡುಗ ಹುಣಸೇಹುಳಿ

ಕಿಲಾಡಿ ಹುಡುಗ ಹುಣಸೇಹುಳಿ
"ನಿಮ್ ಫುಟ್ ಬಾಲ್ ಪ್ರಾಕ್ಟಿಸ್ ಎಲ್ಲ  ಎಷ್ಟರಮಟ್ಟಿಗಿದೆ ಪುಟ್ಟಣ್ಣ  ?" 
ಅಭ್ಯಾಸ ಮುಗಿಸಿ ಆಗತಾನೆ ಮೈದಾನದಿಂದ ಹಿಂದಿರುಗಿದ್ದ   ಪುಟ್ಟಣ್ಣ  ಉಸ್ಸೆಂದು ತಾತನ ಬಳಿ ಕುಳಿತ . 
"ಸಕ್ಕತ್ತಾಗಿತ್ತು ತಾತ ! ಆದ್ರೆ ಪಾಪ, ಅಕ್ಕಿಮೂಟೆ ಮಾತ್ರ ಇನ್ನೂ ಸ್ವಲ್ಪ ವೇಗ್ವಾಗಿ  ಓಡಿದ್ರೆ ಚೆನ್ನಾಗಿರ್ತಿತ್ತು . "
"ಅಕ್ಕಿಮೂಟೆ ಅಂತೆಲ್ಲ ಹೆಸರಿಡ್ತಾರೆಯೇ  ?" ಎಂದಳು ಪುಟ್ಟಿ . 
"ಅವ್ನು  ದಪ್ಪಾಂತ ಎಲ್ರೂ ಹಾಗೆ ಕರೀತಾರೆ ! " 
"ಹುಣಸೇಹುಳಿ ಅಂತ್ಲೂ ಕೂಡ ಹೆಸರಿಡ್ತಾರೆ  ! ಬೇಕಾದ್ರೆ ನಿಮ್ಮಜ್ಜೀನ ಕೇಳು !" ಎಂದರು  ತಾತ . 
"ಹುಣಸೇಹುಳಿ ? ಅಂದ್ರೆ ಕಥೆ ! ಹೇ ! ಹೇಳಜ್ಜಿ !" ಪುಟ್ಟಿ ಪುಟ್ಟಣ್ಣ ಇಬ್ಬರೂ ಒಟ್ಟಿಗೆ ಕೂಗಿದರು .
"ಒಳ್ಳೆ ಕಲಹ ಮಾಡ್ತೀರಲ್ಲ ಮಾರಾಯ ನೀವು !" ಎಂದು ಹುಸಿ ಮುನಿಸಿನಿಂದ ತಾತನನ್ನು ರೇಗಿದಳು ಅಜ್ಜಿ . 
"ನಾಳೆ ಹೇಗೂ ಭಾನುವಾರ ! ಇವತು ಪಾಠ ಇಲ್ಲ ಏನಿಲ್ಲ .  ಕಥೆ ಹೇಳಜ್ಜಿ ."
"ಮೊದ್ಲು ಎಲ್ರೂ ಕೈಕಾಲ್ ತೊಳ್ಕೊಂಡು ತಿಂಡಿ ತಿನ್ನಿ . ಆಮೇಲೆ ಕಥೆ." ಬಿಸಿ ಬಿಸಿ ತಿಂಡಿ ತಟ್ಟೆಗೆ ಹಾಕುತ್ತ ಹೇಳಿದಳು  ಅಜ್ಜಿ . 
ತಿಂಡಿಯ ಜೊತೆಗೆ ಕಥೆಯೂ ಶುರುವಾಯಿತು . 


ಒಂದಾನೊಂದು ಕಾಲದಲ್ಲಿ ಬಲು ಚತುರನಾದ ಹುಡುಗನೊಬ್ಬನಿದ್ದನು . ಅವನು ಕಡು ಬಡವನಾಗಿಯೂ ಇದ್ದನು .
ಆತನ ಬಡ ತಾಯಿ ಹೊಟ್ಟೆ ಪಾಡಿಗಾಗಿ , ಕಾಡಿಗೆ ಹೋಗಿ ಕಟ್ಟಿಗೆ ಮತ್ತು ಹುಣಸೆ ಹಣ್ಣುಗಳನ್ನು ಸಂಗ್ರಹಿಸಿ ತಂದು , ಅವನ್ನು ಹಳ್ಳಿಯವರಿಗೆ ಮಾರುತ್ತಿದ್ದಳು .
ಹಳ್ಳಿಯ ಜನರೆಲ್ಲ ಹುಡುಗನನ್ನು 'ಹುಣಸೇಹುಳಿ , ಹುಣಸಸೇಹುಳಿ ' ಎಂದೇ ಕರೆಯುತ್ತಿದ್ದರು .


ಒಮ್ಮೆ ಹುಣಸೇಹುಳಿ  ಅವನ ತಾಯನ್ನು ಕುರಿತು ಹೇಳಿದ : "ಅಮ್ಮ ! ನಾನು ಸಾಕಷ್ಟು ದೊಡ್ಡವನಾಗಿದ್ದೇನೆ . ಹೊರ ಪ್ರಪಂಚವನ್ನ  ನೋಡಿಕೊಂಡು ಹಾಗೆಯೇ   ನನ್ನ ಅದೃಷ್ಟವನ್ನೂ  ರೂಪಿಸಿಕೊಂಡು ಬರಲು  ಬಯಸುತ್ತೇನೆ ."
"ಹೌದು ಮಗನೆ ! ನೀನು ಸಾಕಷ್ಟು ದೊಡ್ಡವನಾಗಿದ್ದೀಯ . ನೀನು  ಯಾವ ಕಸುಬನ್ನು ಮಾಡ ಬಲ್ಲೆ ? ನಿನ್ನನ್ನು ಶಾಲೆಗೆ ಕಳಿಸಲೂ ನನ್ನಿಂದ  ಸಾಧ್ಯವಾಗಲಿಲ್ಲವೇ !"
"ಶಂಕಿಸ  ಬೇಡ ಅಮ್ಮ . ನಾನು ಕ್ಷೇಮವಾಗಿಯೇ ಇರುತ್ತೇನೆ . ನನಗೆ ಎರಡೇ ಎರಡು ಕಾಸನ್ನು ಮಾತ್ರ  ಕೊಡು . ನಾನು ಹೊರಡುತ್ತೇನೆ ."
"ನನ್ನ ಬಳಿ ಕಾಸಿಲ್ಲ ಮಗು . ಮೌಲ್ಯವುಳ್ಳ ಇನ್ಯಾವ ವಸ್ತುವೂ ಕೂಡ ಇಲ್ಲ.ಇಗೋ ! ಈ ಚಟಾಕು ಮಾತ್ರ ಉಳಿದಿದೆ . " ಎನ್ನುತ್ತ ಚಟಾಕನ್ನು ತೋರಿಸಿದಳು .
"ಸರಿ ! ಆ ಚಟಾಕನ್ನೇ  ಕೊಡು . ಉಪಯೋಗಕ್ಕೆ ಬಂದೀತು ." ಎಂದ ಹುಣಸೇಹುಳಿ ಚಟಾಕನ್ನು ತನ್ನ ಒಂದು ಜೊತೆ ಉಡುಗೆಯ ಜೊತೆ ಸುರುಳಿ ಸುತ್ತಿಕೊಂಡು ಹೊರಟೇ ಬಿಟ್ಟನು .


ಹುಣಸೇಹುಳಿ ಸಮೀಪದ ಊರನ್ನು ಕುರಿತು ನಡೆದುಕೊಂಡು  ಹೋಗಿ  , ಊರ ಎಲ್ಲೆಯಲ್ಲಿ ನಡೆಯಿತ್ತಿದ್ದ ಸಂತೆಯನ್ನು  ಸೇರಿದನು . ಅನೇಕ ವ್ಯಾಪಾರಿಗಳು ತಮ್ಮ ತಮ್ಮ  ಅಂಗಡಿಗಳನ್ನು ಹರಡಿದ್ದರು. ಸುತ್ತಮುತ್ತಲಿನ ಊರ ಜನರೆಲ್ಲ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಳ್ಳಲು ಗಿಜಿ ಗಿಜಿ ಕೂಡಿದ್ದರು  .
ತಾಳೆ ಮರದ ತಟ್ಟಿಯ ನೆರಳಿನಲ್ಲಿ  ಮಜ್ಜಿಗೆ ಮಾರುತ್ತಿದ್ದ ಒಬ್ಬಳು ಮುದುಕಿಯನ್ನು  ಕಂಡನು ಹುಣಸೇಹುಳಿ . ಬಾಯಾರಿಕೆಯಿಂದ ಬಳಲಿದ್ದವ ಅವಳ ಬಳಿ ಹೋಗಿ  ಬೇಡಿದನು. "ಆದರಣೀಯ ಅಜ್ಜಿಯೇ , ನನಗೊಂದು ಕುಡಿಕೆ ಮಜ್ಜಿಗೆ ಕೊಡುವೆಯಾ? ತುಂಬಾ ಬಾಯಾರಿಕೆಯಾಗಿದೆ , ಆದರೆ ನನ್ನ ಬಳಿ ಕಾಸಿಲ್ಲ."
ಮುದುಕಿ ಅವನನ್ನೊಮ್ಮೆ ಮೇಲಿಂದ ಕೆಳಗೆ ದಿಟ್ಟಿಸಿ ನೋಡಿದಳು . ನಂತರ ಹೇಳಿದಳು " ಸರಿ ! ಇಲ್ಲೇ ಕಾದಿರು . ಒಳಗೆ ಮಡಿಕೆಯಲ್ಲಿ ತಣ್ಣಗಿರುವ ಹೊಸ ಮಜ್ಜಿಗೆಯನ್ನು  ತಂದು ಕೊಡುವೆ . "


ಒಳಗೆ ಹೋದ ಮುದುಕಿ ಒಂದು ಸೌಟು ಹುಳಿ  ಮೊಸರನ್ನು ಒಂದು ಕುಡಿಕೆಗೆ ಹಾಕಿದಳು . ಕೊಳಕು ಪಾತ್ರೆಯಲ್ಲಿದ್ದ  ನೀರನ್ನು ಧಾರಾಳವಾಗಿ ಅದರಲ್ಲಿ ಮಿಶ್ರ ಮಾಡಿ ಕುಡಿಕೆಯನ್ನು ತುಂಬಿಸಿದಳು . ಜಿಪುಣಿಯಾದ ಮುದುಕಿಕೆ ತನ್ನ ಶ್ರೇಷ್ಠವಾದ  ಮಜ್ಜಿಗೆಯನ್ನು ಬಿಟ್ಟಿ ಕೊಡಲು ಇಷ್ಟವಿರಲಿಲ್ಲ .
ಇದನ್ನೆಲ್ಲಾ ತಟ್ಟಿಯ ಕಿಂಡಿಯ ಮೂಲಕ ನೋಡುತ್ತಿದ್ದನಾದರೂ ಹುಣಸೇಹುಳಿ ಏನೂ ಮಾತನಾಡಲಿಲ್ಲ  .
ಮುದುಕಿ ಮಜ್ಜಿಗೆಯ ಕುಡಿಕೆಯನ್ನು ತಂದು ಕೊಟ್ಟಾಗ " ಧನ್ಯವಾದಗಳು ಅಜ್ಜಿ . ಒಳ್ಳೆಯ ಮನಸ್ಸು ನಿನ್ನದು ."ಎಂದನು ! ನಂತರ ತನ್ನ ಮೂಟೆ ಬಿಚ್ಚಿ ಚಟಾಕನ್ನು ಹೊರ ತೆಗೆದು ಅದನ್ನು ತನ್ನ ಕಿವಿಯಲ್ಲಿಟ್ಟುಕೊಂಡನು .
" ಅದೇನು ಮಾಡುತ್ತಿರುವೆ ?" ಎಂದು ಆಶ್ಚರ್ಯದಿಂದ ಪ್ರಶ್ನಿಸಿದಳು ಮುದುಕಿ .
" ಶ್!!! " ಮುದುಕಿಯನ್ನು ಸುಮ್ಮನಿರಲು ಹೇಳಿ  ಚಟಾಕನ್ನು ಕುರಿತು  ಮಾತನಾಡಿದನು . " ಛೆ ಛೆ ! ನೀನು ತಪ್ಪು ತಿಳಿದಿರುವೆ."
ನಂತರ ಚಟಾಕನ್ನು ಬದಿಗಿಟ್ಟು ಆನಂದದಿಂದ ಬರಿ ನೀರಾಗಿದ್ದ  ಹುಳಿ ಮಜ್ಜಿಗೆಯನ್ನು ಸವಿದನು .
ಕೋಪಗೊಂಡವನಂತೆ ಮುಖ ಸಿಂಡರಿಸಿಕೊಂಡು ಚಟಾಕನ್ನು ಎತ್ತಿ  ಕುಲುಕಿದನು .  "ಸುಳ್ಳು ಹೇಳುತ್ತಿರುವೆಯಾ ? ಇದು ಅಮೃತದಂತಿದೆ  !" ಎಂದನು .


