Monday, November 25, 2013

ಬೆಳದಿಂಗಳ ಊಟ

ಬೆಳದಿಂಗಳ ಊಟ

                                                                                 

ತೋಟದಲ್ಲಿದ್ದ ಮರಳ ಗುಡ್ಡೆಯ ಮೇಲೆ ಕುಳಿತು ಕಪ್ಪೆಗೂಡು ಕಟ್ಟುತ್ತಿದ್ದಳು ಪುಟ್ಟಿ . 

" ಪುಟ್ಟೀ ! ಊಟ ಮಾಡು ಬಾ!" ಅಮ್ಮ ಕರೆದಳು.


 ಮರಳ ರಾಶಿಯಿಂದ ಆಯಿದು ತೆಗೆದ  ಕಪ್ಪೆಚಿಪ್ಪುಗಳನ್ನು  ಗೂಡಿನೊಳಗೆ  ರಾಜಾ  ರಾಣಿಯರಾಗಿ ಕೂರಿಸಿದಳು ಪುಟ್ಟಿ.   ನಂತರ  'ಕುದುರೆ',  ' ಆನೆ' ಗಳಿಗಾಗಿ ಮರಳಲ್ಲಿ ಜಾಲಾಡುತ್ತ," ಬೇಡ ಅಮ್ಮ. ನನ್ಗೆ  ಹಸಿವಿಲ್ಲ."ಎಂದಳು. 

" ತಗೋ ಆನೆ !"  ದೊಡ್ಡ ಹರಳುಗಲ್ಲುಗಳನ್ನು ಹುಡುಕಿ ತೆಗೆದು ಪುಟ್ಟಿಯ ಕೈಗೆ ಕೊಟ್ಟಳು ಸರಸು ಅತ್ತೆ .

ಪುಟ್ಟಿ ಖುಷಿಯಿಂದ ಕಲ್ಲುಗಳನ್ನು ಕಪ್ಪೆಗೂಡಿನ ಬಾಗಿಲ ಎರಡು ಬದಿಯಲ್ಲೂ ನಿಲ್ಲಿಸಿದಳು .

"ಯಾಕ್  ಹಸಿವಿಲ್ಲ ? ಶಾಂತು ಮನೇಲಿ ಏನಾದ್ರೂ ತಿಂದ್ಯಾ ?'' ವಿಚಾರಿಸಿದಳು ಅಮ್ಮ.

" ಬೋಂಡ ಚಟ್ನಿ ತಿಂದೆ !"ಪುಟ್ಟಿ  ಅಮ್ಮನಿಗೆ ಉತ್ತರ ಕೊಡುತ್ತ, ಬಣ್ಣಬಣ್ಣದ ಕ್ರೋಟನ್ ಗಿಡದ ಎಲೆಗಳನ್ನು ಕಿತ್ತು ತಂದಳು.  ಗೂಡಿನ  ಸುತ್ತ ಕಟ್ಟಿದ್ದ ಮರಳ ಗೋಡೆಯ ಮೇಲೆ  ನೆಟ್ಟು " ಬಾವುಟ !" ಎಂದು ಚಪ್ಪಾಳೆ ತಟ್ಟಿದಳು.  
  
" ನಿಂಗೆ ಚಟ್ನಿ ಇಷ್ಟ ಇಲ್ವಲ್ಲ !" ಎಂದು ಹುಬ್ಬೇರಿಸಿದಳು ಅತ್ತೆ . 

" ಅವ್ರ ಮನೇಲಿ ಚೆನ್ನಾಗಿತ್ತು !"ನಾಲಿಗೆ ಚಪ್ಪರಿಸಿದಳು ಪುಟ್ಟಿ . 

 "ಎಷ್ಟು ಬೋಂಡ ತಿಂದೆ ?" ಅಲ್ಲೇ ಕುಳಿತಿದ್ದ ಅಜ್ಜಿ ಕೇಳಿದಳು . 

" ಮೂರು !"

