Saturday, June 14, 2014

Bidaa Monda Kodaa Bhanda / ಬಿಡಾ ಮೊಂಡ ಕೊಡಾ ಭಂಡ




ಬಿಡಾ ಮೊಂಡ ಕೊಡಾ ಭಂಡನ ಕಥೆ !

" ಬರಿ ಚಿತ್ರಗಳನ್ನ ಮಾತ್ರ ನೋಡ್ಕೊಡ್ತೀನಿ . ಕೊಡು ಅಣ್ಣ !"ಎಂದು ಕೇಳಿದಳು ಪುಟ್ಟಿ . 

" ತಡಿ , ಬೆತಾಳದ್ ಕಥೆ ಮಾತ್ರ ಓದ್ಕೊಡ್ತೀನಿ ." ಎಂದು ಹೊಸ 'ಚಂದಮಾಮ' ಪುಸ್ತಕವನ್ನ ಪುಟ್ಟಿಯ ಕೈಯಿಂದ ಕಿತ್ತು ಕೊಳ್ಳಲು ಯತ್ನಿಸಿದ  ಪುಟ್ಟಣ್ಣ ."

"ಈಗ್ಲೆ  ನೋಡ್ ಕೊಟ್ಟೆ ಇರು . " ಎಂದು ಪುಸ್ತಕವನ್ನ ಗಟ್ಟಿಯಾಗಿ ಹಿಡಿದುಕೊಂಡಳು ಪುಟ್ಟಿ . 

"ನಾನೂ ಕೂಡ್ಲೇ ಕೊಟ್ಬಿಡ್ತಿನಿ, ಕೊಡು  ." ಎನ್ನುತ್ತ ಪುಸ್ತಕವನ್ನು ತನ್ನ ಕಡೆ ಸೆಳೆದುಕೊಂಡ ಪುಟ್ಟಣ್ಣ .  

" ಕೊಡು  !" 

" ಬಿಡು  !"

ತರಕಾರಿ  ಕೊಂಡುಕೊಂಡು ಆಗತಾನೆ ಗೇಟನ್ನು ತೆರೆದುಕೊಂಡು ಒಳಗೆ ಬರುತ್ತಿದ್ದ ಅಜ್ಜಿಗೆ ಪುಟ್ಟಿ ಪುಟ್ಟಣ್ಣ ಕಾದಾಡುತ್ತಿದ್ದದ್ದು  ಕೇಳಿಸಿತು .

" ಏನ್ರಪ್ಪಾ ಇದು ? ನಿಮ್ ಜಗ್ಳ ಗೇಟ್ ವರ್ಗೆ ಕೇಳಿಸ್ತಿದೆ ! ಒಳ್ಳೆ ಬಿಡಾ ಮೊಂಡ  ಕೊಡಾ ಭಂಡನ  ಹಾಗೆ  ಆಡ್ತಿದ್ದೀರಿ  . " ಎನ್ನುತ್ತಾ ತರಕಾರಿ ತುಂಬಿದ ಬ್ಯಾಗ್ ಮೂಲೆಗಿಟ್ಟು   ಬಂದ  ಅಜ್ಜಿ ಆಕ್ಷೇಪಿಸಿದಳು . 

"ಹಾಯ್ ! ಅದ್ಯಾರಜ್ಜಿ ಬಿಡಾ ಮೊಂಡ  ಕೊಡಾ ಭಂಡ  ? " 'ಚಂದಮಾಮ' ವನ್ನು ಮರೆತು ಪ್ರಶ್ನಿಸಿದ ಪುಟ್ಟಣ್ಣ . 

" 'ಬಿಡಾ, ಬಿಡಾ'  ಅಂತ ತಡೆದ್ರೂ  ತನ್ನ ಕೆಲ್ಸಾನ  ಬಿಡ್ದೇ ಸಾಧ್ಸೋ  ಮೊಂಡ   " ಬಿಡಾ ಮೊಂಡ   ".  ''ಕೊಡಾ ಅಪ್ಪಾ, ಕೊಡಾ ಅಯ್ಯ " ಅಂತ  ಕಾಡಿ ಬೇಡಿದ್ರೂ ಯಾರ್ಗೂ ಮೂರು ಕಾಸು ಕೊಟ್ಟು ಸಹಾಯ ಮಾಡದ  ಭಂಡ  "ಕೊಡಾ ಭಂಡ  ". ತಾನು ಓದುತ್ತಿದ್ದ ದಿನ ಪತ್ರಿಕೆಯನ್ನು ಮುಚ್ಚಿಟ್ಟು ವಿವರ ನೀಡಿದರು ತಾತ . 

"ಅಜ್ಜಿ ! ಆ ಕಥೆ ಹೇಳಜ್ಜಿ ! " ಕೈಯಿಂದ 'ಚಂದಮಾಮ' ಜಾರಿ ಬೀಳುತ್ತಿದ್ದದ್ದನ್ನು ಗಮನಿಸದೆ ಅಜ್ಜಿಯನ್ನು ಬೇಡಿಕೊಂಡಳು ಪುಟ್ಟಿ  .  

ಒಂದು ಲೋಟ ನೀರನ್ನು  'ಗಟಗಟ' ಕುಡಿದು , ಹಜಾರದ ಕಂಬಕ್ಕೆ ಒರಗಿ ಕುಳಿತಳು ಅಜ್ಜಿ . ಮಕ್ಕಳಿಬ್ಬರೂ ಹೊಸ ಕಥೆಯ ನಿರೀಕ್ಷೆಯಲ್ಲಿ ಅವಳ  ಎದುರಲ್ಲಿ ಕುಳಿತರು . ಆಗತಾನೆ ಕಾಲೇಜಿನಿಂದ ಹಿಂದಿರುಗಿದ್ದ ಸರಸು ಅತ್ತೆ ತಿಂಡಿ ತಟ್ಟೆ ಹಿಡಿದು ಬಂದು ತಾನು ಅಲ್ಲೇ ಕುಳಿತಳು . 

ಶುರುವಾಯಿತು ಬಿಡಾ ಮೊಂಡ ಕೊಡಾ ಭಂಡನ ಕಥೆ .  


ಬಿಡಾ ಮೊಂಡ ಬಲು ದುಡಿಮೆಗಾರ . ಹಾಗಾಗಿ  ಆಗಿಂದಾಗ್ಯೆ ಹಣ ಸಾಲ ಮಾಡುವುದು ಅವನಿಗೆ ಅನಿವಾರ್ಯವಾಗಿದ್ದಿತು . ಕೊಡಾ ಭಂಡ ಹಳ್ಳಿಯ ಸಾಹುಕಾರ. ಹಾಗಾಗಿ ಹಣ ಸಹಾಯ ಬಯಸಿದವರೆಲ್ಲಾ ಅವನ ಬಳಿ   ಕೈ ಚಾಚಲೇ ಬೇಕಾಗಿರುತ್ತುತ್ತು . 