 ಮುದುಕಿಗೆ ಬಹಳ ಕುತೂಹಲವುಂಟಾಯಿತು. " ಇದೇನು? ಚಟಾಕಿನೊಂದಿಗೆ  ಮಾತನಾಡುತ್ತಿರುವೆ?" ಎಂದಳು. ''ಇದು ಸಾಮಾನ್ಯವಾದ ಚಟಾಕಲ್ಲ ಅಜ್ಜಿ ! ಇದೊಂದು ಸತ್ಯ ಸೂಚಿ! ನನ್ನ ಮಂತ್ರವಾದಿಮಾವ ಇದನ್ನು ನನಗೆ ಕೊಟ್ಟನು . ಇದು  ಎಲ್ಲವನ್ನೂ ನೋಡ ಬಲ್ಲದ್ದು. ಸತ್ಯವನ್ನೇ ನುಡಿಯ ಬಲ್ಲದ್ದು. ಆದರೆ  ಏಕೋ ಏನೋ ನೆನ್ನೆಯಿಂದ ಹೊಲಸು ಹೊಲಸಾಗಿ ಮಾತನಾಡುತ್ತಿದೆ. "
" ಸತ್ಯ ಸೂಚಿಯೇ? ಇದೆಂತ ಮಾಯ!ಅದ್ಸರಿ! ಈಗ ಅದು ಏನು ಹೇಳಿತು ? 'ಸುಳ್ಳು ಹೇಳಿದೇ' ಎಂದು ಅದನ್ನ ಏಕೆ ಬೈಯುತ್ತಿರುವೆ?"

" ಅದಕ್ಕೆ ವಯಸ್ಸಾಗಿ  ಅರಳು ಮರಳಾಗಿ ಬಿಟ್ಟಿದೆ ಅನ್ನಿಸುತ್ತದೆ . ಅದಕ್ಕೆ, ಏನೋ ಅರ್ಥವಿಲ್ಲದ ಮಾತನ್ನಾಡುತ್ತಿದೆ  . ಇದೀಗ ನೀನು ಕೊಟ್ಟ ಅಮೃತದಂತ ಮಜ್ಜಿಗೆಯನ್ನು ನಾನು  ಕುಡಿಯುತ್ತಿದ್ದರೆ , ಅದರಲ್ಲಿ ಹಳೆಯ ಹೊಲಸು ಮೊಸರು ಮತ್ತು  ಕೊಳಕು ನೀರು  ಇರುವುದಾಗಿ  ಹೇಳುತ್ತಿದೆ ! ನಿನ್ನನ್ನು ಜಿಪುಣಿ ಎನ್ನುತ್ತಿದೆ . ನಿನ್ನ ಬಗ್ಗೆ ಹೀಗೆ ಹೇಳಲು ಅದಕ್ಕೆ ಎಷ್ಟು ಧೈರ್ಯ !"
ಮುದುಕಿ ಅವಾಕ್ಕಾದಳು. ಚಟಾಕು ಈ ಹುಡುಗನಿಗೆ ನಿಜವನ್ನೇ ನುಡಿದಿದೆ !  'ಅದೀಗ ನನ್ನದ್ದಾಗಲೇ ಬೇಕು !' ಎಂದುಕೊಂಡಳು ಮುದುಕಿ .
" ಮಗು , ನಿನಗೆ ಚಟಾಕಿನ ಮೇಲೆ ಭಾರಿ ಕೊಪವಿರುವ ಹಾಗಿದೆ  . ಅದನ್ನು ನನಗೆ ಕೊಟ್ಟುಬಿಡುವೆಯಾ ?"


"ನನಗಿರುವುದು ಇದೊಂದೇ ಆಸ್ತಿ . ಆದರೆ ಇದನ್ನು  ಸಂತೋಷದಿಂದ ನಿನಗೆ ಕೊಡುವೆ . ಪ್ರತಿಯಾಗಿ ನನಗೇನು ಕೊಡುವೆ ?''
ಮುದುಕಿ ತನ್ನ ಸೊಂಟದಲ್ಲಿ ಸಿಕ್ಕಿಸಿದ್ದ ಕಾಸಿನ ಚೀಲ ತೆಗೆದಳು .
" ಇಂದಿನ ನನ್ನ ಸಂತೆಯ ಸಂಪಾದನೆ ಎಲ್ಲ ಇದರಲ್ಲಿದೆ.  ಇದನ್ನು ತೆಗೆದುಕೊ . ಸತ್ಯ ಸೂಚಿಯನ್ನು ನನಗೆ ಕೊಡು . "
ಹುಣಸೇಹುಳಿ  ಕಾಸಿನ ಚೀಲವನ್ನು ತೆಗೆದುಕೊಂಡು ಚಟಾಕನ್ನು ಮುದುಕಿಗೆ ಕೊಟ್ಟನು .  ನಂತರ ತನ್ನ ಬಟ್ಟೆ ಮೂಟೆಯನ್ನು ತೆಗೆದುಕೊಂಡು ಹೊರಟು ಹೋದನು .
ನಂತರ ಮುದುಕಿ ಚಟಾಕನ್ನು ಒಳಗೆ ತೆಗೆದು ಕೊಂಡು  ಹೋಗಿ ಅದರೊಳಗೆ ಪಿಸುಗುಟ್ಟಿದಳು .
" ಸತ್ಯ ಸೂಚಿಯೆ , ಬೇಗನೆ ಹೇಳು ! ಪಕ್ಕದ ಅಂಗಡಿಯವನ ಬಳಿ ಎಷ್ಟು ಹಣವಿದೆ? ಅದನ್ನು ಅವನು ಎಲ್ಲಿ ಇಟ್ಟಿರುವನು  ?" ಪಕ್ಕದ ಅಂಗಡಿಯ ಉಪ್ಪಿನ ವ್ಯಾಪಾರಿಯ ಸಂಪಾದನೆಯನ್ನೆಲ್ಲ ದೋಚಿಕೊಳ್ಳುವ ದುರಾಸೆ ಮುದುಕಿಗೆ !
ಚಟಾಕು ಮೌನವಾಗಿತ್ತು .
ಮುದುಕಿ ಅದನ್ನು  ಕಾಡಿದಳು, ಬೇಡಿದಳು , ಕುಲುಕಿದಳು. ಕಿವಿಯ ಸಮೀಪವಿಟ್ಟುಕೊಂಡು  ಗಮನದಿಂದ ಆಲಿಸಿದಳು  . ಆದರೂ ಸದ್ದೇ ಇಲ್ಲ !
" ಅಯ್ಯೋ ಮೋಸ ಹೋದೆ !ಇದು ಸತ್ಯ ಸೂಚಿಯೂ  ಅಲ್ಲ ಏನಿಲ್ಲ , ಬರಿ ಚಟಾಕು!" ಎಂದು ಎದೆಬಡಿದು ಕೊಂಡು  ಅರಚಾಡಿದಳು . ಅವಳ ದುರಾಸೆಗೆ ತಕ್ಕ ಶಾಸ್ತಿಯಾಯಿತು !


ಹುಣಸೇಹುಳಿ ಊರೊಳಗೆ ಹೋಗಿ  ಎರಡು ಕಾಸು ಕೊಟ್ಟು   ಹೊಟ್ಟೆ ತುಂಬ ಉಂಡನು . ನಂತರ ಅರಳಿ ಕಟ್ಟೆಯ ಮೇಲೆ ವಿಶ್ರಮಿಸುತ್ತಿದ್ದನು . ಬಡಕಲಾದ ಒಂದು ಒಣಕಲು ಮೇಕೆಯನ್ನು ಎಳೆದುಕೊಂಡು ಸಂತೆಯಿಂದ ಹಿಂದಿರುಗುತ್ತಿದ್ದ ಓರ್ವ ವ್ಯಕ್ತಿಯನ್ನು ಕಂಡನು .
" ಇದೇನಣ್ಣಾ ! ಸಂತೆಯಿಂದ ಇದನ್ನೇ ಕೊಂಡುಕೊಂಡೆಯಾ ?''ಎಂದು ಪ್ರಶ್ನಿಸಿದ ಹುಣಸೇಹುಳಿ .
" ಛೆ ಛೆ ! ಹಾಗೇನಿಲ್ಲ  ! ನಾನು ಹತ್ತು ಮೇಕೆಗಳನ್ನು ಸಂತೆಯಲ್ಲಿ ಮಾರಲು ಕೊಂಡೊಯ್ದಿದ್ದೆ . ಒಂಬತ್ತು ಮೇಕೆಗಳನ್ನ ಒಳ್ಳೆ ಬೆಲೆಗೆ ಮಾರಿದೆ . ಇದನ್ನು ಮಾತ್ರ ಕೊಳ್ಳುವವರಿಲ್ಲ ."
" ನಾನು ಇದನ್ನು ಕೊಂಡುಕೊಳ್ಳುತ್ತೇನೆ . ಇಗೋ ತೆಗೆದುಕೋ ಹತ್ತು ಕಾಸುಗಳನ್ನ." ಎಂದ ಹುಣಸೇಹುಳಿ .
" ಈ ನಾಲಾಯಕ್ ಮೇಕೆಗಾಗಿ ಏಕೆ  ನಿನ್ನ ಕಾಸು ಹಾಳು  ಮಾಡಿಕೊಳ್ಳುವೆ  ?"
" ಅದರ ಮುಖ ನನಗೆ ತುಂಬಾ ಮೆಚ್ಚುಗೆಯಾಯಿತು . ಅದಕ್ಕೇ ."
ಹುಡುಗ ಎಲ್ಲೋ ಸ್ವಲ್ಪ ಹುಚ್ಚನಿರ ಬೇಕು ಎಂದುಕೊಂಡರೂ , ಸಂತೋಷದಿಂದ ತನ್ನ ಮೇಕೆಯನ್ನು ಅವನಿಗೆ ಮಾರಿ ಹೋದ ಆ ವ್ಯಕ್ತಿ .
ಹುಣಸೇಹುಳಿ ಹೆಮ್ಮೆಯಿಂದ ಮೇಕೆಯನ್ನು ಕರೆದುಕೊಂಡು ಅಲ್ಲಿಂದ ಹೊರಟನು .


ಶ್ರೀಮಂತರು ವಾಸವಾಗಿದ್ದ   ಪೇಟೆಯನ್ನು ತಲುಪಿದ ಹುಣಸೇಹುಳಿ ಮೇಕೆಯನ್ನು ಒಂದು ಕಡೆ  ಕೂರಿಸಿದನು  . ತಂಗಾಳಿಯನ್ನು ಅನುಭವಿಸುತ್ತ ಅಡ್ಡಾಡುತ್ತಿದ್ದರು ಜನರು .
ಹುಣಸೇಹುಳಿ ಮಲಗಿದ್ದ  ಮೇಕೆಯ ಹಿಂಬಾಗದಲ್ಲಿ ಮೂರು ಕಾಸುಗಳನ್ನು ಮೆಲ್ಲನೆ ಇರಿಸಿದನು  . ನಂತರ ಮೇಕೆಯನ್ನು ಕುರಿತು ಗಟ್ಟಿಯಾಗಿ ಕೋಪದಿಂದ ಕೂಗಾಡಿ , ಅದನ್ನು ಕಡ್ಡಿಯಿಂದ ಹೊಡೆಯುವವನಂತೆ  ನಟಿಸಿದನು .
ಜನರೆಲ್ಲಾ  ಗಾಬರಿಗೊಂಡು ಏನೋ ಎಂತೋ ಎಂದು ಸುತ್ತಲೂ ಕೂಡಿದರು .   ಶ್ರೀಮಂತನಾದ ಬಟ್ಟೆ ವ್ಯಾಪಾರಿ ಓರ್ವ , " ಏ ದುಷ್ಟ ! ಏನೋ ನಿನ್ನ ಸಮಸ್ಯೆ ?ಯಾಕೋ ಆ ಪಾಪದ ಮೇಕೆಯನ್ನು ಹೊಡೆಯುತ್ತಿರುವೆ ?" ಎಂದು ಹುಣಸೇಹುಳಿಯ ಕೈಯಿಂದ ಕಡ್ಡಿಯನ್ನು ಕಸಿದುಕೊಂಡು  ಗದರಿಸಿದನು .
" ಈ ಮೊಂಡು ಮೇಕೆಯೇ ನನ್ನ ಸಮಸ್ಯೆ !" ಎಂದು ಕೋಪದಿಂದ ಕೂಗಿದ ಹುಣಸೇಹುಳಿ . " ಈ ಧಾನ್ಯಗಳನ್ನ ತಿನ್ನದೇ ಹಠ ಮಾಡುತ್ತಿದೆ ." ಎನ್ನುತ್ತ ತನ್ನ ಕಯ್ಯಲ್ಲಿದ್ದ ಸಣ್ಣ ಕಪ್ಪು ಬಣ್ಣದ  ಧಾನ್ಯಗಳನ್ನು ತೋರಿಸಿದನು .
" ಥೂ ! ಕೊಳೆತು ಹೋದ ಹಾಗಿದೆ ! ಪಾಪ !ಅದನ್ನು ಹೇಗೆ ತಿನ್ನುತ್ತದೆ ಈ ಮೇಕೆ? ಹುಚ್ಚು ಹುಡುಗ !"
" ನನ್ನ ಬಳಿ ಇರುವುದು ಇಷ್ಟೇ . ನನ್ನ ಕಾಸೆಲ್ಲ  ಕಳವಾಗಿದೆ . ಇದಕ್ಕೆ ಬೇಕಾದ ರುಚಿ ರುಚಿಯಾದ ಪದಾರ್ಥಗಳನ್ನು ಕೊಡಿಸಲು  ನನ್ನಿಂದ ಸಾಧ್ಯವಿಲ್ಲ .  ನೋಡಿ ಸರಿಯಾಗಿ ತಿನ್ನದೇ ಎಷ್ಟು ಸಣಕಲಾಗಿ ಹೋಗಿದೆ . ಇದೇ  ಕಾರಣದಿಂದ ಕಾಸು ಹಾಕುವುದನ್ನೂ ನಿಲ್ಲಿಸಿಬಿಟ್ಟಿದೆ .''
" ಏನು ? ಕಾಸು ಹಾಕುತ್ತದೆಯೇ ?" ಎನ್ನುತ್ತಾ ಎಲ್ಲರೂ ಆಶ್ಚರ್ಯದಿಂದ ಮೇಕೆಯನ್ನು ದಿಟ್ಟಿಸಿ  ನೋಡಿದರು . ಮೇಕೆಯ ಹಿಂಬಾಗದಲ್ಲಿ ಮೂರು  ಕಾಸುಗಳು ಬಿದ್ದಿರುವುದನ್ನೂ ಕಂಡರು . " ಹಾ ! ನೋಡಿ ! ನೋಡಿ !ಬೆಳ್ಳಿ ಕಾಸುಗಳು !"
ಹುಣಸೇಹುಳಿ ಮೇಕೆಯ ಬಾಲವನ್ನೆತ್ತಿ ಹಿಡಿದು  ಮತ್ತೊಂದು ಕಾಸನ್ನು ತೆಗೆದು ತೋರಿಸಿದನು  . " ಹಮ್ !   ಬರಿ ನಾಲ್ಕು ಕಾಸುಗಳು ! ಅದೂ ಬರಿ ಬೆಳ್ಳಿ ಕಾಸುಗಳು ! " ಎಂದು ದುಃಖದಿಂದ  ನುಡಿದನು . " ಹಣ್ಣು ಹಂಪಲು, ಜೇನು , ಮೊಸರು, ಬಾದಾಮಿ   ಮುಂತಾದ ಪೌಷ್ಟಿಕ ಆಹಾರಗಳನ್ನ  ಸೇವಿಸುತ್ತಿದ್ದಾಗ ಚಿನ್ನದ ನಾಣ್ಯಗಳನ್ನೇ  ಹಾಕುತ್ತಿತ್ತು. ಬೆಳಿಗ್ಗೆ ಹತ್ತು , ಸಂಜೆ ಹತ್ತು ಚಿನ್ನದ ನಾಣ್ಯಗಳು !"

