Monday, June 2, 2014

Mruganayakana Kathe / ಮೃಗನಾಯಕನ ಕಥೆ - The Beast Story - 2

ಮೃಗನಾಯಕನ  ಕಥೆ


ಕಥೆಯಲ್ಲಿ ತಲ್ಲೀನಳಾಗಿದ್ದ ಪುಟ್ಟಿ   ಅಜ್ಜಿಯ ಕೈಯನ್ನು  ಬಿಗಿಯಾಗಿ  ಹಿಡಿದುಕೊಂಡು  ಮೌನವಾಗಿ ನಡೆಯುತ್ತಿದ್ದಳು . 


ಹುಡುಗಿಗೆ ಬಹಳ ಬೇಸರವಾಯಿತು . ಕೋಪ ಉಕ್ಕಿ ಬಂದಿತು  . ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲೇ ಬೇಕು ಎಂದು ಮನಸಲ್ಲೇ ನಿರ್ಧರಿಸಿಕೊಂಡಳು. 
ಇನ್ನು ಅವಳು ಬಹಳ  ಎಚ್ಚರಿಕೆಯಿಂದಿರಬೇಕು ! 
ಗವಿಯನ್ನು ಪ್ರವೇಶಿಸಿ ಎಲ್ಲವನ್ನೂ ಸ್ವಚ್ಛ ಮಾಡಲು ತೊಡಗಿದಳು.  ಮೃಗನಾಯಕನ  ಮರಿಗಳು ಅವಳ ತಲೆಗೂದಲನ್ನು ಎಳೆದವು . ಸಿಕ್ಕ ಸಿಕ್ಕ ಸಾಮಾನುಗಳನ್ನು ತೆಗೆದು ಅವಳ ಮೇಲೆ ಎತ್ತೊಗೆದವು  . ಅವಳು ಸ್ವಚ್ಛ ಮಾಡಿದ್ದವನ್ನೆಲ್ಲ  ಮತ್ತೆ ಗಲೀಜು ಮಾಡಿದವು . 
ಹುಡುಗಿ ಮೌನವಾಗಿ ನಗುಮೊಗದೊಡನೆ  ಎಲ್ಲವನ್ನೂ ಸಹಿಸಿಕೊಂಡಳು . 
"ಹುಷಾರಾಗಿ  ಎಲ್ಲವನ್ನೂ ನೋಡಿಕೋ ಹುಡುಗಿ ." ಅಪ್ಪಣೆ ಮಾಡಿದ  ಮೃಗನಾಯಕ . " ನಾನು ಕೆಲಸದ ಮೇಲೆ ಹೊರಗೆ ಹೋಗಬೇಕಿದೆ . ಸೂರ್ಯಾಸ್ತದ ಸಮಯ ಹಿಂದಿರುಗುವೆ . ಗೊಣಗಾಡಿದರೋ ಸೋಮಾರಿತನದಿಂದಿದ್ದರೋ , ನಿನ್ನ ನುಂಗಿ ಬಿಡುವೆ . ಹುಷಾರ್ !"
ಹುಡುಗಿ ತಲೆದೂಗಿದಳು . 
ಮೃಗನಾಯಕ ಹೊರಗೆ  ಹೋದ ನಂತರ ಹೇರಳವಾದ 'ಇಂಗಿಲಿ ಮಿಂಗಿಲಿ ' ಹಣ್ಣುಗಳನ್ನು  ಹಾಕಿ ರುಚಿ ರುಚಿಯಾದ ಪಾಯಸವನ್ನು ತಯಾರಿಸಿದಳು . 