ಒಮ್ಮೆ ಬಿಡಾ ಮೊಂಡನಿಗೆ ಬೀಜಗಳನ್ನು ಕರೀದಿ ಮಾಡ  ಬೇಕಾಗಿತ್ತು  . ಅದಕ್ಕಾಗಿ  ಕೊಡಾ ಭಂಡನ ಬಳಿ  ಹೋಗಿ  ಸಾಲ ಕೇಳಿದನು . 

"ಸರಿ ! ನಿನಗೆ ಹಣ ಕೊಡುವೆನು . ಆದರೆ ಬಡ್ಡಿಯಾಗಿ ನಿನ್ನ ಬೆಳೆಯಲ್ಲಿ ಅರ್ಧಬಾಗವನ್ನು ನನಗೆ ಸಲ್ಲಿಸಬೇಕು ."

"ಇದು ಬಹಳ ದುಬಾರಿಯಾಯಿತು ."

" ಇಲ್ಲ , ಎಲ್ಲ  ಸರಿಯಾಗಿಯೇ  ಇದೆ   . ಹಣ ನನ್ನದ್ದಾದ್ದರಿಂದ ನನಗೆ ಸಲ್ಲ ಬೇಕಾದ ಭಾಗವನ್ನು ನಾನೇ ಆಯ್ಕೆ ಮಾಡಿಕೊಳ್ಳುವ ಹಕ್ಕು ನನಗಿದೆ . ಭೂಮಿಯ ಮೇಲ್ಬಾಗದಲ್ಲಿ ಬೆಳೆಯುವುದೆಲ್ಲ ನನಗೆ ಸೇರಿದ್ದು . ಕೆಳಗೆ ಬೆಳೆಯುವುದೆಲ್ಲ ನಿನ್ನದ್ದಾಗಲಿ. "ಬಿಡಾ ಮೊಂಡನಿಗೆ ಹಣವನ್ನು ಕೊಟ್ಟು ಧೃಡವಾಗಿ ನುಡಿದನು. 

 ದುಷ್ಟ ನಗೆ ಬೀರಿ ' ಹ ಹ ಹ ! ತರಕಾರಿ ಹಣ್ಣುಗಳು  ಭೂಮಿಯ ಮೇಲೆ ಬೆಳೆಯುತ್ತವೆ  . ಅವೆಲ್ಲ ನನಗೆ ಸೇರುತ್ತವೆ . ಕೇವಲ ಉಪಯೋಗವಿಲ್ಲದ ಬೇರುಗಳು  ಭೂಮಿಯ  ಕೆಳಗೆ  ಬೆಳೆಯುತ್ತವೆ . ಅವೆಲ್ಲ ಅವನಿಗೆ ಸೇರಲಿ . " ಎಂದುಕೊಂಡನು   


ಇದು ಅನ್ಯಾಯವೆನಿಸಿದರೂ ಬಿಡಾ ಮೊಂಡ ಹಣವನ್ನು ತೆಗೆದುಕೊಂಡನು . ತೋಟದುಪಕರಣಗಳನ್ನು ಕೊಂಡುಕೊಂಡು ತೋಟದಲ್ಲಿ ಚೆನ್ನಾಗಿ ದುಡಿದನು . ಕ್ರಮೇಣ ಕೊಯ್ಲನ್ನು ಮುಗಿಸಿದನು  . ನಂತರ ಕೊಡಾ ಭಂಡನ ಬಳಿ  ಹೋದನು . 

" ನೀನು ಹೇಳಿದಂತೆಯೇ ಭೂಮಿಯ ಕೆಳಗಿದ್ದ  ಬೆಳೆಯನ್ನು ನಾನು ತೆಗೆದುಕೊಂಡೆ. ಈಗ ನೀನು ಹೋಗಿ ಭೂಮಿಯ ಮೇಲೆ ಬೆಳೆದವನ್ನ ಸಂಗ್ರಹಿಸಿಕೋ ." ಎಂದನು . 

ಕೊಡಾ ಭಂಡ  ದುರಾಶೆಯಿಂದ ಬುಟ್ಟಿ  ಹಿಡಿದು ತೋಟಕ್ಕೆ ಓಡಿದನು . ಬಿಡಾ ಮೊಂಡ ಭೂಮಿಯ ಕೆಳಗಿದ್ದ ಶೇಂಗಾ ಬೆಳೆಯನ್ನು ಆಗಲೇ ಕೊಯ್ಲು  ಮಾಡಿದ್ದನು ಕಂಡನು . ಒಣಗಿದ್ದ ಎಲೆಗಳೂ ಕಡ್ಡಿಗಳೂ ಮಾತ್ರ ತನಗಾಗಿ ಉಳಿದಿರುವುದನ್ನು ಕಂಡನು . 

ಅವನೇನನ್ನುತಾನೆ ಹೇಳ ಬಲ್ಲ  ? ನಾಚಿಕೆಯಿಂದ ನಾಲಿಗೆ ಕಚ್ಚಿಕೊಂಡು ಮನೆಗೆ ಮರಳಿದನು .  


ಮುಂದಿನ ಋತು ಪ್ರಾರಂಭವಾಯಿತು . ಮುಂದಿನ ಬೆಳೆಗಾಗಿ  ಬಿಡಾ ಮೊಂಡ ಮತ್ತೆ ಸಾಲ ತೆಗೆದುಕೊಳ್ಳಲು ಕೊಡಾ ಭಂಡನ ಬಳಿ ಹೋದನು . ಕೊಡಾ ಭಂಡ ಈ ಬಾರಿ ಬಹಳ ಎಚ್ಚರಿಕೆಯಿಂದಿದ್ದನು . ಹಣಕೊಡಲು ಒಪ್ಪಿದನು . ಬೆಳೆಯಲ್ಲಿ ಅರ್ಧ ಪಾಲನ್ನು ಬಡ್ಡಿಯಾಗಿ ಕೊಡ ಬೇಕೆಂದು ಹಠದಿಂದ ನುಡಿದನು .   "ಜ್ಞಾಪಕವಿರಲಿ ! ಭೂಮಿಯ ಕೆಳಗೆ ಬೆಳೆಯುವುದೆಲ್ಲ ನನ್ನದಾಗ ಬೇಕು . ಮೇಲೆ ಬೆಳೆಯ ತಕ್ಕದ್ದೆಲ್ಲ ನಿನ್ನದಾಗಲಿ . "

ಬಿಡಾ ಮೊಂಡ ಎಂದಿನಂತೆ ಚೆನ್ನಾಗಿ ದುಡಿದನು . ಕ್ರಮೇಣ ಒಳ್ಳೆ ಫಸಲನ್ನು  ತೆಗೆದನು . ನಂತರ ಕೊಡಾ ಭಂಡನ ಬಳಿ ಹೋಗಿ " ಭೂಮಿಯ ಮೇಲೆ ಬೆಳೆದವನ್ನ ನಾನು ತೆಗೆದುಕೊಂಡೆ . ನಿನ್ನ ಮಾತಿನಂತೆ ಕೆಳಗೆ ಬೆಳೆದವನ್ನ ನಿನಗಾಗಿ ಬಿಟ್ಟಿರುವೆ . " ಎಂದನು . 