Saturday, June 14, 2014

Bidaa Monda Kodaa Bhanda / ಬಿಡಾ ಮೊಂಡ ಕೊಡಾ ಭಂಡ




ಬಿಡಾ ಮೊಂಡ ಕೊಡಾ ಭಂಡನ ಕಥೆ !

" ಬರಿ ಚಿತ್ರಗಳನ್ನ ಮಾತ್ರ ನೋಡ್ಕೊಡ್ತೀನಿ . ಕೊಡು ಅಣ್ಣ !"ಎಂದು ಕೇಳಿದಳು ಪುಟ್ಟಿ . 

" ತಡಿ , ಬೆತಾಳದ್ ಕಥೆ ಮಾತ್ರ ಓದ್ಕೊಡ್ತೀನಿ ." ಎಂದು ಹೊಸ 'ಚಂದಮಾಮ' ಪುಸ್ತಕವನ್ನ ಪುಟ್ಟಿಯ ಕೈಯಿಂದ ಕಿತ್ತು ಕೊಳ್ಳಲು ಯತ್ನಿಸಿದ  ಪುಟ್ಟಣ್ಣ ."

"ಈಗ್ಲೆ  ನೋಡ್ ಕೊಟ್ಟೆ ಇರು . " ಎಂದು ಪುಸ್ತಕವನ್ನ ಗಟ್ಟಿಯಾಗಿ ಹಿಡಿದುಕೊಂಡಳು ಪುಟ್ಟಿ . 

"ನಾನೂ ಕೂಡ್ಲೇ ಕೊಟ್ಬಿಡ್ತಿನಿ, ಕೊಡು  ." ಎನ್ನುತ್ತ ಪುಸ್ತಕವನ್ನು ತನ್ನ ಕಡೆ ಸೆಳೆದುಕೊಂಡ ಪುಟ್ಟಣ್ಣ .  

" ಕೊಡು  !" 

" ಬಿಡು  !"

ತರಕಾರಿ  ಕೊಂಡುಕೊಂಡು ಆಗತಾನೆ ಗೇಟನ್ನು ತೆರೆದುಕೊಂಡು ಒಳಗೆ ಬರುತ್ತಿದ್ದ ಅಜ್ಜಿಗೆ ಪುಟ್ಟಿ ಪುಟ್ಟಣ್ಣ ಕಾದಾಡುತ್ತಿದ್ದದ್ದು  ಕೇಳಿಸಿತು .

" ಏನ್ರಪ್ಪಾ ಇದು ? ನಿಮ್ ಜಗ್ಳ ಗೇಟ್ ವರ್ಗೆ ಕೇಳಿಸ್ತಿದೆ ! ಒಳ್ಳೆ ಬಿಡಾ ಮೊಂಡ  ಕೊಡಾ ಭಂಡನ  ಹಾಗೆ  ಆಡ್ತಿದ್ದೀರಿ  . " ಎನ್ನುತ್ತಾ ತರಕಾರಿ ತುಂಬಿದ ಬ್ಯಾಗ್ ಮೂಲೆಗಿಟ್ಟು   ಬಂದ  ಅಜ್ಜಿ ಆಕ್ಷೇಪಿಸಿದಳು . 

"ಹಾಯ್ ! ಅದ್ಯಾರಜ್ಜಿ ಬಿಡಾ ಮೊಂಡ  ಕೊಡಾ ಭಂಡ  ? " 'ಚಂದಮಾಮ' ವನ್ನು ಮರೆತು ಪ್ರಶ್ನಿಸಿದ ಪುಟ್ಟಣ್ಣ . 

" 'ಬಿಡಾ, ಬಿಡಾ'  ಅಂತ ತಡೆದ್ರೂ  ತನ್ನ ಕೆಲ್ಸಾನ  ಬಿಡ್ದೇ ಸಾಧ್ಸೋ  ಮೊಂಡ   " ಬಿಡಾ ಮೊಂಡ   ".  ''ಕೊಡಾ ಅಪ್ಪಾ, ಕೊಡಾ ಅಯ್ಯ " ಅಂತ  ಕಾಡಿ ಬೇಡಿದ್ರೂ ಯಾರ್ಗೂ ಮೂರು ಕಾಸು ಕೊಟ್ಟು ಸಹಾಯ ಮಾಡದ  ಭಂಡ  "ಕೊಡಾ ಭಂಡ  ". ತಾನು ಓದುತ್ತಿದ್ದ ದಿನ ಪತ್ರಿಕೆಯನ್ನು ಮುಚ್ಚಿಟ್ಟು ವಿವರ ನೀಡಿದರು ತಾತ . 

"ಅಜ್ಜಿ ! ಆ ಕಥೆ ಹೇಳಜ್ಜಿ ! " ಕೈಯಿಂದ 'ಚಂದಮಾಮ' ಜಾರಿ ಬೀಳುತ್ತಿದ್ದದ್ದನ್ನು ಗಮನಿಸದೆ ಅಜ್ಜಿಯನ್ನು ಬೇಡಿಕೊಂಡಳು ಪುಟ್ಟಿ  .  

ಒಂದು ಲೋಟ ನೀರನ್ನು  'ಗಟಗಟ' ಕುಡಿದು , ಹಜಾರದ ಕಂಬಕ್ಕೆ ಒರಗಿ ಕುಳಿತಳು ಅಜ್ಜಿ . ಮಕ್ಕಳಿಬ್ಬರೂ ಹೊಸ ಕಥೆಯ ನಿರೀಕ್ಷೆಯಲ್ಲಿ ಅವಳ  ಎದುರಲ್ಲಿ ಕುಳಿತರು . ಆಗತಾನೆ ಕಾಲೇಜಿನಿಂದ ಹಿಂದಿರುಗಿದ್ದ ಸರಸು ಅತ್ತೆ ತಿಂಡಿ ತಟ್ಟೆ ಹಿಡಿದು ಬಂದು ತಾನು ಅಲ್ಲೇ ಕುಳಿತಳು . 

ಶುರುವಾಯಿತು ಬಿಡಾ ಮೊಂಡ ಕೊಡಾ ಭಂಡನ ಕಥೆ .  


ಬಿಡಾ ಮೊಂಡ ಬಲು ದುಡಿಮೆಗಾರ . ಹಾಗಾಗಿ  ಆಗಿಂದಾಗ್ಯೆ ಹಣ ಸಾಲ ಮಾಡುವುದು ಅವನಿಗೆ ಅನಿವಾರ್ಯವಾಗಿದ್ದಿತು . ಕೊಡಾ ಭಂಡ ಹಳ್ಳಿಯ ಸಾಹುಕಾರ. ಹಾಗಾಗಿ ಹಣ ಸಹಾಯ ಬಯಸಿದವರೆಲ್ಲಾ ಅವನ ಬಳಿ   ಕೈ ಚಾಚಲೇ ಬೇಕಾಗಿರುತ್ತುತ್ತು . 

ಒಮ್ಮೆ ಬಿಡಾ ಮೊಂಡನಿಗೆ ಬೀಜಗಳನ್ನು ಕರೀದಿ ಮಾಡ  ಬೇಕಾಗಿತ್ತು  . ಅದಕ್ಕಾಗಿ  ಕೊಡಾ ಭಂಡನ ಬಳಿ  ಹೋಗಿ  ಸಾಲ ಕೇಳಿದನು . 

"ಸರಿ ! ನಿನಗೆ ಹಣ ಕೊಡುವೆನು . ಆದರೆ ಬಡ್ಡಿಯಾಗಿ ನಿನ್ನ ಬೆಳೆಯಲ್ಲಿ ಅರ್ಧಬಾಗವನ್ನು ನನಗೆ ಸಲ್ಲಿಸಬೇಕು ."

"ಇದು ಬಹಳ ದುಬಾರಿಯಾಯಿತು ."

" ಇಲ್ಲ , ಎಲ್ಲ  ಸರಿಯಾಗಿಯೇ  ಇದೆ   . ಹಣ ನನ್ನದ್ದಾದ್ದರಿಂದ ನನಗೆ ಸಲ್ಲ ಬೇಕಾದ ಭಾಗವನ್ನು ನಾನೇ ಆಯ್ಕೆ ಮಾಡಿಕೊಳ್ಳುವ ಹಕ್ಕು ನನಗಿದೆ . ಭೂಮಿಯ ಮೇಲ್ಬಾಗದಲ್ಲಿ ಬೆಳೆಯುವುದೆಲ್ಲ ನನಗೆ ಸೇರಿದ್ದು . ಕೆಳಗೆ ಬೆಳೆಯುವುದೆಲ್ಲ ನಿನ್ನದ್ದಾಗಲಿ. "ಬಿಡಾ ಮೊಂಡನಿಗೆ ಹಣವನ್ನು ಕೊಟ್ಟು ಧೃಡವಾಗಿ ನುಡಿದನು. 

 ದುಷ್ಟ ನಗೆ ಬೀರಿ ' ಹ ಹ ಹ ! ತರಕಾರಿ ಹಣ್ಣುಗಳು  ಭೂಮಿಯ ಮೇಲೆ ಬೆಳೆಯುತ್ತವೆ  . ಅವೆಲ್ಲ ನನಗೆ ಸೇರುತ್ತವೆ . ಕೇವಲ ಉಪಯೋಗವಿಲ್ಲದ ಬೇರುಗಳು  ಭೂಮಿಯ  ಕೆಳಗೆ  ಬೆಳೆಯುತ್ತವೆ . ಅವೆಲ್ಲ ಅವನಿಗೆ ಸೇರಲಿ . " ಎಂದುಕೊಂಡನು   


ಇದು ಅನ್ಯಾಯವೆನಿಸಿದರೂ ಬಿಡಾ ಮೊಂಡ ಹಣವನ್ನು ತೆಗೆದುಕೊಂಡನು . ತೋಟದುಪಕರಣಗಳನ್ನು ಕೊಂಡುಕೊಂಡು ತೋಟದಲ್ಲಿ ಚೆನ್ನಾಗಿ ದುಡಿದನು . ಕ್ರಮೇಣ ಕೊಯ್ಲನ್ನು ಮುಗಿಸಿದನು  . ನಂತರ ಕೊಡಾ ಭಂಡನ ಬಳಿ  ಹೋದನು . 

" ನೀನು ಹೇಳಿದಂತೆಯೇ ಭೂಮಿಯ ಕೆಳಗಿದ್ದ  ಬೆಳೆಯನ್ನು ನಾನು ತೆಗೆದುಕೊಂಡೆ. ಈಗ ನೀನು ಹೋಗಿ ಭೂಮಿಯ ಮೇಲೆ ಬೆಳೆದವನ್ನ ಸಂಗ್ರಹಿಸಿಕೋ ." ಎಂದನು . 