ದೊಡ್ಡ ಬಟ್ಟಲುಗಳ ತುಂಬ ಪಾಯಸವನ್ನು ಹಾಕಿ ಮರಿಗಳಿಗೆ ಕೊಟ್ಟಳು . ಅವು ಅದನ್ನು ಗಪಗಪನೆ ಕುಡಿದವು . 
'ಇಂಗಿಲಿ ಮಿಂಗಿಲಿ' ಯ ಪ್ರಭಾವದಿಂದ  ಮರಿಗಳೆಲ್ಲ ಕೂಡಲೇ ಗಾಢ  ನಿದ್ರೆಯಲ್ಲಿ  ಮುಳುಗಿ ಹೋದವು .
ಮರಿಗಳನ್ನು ಕಟ್ಟಿ ಚಿಕ್ಕದಾಗಿದ್ದ ಒಳ ಗವಿಯಲ್ಲಿ ಕೂಡಿ ಹಾಕಿದಳು . " ಇನ್ನು ಇಡೀ ದಿನ ಇವು ಮಲಗಿಯೇ  ಇರುತ್ತವೆ !" ಎಂದುಕೊಂಡಾಗ ಅವಳ ಮೊಗದಲ್ಲಿ ಕಿರುನಗೆಯರಳಿತು .  


ನಂತರ ಒಲೆಯನ್ನು ಹೊತ್ತಿಸಿ ಅದರ ಮೇಲೆ ದಪ್ಪ ಕಾವಲಿಯನ್ನು ಇಟ್ಟಳು . ಹಿಟ್ಟನ್ನು ಹೆಚ್ಚಾಗಿ ತಯಾರಿಸಿ , ಅದನ್ನು ಬಾಳೆಲೆಯಲ್ಲಿ ಕಟ್ಟಿ ಒಂದು ಗೋಣೀ ಚೀಲದಲ್ಲಿಟ್ಟಳು . 
ಗೋಣಿ ಚೀಲವನ್ನು ಒಲೆಗೆ ನೇರವಾಗಿ , ಛಾವಣಿಯ ತೊಲೆಗೆ ತಗಲು ಹಾಕಿ , ಮೂಟೆಯ ಕೆಳಗೊಂದು ರಂಧ್ರವನ್ನು  ಮಾಡಿದಳು . 
ಹಿಟ್ಟು ಮೆಲ್ಲ ಮೆಲ್ಲನೆ ತೊಟ್ಟಿಕ್ಕ ತೊಡಗಿತು . ಬಿಸಿ ಕಾವಲಿಯ  ಮೇಲೆ ಹಿಟ್ಟು ತೊಟ್ಟು ತೊಟ್ಟಾಗಿ ಬಿದ್ದಾಗ " ಚೋಯ್ನ್ ಚೋಯ್ನ್ " ಎಂಬ ಶಬ್ದ ಎದ್ದಿತು . 
ಗವಿಯಿಂದ ಹೊರಟ  ಹುಡುಗಿ ತನ್ನ ಮನೆಯನ್ನು ಕುರಿತು ಕಾಡಲ್ಲಿ ಅತಿ ವೇಗವಾಗಿ ಓಡತೊಡಗಿದಳು . 
ಬಲು ಜಾಣೆಯಾಗಿದ್ದ ಕಾರಣ ಹುಡುಗಿಗೆ   ದಾರಿ ಚೆನ್ನಾಗಿಯೇ ನೆನಪಿನಲ್ಲಿತ್ತು . 
ಶೀಘ್ರದಲ್ಲೇ  ಮನೆಯನ್ನು ತಲುಪಿದ ಹುಡುಗಿ ಮೃಗನಾಯಕನ ಮೋಸವನ್ನು ತಾಯಿ ತಂದೆಯರಿಗೆ ವಿವರವಾಗಿ ತಿಳಿಸಿದಳು . 
ಎಲ್ಲರಿಗೂ ಮಿತಿ  ಮೀರಿದ ಕೋಪವೇರ್ಪಟ್ಟಿತು . 