ಕೊಡಾ ಭಂಡ ಕಡ್ಲೆಕಾಯಿಯ ನಿರೀಕ್ಷೆಯಲ್ಲಿ ದೊಡ್ಡ ಚೀಲವನ್ನು ಹಿಡಿದು ಓಡಿದನು . ಆದರೆ ಬಿಡಾ ಮೊಂಡನೋ ಹೆಸರು ಕಾಳನ್ನು ಪಯಿರು ಮಾಡಿ , ಎಲ್ಲವನ್ನೂ ತಾನು ತೆಗೆದುಕೊಂಡು , ಕೊಡಾ ಭಂಡನಿಗಾಗಿ ಬರಿ ಬೇರುಗಳನ್ನು ಬಿಟ್ಟಿದ್ದನು . ಕೊಡಾ ಭಂಡ ಏನನ್ನುತಾನೇ ಹೇಳ ಬಲ್ಲ ? ನಾಲಿಗೆ ಕಚ್ಚಿ ಕೊಂಡು ನಾಚಿಕೆಯಿಂದ ಮನೆಗೆ ಮರಳಿದನು . 


ಮತ್ತೆ ಋತುಮಾನ ಬದಲಾಯಿತು . ಎಂದಿನಂತೆ ಬಿಡಾ ಮೊಂಡ ಸಾಲಕ್ಕಾಗಿ ಕೊಡಾ ಭಂಡನ ಬಳಿ ತೆರಳಿದನು . ಕೊಡಾ ಭಂಡ ಮತ್ತಷ್ಟು ಎಚ್ಚರ ವಹಿಸಿದ . 

" ನೀನು ಯಾವ ಬೆಳೆ ಬೆಳೆಯಲು ನಿರ್ಧರಿಸಿರುವೆ ಎಂಬುದನ್ನು ಮೊದಲು ಹೇಳು. " 

" ನಾನು ಏನನ್ನೂ ಬೆಳೆಯುತ್ತಿಲ್ಲ . ಒಂದು ಆಕಳನ್ನು ಕೊಂಡುಕೋಳ್ಳಲಿದ್ದೇನೆ ."

" ಹೇ ಹೇ ." ಮನದಲ್ಲಿ ದುರಾಲೋಚನೆ ಮಾಡುತ್ತಾ ಮುಸಿ ನಕ್ಕನು ಕೊಡಾ ಭಂಡ . 

" ಸರಿ ! ಆಕಳನ್ನು ಕೊಂಡುಕೊಳ್ಳಲು ನಾನು ಸಾಲ ಕೊಡುವೆ . ನೀನು ಅದನ್ನು ಮೇಯಿಸಿ ಚೆನ್ನಾಗಿ ಆರೈಕೆ ಮಾಡು  . ಆದರೆ ಅದರ ಅರ್ಧ ಬಾಗ ಬಡ್ಡಿಯಾಗಿ  ನನಗೆ ಸೇರಬೇಕು . ಹಣ ನನ್ನದ್ದಾದ್ದರಿಂದ ಆಕಳ ಹಿಂಬಾಗವನ್ನು ನನ್ನದೆಂದು ಆಯ್ಕೆ ಮಾಡಿದ್ದೇನೆ ." . 

ಹಾಗಾಗಿ ಕೊಡಾ ಭಂಡ ಹಣ ಕೊಡಲು, ಬಿಡಾ ಮೊಂಡ ಒಂದು ಶ್ರೇಷ್ಠವಾದ ಆಕಳನ್ನು ಕೊಂಡುಕೊಂಡನು . ಅದನ್ನು ಉತ್ತಮ ರೀತಿಯಲ್ಲಿ ಸಾಕಿ ಸಲಹಿದನು. ಅದು ದಷ್ಟು ಪುಷ್ಟಾಗುವವರೆಗೆ ಕಾಡಲ್ಲಿ ಮೇವಿಗೆ ಕರೆದೊಯ್ದುನು . ನಂತರ ಹಾಲಿನ ವ್ಯಾಪಾರ ಪ್ರಾರಂಭಿಸಲು ನಿರ್ಧರಿಸಿದನು . ಇದನ್ನರಿತ ಕೊಡಾ ಭಂಡ, ಆಕಳ ಹಿಂಬಾಗ ತನಗೆ ಸೇರಿದ ಕಾರಣ, ಹಾಲು  ಕರೆಯುವ ಹಕ್ಕು ತನ್ನದ್ದು ಎಂದು ವಾದ ಮಾಡಿದನು . 


ಬಿಡಾ ಮೊಂಡ ಮೌನವಾಗಿ ಕೊಡಾ ಭಂಡನಿಗೆ  ಹಾಲು ಕರೆಯವ ಅಧಿಕಾರವನ್ನು ಬಿಟ್ಟು ಕೊಟ್ಟನು . ಕೊಡಾ ಭಂಡ ಹಾಲು ಕರೆಯಲು ಕುಳಿತಾಕ್ಷಣ , ಬೀಡಾ ಮೊಂಡ ಆಕಳಿನ ಕುತ್ತಿಗೆಯನ್ನು ತಟ್ಟಿದನು . 

 " ಲೇ ! ಆಕಳನ್ನ ಪೀಡಿಸ ಬೇಡವೋ  !" ಕೊಡಾ ಭಂಡ ಕೋಪದಿಂದ ಚೀರಿದನು  .
  
" ನಿನ್ನ ಅರ್ಧ ಬಾಗದಲ್ಲಿ ನಿನ್ನ ಕಾರ್ಯ ಮುಂದುವರಿಸು . ನನ್ನ ಅರ್ಧ ಬಾಗದಲ್ಲಿ  ನಾನು ಏನಾದರೂ ಮಾಡಿಕೊಳ್ಳುವೆ ." ಎನ್ನುತ್ತ ಆಕಳ ಕಿವಿಯನ್ನು  ಹಿಂಡಿದ  ಬಿಡಾ ಮೊಂಡ . 