ಕೊಡಾ ಭಂಡ  ದುರಾಶೆಯಿಂದ ಬುಟ್ಟಿ  ಹಿಡಿದು ತೋಟಕ್ಕೆ ಓಡಿದನು . ಬಿಡಾ ಮೊಂಡ ಭೂಮಿಯ ಕೆಳಗಿದ್ದ ಶೇಂಗಾ ಬೆಳೆಯನ್ನು ಆಗಲೇ ಕೊಯ್ಲು  ಮಾಡಿದ್ದನು ಕಂಡನು . ಒಣಗಿದ್ದ ಎಲೆಗಳೂ ಕಡ್ಡಿಗಳೂ ಮಾತ್ರ ತನಗಾಗಿ ಉಳಿದಿರುವುದನ್ನು ಕಂಡನು . 

ಅವನೇನನ್ನುತಾನೆ ಹೇಳ ಬಲ್ಲ  ? ನಾಚಿಕೆಯಿಂದ ನಾಲಿಗೆ ಕಚ್ಚಿಕೊಂಡು ಮನೆಗೆ ಮರಳಿದನು .  


ಮುಂದಿನ ಋತು ಪ್ರಾರಂಭವಾಯಿತು . ಮುಂದಿನ ಬೆಳೆಗಾಗಿ  ಬಿಡಾ ಮೊಂಡ ಮತ್ತೆ ಸಾಲ ತೆಗೆದುಕೊಳ್ಳಲು ಕೊಡಾ ಭಂಡನ ಬಳಿ ಹೋದನು . ಕೊಡಾ ಭಂಡ ಈ ಬಾರಿ ಬಹಳ ಎಚ್ಚರಿಕೆಯಿಂದಿದ್ದನು . ಹಣಕೊಡಲು ಒಪ್ಪಿದನು . ಬೆಳೆಯಲ್ಲಿ ಅರ್ಧ ಪಾಲನ್ನು ಬಡ್ಡಿಯಾಗಿ ಕೊಡ ಬೇಕೆಂದು ಹಠದಿಂದ ನುಡಿದನು .   "ಜ್ಞಾಪಕವಿರಲಿ ! ಭೂಮಿಯ ಕೆಳಗೆ ಬೆಳೆಯುವುದೆಲ್ಲ ನನ್ನದಾಗ ಬೇಕು . ಮೇಲೆ ಬೆಳೆಯ ತಕ್ಕದ್ದೆಲ್ಲ ನಿನ್ನದಾಗಲಿ . "

ಬಿಡಾ ಮೊಂಡ ಎಂದಿನಂತೆ ಚೆನ್ನಾಗಿ ದುಡಿದನು . ಕ್ರಮೇಣ ಒಳ್ಳೆ ಫಸಲನ್ನು  ತೆಗೆದನು . ನಂತರ ಕೊಡಾ ಭಂಡನ ಬಳಿ ಹೋಗಿ " ಭೂಮಿಯ ಮೇಲೆ ಬೆಳೆದವನ್ನ ನಾನು ತೆಗೆದುಕೊಂಡೆ . ನಿನ್ನ ಮಾತಿನಂತೆ ಕೆಳಗೆ ಬೆಳೆದವನ್ನ ನಿನಗಾಗಿ ಬಿಟ್ಟಿರುವೆ . " ಎಂದನು . 

ಕೊಡಾ ಭಂಡ ಕಡ್ಲೆಕಾಯಿಯ ನಿರೀಕ್ಷೆಯಲ್ಲಿ ದೊಡ್ಡ ಚೀಲವನ್ನು ಹಿಡಿದು ಓಡಿದನು . ಆದರೆ ಬಿಡಾ ಮೊಂಡನೋ ಹೆಸರು ಕಾಳನ್ನು ಪಯಿರು ಮಾಡಿ , ಎಲ್ಲವನ್ನೂ ತಾನು ತೆಗೆದುಕೊಂಡು , ಕೊಡಾ ಭಂಡನಿಗಾಗಿ ಬರಿ ಬೇರುಗಳನ್ನು ಬಿಟ್ಟಿದ್ದನು . ಕೊಡಾ ಭಂಡ ಏನನ್ನುತಾನೇ ಹೇಳ ಬಲ್ಲ ? ನಾಲಿಗೆ ಕಚ್ಚಿ ಕೊಂಡು ನಾಚಿಕೆಯಿಂದ ಮನೆಗೆ ಮರಳಿದನು . 


ಮತ್ತೆ ಋತುಮಾನ ಬದಲಾಯಿತು . ಎಂದಿನಂತೆ ಬಿಡಾ ಮೊಂಡ ಸಾಲಕ್ಕಾಗಿ ಕೊಡಾ ಭಂಡನ ಬಳಿ ತೆರಳಿದನು . ಕೊಡಾ ಭಂಡ ಮತ್ತಷ್ಟು ಎಚ್ಚರ ವಹಿಸಿದ . 

" ನೀನು ಯಾವ ಬೆಳೆ ಬೆಳೆಯಲು ನಿರ್ಧರಿಸಿರುವೆ ಎಂಬುದನ್ನು ಮೊದಲು ಹೇಳು. " 

" ನಾನು ಏನನ್ನೂ ಬೆಳೆಯುತ್ತಿಲ್ಲ . ಒಂದು ಆಕಳನ್ನು ಕೊಂಡುಕೋಳ್ಳಲಿದ್ದೇನೆ ."

" ಹೇ ಹೇ ." ಮನದಲ್ಲಿ ದುರಾಲೋಚನೆ ಮಾಡುತ್ತಾ ಮುಸಿ ನಕ್ಕನು ಕೊಡಾ ಭಂಡ . 

" ಸರಿ ! ಆಕಳನ್ನು ಕೊಂಡುಕೊಳ್ಳಲು ನಾನು ಸಾಲ ಕೊಡುವೆ . ನೀನು ಅದನ್ನು ಮೇಯಿಸಿ ಚೆನ್ನಾಗಿ ಆರೈಕೆ ಮಾಡು  . ಆದರೆ ಅದರ ಅರ್ಧ ಬಾಗ ಬಡ್ಡಿಯಾಗಿ  ನನಗೆ ಸೇರಬೇಕು . ಹಣ ನನ್ನದ್ದಾದ್ದರಿಂದ ಆಕಳ ಹಿಂಬಾಗವನ್ನು ನನ್ನದೆಂದು ಆಯ್ಕೆ ಮಾಡಿದ್ದೇನೆ ." . 

ಹಾಗಾಗಿ ಕೊಡಾ ಭಂಡ ಹಣ ಕೊಡಲು, ಬಿಡಾ ಮೊಂಡ ಒಂದು ಶ್ರೇಷ್ಠವಾದ ಆಕಳನ್ನು ಕೊಂಡುಕೊಂಡನು . ಅದನ್ನು ಉತ್ತಮ ರೀತಿಯಲ್ಲಿ ಸಾಕಿ ಸಲಹಿದನು. ಅದು ದಷ್ಟು ಪುಷ್ಟಾಗುವವರೆಗೆ ಕಾಡಲ್ಲಿ ಮೇವಿಗೆ ಕರೆದೊಯ್ದುನು . ನಂತರ ಹಾಲಿನ ವ್ಯಾಪಾರ ಪ್ರಾರಂಭಿಸಲು ನಿರ್ಧರಿಸಿದನು . ಇದನ್ನರಿತ ಕೊಡಾ ಭಂಡ, ಆಕಳ ಹಿಂಬಾಗ ತನಗೆ ಸೇರಿದ ಕಾರಣ, ಹಾಲು  ಕರೆಯುವ ಹಕ್ಕು ತನ್ನದ್ದು ಎಂದು ವಾದ ಮಾಡಿದನು . 


ಬಿಡಾ ಮೊಂಡ ಮೌನವಾಗಿ ಕೊಡಾ ಭಂಡನಿಗೆ  ಹಾಲು ಕರೆಯವ ಅಧಿಕಾರವನ್ನು ಬಿಟ್ಟು ಕೊಟ್ಟನು . ಕೊಡಾ ಭಂಡ ಹಾಲು ಕರೆಯಲು ಕುಳಿತಾಕ್ಷಣ , ಬೀಡಾ ಮೊಂಡ ಆಕಳಿನ ಕುತ್ತಿಗೆಯನ್ನು ತಟ್ಟಿದನು . 

 " ಲೇ ! ಆಕಳನ್ನ ಪೀಡಿಸ ಬೇಡವೋ  !" ಕೊಡಾ ಭಂಡ ಕೋಪದಿಂದ ಚೀರಿದನು  .
  
" ನಿನ್ನ ಅರ್ಧ ಬಾಗದಲ್ಲಿ ನಿನ್ನ ಕಾರ್ಯ ಮುಂದುವರಿಸು . ನನ್ನ ಅರ್ಧ ಬಾಗದಲ್ಲಿ  ನಾನು ಏನಾದರೂ ಮಾಡಿಕೊಳ್ಳುವೆ ." ಎನ್ನುತ್ತ ಆಕಳ ಕಿವಿಯನ್ನು  ಹಿಂಡಿದ  ಬಿಡಾ ಮೊಂಡ . 

ಕೋಪಗೊಂಡ ಆಕಳು , ಕೊಡಾ ಭಂಡನನ್ನೂ ಅವನ ಹಾಲಿನ ಕೊಡವನ್ನೂ ತನ್ನ ಹಿಂದಿನ ಕಾಲುಗಳಿಂದ ಒದ್ದು ಉರುಳಿಸಿ , ಅತಿ ವೇಗದಿಂದ ಕಾಡೊಳಕ್ಕೆ ಓಡಿ ಕಣ್ಮರೆಯಾಯಿತು. 

" ನಿನ್ನ ಅರ್ಧ ಬಾಗ ಆಕಳು ನನ್ನ ಅರ್ಧ ಬಾಗದ ಜೊತೆ  ಓಡಿ ಹೋಯಿತಲ್ಲ  . ನನಗೆ ನಷ್ಟವಾಗಿ ಹೋಯಿತಲ್ಲ  . ನನಗೆ ಸೇರಬೇಕಾದ ಅರ್ಧ ಹಣವನ್ನು ಈಗಲೇ ಕೊಡು . ಇಲ್ಲವೇ ಮಹಾರಾಜರ ಬಳಿ ದೂರು ಕೊಡುವೆ . " ಎಂದು ಕೂಗಾಡಿದನು ಬಿಡಾ ಮೊಂಡ . 

ಕೊಡಾ ಭಂಡ ಏನನ್ನುತಾನೇ  ಮಾಡಿಯಾನು ? ನಾಚಿ ನಾಲಿಗೆ ಕಚ್ಚಿಕೊಂಡು ಅರ್ಧ ಆಕಳಿನ ಬೆಲೆಯನ್ನು ಮೌನವಾಗಿ ತೆತ್ತನು !


ಕಾಲ ಬದಲಾಯಿತು . ಮತ್ತೆ ಸಾಲಕ್ಕಾಗಿ ಬಿಡಾ ಮೊಂಡ ಕೊಡಾ ಭಂಡನ ಬಳಿ ಮರಳಿದನು . " ಈ ಬಾರಿ ಯಾವ ಪ್ರಾಣಿಯನ್ನು ಕರೀದಿ ಮಾಡಲಿರುವೆ  ? " ಎಚ್ಚರಿಕೆಯಿಂದ ಪ್ರಶ್ನಿಸಿದನು ಕೊಡಾ ಭಂಡ . 
" ಪ್ರಾಣಿ ಕರೀದಿಸುವ ಯೋಚನೆ ಇಲ್ಲ . ಒಂದು ದೊಡ್ಡ ಮಾವಿನ ಮರವಿರೋ  ಒಂದು ಪುಟ್ಟ ಜಮೀನು ಉಂಟು  . ಅದನ್ನು ಕೊಂಡುಕೊಂಡು , ಅಲ್ಲಿ ನನಗಾಗಿ  ಒಂದು ಗುಡಿಸಲನ್ನು ಹಾಕಿಕೊಳ್ಳಲಿರುವೆ ." 

" ಸರಿ  . ಹಣ ಕೊಡುತ್ತೇನೆ . ಆದರೆ ಮರದ ಮೇಲ್ಬಾಗವನ್ನು ಬಡ್ಡಿಯಾಗಿ  ತೆಗೆದುಕೊಳ್ಳುವೆ . ಆರು ತಿಂಗಳುಗಳು ಕಳೆಯುವ ಮೊದಲು  ಸಾಲ ತೀರಿಸದೆ ಹೋದಲ್ಲಿ ನಿನ್ನ ಗುಡಿಸಲು ಜಮೀನು ಎಲ್ಲವೂ ನನ್ನದಾಗುತ್ತವೆ . "

' ಹೇ ಹೇ ಹೇ !' ಕುಹಕ ನಗೆ ಬೀರಿದ ಕೊಡಾ ಭಂಡ . ಹಣ್ಣನ್ನು ಮಾರಿ ಹಣ ಗಳಿಸುವ ಎಂದುಕೊಂಡಿರುವನೇನು  ? ಈಗ ಮರದ ಮೇಲ್ಬಾಗವನ್ನು ಈತ ಮುಟ್ಟುವ ಹಾಗಿಲ್ಲ . ಆದ್ದರಿಂದ ಸಾಲವನ್ನು ಹಿಂದಿರುಗಿಸಲೂ ಆಗುವುದಿಲ್ಲ . ಹಾಗಾಗಿ ಅವನ ಜಮೀನು ಗುಡಿಸಲು ಮರ  ಎಲ್ಲವೂ  ನನ್ನದಾಗುತ್ತವೆ . 