ಅಂದು ಸಂಜೆ ಸೂರ್ಯಾಸ್ತದ ಸಮಯ ಹಿಂದಿರುಗಿದ  ಮೃಗನಾಯಾಕ ಗವಿಯ ಬಾಗಿಲನ್ನು ಕುಟ್ಟಿದನು . 
ಒಳಗಿನಿಂದ ಯಾವ ಉತ್ತರವೂ ಇಲ್ಲ  . ಆದರೆ ಬಿಸಿ ಕಾವಲಿ 'ಚೋಯ್ನ್ ' ಎಂದಿತು . 
" ಆಹ ! ಹುಡುಗಿ ಪಡ್ಡು ಸುಡುತ್ತಿರುವಳು ಅನ್ನಿಸುತ್ತದೆ  . ಎಲ್ಲರೂ ಸಖತ್ತಾಗಿ ತಿನ್ನುತ್ತಿರುವರೇನೋ . ತಡೆಯಿರಿ ! ತಡೆಯಿರಿ ಮರಿಗಳೇ ! ಇಗೋ  ನಾನೂ ಬಂದೆ  !"
ನಾಲಿಗೆಯಲ್ಲಿ ನೀರೂರುತ್ತಿರಲು ಮೃಗನಾಯಕ ರಾಗವಾಗಿ ಹಾಡುತ್ತ  ಮತ್ತೆ ಬಾಗಿಲು ಕುಟ್ಟಿದ :
'ಸುಡು ಸುಡು  ಪಡ್ಡು   ಸುಟ್ಟು ತಿನ್ನುತ್ತಿರುವೆಯಾ  ?
ಇರು ಇರು ಇರು ಇರು  ,  
ಬರುವೆ   ಬರುವೇ  ಬರುವವೇ ಬರುವೆ  !'



ಮೃಗನಾಯಕ ಒಮ್ಮೆ  ಗರ್ಜಿಸಿದ . ನಂತರ ಗುಡುಗಿದ . 
'ಸುಡು ಸುಡು  ಪಡ್ಡು   ಸುಟ್ಟು ತಿನ್ನುತ್ತಿರುವೆಯಾ  ?
ಇರು ಇರು ಇರು ಇರು  ,  
ಬರುವೆ   ಬರುವೇ  ಬರುವವೇ ಬರುವೆ  !'
ಈಗಲೂ ಬಾಗಿಲು ತೆರೆಯಲಿಲ್ಲ . ಆದರೆ ಕಾವಲಿ ಮಾತ್ರ  ' ಚೋಯ್ನ್ ' ಎಂದಿತು.  ಮೃಗನಾಯಕ ಕೊಪಾವೇಶದಿಂದ ಕಂಪಿಸಿದ . ' ಏನೂ ? ಈ ಹುಡುಗಿಗೆ ನನ್ನಲ್ಲಿ ಭಯವೇ ಇಲ್ಲವೇ ? ಇಗೋ ಈಗಲೇ ಹೋಗಿ  ಅವಳಿಗೆ ಗತಿ ಕಾಣಿಸುವೆ . '
ಭಯಂಕರವಾಗಿ ಗುರುಗುಟ್ಟಿದ ಮೃಗನ್ಯಾಕ ,
'ಸುಡು ಸುಡು  ಪಡ್ಡು   ಸುಟ್ಟು ತಿನ್ನುತ್ತಿರುವೆಯಾ  ?
ಇರು ಇರು ಇರು ಇರು  ,  
ಬರುವೆ   ಬರುವೇ  ಬರುವವೇ ಬರುವೆ  !' ಎನ್ನುತ್ತ ಬಾಗಿಲನ್ನು ಬಡಿದು ತೆರೆದು ಒಳಗೆ ನುಗ್ಗಿದ  .
ಬರಿದಾದ ಗವಿ ! ಮಾಯವಾಗಿದ್ದ ಮರಿಗಳು ! ಪರಾರಿಯಾಗಿದ್ದ ಹುಡುಗಿ ! ಮೇಲಾಗಿ ಪಡ್ಡು ಇಲ್ಲ ! ಏನಿಲ್ಲ !
ಕಾವಲಿ ಮಾತ್ರ  ' ಚೋಯ್ನ್ ' ಎನ್ನುತ್ತಿತ್ತು ! 
ಮೃಗನಾಯಕ ಹುಚ್ಚೆದ್ದು ಕಿರುಚಿದ . " ನನ್ನನ್ನು ಮೋಸ ಮಾಡಲು ಹೊರಟೆಯಾ  ಹುಚ್ಚು ಹುಡುಗಿ ? ನಾನು ಬರುವೆ ! ನಿನ್ನ ಜೊತೆ ನಿನ್ನ ತಾಯಿ ತಂದೆಯರನ್ನೂ ಎಳೆದು ತರುವೆ . ನನ್ನ ಗುಲಾಮರನ್ನಾಗಿ ಮಾಡಿಕೊಳ್ಳುವೆ ! ನೋಡುತ್ತಿರು !"