ಕೋಪಗೊಂಡ ಆಕಳು , ಕೊಡಾ ಭಂಡನನ್ನೂ ಅವನ ಹಾಲಿನ ಕೊಡವನ್ನೂ ತನ್ನ ಹಿಂದಿನ ಕಾಲುಗಳಿಂದ ಒದ್ದು ಉರುಳಿಸಿ , ಅತಿ ವೇಗದಿಂದ ಕಾಡೊಳಕ್ಕೆ ಓಡಿ ಕಣ್ಮರೆಯಾಯಿತು. 

" ನಿನ್ನ ಅರ್ಧ ಬಾಗ ಆಕಳು ನನ್ನ ಅರ್ಧ ಬಾಗದ ಜೊತೆ  ಓಡಿ ಹೋಯಿತಲ್ಲ  . ನನಗೆ ನಷ್ಟವಾಗಿ ಹೋಯಿತಲ್ಲ  . ನನಗೆ ಸೇರಬೇಕಾದ ಅರ್ಧ ಹಣವನ್ನು ಈಗಲೇ ಕೊಡು . ಇಲ್ಲವೇ ಮಹಾರಾಜರ ಬಳಿ ದೂರು ಕೊಡುವೆ . " ಎಂದು ಕೂಗಾಡಿದನು ಬಿಡಾ ಮೊಂಡ . 

ಕೊಡಾ ಭಂಡ ಏನನ್ನುತಾನೇ  ಮಾಡಿಯಾನು ? ನಾಚಿ ನಾಲಿಗೆ ಕಚ್ಚಿಕೊಂಡು ಅರ್ಧ ಆಕಳಿನ ಬೆಲೆಯನ್ನು ಮೌನವಾಗಿ ತೆತ್ತನು !


ಕಾಲ ಬದಲಾಯಿತು . ಮತ್ತೆ ಸಾಲಕ್ಕಾಗಿ ಬಿಡಾ ಮೊಂಡ ಕೊಡಾ ಭಂಡನ ಬಳಿ ಮರಳಿದನು . " ಈ ಬಾರಿ ಯಾವ ಪ್ರಾಣಿಯನ್ನು ಕರೀದಿ ಮಾಡಲಿರುವೆ  ? " ಎಚ್ಚರಿಕೆಯಿಂದ ಪ್ರಶ್ನಿಸಿದನು ಕೊಡಾ ಭಂಡ . 
" ಪ್ರಾಣಿ ಕರೀದಿಸುವ ಯೋಚನೆ ಇಲ್ಲ . ಒಂದು ದೊಡ್ಡ ಮಾವಿನ ಮರವಿರೋ  ಒಂದು ಪುಟ್ಟ ಜಮೀನು ಉಂಟು  . ಅದನ್ನು ಕೊಂಡುಕೊಂಡು , ಅಲ್ಲಿ ನನಗಾಗಿ  ಒಂದು ಗುಡಿಸಲನ್ನು ಹಾಕಿಕೊಳ್ಳಲಿರುವೆ ." 

" ಸರಿ  . ಹಣ ಕೊಡುತ್ತೇನೆ . ಆದರೆ ಮರದ ಮೇಲ್ಬಾಗವನ್ನು ಬಡ್ಡಿಯಾಗಿ  ತೆಗೆದುಕೊಳ್ಳುವೆ . ಆರು ತಿಂಗಳುಗಳು ಕಳೆಯುವ ಮೊದಲು  ಸಾಲ ತೀರಿಸದೆ ಹೋದಲ್ಲಿ ನಿನ್ನ ಗುಡಿಸಲು ಜಮೀನು ಎಲ್ಲವೂ ನನ್ನದಾಗುತ್ತವೆ . "

' ಹೇ ಹೇ ಹೇ !' ಕುಹಕ ನಗೆ ಬೀರಿದ ಕೊಡಾ ಭಂಡ . ಹಣ್ಣನ್ನು ಮಾರಿ ಹಣ ಗಳಿಸುವ ಎಂದುಕೊಂಡಿರುವನೇನು  ? ಈಗ ಮರದ ಮೇಲ್ಬಾಗವನ್ನು ಈತ ಮುಟ್ಟುವ ಹಾಗಿಲ್ಲ . ಆದ್ದರಿಂದ ಸಾಲವನ್ನು ಹಿಂದಿರುಗಿಸಲೂ ಆಗುವುದಿಲ್ಲ . ಹಾಗಾಗಿ ಅವನ ಜಮೀನು ಗುಡಿಸಲು ಮರ  ಎಲ್ಲವೂ  ನನ್ನದಾಗುತ್ತವೆ . 


ಬಿಡಾ ಮೊಂಡ ಜಮೀನನ್ನು ಕೊಂಡುಕೊಂಡ . ಗುಡಿಸಲನ್ನು ಹಾಕಿಕೊಂಡ . ಮರವನ್ನೂ ಅಕ್ಕರೆಯಿಂದ ಪೋಷಿಸಿದ . 

ಸಕಾಲದಲ್ಲಿ ಮರವು  ರಸಭರಿತ ಹಣ್ಣುಗಳನ್ನು ಕೊಡತೊಡಗಿತು . ಇದನ್ನರಿತ ಕೊಡಾ ಭಂಡ ಗೋಣಿ ಚೀಲದೊಂದಿಗೆ ಧಾವಿಸಿ ಬಂದನು . ಹಣ್ಣು ಕುಯ್ಯಲು ಮರವನ್ನು ಹತ್ತಲೆತ್ನಿಸಿದನು . ಆದರೆ ಬಿಡಾ ಮೊಂಡ ಅವನನ್ನು ತಡೆದನು . 

" ಮರದ ಮೇಲ್ಬಾಗ ಮಾತ್ರ ನಿನ್ನದು . ಕೆಳಗಿನ ಬಾಗದಲ್ಲಿ ನೀನು ನಿನ್ನ ಕೈಯ್ಯನ್ನೋ ಕಾಲನ್ನೊ ಇಡುವಂತಿಲ್ಲ . ಅದು ನನಗೆ ಸೇರಿದ ಬಾಗ . "

 ಕೊಡಾ ಭಂಡ ಒಂದು ಏಣಿಯನ್ನು ತಂದು ಮರಕ್ಕೆ  ಆನಿಸಿಟ್ಟು , ಅದನ್ನು ಹತ್ತಿ ಹಣ್ಣು ಕುಯ್ಯಲು ಹೊರಟನು . ಅವನು ಸರ ಸರನೆ ಹಣ್ಣು ಕುಯ್ಯುತ್ತಿರಲು , ಬಿಡಾ ಮೊಂಡ ಕೊಡಲಿ ತಂದು  ಮರದ ಬುಡವನ್ನು  ಕೊಚ್ಚಲು ಪ್ರಾರಂಭಿಸಿದನು . 