" ಅದಕ್ಕೆ ಮತ್ತೆ ಹಸಿವಿಲ್ಲ. ಬೋಂಡ ಕರಗೊಕ್ಕಾದ್ರೂ ಇಷ್ಟ್ ಸಾರನ್ನ ತಿನ್ಬಾರ್ದೆ?" ಅಮ್ಮ ಗೊಣಗಿದಳು.

" ತಿಂತಾಳೆ ತಡಿ !" ಎನ್ನುತ್ತ ಮರಳ ರಾಶಿಯ ಮೇಲಿಂದ ಎದ್ದು ಮನೆಯೊಳಕ್ಕೆ ನಡೆದಳು ಅಜ್ಜಿ . 

" ಉಂಡಾಡಿ ಗುಂಡಮ್ಮ , ಮೂರು ಬೋಂಡ  ತಿಂದ್ಳಮ್ಮಾ !" ಗೋಡೆಗೆ ಬಾಲ್  ಎಸೆದು ಕ್ಯಾಚ್ ಮಾಡುತ್ತಿದ್ದ ಪುಟ್ಟಣ್ಣ ಪುಟ್ಟಿಯನ್ನು  ರೇಗಿಸಿದ. 

" ನೋಡತ್ತೆ ಪುಟ್ಟಣ್ಣನ್ನಾ  !" ರಾಗವೆಳೆದಳು  ಪುಟ್ಟಿ. 

" ಯಾಕೋ ಪುಟ್ಟಣ್ಣ ಅವಳ್ನ ಚುಡಾಯಿಸ್ತೀಯ ?" ಎಂದಳು ಅತ್ತೆ. 

" ನಾನು ಶಾಂತು ಮನೆಯಿಂದ ಬರೋವಾಗ ಇಷ್ಟೊಂದು ಬಾಗೇ ಕಾಯಿ  ಆರಿಸ್ಕೊಂಡ್  ಬಂದಿದ್ದೀನಿ. ನಿಂಗೆ  ಕೊಡಲ್ಲ ಹೋಗು!" ಪೊಟ್ಟಿ ಕರುಬಿದಳು . 

" ಸಾರಿ ಪುಟ್ಟಿ! ಪ್ಲೀಸ್ ಪ್ಲೀಸ್ ! ಕೊಟ್ಬಿಡೆ ! ನಾಳೆ ರಾಮೂ ಬರ್ತಾನೆ.  ಕಾರ್ಕ್ ಬಾಲ್ ಮಾಡ್ಬೇಕು. ಪ್ಲೀಸ್ ಕೊಡೆ." ಪುಸಲಾಯಿಸಿದ ಪುಟ್ಟಣ್ಣ . 

" ನಾವೆಲ್ಲಾ ಬೆಳದಿಂಗಳೂಟ ಮಾಡ್ತಿದ್ದೀವಿ ! ಯಾರ್ಯಾರಿಗೆಲ್ಲ ಕೈ ತುತ್ತು ಬೇಕೋ, ಕೈ ತೊಳ್ಕೊಂಡ್ ಬನ್ನಿ !" ಅಜ್ಜಿ ಸೌಟಿನಿಂದ ಕಲಸಿದನ್ನದ ಗಂಗಾಳವನ್ನು  ತಟ್ಟಿ ಡಂಗೂರ ಸಾರುತ್ತಾ ಮನೆಯಿಂದ ಹೊರ ಬಂದು ಮರಳ ಮೇಲೆ ಕುಳಿತಳು  . 


" ನಂಗೆ !ನಂಗೆ ಕೈ ತುತ್ತು ! " ಮಕ್ಕಳ ಜೊತೆ ಸರಸು  ಅತ್ತೆ ಕೂಡ ತೋಟದ ನಲ್ಲಿಯಲ್ಲಿ ಕೈ ತೊಳೆಯಲು ಓಡಿದಳು.

" ನಂಗೆ ತುತ್ತು ಇಲ್ವೇ ?" ಎನ್ನುತ್ತಾ ತಾತ ವರಾಂಡದಿಂದ ಬೆತ್ತದ ಕುರ್ಚಿ ತಂದು ಮರಳ ರಾಶಿಯ ಪಕ್ಕ ಹಾಕಿಕೊಂಡು ಕುಳಿತರು.