ಮರು ದಿನವೇ ನರನ  ವೇಷ  ಧರಿಸಿ ಹಳ್ಳಿಗೆ ಧಾವಿಸಿ ಬಂದ  ಮೃಗನಾಯಕ . 
ಆತ ಮತ್ತೆ ಬಂದೆ ಬರುತ್ತಾನೆ ಎಬುದನ್ನು ಅರಿತಿದ್ದ ಹುಡುಗಿ ಮತ್ತು ಅವಳ ತಾಯಿ ತಂದೆಯರು , ಮೃಗನಾಯಕನನ್ನು ಎದುರುಗೊಳ್ಳಲು ತಯಾರಾಗಿದ್ದರು . 
" ಪ್ರೀತಿಯ ಅಳಿಯಂದಿರಿಗೆ ಸುಸ್ವಾಗತ !" ಎಂದ ಹುಡುಗಿಯ ತಾಯಿ ತಂದೆಯರು  ಮಜ್ಜಿಗೆ ಮತ್ತು ಲಾಡುಗಳನ್ನು ಕೊಟ್ಟು ಉಪಚರಿಸಿದರು . ಮತ್ತು ಲಾವಂಚದ ಬೀಸಣಿಗೆಯನ್ನು   ಬೀಸಿ ತಂಪು  ಗಾಳಿ ಹಾಕಿದರು.    
" ನಿಮ್ಮ ಹುಡುಗಿ ಎಲ್ಲಿ ? ನನ್ನ ಮನೆ ಬಿಟ್ಟು ಓಡುವಷ್ಟು ಧೈರ್ಯ ಬಂದಿತೆ  ಅವಳಿಗೆ?" ಕೋಪದಿಂದ ಪ್ರಶ್ನಿಸಿದ ಮೃಗನಾಯಕ. 
" ಅವಳು ನಿಮ್ಮನ್ನು ಬಿಟ್ಟು ಓಡಿ  ಬಂದಿಲ್ಲ ಅಳಿಯಂದಿರೆ  . ಮದುವೆಯ ನಂತರ ಅಳಿಯ ದೇವರನ್ನು  ಮತ್ತೆ ಮನೆಗೆ ಕರೆಸಿ  ಔತಣ ನೀಡಿ ಸತ್ಕರಿಸುವುದು ನಮ್ಮ ಪದ್ದತಿ . ಬನ್ನಿ , ಮೊದಲು ನೀವು ಅಭ್ಯಂಜನ ಸ್ನಾನ  ಮಾಡ ಬೇಕು . ನಂತರ ಪನ್ನೀರಿನ  ವೃಷ್ಟಿಯಲ್ಲಿ ತಣ್ಣಗಾಗ ಬೇಕು   . ಅದಾದ ನಂತರ ನಮ್ಮ ಹುಡುಗಿ ತಯಾರಿಸಿರುವ ಮೂವತ್ತು ರುಚಿ ರುಚಿಯಾದ ಪದಾರ್ಥಗಳಿಂದ ಕೂಡಿದ  ಔತಣ. ''