" ಲೇ ! ಮರವನ್ನು  ಕೊಚ್ಚ ಬಾರದು  ?" ಎಂದು ಕೂಗಿದ ಕೊಡಾ ಭಂಡ . 

" ಏಕೆ ಬಾರದು ? ನಾನು ನನ್ನ ಪಾಲಿನ ಬಾಗವನ್ನೇ  ಕೊಚ್ಚುತ್ತಿರುವೆ . ಮರದ ವ್ಯಾಪಾರಿ ಈ ಮರದ ದಿಮ್ಮಿಗೆ ಒಳ್ಳೆಯ ಬೆಲೆ ಕೊಡುವುದಾಗಿ ಹೇಳಿರುವನು ." 

ಕೊಡಾ ಭಂಡ ಇಳಿಯುವ ಮುನ್ನ ಮರ ಧಡಿಲ್ ಎಂದು ನೆಲಕ್ಕೆ ಅಪ್ಪಳಿಸಿತು. ಹಣ್ಣುಗಳನ್ನು ಜಜ್ಜಿಕೊಂಡು ಅವುಗಳ ಮೇಲೆ ಬಿದ್ದ ಕೊಡಾ ಭಂಡ  . 


ಅವನು ಏನನ್ನುತಾನೆ ಮಾಡಿಯಾನು ? ನಾಚಿ ನಾಲಿಗೆ ಕಚ್ಚಿಕೊಂಡು ಮನೆ ಸೇರಿದನು . 


ಮತ್ತೆ ಸಾಲಕ್ಕಾಗಿ ಬರಲಿರುವ ಬಿಡಾ ಮೊಂಡನನ್ನು ಹೇಗಾದರೂ ತನ್ನ ಬಲೆಯಲ್ಲಿ  ಸಿಕ್ಕಿಸಲೇ ಬೇಕೆಂದು   ಮತ್ತೊಂದು ಸಂಚನ್ನು ಹೂಡಲು ಕಾಯುತ್ತಿದ್ದ ಕೊಡಾ ಭಂಡ . 

ಆದರೆ ಬಿಡಾ ಮೊಂಡ ಮರವನ್ನು ಮಾರಿ ಹೆಚ್ಚು ಹಣವನ್ನು ಗಳಿಸಿದ್ದ ಕಾರಣ ಆತ ಸಾಲಕ್ಕಾಗಿ ಎಂದೆಂದಿಗೂ ಕೊಡಾ ಭಂಡನ ಬಳಿ ಹೋಗಲೇ ಇಲ್ಲ .  

"ಒಳ್ಳೇ ಕಥೆ !" ಎನ್ನುತ್ತಾ ಎದ್ದು ಓಡಿದರು ಮಕ್ಕಳು . 

Monday, June 2, 2014

Mruganayakana Kathe / ಮೃಗನಾಯಕನ ಕಥೆ - The Beast Story - 2

ಮೃಗನಾಯಕನ  ಕಥೆ


ಕಥೆಯಲ್ಲಿ ತಲ್ಲೀನಳಾಗಿದ್ದ ಪುಟ್ಟಿ   ಅಜ್ಜಿಯ ಕೈಯನ್ನು  ಬಿಗಿಯಾಗಿ  ಹಿಡಿದುಕೊಂಡು  ಮೌನವಾಗಿ ನಡೆಯುತ್ತಿದ್ದಳು . 


ಹುಡುಗಿಗೆ ಬಹಳ ಬೇಸರವಾಯಿತು . ಕೋಪ ಉಕ್ಕಿ ಬಂದಿತು  . ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲೇ ಬೇಕು ಎಂದು ಮನಸಲ್ಲೇ ನಿರ್ಧರಿಸಿಕೊಂಡಳು. 
ಇನ್ನು ಅವಳು ಬಹಳ  ಎಚ್ಚರಿಕೆಯಿಂದಿರಬೇಕು ! 
ಗವಿಯನ್ನು ಪ್ರವೇಶಿಸಿ ಎಲ್ಲವನ್ನೂ ಸ್ವಚ್ಛ ಮಾಡಲು ತೊಡಗಿದಳು.  ಮೃಗನಾಯಕನ  ಮರಿಗಳು ಅವಳ ತಲೆಗೂದಲನ್ನು ಎಳೆದವು . ಸಿಕ್ಕ ಸಿಕ್ಕ ಸಾಮಾನುಗಳನ್ನು ತೆಗೆದು ಅವಳ ಮೇಲೆ ಎತ್ತೊಗೆದವು  . ಅವಳು ಸ್ವಚ್ಛ ಮಾಡಿದ್ದವನ್ನೆಲ್ಲ  ಮತ್ತೆ ಗಲೀಜು ಮಾಡಿದವು . 
ಹುಡುಗಿ ಮೌನವಾಗಿ ನಗುಮೊಗದೊಡನೆ  ಎಲ್ಲವನ್ನೂ ಸಹಿಸಿಕೊಂಡಳು . 
"ಹುಷಾರಾಗಿ  ಎಲ್ಲವನ್ನೂ ನೋಡಿಕೋ ಹುಡುಗಿ ." ಅಪ್ಪಣೆ ಮಾಡಿದ  ಮೃಗನಾಯಕ . " ನಾನು ಕೆಲಸದ ಮೇಲೆ ಹೊರಗೆ ಹೋಗಬೇಕಿದೆ . ಸೂರ್ಯಾಸ್ತದ ಸಮಯ ಹಿಂದಿರುಗುವೆ . ಗೊಣಗಾಡಿದರೋ ಸೋಮಾರಿತನದಿಂದಿದ್ದರೋ , ನಿನ್ನ ನುಂಗಿ ಬಿಡುವೆ . ಹುಷಾರ್ !"
ಹುಡುಗಿ ತಲೆದೂಗಿದಳು . 
ಮೃಗನಾಯಕ ಹೊರಗೆ  ಹೋದ ನಂತರ ಹೇರಳವಾದ 'ಇಂಗಿಲಿ ಮಿಂಗಿಲಿ ' ಹಣ್ಣುಗಳನ್ನು  ಹಾಕಿ ರುಚಿ ರುಚಿಯಾದ ಪಾಯಸವನ್ನು ತಯಾರಿಸಿದಳು . 