ಬಿಡಾ ಮೊಂಡ ಜಮೀನನ್ನು ಕೊಂಡುಕೊಂಡ . ಗುಡಿಸಲನ್ನು ಹಾಕಿಕೊಂಡ . ಮರವನ್ನೂ ಅಕ್ಕರೆಯಿಂದ ಪೋಷಿಸಿದ . 

ಸಕಾಲದಲ್ಲಿ ಮರವು  ರಸಭರಿತ ಹಣ್ಣುಗಳನ್ನು ಕೊಡತೊಡಗಿತು . ಇದನ್ನರಿತ ಕೊಡಾ ಭಂಡ ಗೋಣಿ ಚೀಲದೊಂದಿಗೆ ಧಾವಿಸಿ ಬಂದನು . ಹಣ್ಣು ಕುಯ್ಯಲು ಮರವನ್ನು ಹತ್ತಲೆತ್ನಿಸಿದನು . ಆದರೆ ಬಿಡಾ ಮೊಂಡ ಅವನನ್ನು ತಡೆದನು . 

" ಮರದ ಮೇಲ್ಬಾಗ ಮಾತ್ರ ನಿನ್ನದು . ಕೆಳಗಿನ ಬಾಗದಲ್ಲಿ ನೀನು ನಿನ್ನ ಕೈಯ್ಯನ್ನೋ ಕಾಲನ್ನೊ ಇಡುವಂತಿಲ್ಲ . ಅದು ನನಗೆ ಸೇರಿದ ಬಾಗ . "

 ಕೊಡಾ ಭಂಡ ಒಂದು ಏಣಿಯನ್ನು ತಂದು ಮರಕ್ಕೆ  ಆನಿಸಿಟ್ಟು , ಅದನ್ನು ಹತ್ತಿ ಹಣ್ಣು ಕುಯ್ಯಲು ಹೊರಟನು . ಅವನು ಸರ ಸರನೆ ಹಣ್ಣು ಕುಯ್ಯುತ್ತಿರಲು , ಬಿಡಾ ಮೊಂಡ ಕೊಡಲಿ ತಂದು  ಮರದ ಬುಡವನ್ನು  ಕೊಚ್ಚಲು ಪ್ರಾರಂಭಿಸಿದನು . 

" ಲೇ ! ಮರವನ್ನು  ಕೊಚ್ಚ ಬಾರದು  ?" ಎಂದು ಕೂಗಿದ ಕೊಡಾ ಭಂಡ . 

" ಏಕೆ ಬಾರದು ? ನಾನು ನನ್ನ ಪಾಲಿನ ಬಾಗವನ್ನೇ  ಕೊಚ್ಚುತ್ತಿರುವೆ . ಮರದ ವ್ಯಾಪಾರಿ ಈ ಮರದ ದಿಮ್ಮಿಗೆ ಒಳ್ಳೆಯ ಬೆಲೆ ಕೊಡುವುದಾಗಿ ಹೇಳಿರುವನು ." 

ಕೊಡಾ ಭಂಡ ಇಳಿಯುವ ಮುನ್ನ ಮರ ಧಡಿಲ್ ಎಂದು ನೆಲಕ್ಕೆ ಅಪ್ಪಳಿಸಿತು. ಹಣ್ಣುಗಳನ್ನು ಜಜ್ಜಿಕೊಂಡು ಅವುಗಳ ಮೇಲೆ ಬಿದ್ದ ಕೊಡಾ ಭಂಡ  . 


ಅವನು ಏನನ್ನುತಾನೆ ಮಾಡಿಯಾನು ? ನಾಚಿ ನಾಲಿಗೆ ಕಚ್ಚಿಕೊಂಡು ಮನೆ ಸೇರಿದನು . 


ಮತ್ತೆ ಸಾಲಕ್ಕಾಗಿ ಬರಲಿರುವ ಬಿಡಾ ಮೊಂಡನನ್ನು ಹೇಗಾದರೂ ತನ್ನ ಬಲೆಯಲ್ಲಿ  ಸಿಕ್ಕಿಸಲೇ ಬೇಕೆಂದು   ಮತ್ತೊಂದು ಸಂಚನ್ನು ಹೂಡಲು ಕಾಯುತ್ತಿದ್ದ ಕೊಡಾ ಭಂಡ . 

ಆದರೆ ಬಿಡಾ ಮೊಂಡ ಮರವನ್ನು ಮಾರಿ ಹೆಚ್ಚು ಹಣವನ್ನು ಗಳಿಸಿದ್ದ ಕಾರಣ ಆತ ಸಾಲಕ್ಕಾಗಿ ಎಂದೆಂದಿಗೂ ಕೊಡಾ ಭಂಡನ ಬಳಿ ಹೋಗಲೇ ಇಲ್ಲ .  

"ಒಳ್ಳೇ ಕಥೆ !" ಎನ್ನುತ್ತಾ ಎದ್ದು ಓಡಿದರು ಮಕ್ಕಳು . 

Monday, June 2, 2014

Mruganayakana Kathe / ಮೃಗನಾಯಕನ ಕಥೆ - The Beast Story - 2

ಮೃಗನಾಯಕನ  ಕಥೆ


ಕಥೆಯಲ್ಲಿ ತಲ್ಲೀನಳಾಗಿದ್ದ ಪುಟ್ಟಿ   ಅಜ್ಜಿಯ ಕೈಯನ್ನು  ಬಿಗಿಯಾಗಿ  ಹಿಡಿದುಕೊಂಡು  ಮೌನವಾಗಿ ನಡೆಯುತ್ತಿದ್ದಳು . 


ಹುಡುಗಿಗೆ ಬಹಳ ಬೇಸರವಾಯಿತು . ಕೋಪ ಉಕ್ಕಿ ಬಂದಿತು  . ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲೇ ಬೇಕು ಎಂದು ಮನಸಲ್ಲೇ ನಿರ್ಧರಿಸಿಕೊಂಡಳು. 
ಇನ್ನು ಅವಳು ಬಹಳ  ಎಚ್ಚರಿಕೆಯಿಂದಿರಬೇಕು ! 
ಗವಿಯನ್ನು ಪ್ರವೇಶಿಸಿ ಎಲ್ಲವನ್ನೂ ಸ್ವಚ್ಛ ಮಾಡಲು ತೊಡಗಿದಳು.  ಮೃಗನಾಯಕನ  ಮರಿಗಳು ಅವಳ ತಲೆಗೂದಲನ್ನು ಎಳೆದವು . ಸಿಕ್ಕ ಸಿಕ್ಕ ಸಾಮಾನುಗಳನ್ನು ತೆಗೆದು ಅವಳ ಮೇಲೆ ಎತ್ತೊಗೆದವು  . ಅವಳು ಸ್ವಚ್ಛ ಮಾಡಿದ್ದವನ್ನೆಲ್ಲ  ಮತ್ತೆ ಗಲೀಜು ಮಾಡಿದವು . 
ಹುಡುಗಿ ಮೌನವಾಗಿ ನಗುಮೊಗದೊಡನೆ  ಎಲ್ಲವನ್ನೂ ಸಹಿಸಿಕೊಂಡಳು . 
"ಹುಷಾರಾಗಿ  ಎಲ್ಲವನ್ನೂ ನೋಡಿಕೋ ಹುಡುಗಿ ." ಅಪ್ಪಣೆ ಮಾಡಿದ  ಮೃಗನಾಯಕ . " ನಾನು ಕೆಲಸದ ಮೇಲೆ ಹೊರಗೆ ಹೋಗಬೇಕಿದೆ . ಸೂರ್ಯಾಸ್ತದ ಸಮಯ ಹಿಂದಿರುಗುವೆ . ಗೊಣಗಾಡಿದರೋ ಸೋಮಾರಿತನದಿಂದಿದ್ದರೋ , ನಿನ್ನ ನುಂಗಿ ಬಿಡುವೆ . ಹುಷಾರ್ !"
ಹುಡುಗಿ ತಲೆದೂಗಿದಳು . 
ಮೃಗನಾಯಕ ಹೊರಗೆ  ಹೋದ ನಂತರ ಹೇರಳವಾದ 'ಇಂಗಿಲಿ ಮಿಂಗಿಲಿ ' ಹಣ್ಣುಗಳನ್ನು  ಹಾಕಿ ರುಚಿ ರುಚಿಯಾದ ಪಾಯಸವನ್ನು ತಯಾರಿಸಿದಳು . 


ದೊಡ್ಡ ಬಟ್ಟಲುಗಳ ತುಂಬ ಪಾಯಸವನ್ನು ಹಾಕಿ ಮರಿಗಳಿಗೆ ಕೊಟ್ಟಳು . ಅವು ಅದನ್ನು ಗಪಗಪನೆ ಕುಡಿದವು . 
'ಇಂಗಿಲಿ ಮಿಂಗಿಲಿ' ಯ ಪ್ರಭಾವದಿಂದ  ಮರಿಗಳೆಲ್ಲ ಕೂಡಲೇ ಗಾಢ  ನಿದ್ರೆಯಲ್ಲಿ  ಮುಳುಗಿ ಹೋದವು .
ಮರಿಗಳನ್ನು ಕಟ್ಟಿ ಚಿಕ್ಕದಾಗಿದ್ದ ಒಳ ಗವಿಯಲ್ಲಿ ಕೂಡಿ ಹಾಕಿದಳು . " ಇನ್ನು ಇಡೀ ದಿನ ಇವು ಮಲಗಿಯೇ  ಇರುತ್ತವೆ !" ಎಂದುಕೊಂಡಾಗ ಅವಳ ಮೊಗದಲ್ಲಿ ಕಿರುನಗೆಯರಳಿತು .  


ನಂತರ ಒಲೆಯನ್ನು ಹೊತ್ತಿಸಿ ಅದರ ಮೇಲೆ ದಪ್ಪ ಕಾವಲಿಯನ್ನು ಇಟ್ಟಳು . ಹಿಟ್ಟನ್ನು ಹೆಚ್ಚಾಗಿ ತಯಾರಿಸಿ , ಅದನ್ನು ಬಾಳೆಲೆಯಲ್ಲಿ ಕಟ್ಟಿ ಒಂದು ಗೋಣೀ ಚೀಲದಲ್ಲಿಟ್ಟಳು . 
ಗೋಣಿ ಚೀಲವನ್ನು ಒಲೆಗೆ ನೇರವಾಗಿ , ಛಾವಣಿಯ ತೊಲೆಗೆ ತಗಲು ಹಾಕಿ , ಮೂಟೆಯ ಕೆಳಗೊಂದು ರಂಧ್ರವನ್ನು  ಮಾಡಿದಳು . 
ಹಿಟ್ಟು ಮೆಲ್ಲ ಮೆಲ್ಲನೆ ತೊಟ್ಟಿಕ್ಕ ತೊಡಗಿತು . ಬಿಸಿ ಕಾವಲಿಯ  ಮೇಲೆ ಹಿಟ್ಟು ತೊಟ್ಟು ತೊಟ್ಟಾಗಿ ಬಿದ್ದಾಗ " ಚೋಯ್ನ್ ಚೋಯ್ನ್ " ಎಂಬ ಶಬ್ದ ಎದ್ದಿತು . 
ಗವಿಯಿಂದ ಹೊರಟ  ಹುಡುಗಿ ತನ್ನ ಮನೆಯನ್ನು ಕುರಿತು ಕಾಡಲ್ಲಿ ಅತಿ ವೇಗವಾಗಿ ಓಡತೊಡಗಿದಳು . 
ಬಲು ಜಾಣೆಯಾಗಿದ್ದ ಕಾರಣ ಹುಡುಗಿಗೆ   ದಾರಿ ಚೆನ್ನಾಗಿಯೇ ನೆನಪಿನಲ್ಲಿತ್ತು . 
ಶೀಘ್ರದಲ್ಲೇ  ಮನೆಯನ್ನು ತಲುಪಿದ ಹುಡುಗಿ ಮೃಗನಾಯಕನ ಮೋಸವನ್ನು ತಾಯಿ ತಂದೆಯರಿಗೆ ವಿವರವಾಗಿ ತಿಳಿಸಿದಳು . 
ಎಲ್ಲರಿಗೂ ಮಿತಿ  ಮೀರಿದ ಕೋಪವೇರ್ಪಟ್ಟಿತು . 


ಅಂದು ಸಂಜೆ ಸೂರ್ಯಾಸ್ತದ ಸಮಯ ಹಿಂದಿರುಗಿದ  ಮೃಗನಾಯಾಕ ಗವಿಯ ಬಾಗಿಲನ್ನು ಕುಟ್ಟಿದನು . 
ಒಳಗಿನಿಂದ ಯಾವ ಉತ್ತರವೂ ಇಲ್ಲ  . ಆದರೆ ಬಿಸಿ ಕಾವಲಿ 'ಚೋಯ್ನ್ ' ಎಂದಿತು . 
" ಆಹ ! ಹುಡುಗಿ ಪಡ್ಡು ಸುಡುತ್ತಿರುವಳು ಅನ್ನಿಸುತ್ತದೆ  . ಎಲ್ಲರೂ ಸಖತ್ತಾಗಿ ತಿನ್ನುತ್ತಿರುವರೇನೋ . ತಡೆಯಿರಿ ! ತಡೆಯಿರಿ ಮರಿಗಳೇ ! ಇಗೋ  ನಾನೂ ಬಂದೆ  !"
ನಾಲಿಗೆಯಲ್ಲಿ ನೀರೂರುತ್ತಿರಲು ಮೃಗನಾಯಕ ರಾಗವಾಗಿ ಹಾಡುತ್ತ  ಮತ್ತೆ ಬಾಗಿಲು ಕುಟ್ಟಿದ :
'ಸುಡು ಸುಡು  ಪಡ್ಡು   ಸುಟ್ಟು ತಿನ್ನುತ್ತಿರುವೆಯಾ  ?
ಇರು ಇರು ಇರು ಇರು  ,  
ಬರುವೆ   ಬರುವೇ  ಬರುವವೇ ಬರುವೆ  !'