ಅದೇ  ಸಮಯಕ್ಕೆ ತೋಟಕ್ಕೆ ಅಂಚು ಕಟ್ಟಿದ್ದ ತೆಂಗಿನ ಸಾಲುಗಳ ಮೇಲೇರಿ ಬಂದೇಬಿಟ್ಟ  ಹುಣ್ಣಿಮೆಯ ಚಂದ್ರಮ .

" ಅಗೋ ಅಗೋ ! ಚಂದ ಮಾಮ ! ಒಳಗೆ ಮೊಲದ ಮರಿ !  
ಮೊಲದ ಮರಿ ಮೊಲದ ಮರಿ ಆಡ  ಬಾರೆ !
ಚಿಪಿಕಿ ಚಿಪಿಕಿ ಚಿಪಿಕಿ ಚಿಪಿಕಿ ನೆಗೆದು ಬಾರೆ !
ಗಿಡ್ಡ ಬಾಲ ದೊಡ್ಡ ಕಿವಿ ನಿನಗೆ ಚೆನ್ನ !
ಗಟ್ಟಿ ಹಾಲ ಬಿಳಿಯ ನೊರೆ ನಿನ್ನ ಬಣ್ಣ ! " ಎಂನ್ನುತ್ತ  ಪುಟ್ಟಿ ಕುಣಿದಾಡಿದಳು . 

" ಮೊಲದ ಮರಿ  ಹೇಗೆ ಚಂದಮಾಮನಲ್ಲಿ  ಸೇರ್ಕೊಳ್ತು  ಗೊತ್ತೇ ?" ತಾತ ಕೇಳಿದರು. 

" ಹೇಳು ತಾತ. ಆ ಕತೆ ಹೇಳು ತಾತ!" ಎನ್ನುತ್ತ  ಅಜ್ಜಿ ಕೊಟ್ಟ ತುತ್ತಿಗೆ ಕೈ ಒಡ್ಡಿದರು ಮಕ್ಕಳು .

                                                                                 


" ಒಂದಾನೊಂದು ಕಾಲ್ದಲ್ಲಿ  ಒಂದು ದಟ್ಟ ಕಾಡಲ್ಲಿ ಒಂದು ಮೊಲ ಇತ್ತು. ಒಂದು ಕೋತಿ,ಒಂದು ನರಿ ಮತ್ತು ಒಂದು ನೀರ್ನಾಯಿ  ಮೊಲಕ್ಕೆ ಫ್ರೆಂಡ್ಸ್  ಆಗಿದ್ವು . ಸತ್ಯ, ಧರ್ಮ, ಪ್ರೇಮ , ಅಹಿಂಸೆ ಮುಂತಾದ ಸದ್ಗುಣಗಳನ್ನ ಪಾಲಿಸ್ತ ನಾಲ್ಕು  ಪ್ರಾಣಿಗಳೂ ಹಾಯಾಗಿದ್ವು . ಒಂದು ಹುಣ್ಣಿಮೆಯ ದಿನ ಉಪವಾಸ ಮಾಡಿ , ಯಾರಿಗಾದ್ರೂ  ತಮ್ಮ ಊಟದ ಒಂದ್ ಬಾಗಾನ ಬಿಕ್ಷೆ ಕೊಟ್ಟು ನಂತರ ತಾವು ತಿನ್ಬೇಕಂತ  ತೀರ್ಮಾನಿಸಿದ್ವೂ .
ಸಂಜೆ ವೇಳೆಗೆ ಹಸಿವ್ನಿಂದ  ದಣಿದು ಬಂದ ಒಬ್ಬ ಬಿಕ್ಷುಕ. ಕೋತಿ ಮರ ಹತ್ತಿ ಮಾವಿನ ಹಣ್ಣು ಕಿತ್ಕೊಡ್ತು . ನೀರ್ನಾಯಿ  ನದಿಯಿಂದ  ಮೀನು ಹಿಡ್ಕೊಂಬಂದ್ ಕೊಡ್ತು. ನರಿ ಕಾಡಂಚಿನ ಗುಡಿಸ್ಲಿಗೆ  ನುಗ್ಗಿ, ಅಲ್ಲಿದ್ದ  ಮೊಸರಿನ ಕುಡಿಕೆ ತಂದ್ಕೊಡ್ತು.  ಮೊಲ  ಯೋಚಿಸ್ತು. ತಾನು ತಿನ್ನೋದು ಹುಲ್ಲು. ಬಿಕ್ಷುಕ ಹೇಗೆ ಹುಲ್ಲು ತಿನ್ನ ಬಲ್ಲ ? ಫ್ರೆಂಡ್ಸ್ನ ಕರೆದು ಕಡ್ಡಿ ಕಸ ಗುಡ್ಡೆ ಮಾಡಿ ಬೆಂಕಿ ಮಾಡಕ್ಕೆ ಹೇಳ್ತು ಮೊಲ. "ಪೂಜ್ಯರೇ! ನೀವು ತುಂಬಾ ಹಸಿದಿದ್ದೀರಿ. ನಿಮಗೆ ಕೊಡೋನ್ತಾ  ಊಟ ಯಾವ್ದೂ ನನ್ನ ಬಳಿ  ಇಲ್ಲ. ಈಗ ನಾನು ಈ ಬೆಂಕಿಗೆ ಹಾರ್ತೀನಿ. ಬೆಂದ ಮೇಲೆ ನೀವು ನನ್ನ ಮಾಂಸ ತಿನ್ನಿ . " ಅಂತ ಹೇಳಿ ಚಂಗಂತ ಬೆಂಕಿಗೆ ಹಾರ್ಬಿಡ್ತು ಮೊಲ .... "