ದೊಡ್ಡ ಬಟ್ಟಲುಗಳ ತುಂಬ ಪಾಯಸವನ್ನು ಹಾಕಿ ಮರಿಗಳಿಗೆ ಕೊಟ್ಟಳು . ಅವು ಅದನ್ನು ಗಪಗಪನೆ ಕುಡಿದವು . 
'ಇಂಗಿಲಿ ಮಿಂಗಿಲಿ' ಯ ಪ್ರಭಾವದಿಂದ  ಮರಿಗಳೆಲ್ಲ ಕೂಡಲೇ ಗಾಢ  ನಿದ್ರೆಯಲ್ಲಿ  ಮುಳುಗಿ ಹೋದವು .
ಮರಿಗಳನ್ನು ಕಟ್ಟಿ ಚಿಕ್ಕದಾಗಿದ್ದ ಒಳ ಗವಿಯಲ್ಲಿ ಕೂಡಿ ಹಾಕಿದಳು . " ಇನ್ನು ಇಡೀ ದಿನ ಇವು ಮಲಗಿಯೇ  ಇರುತ್ತವೆ !" ಎಂದುಕೊಂಡಾಗ ಅವಳ ಮೊಗದಲ್ಲಿ ಕಿರುನಗೆಯರಳಿತು .  


ನಂತರ ಒಲೆಯನ್ನು ಹೊತ್ತಿಸಿ ಅದರ ಮೇಲೆ ದಪ್ಪ ಕಾವಲಿಯನ್ನು ಇಟ್ಟಳು . ಹಿಟ್ಟನ್ನು ಹೆಚ್ಚಾಗಿ ತಯಾರಿಸಿ , ಅದನ್ನು ಬಾಳೆಲೆಯಲ್ಲಿ ಕಟ್ಟಿ ಒಂದು ಗೋಣೀ ಚೀಲದಲ್ಲಿಟ್ಟಳು . 
ಗೋಣಿ ಚೀಲವನ್ನು ಒಲೆಗೆ ನೇರವಾಗಿ , ಛಾವಣಿಯ ತೊಲೆಗೆ ತಗಲು ಹಾಕಿ , ಮೂಟೆಯ ಕೆಳಗೊಂದು ರಂಧ್ರವನ್ನು  ಮಾಡಿದಳು . 
ಹಿಟ್ಟು ಮೆಲ್ಲ ಮೆಲ್ಲನೆ ತೊಟ್ಟಿಕ್ಕ ತೊಡಗಿತು . ಬಿಸಿ ಕಾವಲಿಯ  ಮೇಲೆ ಹಿಟ್ಟು ತೊಟ್ಟು ತೊಟ್ಟಾಗಿ ಬಿದ್ದಾಗ " ಚೋಯ್ನ್ ಚೋಯ್ನ್ " ಎಂಬ ಶಬ್ದ ಎದ್ದಿತು . 
ಗವಿಯಿಂದ ಹೊರಟ  ಹುಡುಗಿ ತನ್ನ ಮನೆಯನ್ನು ಕುರಿತು ಕಾಡಲ್ಲಿ ಅತಿ ವೇಗವಾಗಿ ಓಡತೊಡಗಿದಳು . 
ಬಲು ಜಾಣೆಯಾಗಿದ್ದ ಕಾರಣ ಹುಡುಗಿಗೆ   ದಾರಿ ಚೆನ್ನಾಗಿಯೇ ನೆನಪಿನಲ್ಲಿತ್ತು . 
ಶೀಘ್ರದಲ್ಲೇ  ಮನೆಯನ್ನು ತಲುಪಿದ ಹುಡುಗಿ ಮೃಗನಾಯಕನ ಮೋಸವನ್ನು ತಾಯಿ ತಂದೆಯರಿಗೆ ವಿವರವಾಗಿ ತಿಳಿಸಿದಳು . 
ಎಲ್ಲರಿಗೂ ಮಿತಿ  ಮೀರಿದ ಕೋಪವೇರ್ಪಟ್ಟಿತು . 


ಅಂದು ಸಂಜೆ ಸೂರ್ಯಾಸ್ತದ ಸಮಯ ಹಿಂದಿರುಗಿದ  ಮೃಗನಾಯಾಕ ಗವಿಯ ಬಾಗಿಲನ್ನು ಕುಟ್ಟಿದನು . 
ಒಳಗಿನಿಂದ ಯಾವ ಉತ್ತರವೂ ಇಲ್ಲ  . ಆದರೆ ಬಿಸಿ ಕಾವಲಿ 'ಚೋಯ್ನ್ ' ಎಂದಿತು . 
" ಆಹ ! ಹುಡುಗಿ ಪಡ್ಡು ಸುಡುತ್ತಿರುವಳು ಅನ್ನಿಸುತ್ತದೆ  . ಎಲ್ಲರೂ ಸಖತ್ತಾಗಿ ತಿನ್ನುತ್ತಿರುವರೇನೋ . ತಡೆಯಿರಿ ! ತಡೆಯಿರಿ ಮರಿಗಳೇ ! ಇಗೋ  ನಾನೂ ಬಂದೆ  !"
ನಾಲಿಗೆಯಲ್ಲಿ ನೀರೂರುತ್ತಿರಲು ಮೃಗನಾಯಕ ರಾಗವಾಗಿ ಹಾಡುತ್ತ  ಮತ್ತೆ ಬಾಗಿಲು ಕುಟ್ಟಿದ :
'ಸುಡು ಸುಡು  ಪಡ್ಡು   ಸುಟ್ಟು ತಿನ್ನುತ್ತಿರುವೆಯಾ  ?
ಇರು ಇರು ಇರು ಇರು  ,  
ಬರುವೆ   ಬರುವೇ  ಬರುವವೇ ಬರುವೆ  !'