ಮೃಗನಾಯಕ ಒಮ್ಮೆ  ಗರ್ಜಿಸಿದ . ನಂತರ ಗುಡುಗಿದ . 
'ಸುಡು ಸುಡು  ಪಡ್ಡು   ಸುಟ್ಟು ತಿನ್ನುತ್ತಿರುವೆಯಾ  ?
ಇರು ಇರು ಇರು ಇರು  ,  
ಬರುವೆ   ಬರುವೇ  ಬರುವವೇ ಬರುವೆ  !'
ಈಗಲೂ ಬಾಗಿಲು ತೆರೆಯಲಿಲ್ಲ . ಆದರೆ ಕಾವಲಿ ಮಾತ್ರ  ' ಚೋಯ್ನ್ ' ಎಂದಿತು.  ಮೃಗನಾಯಕ ಕೊಪಾವೇಶದಿಂದ ಕಂಪಿಸಿದ . ' ಏನೂ ? ಈ ಹುಡುಗಿಗೆ ನನ್ನಲ್ಲಿ ಭಯವೇ ಇಲ್ಲವೇ ? ಇಗೋ ಈಗಲೇ ಹೋಗಿ  ಅವಳಿಗೆ ಗತಿ ಕಾಣಿಸುವೆ . '
ಭಯಂಕರವಾಗಿ ಗುರುಗುಟ್ಟಿದ ಮೃಗನ್ಯಾಕ ,
'ಸುಡು ಸುಡು  ಪಡ್ಡು   ಸುಟ್ಟು ತಿನ್ನುತ್ತಿರುವೆಯಾ  ?
ಇರು ಇರು ಇರು ಇರು  ,  
ಬರುವೆ   ಬರುವೇ  ಬರುವವೇ ಬರುವೆ  !' ಎನ್ನುತ್ತ ಬಾಗಿಲನ್ನು ಬಡಿದು ತೆರೆದು ಒಳಗೆ ನುಗ್ಗಿದ  .
ಬರಿದಾದ ಗವಿ ! ಮಾಯವಾಗಿದ್ದ ಮರಿಗಳು ! ಪರಾರಿಯಾಗಿದ್ದ ಹುಡುಗಿ ! ಮೇಲಾಗಿ ಪಡ್ಡು ಇಲ್ಲ ! ಏನಿಲ್ಲ !
ಕಾವಲಿ ಮಾತ್ರ  ' ಚೋಯ್ನ್ ' ಎನ್ನುತ್ತಿತ್ತು ! 
ಮೃಗನಾಯಕ ಹುಚ್ಚೆದ್ದು ಕಿರುಚಿದ . " ನನ್ನನ್ನು ಮೋಸ ಮಾಡಲು ಹೊರಟೆಯಾ  ಹುಚ್ಚು ಹುಡುಗಿ ? ನಾನು ಬರುವೆ ! ನಿನ್ನ ಜೊತೆ ನಿನ್ನ ತಾಯಿ ತಂದೆಯರನ್ನೂ ಎಳೆದು ತರುವೆ . ನನ್ನ ಗುಲಾಮರನ್ನಾಗಿ ಮಾಡಿಕೊಳ್ಳುವೆ ! ನೋಡುತ್ತಿರು !"


ಮರು ದಿನವೇ ನರನ  ವೇಷ  ಧರಿಸಿ ಹಳ್ಳಿಗೆ ಧಾವಿಸಿ ಬಂದ  ಮೃಗನಾಯಕ . 
ಆತ ಮತ್ತೆ ಬಂದೆ ಬರುತ್ತಾನೆ ಎಬುದನ್ನು ಅರಿತಿದ್ದ ಹುಡುಗಿ ಮತ್ತು ಅವಳ ತಾಯಿ ತಂದೆಯರು , ಮೃಗನಾಯಕನನ್ನು ಎದುರುಗೊಳ್ಳಲು ತಯಾರಾಗಿದ್ದರು . 
" ಪ್ರೀತಿಯ ಅಳಿಯಂದಿರಿಗೆ ಸುಸ್ವಾಗತ !" ಎಂದ ಹುಡುಗಿಯ ತಾಯಿ ತಂದೆಯರು  ಮಜ್ಜಿಗೆ ಮತ್ತು ಲಾಡುಗಳನ್ನು ಕೊಟ್ಟು ಉಪಚರಿಸಿದರು . ಮತ್ತು ಲಾವಂಚದ ಬೀಸಣಿಗೆಯನ್ನು   ಬೀಸಿ ತಂಪು  ಗಾಳಿ ಹಾಕಿದರು.    
" ನಿಮ್ಮ ಹುಡುಗಿ ಎಲ್ಲಿ ? ನನ್ನ ಮನೆ ಬಿಟ್ಟು ಓಡುವಷ್ಟು ಧೈರ್ಯ ಬಂದಿತೆ  ಅವಳಿಗೆ?" ಕೋಪದಿಂದ ಪ್ರಶ್ನಿಸಿದ ಮೃಗನಾಯಕ. 
" ಅವಳು ನಿಮ್ಮನ್ನು ಬಿಟ್ಟು ಓಡಿ  ಬಂದಿಲ್ಲ ಅಳಿಯಂದಿರೆ  . ಮದುವೆಯ ನಂತರ ಅಳಿಯ ದೇವರನ್ನು  ಮತ್ತೆ ಮನೆಗೆ ಕರೆಸಿ  ಔತಣ ನೀಡಿ ಸತ್ಕರಿಸುವುದು ನಮ್ಮ ಪದ್ದತಿ . ಬನ್ನಿ , ಮೊದಲು ನೀವು ಅಭ್ಯಂಜನ ಸ್ನಾನ  ಮಾಡ ಬೇಕು . ನಂತರ ಪನ್ನೀರಿನ  ವೃಷ್ಟಿಯಲ್ಲಿ ತಣ್ಣಗಾಗ ಬೇಕು   . ಅದಾದ ನಂತರ ನಮ್ಮ ಹುಡುಗಿ ತಯಾರಿಸಿರುವ ಮೂವತ್ತು ರುಚಿ ರುಚಿಯಾದ ಪದಾರ್ಥಗಳಿಂದ ಕೂಡಿದ  ಔತಣ. ''


ಮೃಗನಾಯಕನಿಗೆ ಮಹದಾನಂದ ! ಅಭ್ಯಂಜನ ಸ್ನಾನವಂತೆ! ಪನ್ನೀರಿನ ವೃಷ್ಟಿ ಯಂತೆ  !ಇದನ್ನೆಲ್ಲ ಆತನಿಗೆ ಯಾರೂ ಮಾಡಿಸಿರಲಿಲ್ಲ . ಆಹಾ ! ಎಂತಹ ವೈಭವ!
" ದಯೆ ಮಾಡಿ ಬನ್ನಿ ಅಳಿಯ ದೇವರೇ . ಸ್ನಾನಕ್ಕೆ ಎಲ್ಲ ಸಿದ್ಧವಾಗಿದೆ ."
ಮನೆಯ ಹಿತ್ತಲಿಗೆ ಒಯ್ಯಲ್ಪಟ್ಟ ಮೃಗನಾಯಕ ,  ಎತ್ತರವಾದ ವೇದಿಕೆಯ ಮೇಲೆ ಹಾಸಲ್ಪಟ್ಟಿದ್ದ  ಚಾಪೆಯ ಮೇಲಿದ್ದ  ಅಲಂಕರಿಸಲ್ಪಟ್ಟ ಮಣೆಯನ್ನು ಕಂಡನು.   ಸುಗಂಧ ತೈಲಗಳು , ಸ್ನಾನದ ಪುಡಿಗಳು , ಹೊಸತಾದ ಚೌಕ , ಹೊಸ ವಸ್ತ್ರಗಳು ಎಲ್ಲವೂ ಅವನಿಗಾಗಿ  ತಯಾರಾಗಿದ್ದವು . 
" ದಯವಿಟ್ಟು ಮಣೆಯ  ಮೇಲೆ ಕುಳಿತುಕೊಳ್ಳಿ ಅಳಿಯ ದೇವರೇ . ಎಣ್ಣೆ ನೀವುವವನು ಬಂದು ನೀವುತ್ತಾನೆ  ." 
ಮೃಗನಾಯಕ ತೃಪ್ತಿಯಿಂದ ಕಿರುನಗೆ ಬೀರಿ , ವೇದಿಕೆಯನ್ನು ಹತ್ತಿ ಮಣೆಯ ಮೇಲೆ ಕುಳಿತನು . 
ಅಹೋ ! ಮರುಕ್ಷಣ ಮಣೆ , ಚಾಪೆ ಸಹಿತ ಮೃಗನಾಯಕ ವೇದಿಕೆಯ ಹಾಗೆ ಕಂಡ ತೆರೆದ ಬಾವಿಯೊಳಗೆ ಬಿದ್ದನು . 
''ಆ !ಅಯ್ಯೋ !''
 "ಹೊರಗೆ ಬಿಡಿ ! ನನ್ನನ್ನ ಹೊರಕ್ಕೆ ತೆಗೆಯಿರಿ !"ಬಾವಿಯ ತಳದಿಂದ ಚೀರಿದ ಮೃಗನಾಯಕ. 
" ನಮ್ಮ ಹಳ್ಳಿಯ ಕಡೆ ಇನ್ನು ಮುಂದೆ ಕಾಲಿಡುವುದಿಲ್ಲವೆಂದು ಪ್ರಮಾಣ ಮಾಡಿದರೆ  ಮಾತ್ರ!"ಎಂದರು ತಾಯಿ ತಂದೆಯರು.
" ನನ್ನ ಆಣೆ ! ನನ್ನಾಣೆಗೂ  ಬರಲ್ಲ  !" ಎಂದು ಕೂಗಿದ ಮೃಗನಾಯಕ. 


ಉದ್ದವಾದ ಹಗ್ಗವನ್ನು ಬಾವಿಯೊಳಕ್ಕೆ ಎಸೆದು ಮೃಗನಾಯಕನನ್ನು ಹೊರಕ್ಕೆಳೆದರು  . 
ಹೊರಗೆ  ಬಂದ  ಕೂಡಲೇ ಕ್ರೂರಿಯಾದ ಮೃಗನಾಯಕ ಗರ್ಜಿಸುತ್ತ ಹುಡುಗಿಯ ತಾಯಿ ತಂದೆಯರ ಮೇಲೆರಗಿದನು . 
ಆದರೆ ಚುರುಕಾದ ಹುಡುಗಿ ತುರ್ತಿನಿಂದ ವರ್ತಿಸಿದಳು . ಕುದಿಯುತ್ತಿದ್ದ ಎಣ್ಣೆ ಇದ್ದ ಪಾತ್ರೆಯನ್ನು ಕೈಗೆತ್ತಿಕೊಂಡಳು .  "ಹೊರಟು  ಹೋಗು ಇಲ್ಲಿಂದ  !ಇಲ್ಲವೇ ಈ ಕುದಿಯುವ ಎಣ್ಣೆಯಿಂದ ನಿನಗೆ ಅಭಿಷೇಕ ಮಾಡುವೆನು !"
'ಅಯ್ಯೋ ..' ಎಂದು ಕೂಗುತ್ತ ಅಲ್ಲಿಂದ ಕಾಲು ಕಿತ್ತನು ಮೃಗನಾಯಕ . 
ನಂತರ ಆ ಹಳ್ಳಿಯ ಕಡೆ ಆತ ಸುಳಿಯಲೇ ಇಲ್ಲ . 
 ಕಾಡಲ್ಲಿ  ಎಂದೆಂದಿಗೂ  ಪಡ್ಡು ತಿನ್ನಬಾರದೆಂಬ ನಿಷೇಧಾಜ್ಞೆ ಹೊರಡಿಸಲ್ಪಟ್ಟಿತು . 
ಸಿಂಹಗಳೂ ಹುಲಿಗಳೂ ಪಡ್ಡು ತಿನ್ನುವುದಾಗಿ ನೀವೆಲ್ಲಾದರೂ ಕೇಳಿರುವಿರೆ ?
ಕಾರಣ ಈಗ ನಿಮಗೆ ತಿಳಿಯಿತು ತಾನೇ  !
"ನನ್ ತಾತ ಹೇಳಿದ್  ಕಥೆ ಹೇಗಿತ್ತು ?" ಎಂದಳು ಅಜ್ಜಿ . 
" ಪುಟ್ಹುಡುಗಿಗೆ ಯಾರಾದ್ರೂ ಮದ್ವೆ ಮಾಡ್ತಾರಾ ? ಅದೂ ವೇಷ ಹಾಕ್ಕೊಂಡ್ಬಂದ ಪ್ರಾಣಿ ಜೊತೆ ಮದ್ವೆ ಮಾಡ್ತಾರಾ ? ಶುದ್ಧ 'ಗೂಶ್ಲುಗ್ಳು' ಅಜ್ಜಿ ಆ  ಅಪ್ಪ ಅಮ್ಮ !" ಎಂದಳು  ಪುಟ್ಟಿ .  
" ಹುಲಿ ಬೋನು ದಾಟ್ಕೊಂಡ್ ಬಂದಿದ್ದೂ ಗೊತ್ತಿಲ್ದೆ, ತುಟಿ ಪಿಟಕನ್ದೆ  ಕಥೆ ಕೇಳಿದ್ರಲ್ಲಿ ಏನೂ ಕಮ್ಮಿ ಇಲ್ಲ .. " ಎಂದು ಚುಡಾಯಿಸಿದ ಪುಟ್ಟಣ್ಣ . 
" ಹಾ ! ಹೌದಾ ?" ಎಂದು ಚೀರಿದಳು  ಪುಟ್ಟಿ. ಮರು ಕ್ಷಣವೇ  " ಅಜ್ಜಿ ನನ್ಗೆ ಸುಡು ಸುಡು ಪಡ್ಡು ಮಾಡ್ಕೊಡ್ತಿಯಾ ?" ಎಂದು ಕೇಳಿದಳು .  
"ನನ್ಗೂ !" ಎಂದ ಪುಟ್ಟಣ್ಣ . 
"ನನ್ಗೂ  !" ಎಂದರು ತಾತ . 