" ಅಯ್ಯೋ !" ಗಾಬರಿಯಾಗಿ ಚೀರಿದಳು ಪುಟ್ಟಿ .

" ಮಕ್ಕಳಿಗೆ ಇಂತಾ ಕತೆ ಹೇಳ್ತಾರೆಯೇ ? ಛೆ ! " ಎಂದು ರೇಗಿದಳು ಅಜ್ಜಿ .

"  ಬುದ್ಧ ಜಾತಕ ಕಥೆ ಹೀಗಿದೆ. ಆಮೆಲೆ...  "

" ಹೋಗು ತಾತ! ನಂಗೆ ಅಳು ಬರತ್ತೆ. ಬೇರೆ ಕಥೆ ಹೇಳು ." ಎಂದಳು ಪುಟ್ಟಿ.

"ಈ ಕಥೆ ಪೂರ್ತಿ ಕೇಳು ಮೊದ್ಲು ! ಬೆಂಕಿ ಮೊಲಾನ ಸುಡ್ಲೆ  ಇಲ್ಲ ಗೊತ್ತಾ? ಬದಲಾಗಿ ಮೊಲಕ್ಕೆ ಅದು  ತಂಪಾಗಿತ್ತು !"

 ಪುಟ್ಟಿಯ ಕಣ್ಣುಗಳು ಕುತೂಹಲದಿಂದ  ದೊಡ್ದದಾದವು .

"ಬಿಕ್ಷುಕನ   ವೇಷದಲ್ಲಿ  ಬಂದದ್ದು  ಯಾರಂದ್ ಕೊಂಡೆ ? ಸಾಕ್ಷಾತ್ ಶಕ ದೇವರು ! ಅವರು ನಡೆಸ್ದ ಸತ್ವ ಪರೀಕ್ಷೇಲಿ ಮೊಲ ಗೆಲ್ತು. ಮೊಲದ ತ್ಯಾಗ ಮತ್ತು ದಾನ  ಗುಣಗಳನ್ನ  ಮೆಚ್ಚಿದ್ರು    ಶಕದೇವರು . ಪ್ರಪಂಚಕ್ಕೆಲ್ಲ ಅದನ್ನು ಸಾರೋ ಹಾಗೆ   ಹುಣ್ಣಿಮೆ ಚಂದ್ರನಲ್ಲಿ  ಮೊಲದ ಬಿಂಬವನ್ನ ಅಚ್ಚಿಳಿಸಿದರು . ಆ ಮೊಲವೇ  ನಂತರ ಗೌತಮ ಬುದ್ಧನಾಗಿ ಮತ್ತೆ ಹುಟ್ತಂತೆ  . "

ಅಮ್ಮ ಪಾಪುವಿಗೆ ಕುಲಾವಿ ಹಾಕಿ, ಮೈತುಂಬ  ಶಾಲು ಹೊದ್ದಿಸಿ  ಹೊರಗೆ ಎತ್ತಿಕೊಂಡು ಬಂದಳು. ಪಾಪು ಎಲ್ಲರನ್ನು ನೋಡಿ ಕೇಕೆ ಹಾಕಿತು.