ಮೃಗನಾಯಕ ಒಮ್ಮೆ  ಗರ್ಜಿಸಿದ . ನಂತರ ಗುಡುಗಿದ . 
'ಸುಡು ಸುಡು  ಪಡ್ಡು   ಸುಟ್ಟು ತಿನ್ನುತ್ತಿರುವೆಯಾ  ?
ಇರು ಇರು ಇರು ಇರು  ,  
ಬರುವೆ   ಬರುವೇ  ಬರುವವೇ ಬರುವೆ  !'
ಈಗಲೂ ಬಾಗಿಲು ತೆರೆಯಲಿಲ್ಲ . ಆದರೆ ಕಾವಲಿ ಮಾತ್ರ  ' ಚೋಯ್ನ್ ' ಎಂದಿತು.  ಮೃಗನಾಯಕ ಕೊಪಾವೇಶದಿಂದ ಕಂಪಿಸಿದ . ' ಏನೂ ? ಈ ಹುಡುಗಿಗೆ ನನ್ನಲ್ಲಿ ಭಯವೇ ಇಲ್ಲವೇ ? ಇಗೋ ಈಗಲೇ ಹೋಗಿ  ಅವಳಿಗೆ ಗತಿ ಕಾಣಿಸುವೆ . '
ಭಯಂಕರವಾಗಿ ಗುರುಗುಟ್ಟಿದ ಮೃಗನ್ಯಾಕ ,
'ಸುಡು ಸುಡು  ಪಡ್ಡು   ಸುಟ್ಟು ತಿನ್ನುತ್ತಿರುವೆಯಾ  ?
ಇರು ಇರು ಇರು ಇರು  ,  
ಬರುವೆ   ಬರುವೇ  ಬರುವವೇ ಬರುವೆ  !' ಎನ್ನುತ್ತ ಬಾಗಿಲನ್ನು ಬಡಿದು ತೆರೆದು ಒಳಗೆ ನುಗ್ಗಿದ  .
ಬರಿದಾದ ಗವಿ ! ಮಾಯವಾಗಿದ್ದ ಮರಿಗಳು ! ಪರಾರಿಯಾಗಿದ್ದ ಹುಡುಗಿ ! ಮೇಲಾಗಿ ಪಡ್ಡು ಇಲ್ಲ ! ಏನಿಲ್ಲ !
ಕಾವಲಿ ಮಾತ್ರ  ' ಚೋಯ್ನ್ ' ಎನ್ನುತ್ತಿತ್ತು ! 
ಮೃಗನಾಯಕ ಹುಚ್ಚೆದ್ದು ಕಿರುಚಿದ . " ನನ್ನನ್ನು ಮೋಸ ಮಾಡಲು ಹೊರಟೆಯಾ  ಹುಚ್ಚು ಹುಡುಗಿ ? ನಾನು ಬರುವೆ ! ನಿನ್ನ ಜೊತೆ ನಿನ್ನ ತಾಯಿ ತಂದೆಯರನ್ನೂ ಎಳೆದು ತರುವೆ . ನನ್ನ ಗುಲಾಮರನ್ನಾಗಿ ಮಾಡಿಕೊಳ್ಳುವೆ ! ನೋಡುತ್ತಿರು !"


ಮರು ದಿನವೇ ನರನ  ವೇಷ  ಧರಿಸಿ ಹಳ್ಳಿಗೆ ಧಾವಿಸಿ ಬಂದ  ಮೃಗನಾಯಕ . 
ಆತ ಮತ್ತೆ ಬಂದೆ ಬರುತ್ತಾನೆ ಎಬುದನ್ನು ಅರಿತಿದ್ದ ಹುಡುಗಿ ಮತ್ತು ಅವಳ ತಾಯಿ ತಂದೆಯರು , ಮೃಗನಾಯಕನನ್ನು ಎದುರುಗೊಳ್ಳಲು ತಯಾರಾಗಿದ್ದರು . 
" ಪ್ರೀತಿಯ ಅಳಿಯಂದಿರಿಗೆ ಸುಸ್ವಾಗತ !" ಎಂದ ಹುಡುಗಿಯ ತಾಯಿ ತಂದೆಯರು  ಮಜ್ಜಿಗೆ ಮತ್ತು ಲಾಡುಗಳನ್ನು ಕೊಟ್ಟು ಉಪಚರಿಸಿದರು . ಮತ್ತು ಲಾವಂಚದ ಬೀಸಣಿಗೆಯನ್ನು   ಬೀಸಿ ತಂಪು  ಗಾಳಿ ಹಾಕಿದರು.    
" ನಿಮ್ಮ ಹುಡುಗಿ ಎಲ್ಲಿ ? ನನ್ನ ಮನೆ ಬಿಟ್ಟು ಓಡುವಷ್ಟು ಧೈರ್ಯ ಬಂದಿತೆ  ಅವಳಿಗೆ?" ಕೋಪದಿಂದ ಪ್ರಶ್ನಿಸಿದ ಮೃಗನಾಯಕ. 
" ಅವಳು ನಿಮ್ಮನ್ನು ಬಿಟ್ಟು ಓಡಿ  ಬಂದಿಲ್ಲ ಅಳಿಯಂದಿರೆ  . ಮದುವೆಯ ನಂತರ ಅಳಿಯ ದೇವರನ್ನು  ಮತ್ತೆ ಮನೆಗೆ ಕರೆಸಿ  ಔತಣ ನೀಡಿ ಸತ್ಕರಿಸುವುದು ನಮ್ಮ ಪದ್ದತಿ . ಬನ್ನಿ , ಮೊದಲು ನೀವು ಅಭ್ಯಂಜನ ಸ್ನಾನ  ಮಾಡ ಬೇಕು . ನಂತರ ಪನ್ನೀರಿನ  ವೃಷ್ಟಿಯಲ್ಲಿ ತಣ್ಣಗಾಗ ಬೇಕು   . ಅದಾದ ನಂತರ ನಮ್ಮ ಹುಡುಗಿ ತಯಾರಿಸಿರುವ ಮೂವತ್ತು ರುಚಿ ರುಚಿಯಾದ ಪದಾರ್ಥಗಳಿಂದ ಕೂಡಿದ  ಔತಣ. ''