Wednesday, May 28, 2014

Mruganayakana Kathe / ಮೃಗನಾಯಕನ ಕಥೆ - The Beast Story - 1

ಮೃಗನಾಯಕನ ಕಥೆ 
ಬೋನಿನಲ್ಲಿದ್ದ ಹುಲಿ ಜೋರಾಗಿ ಗರ್ಜಿಸಿತು. "ಅಬ್ಬಬ್ಬ ! ಹುಲಿ ಎಷ್ಟ್ ಜೋರಾಗಿ ಗರ್ಜಿಸ್ತಿದೆ! ಬೇಗ ಹೋಗ್ನೋಡೋಣ ಬಾ   ತಾತ !" ಪುಟ್ಟಣ್ಣ ತಾತನ ಕೈ ಹಿಡಿದೆಳೆದು ಅವಸರ ಪಡಿಸಿದ . 
"ಅಯ್ಯೋ ! ಬೇಡಪ್ಪ ! ನಾನ್ ಬರಲ್ಲ ! ನನ್ಗೆ  ಭಯ !" ಪುಟ್ಟಿ ಅಜ್ಜಿಯ ಕೈಯನ್ನು  ಬಿಗಿಯಾಗಿ   ಹಿಡಿದುಕೊಂಡು ನಿಂತಲ್ಲೇ ಗಟ್ಟಿಯಾಗಿ ನಿಂತಳು . 
"ನೀನ್ಯಾಕೇ  ಕಾಸ್ಬಂಗ್ಲಿಗೆ ಬಂದೆ?" ಪುಟ್ಟಣ್ಣ ರೇಗಿದ . 
"ಮೊದ್ಲೇ ಅವ್ಳು ಹೆದ್ರಿದ್ದಾಳೆ ! ಸುಮ್ನಿರೋ ಪುಟ್ಟಣ್ಣ ." ಎಂದ ತಾತ , " ಪುಟ್ಟಿ ! ನೀನೂ ಅಜ್ಜಿ ಸುತ್ತಿ ಬಳಸ್ಕೊಂಡು ಜಾರಾ ಬಂಡೆ ಕಡೆ ಬಂದ್ಬಿಡಿ . ನಾನೂ ಪುಟ್ಟಣ್ಣ ಹುಲಿ ನೋಡ್ಕೊಂಡು ಅಲ್ಲಿಗ್ ಬರ್ತಿವಿ ." ಇಬ್ಬರು ಮಕ್ಕಳಿಗೂ ಸಮಾಧಾನ ಹೇಳಿದರು . 
"ಅದೇಕೆ ? ನಾವೂ ಹುಲಿ ನೋಡಕ್ಕೆ ಬಂದೇ  ಬರ್ತಿವಿ ! ನಮ್ಗೇನು  ಧೈರ್ಯ  ಇಲ್ವೇನು ?" ಎಂದಳು ಅಜ್ಜಿ . 
"ಅಜ್ಜಿ ! ಬೇಡ ಅಜ್ಜಿ !" ಪುಟ್ಟಿ ಅಳುಮೋರೆ  ಹಾಕಿಕೊಂಡಳು . 
"ಹುಲಿಗೆಲ್ಲ ಹೆದರ್ತಾರೇನೆ ? ನಿನ್ನಂತೆ  ಇದ್ದ ಒಬ್ಬ ಪುಟ್ ಹುಡ್ಗಿ  ಹುಲಿಗಿಂತ ಕ್ರೂರ್ವಾದ  ಒಂದು ಮೃಗಾನ  ಹೇಗೆ ಎದುರಿಸಿದ್ಳು ಗೊತ್ತೇ ?" ಎಂದು ಪುಟ್ಟಿಯ ಕುತೂಹಲ ಕೆಣಕಿದಳು   ಅಜ್ಜಿ . 
"ಕಥೆನಾ ? ಹೇಳು ಅಜ್ಜಿ !" ಪುಟ್ಟಿಗೆ ಉತ್ಸಾಹ ಉಕ್ಕಿತು . ಚಿಕ್ಕಂದಿನಲ್ಲಿ  ತನ್ನ ತಾತ ತನಗೆ  ಹೇಳಿದ್ದ ಕಥೆಯನ್ನು ಶುರು ಮಾಡಿದಳು  ಅಜ್ಜಿ .  ಹುಲಿಯ ಗರ್ಜನೆಯನ್ನು  ಮರೆತು ಕಥೆಯಲ್ಲಿ ಮಗ್ನಳಾದಳು  ಪುಟ್ಟಿ. ಪುಟ್ಟಣ್ಣ ಮತ್ತು ತಾತ ಕೂಡ !

 

ಒಂದಾನೊಂದು ಕಾಲದಲ್ಲಿ ನಮ್ಮ ಹಳ್ಳಿಯ ಸಮೀಪ ಒಂದು ಕಾಡು ಇತ್ತಂತೆ  . ಆ ಕಾಡಲ್ಲಿ ಅನೇಕ ಪ್ರಾಣಿಗಳಿದ್ದವು. ಪ್ರಾಣಿಗಳಿಗೆ ಒಬ್ಬ ರಾಜನೂ ಇದ್ದ . ಆತ ಸಿಂಹವೋ  , ಹುಲಿಯೋ   , ಕರಡಿಯೋ ಆಗಿರಲಿಲ್ಲ  . ಜಿಂಕೆಯೋ , ಕಾಡು ಕೋಣನೋ , ತೋಳವೋ ಕೂಡ  ಆಗಿರಲಿಲ್ಲ . 
ಆತನೇ ಮೃಗ ! ಮೃಗನಾಯಕ !


ಮೃಗನಾಯಕ ತನ್ನ ಮೂರು ಮರಿಗಳೊಂದಿಗೆ  ದೊಡ್ಡದೊಂದು ಗವಿಯಲ್ಲಿ ವಾಸವಾಗಿದ್ದ . ಚಿಕ್ಕ ಮರಿಗಳು  ಚೂಟಿಯಾಗಿದ್ದವು . ಪ್ರೀತಿಯೋಗ್ಯವಾದ ಮುದ್ದುಮರಿಗಳಾಗಿದ್ದವು . ಆದರೆ ಮರಿಗಳು ಬೆಳೆದಂತೆ ಅವುಗಳ ತುಂಟತನವೂ ಬೆಳೆಯಿತು . ಅವನ್ನು ನಿಭಾಯಿಸುವುದು ಬಹಳ  ಕಷ್ಟವಾಯಿತು . ಸಾಮಾನು ಸರಂಜಾಮುಗಳನ್ನು ಒಡೆದು ಹಾಕಿದವು . ಗವಿಯನ್ನು ಅಸ್ಥವ್ಯಸ್ಥಗೊಳಿಸಿದವು    . 
ತಾಯಿ ಮೃಗ ಬಲಹೀನಳಾಗಿದ್ದಳು . ಯಾವ ಕೆಲಸವೂ ಮಾಡಲಾರದೆ , ಗವಿಯ ಒಂದು ಮೂಲೆಯಲ್ಲಿ ಸದಾ ಮಲಗಿಯೇ ಇದ್ದಳು . 
ಆದ್ದರಿಂದ ತುಂಟು ಮರಿಗಳನ್ನು ನೋಡಿಕೊಳ್ಳಲು ಒಬ್ಬ ದಾದಿಯನ್ನು ಕರೆತರಲು ನಿರ್ಧರಿಸಿದ ಮೃಗನಾಯಕ . 


ಕೂಡಲೇ  ಜೋರಾಗಿ ಒಮ್ಮೆ ಗರ್ಜಿಸಿದ, ಜಾಗಟೆಯನ್ನು ಬಾರಿಸಿದ ಮತ್ತು ಎಲ್ಲ ಕಾಡು ಪ್ರಾಣಿಗಳನ್ನೂ ಒಗ್ಗೂಡಿಸಿದ  . 
"ನನ್ನ ಮರಿಗಳನ್ನು ನೋಡಿಕೊಳ್ಳಲು  ಒಬ್ಬ ದಾದಿಯ ಅವಶ್ಯಕತೆ ಇದೆ . ಅವಳು ಅಡುಗೆಯನ್ನು ಮಾಡಬೇಕು , ಗವಿಯನ್ನು ಸ್ವಚ್ಛವಾಗಿಡ ಬೇಕು,  ಹೊಲಿಯ ಬೇಕು, ಹಾಡ ಬೇಕು. ಮರಿಗಳಿಗೆ ನೀರು ಹಾಕ ಬೇಕು, ಊಟ ತಿನ್ನಿಸ  ಬೇಕು . ಅವರಿಗೆ ಒಳ್ಳೆಯ ನಡೆವಳಿಕೆಯನ್ನು  ಕಲಿಸ ಬೇಕು, ತುಂಟತನ ಮಾಡದಂತೆ ನೋಡಿಕೊಳ್ಳ ಬೇಕು,  ಅವರೊಂದಿಗೆ ಆಡಲೂ   ಬೇಕು . 
ಈ ನೌಕರಿಗೆ ನಿಮ್ಮಲ್ಲಿ ಯಾರಾದರೂ   ಸಿದ್ಧವಾಗಿದ್ದೀರಾ ?" 
"ನಾನು ಅಡುಗೆ ಮಾಡ ಬಲ್ಲೆ . ಆದರೆ ಸ್ವಚ್ಛ ಮಾಡುವುದು ಕಷ್ಟ ." ಎಂದಿತು ಹುಲಿಯಮ್ಮ. 
"ನಾನು ಹೊಲಿಯ  ಬಲ್ಲೆ . ಆದರೆ ಹಾಡು ಹೇಳುವುದಕ್ಕೆ ಬರುವುದಿಲ್ಲ . " ಎಂದಿತು ಸಿಂಹದ ರಾಣಿ . 
"ನಾನು ಮರಿಗಳೊಡನೆ ಆಟವಾಡ  ಬಲ್ಲೆ . ಆದರೆ ಕಲಿಸುವುದು  ಗೊತ್ತಿಲ್ಲ ." ಎಂದಿತು ಮಂಗಮ್ಮ . 
"ನನ್ನ ಎಲ್ಲ ಕೋರಿಕೆಗಳನ್ನೂ ನೆರವೇರಿಸುವವರು  ಯಾರೂ ಇಲ್ಲವೇ?" ಎಂದು ಹಕ್ಕಿನಿಂದ ಅಬ್ಬರಿಸಿದ  ಮೃಗನಾಯಕ.  