" ಪಾಪು ! ನಿನ್ಗೂ  ಕೈ ತುತ್ತು ಬೇಕಾ ಕಂದಾ ?" ಎಂದು ಮುದ್ದಿಸಿದಳು ಅಜ್ಜಿ .

ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ !
ಮುತ್ತಿನ ಕುಡಿಕೆ ಕೊಡು ಮಾಮಾ !
ಕಿತ್ತಳೆ ಕೊಡುವೆ ಬಾ ಕೆಳಗೆ ,
ಮುತ್ತನು ಕೊಡುವೆ ಬಾ ಬಳಿಗೆ !
ಪುಟ್ಟಿ ಪಾಪು ಆಡಲು ಬರುವರು,
ಪುಟ್ಟಣ್ಣ ಇರುವನು  ನಿಂಜೊತೆಗೆ !
ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ !

ಪಾಪುವಿಗೆ ಚಂದಮಾಮನನ್ನು ತೋರಿಸಿ ಅಜ್ಜಿ ಹಾಡಿದಳು.  ಪಾಪು ಇನ್ನಷ್ಟು ನಕ್ಕಿತು.

ಕೈ ತುತ್ತು ತಿಂದು ಆಯಾಸದಿಂದ ಅತ್ತೆಯ ತೊಡೆಯ ಮೇಲೆ ಮಲಗಿಬಿಟ್ಟಳು ಪುಟ್ಟಿ .
ಪುಟ್ಟಿ ಪಾಪುವಿನಂತೆ ಇದ್ದಾಗ ತಾನು ಅವಳಿಗಾಗಿ ಹೇಳುತ್ತಿದ್ದ ಹಾಡನ್ನು ಮೆಲು ದನಿಯಲ್ಲಿ ಹಾಡತೊಡಗಿದಳು ಅತ್ತೆ .ಪುಟ್ಟಿ ಮೆಲ್ಲ ಮೆಲ್ಲನೆ ಕನಸಿನ ಲೋಕಕ್ಕೆ ಜಾರಿದಳು . ಚಂದ ಮಾಮ ತೋರಿದ  ತಾರೆಗಳ ತೋಟದಲ್ಲಿ  ಆಡ ತೊಡಗಿದಳು  !




ಮುಂಬರುವ ಕಾಲದಲ್ಲಿ ಚಂದದ ಚಂದ್ರಮನಲ್ಲಿ ಕಾಲಿಡಲು ನೀಲ್  ಆರ್ಮ್ಸ್ಟ್ರಾಂಗ್ ಎಂಬ ಒಬ್ಬ ಆಕಾಶಗಾಮಿ ತಯಾರಾಗುತ್ತಿದ್ದ.  ಚಂದ್ರನ ರಹಸ್ಯಗಳನ್ನೆಲ್ಲ ಬಯಲು  ಮಾಡಲಿದ್ದ . ಆದರೂ ಚಂದ ಮಾಮನ ಚೆಲುವಿಗೆ ಮನ ಸೋತ ಕವಿಗಳು ಹೊಸ ಹೊಸ ಹಾಡುಗಳನ್ನು 
ಹಾಡುತ್ತಲೇ ಇರುವರು! ಪುಟಾಣಿಗಳು ಚಂದಮಾಮನ  ಕಥೆಗಳನ್ನು   ಕೇಳುತ್ತ, ಚಂದಕ್ಕಿ ಮಾಮನ  ಹಾಡುಗಳನ್ನ ಹಾಡುತ್ತ ಬೆಳದಿಂಗಳೂಟ ಮಾಡುತ್ತಲೇ ಇರುವರು! 

No comments:

Post a Comment