ಮೃಗನಾಯಕನಿಗೆ ಮಹದಾನಂದ ! ಅಭ್ಯಂಜನ ಸ್ನಾನವಂತೆ! ಪನ್ನೀರಿನ ವೃಷ್ಟಿ ಯಂತೆ  !ಇದನ್ನೆಲ್ಲ ಆತನಿಗೆ ಯಾರೂ ಮಾಡಿಸಿರಲಿಲ್ಲ . ಆಹಾ ! ಎಂತಹ ವೈಭವ!
" ದಯೆ ಮಾಡಿ ಬನ್ನಿ ಅಳಿಯ ದೇವರೇ . ಸ್ನಾನಕ್ಕೆ ಎಲ್ಲ ಸಿದ್ಧವಾಗಿದೆ ."
ಮನೆಯ ಹಿತ್ತಲಿಗೆ ಒಯ್ಯಲ್ಪಟ್ಟ ಮೃಗನಾಯಕ ,  ಎತ್ತರವಾದ ವೇದಿಕೆಯ ಮೇಲೆ ಹಾಸಲ್ಪಟ್ಟಿದ್ದ  ಚಾಪೆಯ ಮೇಲಿದ್ದ  ಅಲಂಕರಿಸಲ್ಪಟ್ಟ ಮಣೆಯನ್ನು ಕಂಡನು.   ಸುಗಂಧ ತೈಲಗಳು , ಸ್ನಾನದ ಪುಡಿಗಳು , ಹೊಸತಾದ ಚೌಕ , ಹೊಸ ವಸ್ತ್ರಗಳು ಎಲ್ಲವೂ ಅವನಿಗಾಗಿ  ತಯಾರಾಗಿದ್ದವು . 
" ದಯವಿಟ್ಟು ಮಣೆಯ  ಮೇಲೆ ಕುಳಿತುಕೊಳ್ಳಿ ಅಳಿಯ ದೇವರೇ . ಎಣ್ಣೆ ನೀವುವವನು ಬಂದು ನೀವುತ್ತಾನೆ  ." 
ಮೃಗನಾಯಕ ತೃಪ್ತಿಯಿಂದ ಕಿರುನಗೆ ಬೀರಿ , ವೇದಿಕೆಯನ್ನು ಹತ್ತಿ ಮಣೆಯ ಮೇಲೆ ಕುಳಿತನು . 
ಅಹೋ ! ಮರುಕ್ಷಣ ಮಣೆ , ಚಾಪೆ ಸಹಿತ ಮೃಗನಾಯಕ ವೇದಿಕೆಯ ಹಾಗೆ ಕಂಡ ತೆರೆದ ಬಾವಿಯೊಳಗೆ ಬಿದ್ದನು . 
''ಆ !ಅಯ್ಯೋ !''
 "ಹೊರಗೆ ಬಿಡಿ ! ನನ್ನನ್ನ ಹೊರಕ್ಕೆ ತೆಗೆಯಿರಿ !"ಬಾವಿಯ ತಳದಿಂದ ಚೀರಿದ ಮೃಗನಾಯಕ. 
" ನಮ್ಮ ಹಳ್ಳಿಯ ಕಡೆ ಇನ್ನು ಮುಂದೆ ಕಾಲಿಡುವುದಿಲ್ಲವೆಂದು ಪ್ರಮಾಣ ಮಾಡಿದರೆ  ಮಾತ್ರ!"ಎಂದರು ತಾಯಿ ತಂದೆಯರು.
" ನನ್ನ ಆಣೆ ! ನನ್ನಾಣೆಗೂ  ಬರಲ್ಲ  !" ಎಂದು ಕೂಗಿದ ಮೃಗನಾಯಕ. 