"ಅಂತಹ ಹೆಣ್ಣು  ಒಬ್ಬಳು ಇರುವಳು ಎಜಮಾನರೆ  !" ಎಂದಿತು ಮರದ ಮೇಲೆ ಕುಳಿತಿದ್ದ ವಿವೇಕವುಳ್ಳ  ಮುದಿ  ಗೂಬೆ ಪಕ್ಷಿ . "ಮೂರು ಲೋಕಗಳಲ್ಲೂ ಕಾಣ ಸಿಗದ ಪ್ರತಿಭೆ  ಮತ್ತು ಸೌಂದರ್ಯವನ್ನು ಹೊಂದಿರುವ ಅಪರೂಪದ ಹುಡುಗಿಯವಳು  . ಅವಳು ಅಡುಗೆ ಮಾಡ ಬಲ್ಲವಳು , ಸ್ವಚ್ಛ ಮಾಡಲು  ಬಲ್ಲವಳು. ಹೋಲಿಗೆಯೇ ಹಾಡೇ ? ಎಲ್ಲವನ್ನೂ ಬಲ್ಲವಳು. ಕಲಿಸಲು ಬಲ್ಲವಳು ಮತ್ತು ಆಡಲೂ ಬಲ್ಲವಳು . ಮಾತ್ರವಲ್ಲದೆ ಪುಸ್ತಕ ಓದಲೂ ಬಲ್ಲವಳು ! ಪ್ರಪಂಚದಲ್ಲೆಲ್ಲಾ ಅತ್ಯುತ್ತಮ ಹುಡುಗಿ ಎಂಬ ಖ್ಯಾತಿ ಗಳಿಸಿರುವವಳು . ಅವಳೇ ನಿನಗೆ ತಕ್ಕ ಅತ್ಯುತ್ತಮ ದಾದಿ .  ಅಗೋ ! ಸಮೀಪದ ಹಳ್ಳಿಯಲ್ಲೇ ವಾಸವಾಗಿರುವಳು !"
"ಏನು ? ನರ  ಮನುಷ್ಯಳೆ ?" ಚಕಿತಗೊಂಡು   ಗರ್ಜಿಸಿದ ಮೃಗನಾಯಕ.  ಓರ್ವ ನರಳನ್ನು ಹೇಗೆ ದಾದಿಯಾಗಿ ಕರೆತರಲು  ಸಾಧ್ಯ ?" 
"ನೀನು ಅವಳನ್ನು ಮದುವೆಯಾದರೆ  ಕರೆತರ ಬಹುದಲ್ಲವೆ ?" ಎಂದು ಸೂಚನೆ ನೀಡಿತು ನರಿ . 
"ಅವಳ ತಾಯಿ ತಂದೆಯರು ಅವಳಿಗಾಗಿ  ಓರ್ವ  ಬುದ್ಧಿವಂತನಾದ, ಶಕ್ತಿಶಾಲಿಯಾದ , ಐಶ್ವರ್ಯವಂತನಾದ ವರನನ್ನು ಹುಡುಕುತ್ತಿರುವುದಾಗಿ ಸುದ್ದಿ ತಂದಿದ್ದ  ಕಾಗೆರಾಯ . ಅವಳಿಗೆ ನಿನಗಿಂತ  ಅರ್ಹನಾದ ವರ  ಇನ್ಯಾರು   ಸಿಕ್ಕುತ್ತಾರೆ ಮಾರಾಯ ?"
"ಬಲೆ !" ಉತ್ಸಾಹದಿಂದ ಚಪ್ಪಾಳೆ ತಟ್ಟಿತು ಜಿಂಕೆ . " ನಿನ್ನನ್ನು ನರನಂತೆ ಸಿಂಗರಿಸಿ ನಾವು ತಯಾರು ಮಾಡುವೆವು!"


ಹುಣ್ಣಿಮೆಯಂದು ತಾನು ಹೆಣ್ಣು ಕೇಳಲು ಬರುವುದಾಗಿ ಒಂದು ಪತ್ರವನ್ನು ಬರೆದು , ಪಾರಿವಾಳದ ಅಂಚೆಯ ಮೂಲಕ ಹುಡುಗಿಯ ತಾಯಿ ತಂದೆಯರಿಗೆ ಕಳುಹಿಸಿಕೊಟ್ಟ ಮೃಗನಾಯಕ . 
ಅಂತೆಯೇ ಆ ಶುಭದಿನದಂದು ನವಿಲುಗಳು ಚಾಮರ ಬೀಸುತ್ತಿರಲು , ಕೋತಿಗಳು ಉತ್ಸಾಹದಿಂದ ತಾಳ ಮೇಳಗಳನ್ನು  ಬಾರಿಸುತ್ತಿರಲು , ಆನೆಯ ಮೇಲೆ ಸವಾರನಾಗಿ ಬಹಳ  ಅದ್ದೂರಯಿಂದ  ಹಳ್ಳಿಯನ್ನು ಪ್ರವೇಶಿಸಿದ  ಮೃಗನಾಯಕ.  
ಹುಡುಗಿಯ ತಾಯಿ ತಂದೆಯರು ಬೆರಗಾದರು . ತಮ್ಮ ಮನೆಗೆ ಒಬ್ಬ ಮಹಾರಾಜ ಆಗಮಿಸಿರುವನಲ್ಲ !
ಅವರುಗಳು ಆತನನ್ನು ಆದರದಿಂದ ಸ್ವಾಗತಿಸಿ , ಅತ್ಯುತ್ತಮ ಹಾಸಿನಮೇಲೆ ಕುಳ್ಳರಿಸಿ ಪಾನಕ ನೀಡಿ ಉಪಚರಿಸಿದರು. 


"ನಾನು ನಿಮ್ಮ ಮಗಳನ್ನು ಮದುವೆಯಾಗಲು ಅಪೇಕ್ಷಿಸುತ್ತೇನೆ . ನನ್ನ ರಾಜ್ಯ ಬಹಳ  ವಿಶಾಲವಾದದ್ದು  . ನನ್ನ ಅರಮನೆ ಬಹಳ ದೊಡ್ಡದು . ಹೇರಳವಾದ ನೌಕರರಿಂದಲೂ  ಕ್ಷೀಣವಾಗದಷ್ಟು  ಆಹಾರದಿಂದಲೂ ತುಂಬಿರುವುದು  . ನಿಮ್ಮ ಮಗಳು ನಿಶ್ಚಿಂತೆಯಿಂದ ಇರಬಹುದು . ಇಗೋ ! ಇವೆಲ್ಲ ನಿಮಗಾಗಿ ನಾನು ತಂದಿರುವ  ಉಡುಗೊರೆ .." ಎಂದು ನಯವಾಗಿ ನುಡಿದ  ಮೃಗನಾಯಕ .
ಹಣ್ಣುಗಳು , ಧಾನ್ಯಗಳು , ಗಂಧದ ದಿಮ್ಮಿಗಳು , ಮೂಟೆಯ  ತುಂಬ ನವರತ್ನಗಳು , ಎಲ್ಲವನ್ನೂ ಉಡುಗೊರೆಯಾಗಿ ಕೊಟ್ಟ ಮೃಗನಾಯಕ .
ತಾಯಿ ತಂದೆಯರಿಗೆ  ಪುಳಕವೇರ್ಪಟ್ಟಿತು .  ಆದರೆ ಮಗಳೋ ಪಿಸುಗುಟ್ಟಿದಳು : 
" ಉಡುಗೊರೆಗಳಿಗೇನೂ ಕಡಿಮೆ ಇಲ್ಲ . ಆದರೆ ಈ  ರಾಜ ಏಕೋ ವಿನೋದವಾಗಿ ಕಾಣಿಸುತ್ತಾನಲ್ಲ !ಕಪ್ಪು ಮೂಗು ! ಪ್ರಾಣಿಗಳ ಪಂಜಿನಂತೆ ಕೈಗಳು !"
" ಉಶ್ ! ಸುಮ್ಮನಿರೇ ಮಗಳೇ ! ಎಂತ ವಿನೋದವ ಕಂಡೆ ? ಮನುಷ್ಯರು ವಿಭಿನ್ನರಾಗಿರುತ್ತಾರೆ  !"
" ಸರಿ!ಸರಿ !"ಎಂದಳು ಮಗಳು . 
ಅಂದು ಸಂಜೆಯೇ ಮದುವೆಯ ಸಂಭ್ರಮ ! ಓರ್ವ ಮಹಾರಾಜ ತಮ್ಮ ಅಳಿಯನಾದನಲ್ಲಾ   ಎಂದು ಇಡೀ ಹಳ್ಳಿಯೇ ಹಿಗ್ಗಿತು . 
ಮದುವೆಯ ನಂತರ ಮಡದಿಯೊಡನೆ ಹೊರಟು ನಿಂತ ಮೃಗನಾಯಕ . 
" ನನ್ನ ರಾಜ್ಯ ಬಹಳ ದೂರ . ತಲುಪುವುದಕ್ಕೆ ಹೆಚ್ಚು ಸಮಯವಾಗುವುದು . ನೀನು ಸಹನೆಯಿಂದಿರ ಬೇಕು. " ಎಂದು ಎಚ್ಚರಿಸಿದ . 
"ಒಳ್ಳೆಯ ಮಡದಿಯಾಗಿ ನಮ್ರತೆಯಿಂದಿರು ಮಗಳೇ ." ಎಂದು ಮಗಳನ್ನು ಬೀಳ್ಕೊಟ್ಟರು ಹೆತ್ತವರು . 


ಮೃಗನಾಯಕ ಮತ್ತು ಹುಡುಗಿ ಆನೆ ಸವಾರಿಯಲ್ಲಿ ಹೊರಟರು . 
ಆನೆ ನಡೆಯಿತು ನಡೆಯಿತು ನಡೆಯುತ್ತಲೇ ಇತ್ತು . 
ಎರಡು ತಾಸುಗಳನಂತರ ಹುಡುಗಿಗೆ ಆಯಾಸವಾಯಿತು . "ಇನ್ನು ಎಷ್ಟು ದೂರ?" ಎಂದು ಕೇಳಿದಳು . 
''ಸುಮ್ಮನೆ ಬರುವೆಯೋ ? ಸ್ವರೂಪವ  ತೋರಲೋ ?'' ಎಂದು ಕೋಪದಿಂದ ಉರಿದುಬಿದ್ದ ಮೃಗನಾಯಕ . 
ಹುಡುಗಿ ಮೌನವಾದಳು . 
ಮತ್ತೊಂದು ತಾಸು ಕಳೆಯಿತು . ಸೂರ್ಯಾಸ್ತವೂ ಆಯಿತು . ಹುಡುಗಿಗೆ ಬೇಸರವಾಯಿತು . ಹಸಿವೂ ಉಂಟಾಯಿತು . 
"ಇನ್ನೆಷ್ಟು ದೂರ ?" ಎಂದು ಕೇಳಿದಳು  . 
"ಸುಮ್ಮನೆ ಬರುವೆಯೋ ಸ್ವರೂಪವ  ತೋರಲೋ ?" ಎಂದು ಕೋಪಗೊಂಡು ಸಿಡುಕಿದ ಮೃಗನಾಯಕ . 
 ಕಡೆಗೊಮ್ಮೆ ಅವರುಗಳು ಕಾಡನ್ನು ಪ್ರವೇಶಿಸಿದರು . ಬಹಳ ಕತ್ತಲಾಗಿತ್ತು. ಭಯವೇರ್ಪಟ್ಟಿತು . ಹುಡುಗಿಗೆ ಇನ್ನೂ ಸಹಿಸುವುದು ಅಸಾಧ್ಯವಾಯಿತು . 
ಬೆಟ್ಟ ಗುಡ್ಡಗಳನ್ನು  ಹತ್ತಿ ಇಳಿದು , ಹೊಳೆಗಳನ್ನು ದಾಟಿ   , ಪೊದೆಗಳಲ್ಲಿ ತೂರಿ ಸಾಗುತ್ತಲೇ  ಇದ್ದರು . 
" ಇನ್ನೂ ಎಷ್ಟು ದೂರ?" ಹುಡುಗಿ ಗೊಣಗಿದಳು . 
"ಸುಮ್ಮನೆ ಬರುವೆಯೋ ಸ್ವರೂಪವ  ತೋರಲೋ ?" ಎಥಾಪ್ರಕಾರ ರೇಗಿದ ಮೃಗನಾಯಕ . 
ಹುಡುಗಿ ತಾಳ್ಮೆಯಿಂದ ಮತ್ತೆ ಮೌನವಾದಳು . 


ಕಡೆಗೂ ಮುಂಜಾವಿನ ವೇಳೆಗೆ  ಗವಿಯನ್ನು ತಲುಪಿದರು . ಆನೆಯೂ ಬೀಳ್ಗೊಂಡಿತು  . 
" ಒಳಗೆ ನಡಿ . ಇದೇ ನನ್ನ ಮನೆ . " ಎಂದ ಮೃಗನಾಯಕ . 
ಹುಡುಗಿ ಚಕಿತ ಗೊಂಡಳು . " ನೀನೆಂತಹ ಮಹಾರಾಜ ! ಈ ಹೊಲಸು ಗವಿಯೊಳಗೆ ನಾನು ಕಾಲಿಡಲಾರೆ !"
ಕೋಪಗೊಂಡ ಮೃಗನಾಯಕ ಥಟ್ಟನೆ ಎಗರಿಬಿದ್ದ . " ಸುಮ್ಮನೆ ಬರುವೆಯೋ ? ಸ್ವರೂಪವ  ತೋರಲೋ?"
ಹುಡುಗಿಯೂ ಕೋಪದಿಂದ ರೇಗಿದಳು . " ತೋರು ಸ್ವರೂಪವ !"
ಮೃಗನಾಯಕ ತನ್ನ ಮಾರುವೇಷವನ್ನು ಕಳಚಿ ಹಾಕಿದ . ಅವನು  ಮನುಷ್ಯನೇ ಅಲ್ಲ , ಮೃಗ,  ಎಂಬುದನ್ನು  ಕಂಡುಕೊಂಡ  ಹುಡುಗಿ ಗರ ಬಡಿದವಳಂತೆ ಆದಳು. "ನಾವು  ಮೋಸ ಹೋದೆವು ! "ಎಂದು ಕೂಗಿಕೊಂಡಳು . 
"ಸಾಕು !"  ಎಂದು ಗುಡುಗಿದ ಮೃಗನಾಯಕ .  "ನಮಗಾಗಿ ಕೆಲಸ ಮಾಡಲೆಂದೇ  ನಿನ್ನನ್ನು ಕರೆತಂದಿರುವೆ . ಸದ್ದು   ಮಾಡಿದರೆ ನಿನ್ನನ್ನು ನುಂಗಿ ಹಾಕುವೆ ! ಜೋಕೆ ! ಈಗ ಹೊರಡು ! ಮನೆಯನ್ನು ಸ್ವಚ್ಛ ಮಾಡು, ಅಡುಗೆ ಮಾಡು .  ಹೊಲಿದು ಮುಗಿಸಿ ನನ್ನ ಮರಿಗಳಿಗೆ ಲಾಲಿ  ಹಾಡು  !"