ಮೃಗನಾಯಕನಿಗೆ ಮಹದಾನಂದ ! ಅಭ್ಯಂಜನ ಸ್ನಾನವಂತೆ! ಪನ್ನೀರಿನ ವೃಷ್ಟಿ ಯಂತೆ  !ಇದನ್ನೆಲ್ಲ ಆತನಿಗೆ ಯಾರೂ ಮಾಡಿಸಿರಲಿಲ್ಲ . ಆಹಾ ! ಎಂತಹ ವೈಭವ!
" ದಯೆ ಮಾಡಿ ಬನ್ನಿ ಅಳಿಯ ದೇವರೇ . ಸ್ನಾನಕ್ಕೆ ಎಲ್ಲ ಸಿದ್ಧವಾಗಿದೆ ."
ಮನೆಯ ಹಿತ್ತಲಿಗೆ ಒಯ್ಯಲ್ಪಟ್ಟ ಮೃಗನಾಯಕ ,  ಎತ್ತರವಾದ ವೇದಿಕೆಯ ಮೇಲೆ ಹಾಸಲ್ಪಟ್ಟಿದ್ದ  ಚಾಪೆಯ ಮೇಲಿದ್ದ  ಅಲಂಕರಿಸಲ್ಪಟ್ಟ ಮಣೆಯನ್ನು ಕಂಡನು.   ಸುಗಂಧ ತೈಲಗಳು , ಸ್ನಾನದ ಪುಡಿಗಳು , ಹೊಸತಾದ ಚೌಕ , ಹೊಸ ವಸ್ತ್ರಗಳು ಎಲ್ಲವೂ ಅವನಿಗಾಗಿ  ತಯಾರಾಗಿದ್ದವು . 
" ದಯವಿಟ್ಟು ಮಣೆಯ  ಮೇಲೆ ಕುಳಿತುಕೊಳ್ಳಿ ಅಳಿಯ ದೇವರೇ . ಎಣ್ಣೆ ನೀವುವವನು ಬಂದು ನೀವುತ್ತಾನೆ  ." 
ಮೃಗನಾಯಕ ತೃಪ್ತಿಯಿಂದ ಕಿರುನಗೆ ಬೀರಿ , ವೇದಿಕೆಯನ್ನು ಹತ್ತಿ ಮಣೆಯ ಮೇಲೆ ಕುಳಿತನು . 
ಅಹೋ ! ಮರುಕ್ಷಣ ಮಣೆ , ಚಾಪೆ ಸಹಿತ ಮೃಗನಾಯಕ ವೇದಿಕೆಯ ಹಾಗೆ ಕಂಡ ತೆರೆದ ಬಾವಿಯೊಳಗೆ ಬಿದ್ದನು . 
''ಆ !ಅಯ್ಯೋ !''
 "ಹೊರಗೆ ಬಿಡಿ ! ನನ್ನನ್ನ ಹೊರಕ್ಕೆ ತೆಗೆಯಿರಿ !"ಬಾವಿಯ ತಳದಿಂದ ಚೀರಿದ ಮೃಗನಾಯಕ. 
" ನಮ್ಮ ಹಳ್ಳಿಯ ಕಡೆ ಇನ್ನು ಮುಂದೆ ಕಾಲಿಡುವುದಿಲ್ಲವೆಂದು ಪ್ರಮಾಣ ಮಾಡಿದರೆ  ಮಾತ್ರ!"ಎಂದರು ತಾಯಿ ತಂದೆಯರು.
" ನನ್ನ ಆಣೆ ! ನನ್ನಾಣೆಗೂ  ಬರಲ್ಲ  !" ಎಂದು ಕೂಗಿದ ಮೃಗನಾಯಕ. 


ಉದ್ದವಾದ ಹಗ್ಗವನ್ನು ಬಾವಿಯೊಳಕ್ಕೆ ಎಸೆದು ಮೃಗನಾಯಕನನ್ನು ಹೊರಕ್ಕೆಳೆದರು  . 
ಹೊರಗೆ  ಬಂದ  ಕೂಡಲೇ ಕ್ರೂರಿಯಾದ ಮೃಗನಾಯಕ ಗರ್ಜಿಸುತ್ತ ಹುಡುಗಿಯ ತಾಯಿ ತಂದೆಯರ ಮೇಲೆರಗಿದನು . 
ಆದರೆ ಚುರುಕಾದ ಹುಡುಗಿ ತುರ್ತಿನಿಂದ ವರ್ತಿಸಿದಳು . ಕುದಿಯುತ್ತಿದ್ದ ಎಣ್ಣೆ ಇದ್ದ ಪಾತ್ರೆಯನ್ನು ಕೈಗೆತ್ತಿಕೊಂಡಳು .  "ಹೊರಟು  ಹೋಗು ಇಲ್ಲಿಂದ  !ಇಲ್ಲವೇ ಈ ಕುದಿಯುವ ಎಣ್ಣೆಯಿಂದ ನಿನಗೆ ಅಭಿಷೇಕ ಮಾಡುವೆನು !"
'ಅಯ್ಯೋ ..' ಎಂದು ಕೂಗುತ್ತ ಅಲ್ಲಿಂದ ಕಾಲು ಕಿತ್ತನು ಮೃಗನಾಯಕ . 
ನಂತರ ಆ ಹಳ್ಳಿಯ ಕಡೆ ಆತ ಸುಳಿಯಲೇ ಇಲ್ಲ . 
 ಕಾಡಲ್ಲಿ  ಎಂದೆಂದಿಗೂ  ಪಡ್ಡು ತಿನ್ನಬಾರದೆಂಬ ನಿಷೇಧಾಜ್ಞೆ ಹೊರಡಿಸಲ್ಪಟ್ಟಿತು . 
ಸಿಂಹಗಳೂ ಹುಲಿಗಳೂ ಪಡ್ಡು ತಿನ್ನುವುದಾಗಿ ನೀವೆಲ್ಲಾದರೂ ಕೇಳಿರುವಿರೆ ?
ಕಾರಣ ಈಗ ನಿಮಗೆ ತಿಳಿಯಿತು ತಾನೇ  !
"ನನ್ ತಾತ ಹೇಳಿದ್  ಕಥೆ ಹೇಗಿತ್ತು ?" ಎಂದಳು ಅಜ್ಜಿ . 
" ಪುಟ್ಹುಡುಗಿಗೆ ಯಾರಾದ್ರೂ ಮದ್ವೆ ಮಾಡ್ತಾರಾ ? ಅದೂ ವೇಷ ಹಾಕ್ಕೊಂಡ್ಬಂದ ಪ್ರಾಣಿ ಜೊತೆ ಮದ್ವೆ ಮಾಡ್ತಾರಾ ? ಶುದ್ಧ 'ಗೂಶ್ಲುಗ್ಳು' ಅಜ್ಜಿ ಆ  ಅಪ್ಪ ಅಮ್ಮ !" ಎಂದಳು  ಪುಟ್ಟಿ .  
" ಹುಲಿ ಬೋನು ದಾಟ್ಕೊಂಡ್ ಬಂದಿದ್ದೂ ಗೊತ್ತಿಲ್ದೆ, ತುಟಿ ಪಿಟಕನ್ದೆ  ಕಥೆ ಕೇಳಿದ್ರಲ್ಲಿ ಏನೂ ಕಮ್ಮಿ ಇಲ್ಲ .. " ಎಂದು ಚುಡಾಯಿಸಿದ ಪುಟ್ಟಣ್ಣ . 
" ಹಾ ! ಹೌದಾ ?" ಎಂದು ಚೀರಿದಳು  ಪುಟ್ಟಿ. ಮರು ಕ್ಷಣವೇ  " ಅಜ್ಜಿ ನನ್ಗೆ ಸುಡು ಸುಡು ಪಡ್ಡು ಮಾಡ್ಕೊಡ್ತಿಯಾ ?" ಎಂದು ಕೇಳಿದಳು .  
"ನನ್ಗೂ !" ಎಂದ ಪುಟ್ಟಣ್ಣ . 
"ನನ್ಗೂ  !" ಎಂದರು ತಾತ .