ಉದ್ದವಾದ ಹಗ್ಗವನ್ನು ಬಾವಿಯೊಳಕ್ಕೆ ಎಸೆದು ಮೃಗನಾಯಕನನ್ನು ಹೊರಕ್ಕೆಳೆದರು  . 
ಹೊರಗೆ  ಬಂದ  ಕೂಡಲೇ ಕ್ರೂರಿಯಾದ ಮೃಗನಾಯಕ ಗರ್ಜಿಸುತ್ತ ಹುಡುಗಿಯ ತಾಯಿ ತಂದೆಯರ ಮೇಲೆರಗಿದನು . 
ಆದರೆ ಚುರುಕಾದ ಹುಡುಗಿ ತುರ್ತಿನಿಂದ ವರ್ತಿಸಿದಳು . ಕುದಿಯುತ್ತಿದ್ದ ಎಣ್ಣೆ ಇದ್ದ ಪಾತ್ರೆಯನ್ನು ಕೈಗೆತ್ತಿಕೊಂಡಳು .  "ಹೊರಟು  ಹೋಗು ಇಲ್ಲಿಂದ  !ಇಲ್ಲವೇ ಈ ಕುದಿಯುವ ಎಣ್ಣೆಯಿಂದ ನಿನಗೆ ಅಭಿಷೇಕ ಮಾಡುವೆನು !"
'ಅಯ್ಯೋ ..' ಎಂದು ಕೂಗುತ್ತ ಅಲ್ಲಿಂದ ಕಾಲು ಕಿತ್ತನು ಮೃಗನಾಯಕ . 
ನಂತರ ಆ ಹಳ್ಳಿಯ ಕಡೆ ಆತ ಸುಳಿಯಲೇ ಇಲ್ಲ . 
 ಕಾಡಲ್ಲಿ  ಎಂದೆಂದಿಗೂ  ಪಡ್ಡು ತಿನ್ನಬಾರದೆಂಬ ನಿಷೇಧಾಜ್ಞೆ ಹೊರಡಿಸಲ್ಪಟ್ಟಿತು . 
ಸಿಂಹಗಳೂ ಹುಲಿಗಳೂ ಪಡ್ಡು ತಿನ್ನುವುದಾಗಿ ನೀವೆಲ್ಲಾದರೂ ಕೇಳಿರುವಿರೆ ?
ಕಾರಣ ಈಗ ನಿಮಗೆ ತಿಳಿಯಿತು ತಾನೇ  !
"ನನ್ ತಾತ ಹೇಳಿದ್  ಕಥೆ ಹೇಗಿತ್ತು ?" ಎಂದಳು ಅಜ್ಜಿ . 
" ಪುಟ್ಹುಡುಗಿಗೆ ಯಾರಾದ್ರೂ ಮದ್ವೆ ಮಾಡ್ತಾರಾ ? ಅದೂ ವೇಷ ಹಾಕ್ಕೊಂಡ್ಬಂದ ಪ್ರಾಣಿ ಜೊತೆ ಮದ್ವೆ ಮಾಡ್ತಾರಾ ? ಶುದ್ಧ 'ಗೂಶ್ಲುಗ್ಳು' ಅಜ್ಜಿ ಆ  ಅಪ್ಪ ಅಮ್ಮ !" ಎಂದಳು  ಪುಟ್ಟಿ .  
" ಹುಲಿ ಬೋನು ದಾಟ್ಕೊಂಡ್ ಬಂದಿದ್ದೂ ಗೊತ್ತಿಲ್ದೆ, ತುಟಿ ಪಿಟಕನ್ದೆ  ಕಥೆ ಕೇಳಿದ್ರಲ್ಲಿ ಏನೂ ಕಮ್ಮಿ ಇಲ್ಲ .. " ಎಂದು ಚುಡಾಯಿಸಿದ ಪುಟ್ಟಣ್ಣ . 
" ಹಾ ! ಹೌದಾ ?" ಎಂದು ಚೀರಿದಳು  ಪುಟ್ಟಿ. ಮರು ಕ್ಷಣವೇ  " ಅಜ್ಜಿ ನನ್ಗೆ ಸುಡು ಸುಡು ಪಡ್ಡು ಮಾಡ್ಕೊಡ್ತಿಯಾ ?" ಎಂದು ಕೇಳಿದಳು .  
"ನನ್ಗೂ !" ಎಂದ ಪುಟ್ಟಣ್ಣ . 
"ನನ್ಗೂ  !" ಎಂದರು ತಾತ . 

No comments:

Post a Comment